ಪೊಲೀಸರಿಂದ ಅಧಿಕಾರ ದುರುಪಯೋಗ, ದಬ್ಬಾಳಿಕೆ ; ಬೆನ್ನು ಬೆನ್ನಿಗೆ ಎಫ್ಐಆರ್ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ತಿಮರೋಡಿ ದೂರು

18-09-25 04:31 pm       Mangalore Correspondent   ಕರಾವಳಿ

ಪೊಲೀಸರು ಅಧಿಕಾರ ದುರುಪಯೋಗ ಮಾಡಿಕೊಂಡು ನನ್ನನ್ನು ಗುರಿಯಾಗಿಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಸಿಕ್ಕ ಸಿಕ್ಕ ವಿಷಯಗಳಿಗೆಲ್ಲ ಕೇಸು ಜಡಿದು ಹಿಂಸೆ ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (ಎನ್ಎಚ್ಆರ್ ಸಿ) ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ದೂರು ನೀಡಿದ್ದಾರೆ.

ಮಂಗಳೂರು, ಸೆ.18 : ಪೊಲೀಸರು ಅಧಿಕಾರ ದುರುಪಯೋಗ ಮಾಡಿಕೊಂಡು ನನ್ನನ್ನು ಗುರಿಯಾಗಿಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಸಿಕ್ಕ ಸಿಕ್ಕ ವಿಷಯಗಳಿಗೆಲ್ಲ ಕೇಸು ಜಡಿದು ಹಿಂಸೆ ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (ಎನ್ಎಚ್ಆರ್ ಸಿ) ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ದೂರು ನೀಡಿದ್ದಾರೆ.

ನನ್ನ ವಿರುದ್ಧ ಕಳೆದೊಂದು ತಿಂಗಳಲ್ಲಿ ಬ್ರಹ್ಮಾವರ, ಕಾರ್ಕಳ ಮತ್ತು ಬೆಳ್ತಂಗಡಿ ಠಾಣೆಗಳಲ್ಲಿ ಒಟ್ಟು ನಾಲ್ಕು ಎಫ್ಐಆರ್ ಗಳನ್ನು ದಾಖಲಿಸಲಾಗಿದೆ. ಸುಳ್ಳು ಆರೋಪ ಹೊರಿಸಿ ರಾಜಕೀಯ ದುರುದ್ದೇಶದಿಂದ ಈ ಕೇಸು ದಾಖಲಿಸಲಾಗಿದೆ. ಅವುಗಳನ್ನು ತಕ್ಷಣವೇ ಹಿಂಪಡೆಯಬೇಕು, ಈ ಬಗ್ಗೆ ಸ್ವತಂತ್ರ ಹಾಗೂ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ತನಿಖೆ ನಡೆಸಬೇಕು. ಅಧಿಕಾರ ದುರುಪಯೋಗ ಮಾಡಿದ ಸಂಬಂಧಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯ ಮಾಡಿದ್ದಾರೆ.

ನನಗೆ, ನನ್ನ ಕುಟುಂಬಕ್ಕೆ ಹಾಗೂ ಸಂಘಟನೆಯ ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕು. ಹೋರಾಟಗಾರರನ್ನು ಹಾಗೂ ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ಕ್ರಿಮಿನಲ್ ಕಾನೂನುಗಳ ದುರ್ಬಳಕೆ ತಡೆಯಲು ಸರ್ಕಾರ ಹಾಗೂ ಗೃಹ ಸಚಿವಾಲಯಗಳು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ಮಾನವ ಹಕ್ಕು ಆಯೋಗವು ಶಿಫಾರಸು ಮಾಡಬೇಕೆಂದು ದೂರಿನಲ್ಲಿ ಮನವಿಯನ್ನೂ ಮಾಡಿದ್ದಾರೆ.