Mithun Rai, Pilinalikes 10th Anniversary, Mangalore: ಪಿಲಿನಲಿಕೆ ಸ್ಪರ್ಧೆಗೆ ದಶಮ ಸಂಭ್ರಮ ; ಸುನಿಲ್ ಶೆಟ್ಟಿ, ಕಿಚ್ಚ ಸುದೀಪ್, ಅಜಿಂಕ್ಯ ರಹಾನೆ ಬರ್ತಾರೆ, ಮುಸ್ಲಿಂ ಯುವಕರೂ ಹುಲಿ ವೇಷ ಹಾಕುತ್ತಾರೆ, ಸ್ಪರ್ಧೆಗಳಿಂದ ವೇಷಧಾರಿಗಳಿಗೆ ಬೇಡಿಕೆ ಹೆಚ್ಚಿದೆ ; ಮಿಥುನ್ ರೈ 

29-09-25 07:15 pm       Mangalore Correspondent   ಕರಾವಳಿ

ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ನೇತೃತ್ವದ ಪಿಲಿನಲಿಕೆ ಪಂಥಕ್ಕೆ ಈ ಸಲ ಹತ್ತನೇ ವರ್ಷದ ಸಂಭ್ರಮವಾಗಿದ್ದು, ಅ.1ರಂದು ನಡೆಯಲಿರುವ ಸ್ಪರ್ಧೆಗೆ ಮಂಗಳಾ ಸ್ಟೇಡಿಯಂ ಬಳಿಯ ಕರಾವಳಿ ಉತ್ಸವ ಮೈದಾನ ಸಜ್ಜುಗೊಂಡಿದೆ.

ಮಂಗಳೂರು, ಸೆ.29: ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ನೇತೃತ್ವದ ಪಿಲಿನಲಿಕೆ ಪಂಥಕ್ಕೆ ಈ ಸಲ ಹತ್ತನೇ ವರ್ಷದ ಸಂಭ್ರಮವಾಗಿದ್ದು, ಅ.1ರಂದು ನಡೆಯಲಿರುವ ಸ್ಪರ್ಧೆಗೆ ಮಂಗಳಾ ಸ್ಟೇಡಿಯಂ ಬಳಿಯ ಕರಾವಳಿ ಉತ್ಸವ ಮೈದಾನ ಸಜ್ಜುಗೊಂಡಿದೆ. ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಮಿಥುನ್ ರೈ, ಈಗ ಹುಲಿ ವೇಷಗಳ ಝಲಕ್ ಹಳೆ ಮಾದರಿಯಲ್ಲಿ ಉಳಿದಿಲ್ಲ. ಸ್ಪರ್ಧೆ ಗೆಲ್ಲಬೇಕೆಂದು ತಿಂಗಳ ಕಾಲ ಅಭ್ಯಾಸ ನಡೆಸುತ್ತಾರೆ. ಬಹುಮಾನ ಗೆದ್ದರೆ ದೇಶ- ವಿದೇಶದ ಗಮನ ಸೆಳೆಯುತ್ತಾರೆ. ಇದರಿಂದ ಹುಲಿ ವೇಷಧಾರಿಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ ಎಂದು ಹೇಳಿದರು. ‌

ಏಕಕಾಲಕ್ಕೆ 25 ಸಾವಿರಕ್ಕೂ ಅಧಿಕ ಮಂದಿಗೆ ಕುಳಿತುಕೊಂಡು ಸ್ಪರ್ಧೆ ವೀಕ್ಷಿಸಲು ಆಸನ ವ್ಯವಸ್ಥೆ ಮಾಡಲಾಗಿದೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ ಸ್ವತಃ ಆಸಕ್ತಿಯಿಂದ ಪ್ರತಿ ವರ್ಷ ನಮ್ಮ ಕಾರ್ಯಕ್ರಮಕ್ಕೆ ಬರುತ್ತಾರೆ. ಈ ಬಾರಿ ಶೂಟಿಂಗ್ ನಿಮಿತ್ತ ಹಾಲೆಂಡಿನಲ್ಲಿದ್ದು ಎರಡು ದಿನಕ್ಕೆ ಊರಿಗೆ ಬರಲಿದ್ದಾರೆ. ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಬಿಗ್ ಬಾಸ್ ನಡುವೆಯೂ ಬರುವುದನ್ನು ಖಚಿತಪಡಿಸಿದ್ದಾರೆ. ನಮ್ಮ ಊರಿನವರೇ ಆದ ನಟಿ ಪೂಜಾ ಹೆಗ್ಡೆ, ನಟ ರಾಜ್ ಬಿ ಶೆಟ್ಟಿ ಆಗಮಿಸಲಿದ್ದಾರೆ. ಕ್ರಿಕೆಟ್ ತಾರೆಗಳಾದ ಅಜಿಂಕ್ಯಾ ರಹಾನೆ, ಜಿತೇಶ್ ಶರ್ಮಾ, ಭಾರತ ತಂಡದ ಬಾಕ್ಸರ್ ವಿಜೇಂದ್ರ ಸಿಂಗ್, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಸಿನಿಮಾ, ಕ್ರೀಡಾ ಕ್ಷೇತ್ರದ ಹಲವಾರು ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ಸೆಲೆಬ್ರಿಟಿ ಬರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕಲೆಯನ್ನು ಎತ್ತರಕ್ಕೇರಿಸುವುದು, ಅವರ ಅಭಿಮಾನಿಗಳಿಗೆ ಹುಲಿ ವೇಷದ ಕಲೆಯ ಸೊಗಡನ್ನು ಪರಿಚಯ ಮಾಡುತ್ತಿದ್ದೇವೆ ಎಂದರು. 

