Puttur Tahsildar, Lokayukta Raid: ಜಮೀನು ಪರಭಾರೆಗೆ 12 ಸಾವಿರ ಲಂಚ ; ಪುತ್ತೂರು ತಾಲೂಕು ಕಚೇರಿಯ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ, ತಹಸೀಲ್ದಾರ್ ನಾಪತ್ತೆ 

28-08-25 11:00 pm       Mangalore Correspondent   ಕರಾವಳಿ

ಅಕ್ರಮ ಸಕ್ರಮದಲ್ಲಿ ವ್ಯಕ್ತಿಯೊಬ್ಬರಿಗೆ ಮಂಜೂರಾಗಿದ್ದ ಭೂಮಿಯನ್ನು ವೀಲುನಾಮೆಯಂತೆ ಪರಭಾರೆ ಮಾಡಲು ಪುತ್ತೂರು ತಹಸೀಲ್ದಾರ್ ಕಚೇರಿಯ ನಿರಾಕ್ಷೇಪಣಾ ಪತ್ರ ಬೇಕಾಗಿದ್ದು ಅದನ್ನು ನೀಡುವುದಕ್ಕೆ ಹತ್ತು ಸಾವಿರ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ ಪುತ್ತೂರು ತಹಸೀಲ್ದಾರ್ ಕಚೇರಿಯ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 

ಮಂಗಳೂರು, ಆ.28 : ಅಕ್ರಮ ಸಕ್ರಮದಲ್ಲಿ ವ್ಯಕ್ತಿಯೊಬ್ಬರಿಗೆ ಮಂಜೂರಾಗಿದ್ದ ಭೂಮಿಯನ್ನು ವೀಲುನಾಮೆಯಂತೆ ಪರಭಾರೆ ಮಾಡಲು ಪುತ್ತೂರು ತಹಸೀಲ್ದಾರ್ ಕಚೇರಿಯ ನಿರಾಕ್ಷೇಪಣಾ ಪತ್ರ ಬೇಕಾಗಿದ್ದು ಅದನ್ನು ನೀಡುವುದಕ್ಕೆ ಹತ್ತು ಸಾವಿರ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ ಪುತ್ತೂರು ತಹಸೀಲ್ದಾರ್ ಕಚೇರಿಯ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 

ಪುತ್ತೂರು ತಾಲೂಕು ನೆಟ್ಟಣಿಗೆ ಮುಡೂರು ಗ್ರಾಮದಲ್ಲಿ 65 ಸೆಂಟ್ಸ್ ಜಮೀನು ವ್ಯಕ್ತಿಯೊಬ್ಬರಿಗೆ ಅಕ್ರಮ ಸಕ್ರಮದನ್ವಯ ದರ್ಖಾಸ್ತು ಮಂಜೂರಾಗಿತ್ತು. ಆದರೆ ಅವರಿಗೆ ಅನಾರೋಗ್ಯ ಇದ್ದುದರಿಂದ ತನ್ನ ಸ್ವ-ಇಚ್ಛೆಯಿಂದ ಉಪ ನೋಂದಣಾಧಿಕಾರಿ ಕಛೇರಿ, ಪುತ್ತೂರು ಇಲ್ಲಿ ವೀಲುನಾಮೆ ಬರೆಸಿ ಕೊಟ್ಟಿರುತ್ತಾರೆ. ಇದರ ಪ್ರಕಾರ ಅವರ ಮರಣ ನಂತರ ಸದ್ರಿ ಜಮೀನಿನ ಸಂಪೂರ್ಣ ಹಕ್ಕು ಅಣ್ಣನ ಮಗನಿಗೆ ಸೇರಿರುತ್ತದೆ. ಸದ್ರಿ ಜಮೀನು ಮಂಜೂರಾಗಿ 27 ವರ್ಷ ಆಗಿದ್ದರೂ, ಜಮೀನನ್ನು ಪರಭಾರೆ ಮಾಡಲು ಪುತ್ತೂರು ತಹಶೀಲ್ದಾರ್ ಕಚೇರಿಯಿಂದ ನಿರಾಕ್ಷೇಪಣಾ ಪತ್ರದ ಅವಶ್ಯಕತೆ ಇದ್ದುದರಿಂದ ಡಿಸೆಂಬರ್ 2024 ರಂದು ಸಾಗುವಳಿ ಚೀಟಿ ಮೂಲಕ ಜಾಗ ಮಾರಾಟ ಮಾಡುವರೇ ನಿರಾಕ್ಷೇಪಣಾ ಪತ್ರ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.

ಇಲ್ಲಿಯವರೆಗೆ ನಿರಾಕ್ಷೇಪಣಾ ಪತ್ರ ಸಿಕ್ಕಿರದೇ ಇದ್ದುದರಿಂದ ಸದ್ರಿ ಅರ್ಜಿಯ ಬಗ್ಗೆ ವಿಚಾರಿಸಲು ವೀಲು ಪತ್ರದಲ್ಲಿ ಹೆಸರಿದ್ದ ವ್ಯಕ್ತಿಗೆ ಹೇಳಿದ್ದು, ಈ ಬಗ್ಗೆ ಪಿರ್ಯಾದಿದಾರರು ಜೂನ್ 26 2025 ರಂದು ಪುತ್ತೂರು ತಹಶೀಲ್ದಾರ್ ಕಚೇರಿಯ ಭೂ ಸುಧಾರಣಾ ಶಾಖೆಗೆ ಹೋಗಿ ಕೇಸ್ ವರ್ಕರ್ ಸುನೀಲ್‌ ಅವರಲ್ಲಿ ನಿರಾಕ್ಷೇಪಣಾ ಪತ್ರದ ಬಗ್ಗೆ ವಿಚಾರಿಸಿದ್ದು ತಹಶೀಲ್ದಾರ್‌ ಸಹಿಗೆ ಬಾಕಿ ಇರುತ್ತದೆ. ಅದಕ್ಕೆ ಸ್ವಲ್ಪ ಹಣ ಖರ್ಚು ಇರುತ್ತದೆ. ತಹಸೀಲ್ದಾರ್ ಗೆ ಹತ್ತು ಸಾವಿರ ರೂಪಾಯಿ ಕೊಡಬೇಕಾಗುತ್ತದೆ. ಮತ್ತೆ ನನಗೂ ಹಣ ಕೊಡಬೇಕಾಗುತ್ತದೆ ಎಂದು ಹೇಳಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. 

ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕೇಸ್ ವರ್ಕರ್, ತಹಶೀಲ್ದಾರ್ ಕಚೇರಿ, ಪುತ್ತೂರು ತಹಶೀಲ್ದಾರ್ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. ಆ.28ರಂದು ಕೇಸ್ ವರ್ಕರ್ ಸುನೀಲ್ ಅವರು ವ್ಯಕ್ತಿಯಿಂದ ರೂ. 12,000/- (ಹನ್ನೆರಡು ಸಾವಿರ) ಲಂಚದ ಹಣವನ್ನು ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಸದರಿ ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಪುತ್ತೂರು ತಹಶೀಲ್ದಾರ್  ತಲೆಮರೆಸಿಕೊಂಡಿರುತ್ತಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖ‌ರ್ ಕೆ.ಎನ್, ರವಿ ಪವಾರ್ ಮತ್ತು ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ.

The Lokayukta police have arrested Sunil, a caseworker at the Puttur Tahsildar’s office, while he was caught red-handed accepting a ₹12,000 bribe for issuing a No Objection Certificate (NOC) related to a land transfer. Meanwhile, the Puttur Tahsildar has gone missing, officials confirmed.