ಅದೃಷ್ಟ ಲಕ್ಷ್ಮಿ ಒಲಿದರೆ ಒಂದೇ ದಿನದಲ್ಲಿ ಕೋಟಿಪತಿ ಆಗೋದು ಹೀಗೆ ನೋಡಿ...!

21-09-20 05:55 pm       Headline Karnataka News Network   ಸ್ಪೆಷಲ್ ಕೆಫೆ

ಅದೃಷ್ಟ ಲಕ್ಷ್ಮಿ ಹೇಗೆ ಕೈ ಹಿಡಿಯುತ್ತಾಳೆ ಎನ್ನುವುದನ್ನು ಕೆಲವೊಮ್ಮೆ ಊಹಿಸುವುದಕ್ಕೂ ಆಗಲ್ಲ. ಆತ ದೇವಸ್ಥಾನ ಒಂದರಲ್ಲಿ ದಿನಗೂಲಿ ನೌಕರನಾಗಿದ್ದ ವ್ಯಕ್ತಿ. ಆದರೆ, ಅಂಥ ವ್ಯಕ್ತಿ ಒಂದೇ ರಾತ್ರಿಯಲ್ಲಿ ಕೋಟಿಪತಿಯಾಗಿ ಮಿಂಚಿದ್ದಾನೆ.

ತಿರುವನಂತಪುರಂ, ಸೆಪ್ಟಂಬರ್ 21: ಅದೃಷ್ಟ ಲಕ್ಷ್ಮಿ ಹೇಗೆ ಕೈಹಿಡಿಯುತ್ತಾಳೆ ಎನ್ನುವುದನ್ನು ಕೆಲವೊಮ್ಮೆ ಊಹಿಸುವುದಕ್ಕೂ ಆಗಲ್ಲ. ಆತ ದೇವಸ್ಥಾನ ಒಂದರಲ್ಲಿ ದಿನಗೂಲಿ ನೌಕರನಾಗಿದ್ದ ವ್ಯಕ್ತಿ. ಆದರೆ, ಅಂಥ ವ್ಯಕ್ತಿ ಒಂದೇ ರಾತ್ರಿಯಲ್ಲಿ ಕೋಟಿಪತಿಯಾಗಿ ಮಿಂಚಿದ್ದಾನೆ.

ಹೌದು.. ಅದು ಕೇರಳದ ಕೊಚ್ಚಿಯಲ್ಲಿ ನಡೆದಿರುವ ಪ್ರಸಂಗ. 24 ವರ್ಷದ ಅನಂತ ವಿಜಯನ್ ತನ್ನ ಅದೃಷ್ಟ ಪರೀಕ್ಷೆಗೊಂದು ಇರಲಿ ಅಂತ ಇತ್ತೀಚೆಗೆ ಓಣಂ ಲಾಟರಿ ಖರೀದಿಸಿದ್ದ. ಲಾಟರಿ ತಗೊಳ್ಳೋಕೂ ಮೊದಲು ಕೂಡ ದೇವಸ್ಥಾನದಲ್ಲಿ ಇತರ ಗೆಳೆಯರಲ್ಲಿ ತಾನೊಂದು ದಿನ ಕೋಟಿಪತಿ ಆಗುತ್ತೇನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಮನೆಯಲ್ಲೂ ಇದೇ ಮಾತನ್ನು ಹೇಳುತ್ತಾ ಬಂದಿದ್ದ. ಆದರೆ ಆ ದಿನ ಇಷ್ಟು ಬೇಗ ಬರುವುದೆಂದು ಯಾರೂ ಊಹಿಸಿರಲಿಲ್ಲ.

ಆದರೆ, ಭಾನುವಾರ ಬೆಳಗ್ಗೆ ಪತ್ರಿಕೆ ನೋಡಿದ ಅನಂತುಗೆ ತನ್ನ ಕಣ್ಣನ್ನು ತನಗೇ ನಂಬಲು ಆಗಲಿಲ್ಲ. ಆತನ ಕೈಯಲ್ಲಿದ್ದ ಲಾಟರಿ ಟಿಕೇಟಿಗೆ ಬಂಪರ್ ಹೊಡೆದಿತ್ತು. 12 ಕೋಟಿ ರೂಪಾಯಿ ಮೊತ್ತದ ಬಂಪರ್ ಲಾಟರಿ ಅನಂತ ಖರೀದಿಸಿದ್ದ ಟಿಕೇಟಿಗೆ ಬಂದಿತ್ತು. ಬೆಳ್ಳೆಂಬೆಳಗ್ಗೆ ಪತ್ರಿಕೆ ನೋಡಿದ ಅನಂತ ಮತ್ತು ಆತನ ಗೆಳೆಯರಿಗೆ ಖುಷಿಯೋ ಖುಷಿಯಾಗಿತ್ತು.

ತಂದೆ, ತಾಯಿ, ಅಕ್ಕನನ್ನು ಹೊಂದಿದ್ದ ಅನಂತನ ಕುಟುಂಬಕ್ಕೆ ಲಾಕ್ಡೌನ್ ಬಳಿಕ ಜೀವನ ಕಷ್ಟವಾಗಿತ್ತು. ಒಬ್ಬನ ದುಡಿತದಿಂದಲೇ ಕುಟುಂಬ ಸಾಗಬೇಕಾದ ಸ್ಥಿತಿ. ಮೇಲಾಗಿ ಲಾಕ್ಡೌನ್ ಬಳಿಕ ಸರಿಯಾಗಿ ಸಂಬಳವೂ ಬರುತ್ತಿರಲಿಲ್ಲ. ಇಡುಕ್ಕಿ ಮೂಲದ ಅನಂತು ಅವರ ತಂದೆ ವಿಜಯನ್ ಪೇಂಟರ್ ಕೆಲಸ ಮಾಡುತ್ತಿದ್ದಾರೆ. ಲಾಕ್ಡೌನ್ ಬಳಿಕ ಅವರಿಗೂ ಕೆಲಸವಿರಲಿಲ್ಲ. ಅಕ್ಕನೂ ಖಾಸಗಿ ಕಂಪನಿಯಲ್ಲಿ ಮಾಡುತ್ತಿದ್ದ ಕೆಲಸ ಕೊರೊನಾದಿಂದಾಗಿ ಬಂದ್ ಆಗಿತ್ತು. ಹೀಗಾಗಿ ಕುಟುಂಬದ ಹೊರೆ ಯುವಕನ ಮೇಲೆ ಬಿದ್ದಿತ್ತು.

ಪಾರ್ಟ್ ಟೈಂ ಕೆಲಸ ಮಾಡುತ್ತ ಓದು ಮುಂದುವರಿಸಿದ್ದ ಅನಂತು ಎರಡು ವರ್ಷಗಳಿಂದ ಎರ್ನಾಕುಲಂನ ಪೊನ್ನತ್ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ. ಇದೀಗ ಒಮ್ಮೆಲೇ ಕೋಟ್ಯಧಿಪತಿಯಾಗಿರುವ ಅನಂತು ಈಗ ಕೊಚ್ಚಿಯಲ್ಲಿ ಒಂದೇ ದಿನದಲ್ಲಿ ಹೀರೋ ಆಗಿದ್ದಾನೆ. ಸರ್ಕಾರದ ತೆರಿಗೆ ಕಳೆದು ಅನಂತು ಕೈಗೆ 7.57 ಕೋಟಿ ರೂಪಾಯಿ ಸಿಗಲಿದೆ ಎನ್ನಲಾಗುತ್ತಿದೆ.

Join our WhatsApp group for latest news updates