ಬ್ರೇಕಿಂಗ್ ನ್ಯೂಸ್
13-01-22 05:57 pm HK Desk news ದೇಶ - ವಿದೇಶ
ಲಕ್ನೋ, ಜ.13 : ಉತ್ತರ ಪ್ರದೇಶದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಉನ್ನಾವೋ ರೇಪ್ ಪ್ರಕರಣದಲ್ಲಿ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಕಾಂಗ್ರೆಸ್ ವಿಧಾನಸಭೆ ಸ್ಪರ್ಧಿಸಲು ಟಿಕೆಟ್ ನೀಡಿದ್ದು ದೇಶದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಇದರ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ, ಉನ್ನಾವೋದಲ್ಲಿ ಬಿಜೆಪಿಯವರು ಯಾವ ಮಹಿಳೆಗೆ, ಆಕೆಯ ಮಗಳಿಗೆ ಅನ್ಯಾಯ ಮಾಡಿದ್ದರೋ, ಅದೇ ಮಹಿಳೆ ಈಗ ನ್ಯಾಯಕ್ಕಾಗಿ ಎದುರು ನೋಡಲಿದ್ದಾಳೆ. ನ್ಯಾಯಕ್ಕಾಗಿ ಹೋರಾಟ ನಡೆಸಲಿದ್ದಾಳೆ ಎಂದು ಬಣ್ಣಿಸಿದ್ದಾರೆ.
ಉನ್ನಾವೋ ರೇಪ್ ಪ್ರಕರಣ ಉತ್ತರ ಪ್ರದೇಶ ಮಾತ್ರವಲ್ಲ. ಇಡೀ ಉತ್ತರ ಭಾರತದಲ್ಲಿಯೇ ಭಾರೀ ಸಂಚಲನ ಮೂಡಿಸಿದ್ದ ಪ್ರಕರಣ. ಕೆಲಸ ಕೇಳಿಕೊಂಡು ಬಂದಿದ್ದ 17ರ ಹರೆಯದ ಬಾಲಕಿಯನ್ನು 2017ರ ಜೂನ್ ತಿಂಗಳಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್, ಆತನ ಸೋದರ ಮತ್ತು ಇತರ ಗೆಳೆಯರು ಸೇರಿ ಸರಣಿ ಗ್ಯಾಂಗ್ ರೇಪ್ ನಡೆಸಿದ ಘಟನೆ. ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕನೇ ಭಾಗಿಯಾಗಿದ್ದರಿಂದ ಅಲ್ಲಿನ ರಾಜ್ಯ ಸರಕಾರ ತನಿಖೆ ಬಗ್ಗೆ ನಿರ್ಲಕ್ಷ್ಯ ವಹಿಸಿತ್ತು ಎಂಬ ಆರೋಪ ಎದ್ದಿತ್ತು. ಬಳಿಕ ಅತ್ಯಾಚಾರ ಸಂತ್ರಸ್ತೆಯೇ ಸಿಎಂ ಯೋಗಿ ಆದಿತ್ಯನಾಥ್ ಮನೆಯ ಮುಂದೆ ಪ್ರತಿಭಟನೆ ನಡೆಸಿ, ಆತ್ಮಹತ್ಯೆ ಬೆದರಿಕೆ ಹಾಕಿದ್ದಳು.

