ಲಕ್ಷುರಿ ಕಾರಲ್ಲಿ ಬಂದು ಪೆಟ್ರೋಲ್ ಹಾಕಿಸಿ ಹಣ ಕೊಡದೆ ಎಸ್ಕೇಪ್ ! 

20-08-20 04:04 pm       Bangalore Correspondent   ಕ್ರೈಂ

ಹೊಸ ಲಕ್ಷುರಿ ಕಾರಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಪಂಪ್ ನಲ್ಲಿ ಪೆಟ್ರೋಲ್​ ಹಾಕಿಸಿ, ಬಿಲ್ ಕೊಡದೆ ಪರಾರಿಯಾದ ಘಟನೆ ಬೆಂಗಳೂರಿನ ಮಾರತ್​ ಹಳ್ಳಿಯಲ್ಲಿ ನಡೆದಿದೆ. 

ಬೆಂಗಳೂರು, ಆಗಸ್ಟ್​ 20: ಇನ್ನೂ ನೋಂದಣಿಯಾಗದ ಹೊಸ ಲಕ್ಷುರಿ ಕಾರಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಪಂಪ್ ನಲ್ಲಿ ಪೆಟ್ರೋಲ್​ ಹಾಕಿಸಿ, ಬಿಲ್ ಕೊಡದೆ ಪರಾರಿಯಾದ ಘಟನೆ ಬೆಂಗಳೂರಿನ ಮಾರತ್​ ಹಳ್ಳಿಯಲ್ಲಿ ನಡೆದಿದೆ. 

ಬೆಳಗ್ಗಿನ ಜಾವ 2.45ರ ಸುಮಾರಿಗೆ, ಹೊಸತಾದ ಬ್ರಾಂಡ್ ನ್ಯೂ ಕಾರಿನಲ್ಲಿ ಯುವಕನೊಬ್ಬ ಮಾರತ್ ಹಳ್ಳಿಯ ಮುನ್ನೇಕೊಳಲಿನ ಎನ್​.ಎನ್ ಆ್ಯಂಡ್ ಸನ್ಸ್ ಪೆಟ್ರೋಲ್ ಬಂಕಿಗೆ ಬಂದಿದ್ದ. ಕಾರಿಗೆ 4,000 ರೂಪಾಯಿ ಮೊತ್ತದ ಪೆಟ್ರೋಲ್​ ಹಾಕಿಸಿದ್ದಾನೆ. ಬಳಿಕ ಪಂಪ್ ಸಿಬ್ಬಂದಿ ಪೆಟ್ರೋಲ್ ಹಾಕಿ ಮುಗಿಸಿದ ಕೂಡಲೇ ಹಣ ಕೇಳುವಷ್ಟರಲ್ಲಿ ಚಾಲಕ ಹಣ ನೀಡದೇ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. 

ಕಾರು ಚಾಲಕ ಪರಾರಿಯಾದ ದೃಶ್ಯ ಪೆಟ್ರೋಲ್ ಪಂಪ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿಗೆ ನಂಬರ್ ಕೂಡ ಇಲ್ಲದ ಕಾರಣ ಕಾರು ಚಾಲಕನ ಪತ್ತೆ ಕಷ್ಟವಾಗಿದೆ. ಈ ಬಗ್ಗೆ ಪೆಟ್ರೊಲ್​ ಬಂಕ್​ ಮಾಲೀಕ ಕಿರಣ್ ನಾಗರಾಜ್​ ಮಾರತ್​ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.