Mangalore crime, Dacoity, Ullayabettu, padnabham: ಕಾಂಗ್ರೆಸ್ ಮುಖಂಡ ಪದ್ಮನಾಭ ಕೋಟ್ಯಾನ್ ಮನೆಗೆ ನುಗ್ಗಿ ದರೋಡೆ ; ಅಂಗಳದಲ್ಲಿದ್ದಾಗಲೇ ಹಲ್ಲೆ, ಚೂರಿ ಇರಿತ, ಪತ್ನಿ, ಮಗನನ್ನು ಕಟ್ಟಿಹಾಕಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ, ನಗದು ಕಿತ್ತುಕೊಂಡರು, ಸ್ಥಳೀಯರದ್ದೇ ಕೃತ್ಯ ಶಂಕೆ

22-06-24 11:15 am       Mangalore Correspondent   ಕ್ರೈಂ

ಕಾಂಗ್ರೆಸ್ ಮುಖಂಡ, ಕ್ಲಾಸ್ ವನ್ ಕಂಟ್ರಾಕ್ಟರ್, ಕಲ್ಲುಕೋರೆ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರ ಉಳಾಯಿಬೆಟ್ಟಿನ ಮನೆಯಲ್ಲಿ ದರೋಡೆ ನಡೆದಿದ್ದು, ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ಕಳ್ಳರು ದೋಚಿದ್ದಾರೆ.

ಮಂಗಳೂರು, ಜೂನ್.22: ಕಾಂಗ್ರೆಸ್ ಮುಖಂಡ, ಕ್ಲಾಸ್ ವನ್ ಕಂಟ್ರಾಕ್ಟರ್, ಕಲ್ಲುಕೋರೆ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರ ಉಳಾಯಿಬೆಟ್ಟಿನ ಮನೆಯಲ್ಲಿ ದರೋಡೆ ನಡೆದಿದ್ದು, ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ಕಳ್ಳರು ದೋಚಿದ್ದಾರೆ. ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಏಕಾಏಕಿ 9 ಮಂದಿಯಿದ್ದ ಮಾಸ್ಕ್ ಮತ್ತು ಮುಸುಕು ಹಾಕ್ಕೊಂಡಿದ್ದ ತಂಡ ದಾಳಿ ನಡೆಸಿ ದರೋಡೆ ಮಾಡಿದೆ.

ಮಂಗಳೂರು ನಗರದಿಂದ 22 ಕಿಮೀ ದೂರದ ಉಳಾಯಿಬೆಟ್ಟು ಬಳಿಯ ಪೆರ್ಮಂಕಿ ಪದವಿನಲ್ಲಿ ಇವರ ಮನೆಯಿದ್ದು, ರಾತ್ರಿ 8 ಗಂಟೆ ವೇಳೆಗೆ ಪದ್ಮನಾಭ ಕೋಟ್ಯಾನ್ ತನ್ನ ಮನೆಯಲ್ಲಿ ವಾಕಿಂಗ್ ಮಾಡುತ್ತಿದ್ದಾಗಲೇ ದರೋಡೆಕೋರರು ದಾಳಿ ನಡೆಸಿದ್ದಾರೆ. ಕೋಟ್ಯಾನ್ ಮೇಲೆ ಹಲ್ಲೆ ನಡೆಸಿದ್ದು, ನೆಲಕ್ಕೆ ಬಿದ್ದವರ ಮೇಲೆ ಎದೆ, ಹೊಟ್ಟೆಗೆ ತುಳಿದಿದ್ದಾರೆ. ಈ ವೇಳೆ, ಚೂರಿಯಿಂದ ಕೈ ಮತ್ತು ಕಾಲಿಗೆ ಇರಿದಿದ್ದು, ಹೆದರಿಸಲು ಯತ್ನಿಸಿದ್ದಾರೆ. ಮನೆಯ ಒಳಗಿದ್ದ ಪತ್ನಿ ಶಶಿಪ್ರಭಾ ಕೋಟ್ಯಾನ್ ಮತ್ತು ಮಗ ಪ್ರಥಮ್ ಅವರಿಗೂ ಹಲ್ಲೆ ನಡೆಸಿದ್ದು, ಬೆಡ್ ಶೀಟ್ ಬಳಸಿ ಕಂಬಕ್ಕೆ ಕಟ್ಟಿಹಾಕಿದ್ದು ಚಿನ್ನಾಭರಣಗಳಿದ್ದ ಕಪಾಟಿನ ಕೀಯನ್ನು ಕೇಳಿ ಪಡೆದಿದ್ದಾರೆ.