ತನಿಖೆ ಆರಂಭಿಸಿದ ಉನ್ನಾವೋ ಪೊಲೀಸರು ಪ್ರಕರಣದಿಂದ ಆರೋಪಿ ಶಾಸಕ ಕುಲದೀಪ್ ಸಿಂಗ್ ನನ್ನು ಹೊರಗಿಟ್ಟಿದ್ದರು. ಇತರ ಕೆಲವರನ್ನು ಬಂಧಿಸಿ, ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿತ್ತು. ಆದರೆ, ಶಾಸಕ ಕುಲದೀಪ್ ಸೆಂಗರ್ ಬಗ್ಗೆ ಗಂಭೀರ ಆರೋಪ ಕೇಳಿಬರುತ್ತಿದ್ದಂತೆ ವಿಪಕ್ಷಗಳು ಗದ್ದಲ ಎಬ್ಬಿಸಿದ್ದವು. ಯುವತಿಯ ಪರವಾಗಿ ಪ್ರತಿಭಟನೆಯನ್ನೂ ನಡೆಸಿದ್ದವು. ಈ ನಡುವೆ, ಸಂತ್ರಸ್ತ ಯುವತಿಯ ತಂದೆಯನ್ನು ಶಸ್ತ್ರಾಸ್ತ್ರ ಕಾಯಿದೆಯಡಿ ಬಂಧಿಸಿ ಹಿಂಸೆ ನೀಡಲಾಗಿತ್ತು. ಆನಂತರ, ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಆತ ಮೃತಪಟ್ಟಿದ್ದ. ಶಾಸಕ ಕುಲದೀಪ್ ಸೆಂಗರ್ ಪ್ರಚೋದನೆಯಿಂದ ಪೊಲೀಸರು ಕಿರುಕುಳ ನೀಡಿದ್ದು ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾಗಿ ಆರೋಪ ಕೇಳಿಬಂದಿತ್ತು. ಈ ವಿಚಾರ ರಾಷ್ಟ್ರೀಯ ಮಾಧ್ಯಮದಲ್ಲಿ ಸುದ್ದಿಯಾಗುತ್ತಿದ್ದಂತೆ ಲಾಕಪ್ ಸಾವು ಮತ್ತು ಅತ್ಯಾಚಾರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ತನಿಖೆ ಆರಂಭಿಸಿದ ಸಿಬಿಐ 2018ರ ಎಪ್ರಿಲ್ ನಲ್ಲಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ನನ್ನು ಬಂಧಿಸಿತ್ತು. ಇತರ ಎಂಟು ಮಂದಿಯನ್ನು ಬಂಧಿಸಿ, ಜೈಲಿಗೆ ತಳ್ಳಿದ್ದಲ್ಲದೆ, ಘಟನೆ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲು ಮಾಡಿತ್ತು.
2019ರ ಡಿಸೆಂಬರ್ 20ರಂದು ತ್ವರಿತ ಗತಿ ಪೋಕ್ಸೋ ನ್ಯಾಯಾಲಯ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಕುಲದೀಪ್ ಸಿಂಗ್ ಸೆಂಗರ್ ಮತ್ತು ಇತರರ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಲ್ಲದೆ, ಸಂತ್ರಸ್ತ ಯುವತಿಗೆ 25 ಲಕ್ಷ ಪರಿಹಾರ ನೀಡುವಂತೆ ಆದೇಶ ಮಾಡಿತ್ತು. ಶಾಸಕನಿಗೆ ಜೈಲು ಶಿಕ್ಷೆ ಘೋಷಣೆಯಾದ ಬಳಿಕ ಬಿಜೆಪಿಯಿಂದ ಆತನನ್ನು ವಜಾ ಮಾಡಲಾಗಿತ್ತು. ಆನಂತರ ಸಂತ್ರಸ್ತ ಯುವತಿಯ ತಂದೆಯನ್ನು ಕೊಲ್ಲಿಸಿದ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಾಗಿ ವಿಚಾರಣೆ ನಡೆದಿತ್ತು. ಆ ಬಗ್ಗೆಯೂ ಕುಲದೀಪ್ ಸೆಂಗರ್ ವಿರುದ್ಧ ಸಿಬಿಐ ಅಧಿಕಾರಿಗಳಿಂದ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್, ಆರೋಪಿ ಶಾಸಕ ಕುಲದೀಪ್ ಸೆಂಗರ್ ಗೆ 2020ರಲ್ಲಿ ಸಂತ್ರಸ್ತೆಯನ್ನು ಕೊಲ್ಲಿಸಿದ ಆರೋಪದಲ್ಲಿ ಮತ್ತೆ 10 ಲಕ್ಷ ದಂಡ ಮತ್ತು ಹತ್ತು ವರ್ಷಗಳ ಶಿಕ್ಷೆ ಘೋಷಿಸಿತ್ತು.

