ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆ ; ಜೈಲಿಗೆ ತಳ್ಳುವ ಇನ್ಸ್ ಪೆಕ್ಟರನಿಗೇ ಜೈಲು ಕಂಬಿ !! 

27-08-20 06:04 pm       Mangalore Reporter   ಕ್ರೈಂ

ಹತ್ತು ವರ್ಷಗಳ ಹಿಂದೆ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದ ಇನ್ಸ್ ಪೆಕ್ಟರ್ ದರ್ಜೆಯ ಅಧಿಕಾರಿಗೆ ಲೋಕಾಯುಕ್ತ ನ್ಯಾಯಾಲಯ ಶಿಕ್ಷೆ ಘೋಷಿಸಿದ್ದು ಹುದ್ದೆಯಲ್ಲಿ ಇರುವಾಗಲೇ ಬಂಧನಕ್ಕೊಳಗಾಗಿದ್ದಾನೆ. 

ಮಂಗಳೂರು, ಆಗಸ್ಟ್ 27: ಭ್ರಷ್ಟಾಚಾರ ಮಾಡಿದ್ರೂ ಹೇಗೂ ಬಚಾವ್ ಆಗಬಹುದು ಎಂಬ ಹುಂಬತನ ಎಲ್ಲ ಕಾಲದಲ್ಲೂ ನಡೆಯಲ್ಲ. ಹತ್ತು ವರ್ಷಗಳ ಹಿಂದೆ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದ ಇನ್ಸ್ ಪೆಕ್ಟರ್ ದರ್ಜೆಯ ಅಧಿಕಾರಿಗೆ ಲೋಕಾಯುಕ್ತ ನ್ಯಾಯಾಲಯ ಶಿಕ್ಷೆ ಘೋಷಿಸಿದ್ದು ಹುದ್ದೆಯಲ್ಲಿ ಇರುವಾಗಲೇ ಬಂಧನಕ್ಕೊಳಗಾಗಿದ್ದಾನೆ. 

ಮಂಗಳೂರಿನ ಕರಾವಳಿ ಕಾವಲು ಪಡೆಯ ಇನ್ಸ್ ಪೆಕ್ಟರ್ ಆಗಿರುವ ಗಂಗೀರೆಡ್ಡಿ ಬಂಧನಕ್ಕೊಳಗಾಗಿರುವ ಅಧಿಕಾರಿ. 2009ರ ಆಗಸ್ಟ್ 27ರಂದು ಬೆಳ್ತಂಗಡಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದ ವೇಳೆ ಗಂಗೀರೆಡ್ಡಿಯ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಆಗಿನ ಲೋಕಾಯುಕ್ತ ಡಿವೈಎಸ್ಪಿ ಸದಾನಂದ ವೆರ್ಣೇಕರ್ ನೇತೃತ್ವದ ತಂಡ ದಾಳಿ ನಡೆಸಿ, ಸುಮಾರು 19 ಲಕ್ಷಕ್ಕಿಂತಲೂ ಹೆಚ್ಚು ಮೌಲ್ಯದ ಆಸ್ತಿ ಪತ್ತೆಯಾದ ಬಗ್ಗೆ ಕೇಸು ದಾಖಲಿಸಿತ್ತು. ಆಬಳಿಕ ತನಿಖೆ ಪೂರ್ಣಗೊಳಿಸಿದ್ದ ಲೋಕಾಯುಕ್ತ ಡಿವೈಎಸ್ಪಿ ಎಂ. ವಿಠಲದಾಸ್ ಪೈ ಆರೋಪಿ ಗಂಗೀರೆಡ್ಡಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. 

ಮಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. 22 ಸಾಕ್ಷಿದಾರರ ಹೇಳಿಕೆ ದಾಖಲಿಸಿ, ವಿಚಾರಣೆಗೆ ಪರಿಗಣಿಸಲಾಗಿತ್ತು. ವಿಶೇಷ ಸರಕಾರಿ ಅಭಿಯೋಜಕರಾದ ಕೆ.ಎಸ್.ಎನ್ ರಾಜೇಶ್ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿ ಗಂಗೀರೆಡ್ಡಿ ಮೇಲಿನ ಆರೋಪ ಸಾಬೀತಾಗಿರುವ ಬಗ್ಗೆ ತೀರ್ಮಾನಕ್ಕೆ ಬಂದಿದ್ದು ಇಂದು ಶಿಕ್ಷೆಯನ್ನು ಘೋಷಣೆ ಮಾಡಿದೆ. 

ನ್ಯಾಯಾಧೀಶ ಬಿ.ಬಿ.ಜಕಾತಿ 111 ಪುಟಗಳ ಸುದೀರ್ಘ ತೀರ್ಪು ಘೋಷಣೆ ಮಾಡಿದ್ದು ಆರೋಪಿ ಗಂಗೀರೆಡ್ಡಿ ವಿರುದ್ಧ ನಾಲ್ಕು ವರ್ಷ ಸಾದಾ ಸಜೆ ಮತ್ತು 5 ಲಕ್ಷ ರೂಪಾಯಿ ದಂಡವನ್ನು ಶಿಕ್ಷೆಯಾಗಿ ಘೋಷಿಸಿದ್ದಾರೆ. ಅಲ್ಲದೆ, ದಂಡ ತೆರಲು ತಪ್ಪಿದಲ್ಲಿ ಮತ್ತೊಂದು ವರ್ಷ ಶಿಕ್ಷೆಗೆ ಒಳಪಡಬೇಕೆಂದು ತೀರ್ಪಿನಲ್ಲಿ ಹೇಳಿದ್ದಾರೆ. 

ಪ್ರಸ್ತುತ ಮಂಗಳೂರಿನ ಪಣಂಬೂರಿನಲ್ಲಿರುವ ಕರಾವಳಿ ಕಾವಲು ಪಡೆಯಲ್ಲಿ ಇನ್ಸ್ ಪೆಕ್ಟರ್ ಆಗಿರುವ ಗಂಗೀರೆಡ್ಡಿಯನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳ್ಳರನ್ನು ಹಿಡಿದು ಜೈಲಿಗೆ ತಳ್ಳುವ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಕರ್ತವ್ಯದಲ್ಲಿರುವಾಗಲೇ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲು ಪಾಲಾಗುತ್ತಿರುವುದು ಕರಾವಳಿಯ ಮಟ್ಟಿಗೆ ಹೊಸ ಇತಿಹಾಸ.