ಹಕ್ಕುಚ್ಯುತಿ ನೆಪದಲ್ಲಿ ಜಿಲ್ಲಾಧಿಕಾರಿ ಜೊತೆಗೆ ಶಾಸಕರ ವಾಗ್ವಾದ ; ಅಧಿಕಾರಿ ಮುಂದೆ ಶಾಸಕರ ಧರಣಿಯೇ ಹಾಸ್ಯಾಸ್ಪದ !

14-08-23 08:17 pm       Mangalore Correspondent   ಕರಾವಳಿ

ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ, ಕಾಂಗ್ರೆಸ್ ನಾಯಕರು ಅಧಿಕಾರ ಚಲಾಯಿಸುತ್ತಿದ್ದಾರೆ, ಸಣ್ಣ ಸಣ್ಣ ವಿಚಾರದಲ್ಲೂ ಹಸ್ತಕ್ಷೇಪ ನಡೆಸುತ್ತಿದ್ದಾರೆ, ಇದರಿಂದಾಗಿ ತಮ್ಮ ಹಕ್ಕುಚ್ಯುತಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ನಗರದ ಜಿಲ್ಲಾಧಿಕಾರಿ ಕಚೇರಿಯೆದುರಲ್ಲಿ ಮೆಟ್ಟಿಲಲ್ಲಿ ಕುಳಿತು ಧರಣಿ ನಡೆಸಿದ್ದಾರೆ.

ಮಂಗಳೂರು, ಆಗಸ್ಟ್ 14: ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ, ಕಾಂಗ್ರೆಸ್ ನಾಯಕರು ಅಧಿಕಾರ ಚಲಾಯಿಸುತ್ತಿದ್ದಾರೆ, ಸಣ್ಣ ಸಣ್ಣ ವಿಚಾರದಲ್ಲೂ ಹಸ್ತಕ್ಷೇಪ ನಡೆಸುತ್ತಿದ್ದಾರೆ, ಇದರಿಂದಾಗಿ ತಮ್ಮ ಹಕ್ಕುಚ್ಯುತಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ನಗರದ ಜಿಲ್ಲಾಧಿಕಾರಿ ಕಚೇರಿಯೆದುರಲ್ಲಿ ಮೆಟ್ಟಿಲಲ್ಲಿ ಕುಳಿತು ಧರಣಿ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜೊತೆಗೆ ವಾಗ್ವಾದವನ್ನೂ ನಡೆಸಿದ್ದಾರೆ.

ಇತ್ತೀಚೆಗೆ ಮೂಡುಬಿದ್ರೆ ತಾಲೂಕಿನ ಇರುವೈಲು ಗ್ರಾಪಂ ಕಚೇರಿಯ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಹೆಸರು ಹಾಕಿಲ್ಲ ಎಂದು ಕೊನೆಕ್ಷಣದಲ್ಲಿ ಕಾರ್ಯಕ್ರಮವನ್ನೇ ರದ್ದುಪಡಿಸಲಾಗಿತ್ತು. ಅಲ್ಲದೆ, ಸ್ಥಳಕ್ಕೆ ತೆರಳಿದ್ದ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಪೊಲೀಸರನ್ನು ಅಡ್ಡಹಾಕಿ, ಗ್ರಾಪಂ ಬಳಿಗೆ ತೆರಳದಂತೆ ಮಾಡಲಾಗಿತ್ತು. ಇದಲ್ಲದೆ, ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಪಂ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನೂ ಆಮಂತ್ರಣ ಪತ್ರಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರ ಹೆಸರು ಮೇಲೆ- ಕೆಳಗೆ ಆಗಿದೆಯೆಂಬ ನೆಪದಲ್ಲಿ ರದ್ದು ಪಡಿಸಲಾಗಿತ್ತು. ಸ್ಥಳೀಯ ಶಾಸಕರಿಗೆ ಮಾಹಿತಿ ನೀಡದೆ ಅಧಿಕಾರಿಗಳು ದರ್ಪ ನಡೆಸುತ್ತಿದ್ದಾರೆ, ಕಾಂಗ್ರೆಸ್ ನಾಯಕರ ಅಣತಿಯಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.   

ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪಸಿಂಹ ನಾಯಕ್ ಹಾಗೂ ಸಂಸದ ನಳಿನ್ ಕುಮಾರ್ ಇದ್ದರು. ಉಮಾನಾಥ ಕೋಟ್ಯಾನ್ ಮಾತನಾಡಿ, ಮೊನ್ನೆ ಮುಖ್ಯಮಂತ್ರಿ ಬಂದಿದ್ದಾಗ ಇರುವೈಲು ಪಂಚಾಯತ್ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ ಬಗ್ಗೆ ತಿಳಿಸಿದ್ದಕ್ಕೆ ಡೀಸಿಗೆ ಸರಿಪಡಿಸುವಂತೆ ಸೂಚನೆ ನೀಡಿದ್ದರು. ಆದರೆ ಮುಖ್ಯಮಂತ್ರಿ ಹೇಳಿ ಹತ್ತು ದಿನ ಕಳೆದರೂ ಅಮಾನತು ಹಿಂಪಡೆದಿಲ್ಲ ಎಂದು ಹೇಳಿದರು. ಇದೇ ವಿಚಾರದಲ್ಲಿ ಜಿಲ್ಲಾಧಿಕಾರಿ ಅವರನ್ನು ಕೇಳಿದಾಗ, ಅಮಾನತು ಆದೇಶ ಹಿಂಪಡೆಯಲು ಬರೆಯಲಾಗಿದೆ. ಇಂದು ಅಥವಾ ನಾಳೆ ಆದೇಶ ಬರಬಹುದು ಎಂದು ಹೇಳಿದರು.

ಇದೇ ವೇಳೆ, ಕಾಂಗ್ರೆಸ್ ಮುಖಂಡ ಮಿಥುನ್ ರೈ ಪಂಚಾಯತ್ ಮಟ್ಟದ ಸಿಬಂದಿಯನ್ನು ವರ್ಗಾಯಿಸಲು ಬರೆದ ಪತ್ರಕ್ಕೆ ಜಿಲ್ಲಾಧಿಕಾರಿಯವರು ತಹಸೀಲ್ದಾರ್ ಗೆ ಶಿಫಾರಸು ಮಾಡಿರುವುದು ಹೇಗೆ ಎಂದು ಶಾಸಕರು ಪ್ರಶ್ನೆ ಮಾಡಿದರು. ಮಿಥುನ್ ರೈ ಒಬ್ಬ ಪಕ್ಷದ ಕಾರ್ಯಕರ್ತ ಅಷ್ಟೇ. ಆಡಳಿತದ ಭಾಗ ಅಲ್ಲ. ಶಾಸಕರು ಅಂದರೆ ಸರಕಾರದ ಭಾಗ. ಆದರೆ ನೀವು ಪಾರ್ಟಿ ಕಾರ್ಯಕರ್ತ ಬರೆದ ಪತ್ರಕ್ಕೂ ಸ್ಪಂದಿಸಿ ವರ್ಗಾವಣೆಗೆ ಬರೆದಿದ್ದೀರಿ ಎಂದು ಆಕ್ಷೇಪಿಸಿ ಅದರ ಪತ್ರವನ್ನು ಉಮಾನಾಥ ಕೋಟ್ಯಾನ್ ತೋರಿಸಿದರು. ಸಂಸದ ನಳಿನ್ ಕುಮಾರ್ ಕೂಡ ಈ ಬಗ್ಗೆ ದನಿಗೂಡಿಸಿ ಜಿಲ್ಲಾಧಿಕಾರಿಯನ್ನು ತರಾಟೆಗೆತ್ತಿಕೊಂಡರು. ಆದರೆ ಜಿಲ್ಲಾಧಿಕಾರಿ, ತನಗೆ ಆ ವಿಚಾರ ಗೊತ್ತೇ ಇಲ್ಲ. ಅಂಥ ಪತ್ರ ಕೊಟ್ಟಿಲ್ಲ. ಆ ರೀತಿ ತಪ್ಪು ಆಗಿದ್ದರೆ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು. ಕೊನೆಗೆ ಅಮಾನತಾಗಿರುವ ಅಧಿಕಾರಿಗಳನ್ನು ಇಂದೇ ಕೆಲಸಕ್ಕೆ ಮರು ಸೇರಿಸಿಕೊಳ್ಳಬೇಕು. ಈ ರೀತಿಯ ಕ್ಷುಲ್ಲಕ ರಾಜಕೀಯ ಮುಂದೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಹೇಳಿ ಶಾಸಕರು ಪ್ರತಿಭಟನೆ ಕೊನೆಗೊಳಿಸಿದರು.