ಇದಕ್ಕೂ ಮುನ್ನ 2019ರ ಜುಲೈನಲ್ಲಿ ಅತ್ಯಾಚಾರ ಸಂತ್ರಸ್ತ ಯುವತಿ, ಕುಟುಂಬ ಸದಸ್ಯರು ಮತ್ತು ಆಕೆಯ ವಕೀಲ ಕಾರಿನಲ್ಲಿ ಉನ್ನಾವೋದಿಂದ ರಾಯ್ ಬರೇಲಿಗೆ ಸಾಗುತ್ತಿದ್ದಾಗ ಲಾರಿ ಡಿಕ್ಕಿಯಾಗಿಸಿ ಕೊಲೆ ನಡೆಸುವ ಯತ್ನ ನಡೆದಿತ್ತು. ರಾಯ್ ಬರೇಲಿಗೆ ಯುವತಿಯ ಮಾವನ ನೋಡಲು ಕುಟುಂಬ ತೆರಳುತ್ತಿತ್ತು. ಲಾರಿ ಡಿಕ್ಕಿಯ ತೀವ್ರತೆಗೆ ಘಟನೆಯಲ್ಲಿ ವಕೀಲ ಸೇರಿ ಮೂವರು ಸಾವನ್ನಪ್ಪಿದ್ದರು. ಸಂತ್ರಸ್ತ ಯುವತಿ ಗಂಭೀರ ಗಾಯಗೊಂಡಿದ್ದು ಲಕ್ನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಆನಂತರ ದೆಹಲಿಯ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಇದೇ ವೇಳೆ, ಪ್ರಕರಣ ಸಂಸತ್ತಿನಲ್ಲಿಯೂ ಪ್ರತಿಧ್ವನಿಸಿದ್ದು ವಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಯುವತಿಗೆ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಗಿತ್ತು.
ಅತ್ಯಾಚಾರ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿಗಳ ಮುಂದೆ, ತಾನು ಮತ್ತು ತಮ್ಮ ಕುಟುಂಬಸ್ಥರನ್ನು ಕುಲದೀಪ್ ಕೊಲ್ಲಲು ಪ್ರಯತ್ನಿಸಿದ್ದಾನೆ. ನನ್ನ ಕುಟುಂಬಸ್ಥರನ್ನು ಆತನೇ ಕೊಲ್ಲಿಸಿದ್ದಾನೆ ಎಂದು ಸಂತ್ರಸ್ತ ಯುವತಿ ಆರೋಪ ಮಾಡಿದ್ದಳು. ಆನಂತ ದೆಹಲಿ ಕೋರ್ಟಿನಲ್ಲಿ ಲಾರಿ ಡಿಕ್ಕಿಯಾಗಿಸಿ ಕೊಲ್ಲಲು ಯತ್ನಿಸಿದ ಪ್ರಕರಣ ಬಿದ್ದು ಹೋಗಿತ್ತು. ಒಟ್ಟಿನಲ್ಲಿ ಉನ್ನಾವೋ ಹಿಂದುಳಿದ ವರ್ಗದ ಬಾಲಕಿಯನ್ನು ಮೇಲ್ವರ್ಗದ ಅದರಲ್ಲೂ ಆಡಳಿತ ಪಕ್ಷದ ಶಾಸಕನೇ ಅತ್ಯಾಚಾರ, ಸರಣಿ ಗ್ಯಾಂಗ್ ರೇಪ್ ನಡೆಸಿದ ಘಟನೆ ಉತ್ತರ ಪ್ರದೇಶದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಬಾರಿ ಕಾಂಗ್ರೆಸ್ ಇದೇ ವಿಚಾರವನ್ನು ಚುನಾವಣಾ ಅಸ್ತ್ರವಾಗಿಸಿದ್ದು, ಉನ್ನಾವೋದಲ್ಲಿ ಸಂತ್ರಸ್ತ ಯುವತಿಯ ತಾಯಿಗೆ ಟಿಕೆಟ್ ನೀಡಿ ಅಚ್ಚರಿ ಮೂಡಿಸಿದೆ.
Unnao rape case, The Congress has nominated the mother of the Unnao rape survivor, as a contestant in the UP Assembly polls.
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
02-05-26 12:19 pm
HK News Staffer
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm