ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾಷ್ಟ್ರಪತಿ ಸ್ಥಾನಕ್ಕೆ ಡಿಎಂಕೆ ಪಕ್ಷದ ತಿರುಚ್ಚಿ ಶಿವ ಆಯ್ಕೆ ಸಾಧ್ಯತೆ, ಇಬ್ಬರು ತಮಿಳಿಗರದ್ದೇ ಸ್ಪರ್ಧೆಗೆ ವೇದಿಕೆ ರೆಡಿ ! 

18-08-25 09:19 pm       HK News Desk   ದೇಶ - ವಿದೇಶ

ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ, ಪ್ರಸ್ತುತ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್‌ ಅವರನ್ನು ಎನ್‌ಡಿಎ ಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ತಮಿಳುನಾಡು ರಾಜಕೀಯ ಗರಿಗೆದರಿದ್ದು, ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟವೂ ಡಿಎಂಕೆ ಪಕ್ಷದ ರಾಜ್ಯಸಭಾ ಸದಸ್ಯ ತಿರುಚ್ಚಿ ಶಿವ ಅವರನ್ನು ಉಪ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಹೆಸರಿಸುವ ಸಾಧ್ಯತೆ ನಿಚ್ಚಳವಾಗಿದೆ.

ನವದೆಹಲಿ, ಆ.18 :  ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ, ಪ್ರಸ್ತುತ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್‌ ಅವರನ್ನು ಎನ್‌ಡಿಎ ಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ತಮಿಳುನಾಡು ರಾಜಕೀಯ ಗರಿಗೆದರಿದ್ದು, ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟವೂ ಡಿಎಂಕೆ ಪಕ್ಷದ ರಾಜ್ಯಸಭಾ ಸದಸ್ಯ ತಿರುಚ್ಚಿ ಶಿವ ಅವರನ್ನು ಉಪ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಹೆಸರಿಸುವ ಸಾಧ್ಯತೆ ನಿಚ್ಚಳವಾಗಿದೆ. ಈ ಮೂಲಕ ತಮಿಳುನಾಡು ರಾಜಕೀಯ ಮತ್ತೊಂದು ಮಗ್ಗುಲಿಗೆ ಹೊರಳಿದ್ದು ಬಿರುಸು ಪಡೆಯುವ ಲಕ್ಷಣಗಳು ಗೋಚರಿಸಿವೆ. 

ಡಿಎಂಕೆಯ ರಾಜ್ಯಸಭಾ ಸಂಸದ ತಿರುಚ್ಚಿ ಶಿವ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿ, ಮುಂಬರುವ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ತಮಿಳುನಾಡಿನ ಹಿರಿಯ ರಾಜಕಾರಣಿಯನ್ನು ಅವರದೇ ರಾಜ್ಯದ ಮತ್ತೊಬ್ಬ ಹಿರಿಯ ರಾಜಕಾರಣಿಯ ವಿರುದ್ಧ ಕಣಕ್ಕಿಳಿಸುವ ಮತ್ತು ಪ್ರಾದೇಶಿಕ ರಾಜಕೀಯದಿಂದ ಎದುರಾಗುವ ಪ್ರಮುಖ ಎಡರು ತೊಡರುಗಳನ್ನು ನಿವಾರಿಸುವ ಕಾರ್ಯತಂತ್ರದ ಹೆಜ್ಜೆಯಾಗಿ ಪ್ರತಿಪಕ್ಷ ಇಂಡಿಯಾ ಬಣವು ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಪ್ರತಿಪಕ್ಷಗಳ ಒಕ್ಕೂಟವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆ ಸೇರಿ ತಮ್ಮ ಅಭ್ಯರ್ಥಿಯನ್ನು ನಿರ್ಧರಿಸಿದ ನಂತರವೇ ಅಧಿಕೃತ ಅಭ್ಯರ್ಥಿಯ ಘೋಷಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ತಿರುಚ್ಚಿ ಶಿವ ಅವರ ಆಯ್ಕೆ ಪಕ್ಕಾ ಆದರೆ ತಮಿಳುನಾಡಿನಲ್ಲಿ ಬಿಜೆಪಿಯ ಹಿರಿಯ ಮತ್ತು ಪ್ರಮುಖ ನಾಯಕರಲ್ಲಿ ಒಬ್ಬರಾದ ಸಿ.ಪಿ. ರಾಧಾಕೃಷ್ಣನ್ ವಿರುದ್ಧ ಅವರದೇ ರಾಜ್ಯದ ಡಿಎಂಕೆಯ ಹಿರಿಯ ರಾಜಕಾರಣಿಯೊಬ್ಬರು ದೇಶದ ಎರಡನೇ ಅತ್ಯುನ್ನತ ಹುದ್ದೆಗೆ ಸ್ಪರ್ಧೆ ಮಾಡಿದಂತಾಗಲಿದೆ. 

