Mangalore Koragajja Temple Kuthar: ಕುತ್ತಾರು ಕೊರಗಜ್ಜನ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ದೇಣಿಗೆ ಸಂಗ್ರಹ ; ಸೈಬರ್ ವಂಚಕರ ಹೊಸ ಜಾಲ, ಪೊಲೀಸರಿಗೆ ದೂರು, ಕ್ಷೇತ್ರದಿಂದ ದೇಣಿಗೆ ಸಂಗ್ರಹಿಸಲ್ಲ ಎಂದ ಕುತ್ತಾರು ಆಡಳಿತ 

13-06-24 12:42 pm       Mangalore Correspondent   ಕ್ರೈಂ

ಕುತ್ತಾರು ಕೊರಗಜ್ಜನ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕುತ್ತಾರು ಕ್ಷೇತ್ರದ ಆಡಳಿತ ಮಂಡಳಿ ಸೈಬರ್ ಠಾಣೆಗೆ ದೂರು ನೀಡಿದೆ.

ಮಂಗಳೂರು, ಜೂನ್.13: ಕುತ್ತಾರು ಕೊರಗಜ್ಜನ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕುತ್ತಾರು ಕ್ಷೇತ್ರದ ಆಡಳಿತ ಮಂಡಳಿ ಸೈಬರ್ ಠಾಣೆಗೆ ದೂರು ನೀಡಿದೆ.

‘’ಡಿವೋಟೀಸ್ ಆಫ್ ಕುತ್ತಾರು ಕೊರಗಜ್ಜ’’ ಎಂಬ ಹೆಸರಿನಲ್ಲಿ ಫೇಸ್ಬುಕ್ ಪೇಜ್ ತೆರೆಯಲಾಗಿದ್ದು, ಅದರಲ್ಲಿ ನಾವು ಕಷ್ಟದಲ್ಲಿದ್ದೇವೆ, ಕೊರಗಜ್ಜನ ಭಕ್ತರು ಹಣದ ಸಹಾಯ ಮಾಡಿ ಎಂದು ಕೇಳಿಕೊಳ್ಳಲಾಗಿದೆ. ಕೊರಗಜ್ಜನ ಫೋಟೋ ಹಾಕಿ, ಪವಾಡಗಳಿಗೆ ನಂಬಿಕೆಯ ಕೀಲಿಕೈ ಎಂದು ಬರೆದಿದ್ದು, ಶೈಕ್ಷಣಿಕ ಉದ್ದೇಶಗಳಿಗಾಗಿ ದಯವಿಟ್ಟು 200 ರೂ. ಸಹಾಯ ಮಾಡಿ ಎಂದು ಒಂದು ಪೋಸ್ಟ್ ಹಾಕಲಾಗಿದೆ. ಇನ್ನೊಂದು ಪೋಸ್ಟ್ ಅದನ್ನೇ ಇಂಗ್ಲಿಷ್ ನಲ್ಲಿ ಬರೆಯಲಾಗಿದ್ದು, ಕೆನರಾ ಬ್ಯಾಂಕ್ ಐಎಫ್ಎಸ್ ಸಿ ಕೋಡ್ ಸಹಿತ ಬ್ಯಾಂಕ್ ಖಾತೆಯನ್ನೂ ನೀಡಲಾಗಿದೆ.