ಶಾಸಕರ ಧರಣಿಯೇ ಹಾಸ್ಯಾಸ್ಪದ !

ನಿಜಕ್ಕಾದರೆ, ಜನರಿಂದ ನೇರವಾಗಿ ಆಯ್ಕೆಯಾಗಿರುವ ಶಾಸಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದೇ ಹಾಸ್ಯಾಸ್ಪದ. ಜಿಲ್ಲಾಧಿಕಾರಿ ಹುದ್ದೆ ಎನ್ನುವುದು ಜಿಲ್ಲಾ ಮಟ್ಟದಲ್ಲಿ ಆಡಳಿತಾತ್ಮಕ ಹುದ್ದೆಯಷ್ಟೇ. ಶಾಸಕರು ಪ್ರಜಾಪ್ರಭುತ್ವದಲ್ಲಿ ಆ ಕ್ಷೇತ್ರದ ಜನಪ್ರತಿನಿಧಿಗಳಾಗಿದ್ದು, ಸರಕಾರದ ಅಂಗವಾಗಿರುತ್ತಾರೆ. ಆಡಳಿತ ಪಕ್ಷದವರು ಅಧಿಕಾರಿಗಳನ್ನು ನಿಯಂತ್ರಿಸುವುದು ಮಾಮೂಲಿ ಆಗಿದ್ದರೂ, ಅಷ್ಟೇ ಪ್ರಭಾವ ಶಾಸಕರಿಗೂ ಇರುತ್ತದೆ. ಅಧಿಕಾರಿಗಳ ಮೂಲಕ ಕೆಲಸ ಮಾಡಿಸುವ ಜವಾಬ್ದಾರಿ ಇದ್ದವರು ಈಗ ರಾಜಕೀಯವಾಗಿ ಕಾಂಗ್ರೆಸಿಗರು ತಮ್ಮನ್ನು ಟಾರ್ಗೆಟ್ ಮಾಡಿದ್ದಾರೆಂಬ ನೆಪದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಸೇರಿ ಜಿಲ್ಲಾಧಿಕಾರಿ ಕಚೇರಿ ಎದುರಲ್ಲಿ ಧರಣಿ ನಡೆಸುವಂತಾಗಿದ್ದು ನಗೆಪಾಟಲಿನ ಪ್ರಸಂಗ. ಇದರಿಂದ ತಾವು ಜನರ ಪರವಾಗಿದ್ದೇವೆ ಎಂದು ತೋರಿಸಿಕೊಂಡರೂ, ಆಡಳಿತದ ವಿಚಾರದಲ್ಲಿ ಶಾಸಕರು ಅಸಹಾಯಕರಾಗಿ ಅಧಿಕಾರಿಗಳ ಮುಂದೆ ಮಂಡಿಯೂರಿದಂತಾಗಿದೆ.

BJP MLAs protest at DC office in Mangalore creates jokery.