ಸೆಪ್ಟೆಂಬರ್ 9ರಂದು ಉಪ ರಾಷ್ಟ್ರಪತಿ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಇಬ್ಬರು ತಮಿಳಿಗರೇ ಅಭ್ಯರ್ಥಿಗಳಾದರೆ ತಮಿಳುನಾಡು ಅಸೆಂಬ್ಲಿ ಚುನಾವಣೆ ಮೇಲೆ ದೃಷ್ಟಿ ನೆಟ್ಟಿರುವ ಎನ್‌ಡಿಎ ತಂತ್ರಕ್ಕೆ ಇಂಡಿಯಾ ಒಕ್ಕೂಟವು ಪ್ರತಿತಂತ್ರ ಹೂಡಿದಂತಾಗಲಿದೆ. ಇದು ಪ್ರಾದೇಶಿಕ ಕೂಗನ್ನೂ ಸ್ವಲ್ಪಮಟ್ಟಿಗೆ ತಣಿಸಲಿದೆ ಎಂಬುದು ಇಂಡಿಯಾ ಒಕ್ಕೂಟದ ಅಭಿಪ್ರಾಯ. ಅಲ್ಲದೆ, ದಕ್ಷಿಣದ ರಾಜ್ಯಗಳ ಬೆಂಬಲ ಗಿಟ್ಟಿಸಿಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿಶೇಷ ತಂತ್ರಗಾರಿಕೆ ಎನಿಸಲಿದೆ.

ಈ ಮಧ್ಯೆ ಇಂಡಿಯಾ ಒಕ್ಕೂಟ ಇಸ್ರೋದಲ್ಲಿ ವಿಜ್ಞಾನಿಯಾಗಿದ್ದ ಮಿಲಸ್ವಾಮಿ ಅಣ್ಣಾದುರೈ ಹೆಸರನ್ನೂ ಮುನ್ನೆಲೆಗೆ ತಂದಿದೆ. 2022ರ ಉಪರಾಷ್ಟ್ರಪತಿ ಚುನಾವಣೆ ವೇಳೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಉಪರಾಷ್ಟ್ರಪತಿ ಆಯ್ಕೆಗೆ ರಾಜಕೀಯೇತರ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಹೇಳಿ ಕಾಂಗ್ರೆಸ್ ಅಭ್ಯರ್ಥಿ ಮಾರ್ಗರೆಟ್ ಆಳ್ವ ಅವರನ್ನು ಬೆಂಬಲಿಸಲು ನಿರಾಕರಿಸಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿತ್ತು. ಈ ಬಾರಿಯೂ ಅದೇ ಬೇಡಿಕೆ ಮುಂದಿಟ್ಟರೆ ರಾಜಕೀಯ ಹಿನ್ನೆಲೆಯಿಲ್ಲದ ತಮಿಳುನಾಡು ಮೂಲದವರೇ ಆದ ಅಣ್ಣಾದುರೈ ಹೆಸರನ್ನು ಪರಿಗಣಿಸುವ ನಿರೀಕ್ಷೆ ಇದೆ.

In a move that could spark a high-stakes political battle, the INDIA opposition bloc is likely to field DMK MP Tiruchi Siva as its candidate for the upcoming Vice-Presidential election, setting up a contest between two prominent leaders from Tamil Nadu.