ಮತ್ತೊಂದು ಪೋಸ್ಟ್ ನಲ್ಲಿ ದೇವರು ನಮ್ಮನ್ನು ನೋಡುತ್ತಿದ್ದಾನೆ ಎಂಬ ಶಿರೋನಾಮೆಯಲ್ಲಿ ಹಣದ ಸಹಾಯಕ್ಕಾಗಿ ಬೇಡಿಕೊಳ್ಳುತ್ತೇನೆ ಎಂದು ಬರೆಯಲಾಗಿದೆ. ಎಲ್ಲದರಲ್ಲಿಯೂ ಬ್ಯಾಂಕ್ ಖಾತೆಯ ಸಂಖ್ಯೆ ಜೊತೆಗೆ ಕೀರ್ತಿ ಮೆಹ್ರಾ ಎಂದು ಆತನ ಹೆಸರು ಬರೆಯಲಾಗಿದೆ. ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಹಣಕಾಸಿನ ಸಹಾಯಕ್ಕಾಗಿ ಧನ್ಯವಾದಗಳು ಎಂಬ ಕಮೆಂಟ್ ಬಂದಿರುವುದೂ ಇದೆ. ಇದನ್ನು ನೋಡಿದರೆ, ಆ ಖಾತೆಗೆ ಸಾರ್ವಜನಿಕರು, ಕೊರಗಜ್ಜನ ಭಕ್ತರು ಹಣ ಹಾಕುತ್ತಿರುವಂತೆ ಕಾಣುತ್ತಿದೆ. ಈ ಬಗ್ಗೆ ಕುತ್ತಾರಿನ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗ ತನಿಯ ಸೇವಾ ಟ್ರಸ್ಟ್ ನವರು ಪೊಲೀಸರಿಗೆ ದೂರು ನೀಡಿದ್ದು, ನಕಲಿ ಖಾತೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕುತ್ತಾರು ಕೊರಗಜ್ಜನ ಆದಿಸ್ಥಳದ ಆಡಳಿತ ಮಂಡಳಿಯ ಯಾವುದೇ ಉದ್ದೇಶಕ್ಕಾಗಿ ಆನ್ಲೈನ್ ಮುಖಾಂತರ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದಿಲ್ಲ. ಶ್ರೀ ಕ್ಷೇತ್ರದಲ್ಲಿ ಆನ್ಲೈನ್ ಸೇವೆಯಾಗಲೀ, ದೇಣಿಗೆ ಸಂಗ್ರಹವಾಗಲೀ ಇರುವುದಿಲ್ಲ. ಕ್ಷೇತ್ರದ ಹೆಸರಲ್ಲಿ ಯಾವುದೇ ರೀತಿಯ ಪ್ರಕಟಣೆಗಳು ಬಂದಲ್ಲಿ ಅಂತಹ ಮನವಿಗೆ ಸ್ಪಂದಿಸಬಾರದಾಗಿ ವಿನಂತಿಸುತ್ತೇವೆ. ತಪ್ಪು ಮಾಹಿತಿ ನೀಡಿ ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೃತ್ಯ ಇದಾಗಿದ್ದು ಜಾಲತಾಣದಲ್ಲಿ ದೇಣಿಗೆ ಸಂಗ್ರಹಿಸುತ್ತಿರುವುದು ಕಾನೂನು ಬಾಹಿರವಾಗಿದೆ. ಕ್ಷೇತ್ರದಲ್ಲಿ ನಡೆಯುವ ಎಲ್ಲ ಸೇವೆಗಳಿಗೂ ಕಡ್ಡಾಯವಾಗಿ ರಸೀದಿ ನೀಡಲಾಗುತ್ತದೆ. ಜಾಲತಾಣದಲ್ಲಿ ಬರುತ್ತಿರುವ ಸುಳ್ಳು ಮಾಹಿತಿಯನ್ನು ನಂಬದಂತೆ ಆಡಳಿತ ಮಂಡಳಿ ಕೇಳಿಕೊಂಡಿದೆ.

ಕೀರ್ತಿ ಮೆಹ್ರಾ ಎಂದು ಹೆಸರು ಹಾಕಿರುವುದರಿಂದ ಈ ಕೃತ್ಯವನ್ನೂ ಉತ್ತರ ಭಾರತ ಮೂಲದ ಸೈಬರ್ ವಂಚಕರೇ ಮಾಡಿರುವಂತೆ ತೋರುತ್ತಿದೆ. ಆದರೆ, ಫೇಸ್ಬುಕ್ ಪೇಜ್ ನಲ್ಲಿ ಕುತ್ತಾರು ಕ್ಷೇತ್ರದ ಫೋಟೋ ಮತ್ತು ಕೊರಗಜ್ಜ ದೈವದ ಫೋಟೊವನ್ನು ಬಳಸಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ಕೊರಗಜ್ಜನಿಗೆ ಅಪಾರ ಭಕ್ತರು ಇರುವುದನ್ನು ತಿಳಿದು ಈ ರೀತಿಯೂ ಹಣ ವಸೂಲಿ ಮಾಡಬಹುದೆಂದು ಸೈಬರ್ ಕಿರಾತಕರು ವಂಚನೆಗಿಳಿದಿರುವಂತೆ ತೋರುತ್ತಿದೆ.

Mangalore Koragajja Temple in Kuthar, fake Facebook account opened, demand money over social media, case filed. Kuthar temple adminstration has filed a case at the cyber crime police station in Mangalore.