ಒಂದು ಕಪಾಟು ಓಪನ್ ಮಾಡಿ, ಅದರಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ಕಿತ್ತುಕೊಂಡಿದ್ದಾರೆ. ಅಲ್ಲದೆ, ಮನೆಯ ಒಳಗೆಲ್ಲ ತಡಕಾಡಿದ್ದಾರೆ. 9 ಮಂದಿಯಿದ್ದ ಆರೋಪಿಗಳು ಪರಸ್ಪರ ಹಿಂದಿ ಮಾತನಾಡುತ್ತಿದ್ದರು. ಇನ್ನೋವಾ ವಾಹನದಲ್ಲಿ ಬಂದಿದ್ದು, ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿ ಮನೆಯಲ್ಲಿದ್ದ ಫಾರ್ಚುನರ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಮನೆಯಿಂದ ಅನತಿ ದೂರದಲ್ಲಿ ಫಾರ್ಚುನರ್ ಕಾರು ಪತ್ತೆಯಾಗಿದ್ದು, ಬಳಿಕ ತಾವು ಬಂದಿದ್ದ ಇನ್ನೋವಾದಲ್ಲಿಯೇ ಬಂಟ್ವಾಳದ ಕಡೆಗೆ ಪರಾರಿಯಾಗಿದ್ದಾರೆ. ಸಾಕಷ್ಟು ಶ್ರೀಮಂತಿಕೆ ಇದ್ದರೂ, ಕೋಟ್ಯಾನ್ ಅದನ್ನು ಎಲ್ಲಿಯೂ ತೋರಿಸಿಕೊಳ್ಳುತ್ತಿರಲಿಲ್ಲ. ಹಣ ಇದ್ದರೂ ಖರ್ಚು ಮಾಡುವುದು ಕಡಿಮೆ ಇತ್ತು. ಕೊರಳಲ್ಲಿ ದಪ್ಪದ ಸರ ಮತ್ತು ಕೈಯಲ್ಲಿ ದಪ್ಪಗಿನ ಉಂಗುರಗಳನ್ನು ಧರಿಸುತ್ತಿದ್ದರು. ಅವನ್ನು ಬಲವಂತದಿಂದ ದರೋಡೆಕೋರರು ಕಿತ್ತುಕೊಂಡಿದ್ದಾರೆ.

ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ, ಉದ್ಯಮಿ

ಪದ್ಮನಾಭ ಕೋಟ್ಯಾನ್ ಕಾಂಗ್ರೆಸ್ ಮುಖಂಡರಾಗಿದ್ದು, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು. ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಧಾರ್ಮಿಕ ಪರಿಷತ್ ಸದಸ್ಯರಾಗಿದ್ದರು. ಮಂಗಳೂರಿನಲ್ಲಿ ಕ್ಲಾಸ್ ವನ್ ಪಿಡಬ್ಲ್ಯುಡಿ ಗುತ್ತಿಗೆದಾರನಾಗಿದ್ದು, ಇದರ ಜೊತೆಗೆ ನೀರುಮಾರ್ಗ ಆಸುಪಾಸಿನಲ್ಲಿ ಕಲ್ಲಿನ ಕೋರೆ ನಡೆಸುತ್ತಿದ್ದಾರೆ. ಉಳಾಯಿಬೆಟ್ಟಿನ ಮನೆಯ ಆವರಣದಲ್ಲಿ 30 ಎಕ್ರೆಯಷ್ಟು ಗುಡ್ಡ ಮತ್ತು ತೋಟ ಇದ್ದು, ಕಲ್ಲುಕೋರೆ ನಡೆಸಿದ ಅದೇ ಜಾಗಕ್ಕೆ ಮಣ್ಣು ತುಂಬಿ ಅಡಿಕೆ ತೋಟ ಮಾಡಿದ್ದಾರೆ. ಇದಲ್ಲದೆ, ರಿಯಲ್ ಎಸ್ಟೇಟ್ ವ್ಯವಹಾರವನ್ನೂ ಮಾಡುತ್ತಿದ್ದರು. ಪೆರ್ಮಂಕಿ ಪದವಿನ ಕೆಳಭಾಗದ ಗುಡ್ಡ ಪ್ರದೇಶದಲ್ಲಿ ಇವರ ಮನೆ ಮತ್ತು ತೋಟ ಇದ್ದು, ಈ ಜಾಗದಲ್ಲಿ ಹೆಚ್ಚು ಮನೆಗಳಿಲ್ಲ. ನಿರ್ಜನ ಪ್ರದೇಶವಾಗಿದೆ. ಇದೇ ಕಾರಣದಿಂದ ದರೋಡೆಕೋರರು ರಾತ್ರಿ 8 ಗಂಟೆಗೇ ಮನೆಗೆ ನುಗ್ಗಿ ದೋಚುವ ಕೆಲಸ ಮಾಡಿದ್ದಾರೆ. ಸ್ಥಳೀಯರ ರೀತಿ ಅಸ್ಪಷ್ಟ ಹಿಂದಿ ಮಾತನಾಡುತ್ತಿದ್ದುದರಿಂದ ಇವರ ಬಗ್ಗೆ ತಿಳಿದಿರುವವರೇ ಈ ಕೃತ್ಯದಲ್ಲಿ ತೊಡಗಿರುವ ಸಾಧ್ಯತೆಯಿದೆ. 

ಪದ್ಮನಾಭ ಕೋಟ್ಯಾನ್ ಅವರ ಪತ್ನಿ ಶಶಿಪ್ರಭಾ ಕೋಟ್ಯಾನ್ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾಗಿದ್ದು ವೃತ್ತಿಯಲ್ಲಿ ವಕೀಲರಾಗಿದ್ದು ನೀರುಮಾರ್ಗದಲ್ಲಿ ನೋಟರಿಯಾಗಿ ಕಚೇರಿ ಹೊಂದಿದ್ದಾರೆ. ಎರಡು ಅಂತಸ್ತಿನ ದೊಡ್ಡ ಮನೆಯಾಗಿದ್ದು, ದರೋಡೆಕೋರರು ಇವರ ಬಗ್ಗೆ ತಿಳಿದುಕೊಂಡೇ ಬಂದಿರುವಂತೆ ತೋರುತ್ತಿದೆ. ಮನೆಯಲ್ಲಿ ಸಿಸಿಟಿವಿ ಇದ್ದು, ದರೋಡೆಕೋರರ ಚಲನವಲನ ಪೂರ್ತಿಯಾಗಿ ರೆಕಾರ್ಡ್ ಆಗಿದೆ. 9 ಮಂದಿಯಲ್ಲಿ ಒಬ್ಬಾತ ಲೀಡರ್ ರೀತಿ ವರ್ತಿಸುತ್ತಿದ್ದು, ಆತ ಮುಖದ ಮಾಸ್ಕನ್ನು ಕೆಳಗೆ ಸರಿಸಿದ್ದ. ಅಸ್ಪಷ್ಟ ಹಿಂದಿಯಲ್ಲಿ ಮಾತನಾಡುತ್ತ ಮನೆಯವರನ್ನು ಜೋರು ಮಾಡುತ್ತಿದ್ದ ಎಂದು ಮನೆಮಂದಿ ತಿಳಿಸಿದ್ದಾರೆ. ಕೈ ಮತ್ತು ಕಾಲಿಗೆ ಚೂರಿ ಇರಿತದಿಂದ ಗಾಯಗೊಂಡಿರುವ ಪದ್ಮನಾಭ ಕೋಟ್ಯಾನ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದು, ದರೋಡೆಕೋರರ ಇನ್ನೋವಾ ರಾತ್ರಿಯೇ ಬಂಟ್ವಾಳದತ್ತ ಸಂಚರಿಸಿರುವುದು ಅಲ್ಲಿನ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.

Mangalore PWD contractor and  Congress leaders house dacoity at Ullayabettu, crores worth gold, cash stolen. During the incident, Padnabham Kotian sustained an injury to his right hand after being attacked with a knife. He was immediately rushed to KMC Hospital in the city for treatment.