ಪ್ರತಿ ತಂಡಕ್ಕೂ 20 ನಿಮಿಷ ಕಾಲಾವಕಾಶ ಇರಲಿದೆ. ಬೆಳಗ್ಗೆ 10 ಗಂಟೆಯಿಂದ ತೊಡಗಿ ರಾತ್ರಿ 12ರ ವರೆಗೂ ಕಾರ್ಯಕ್ರಮ ನಡೆಯಲಿದೆ. ಇಡೀ ದಿನ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಬರಲಿದ್ದಾರೆ. ಸಂಜೆಯ ವೇಳೆಗೆ ಡಿಸಿಎಂ ಡಿಕೆ ಶಿವಕುಮಾರ್ ಬರಲಿದ್ದು ಪಿಲಿನಲಿಕೆ ಉತ್ಸವ ಉದ್ಘಾಟಿಸಲಿದ್ದಾರೆ. ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಸಂಸದ ಬ್ರಿಜೇಶ್ ಚೌಟ ಸೇರಿದಂತೆ ಎಲ್ಲ ಗಣ್ಯರು ಆಗಮಿಸಲಿದ್ದಾರೆ.

ಪಿಲಿನಲಿಕೆ ಸ್ಪರ್ಧೆಗೆ 10 ತಂಡಗಳು

ಪಿಲಿನಲಿಕೆ ಸ್ಪರ್ಧೆಗೆ ಅಂತಿಮವಾಗಿ ಅಗಸ್ತ್ಯ ಮಂಗಳೂರು, ಶ್ರೀ ವೈದ್ಯನಾಥೇಶ್ವರ ಫ್ರೆಂಡ್ಸ್ ಟೈಗರ್ಸ್, ಮುಳಿಹಿತ್ಲು ಗೇಮ್ಸ್ ಟೀಮ್, ಅನಿಲ್ ಕಡಂಬೆಟ್ಟು, ಜೂನಿಯರ್ ಬಾಯ್ಸ್ ಚಿಲಿಂಬಿ, ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್, ಟ್ಯಾಲೆಂಟ್ ಟೈಗರ್ಸ್ ತುಳುನಾಡು, ಸೋಮೇಶ್ವರ ಫ್ರೆಂಡ್ಸ್ ಕ್ಲಬ್, ಪೊಳಲಿ ಟೈಗರ್ಸ್, ಗೋರಕ್ಷನಾಥ ಹುಲಿ ಸೇರಿದಂತೆ 10 ತಂಡಗಳನ್ನು ಆಯ್ಕೆ ಮಾಡಲಾಗಿದೆ. ನಿರ್ದಿಷ್ಟ ಪ್ರಕಾರದಲ್ಲಿ ಕುಣಿದು ತಮ್ಮ ಸಾಮರ್ಥ್ಯ ತೋರಿಸಲಿದ್ದು ತೀರ್ಪುಗಾರರು ವಿಜೇತರನ್ನು ಆಯ್ಕೆ ಮಾಡಲಿದ್ದಾರೆ. ನಾವು ಜಾತಿ ಧರ್ಮ ಮೀರಿ ನಿಂತಿದ್ದು ಮುಸ್ಲಿಂ ಯುವಕರೂ ಹುಲಿ ವೇಷಧಾರಿಗಳಾಗಿ, ಸ್ವಯಂಸೇವಕರಾಗಿ ಬರುತ್ತಿದ್ದಾರೆ. ಗಲ್ಫ್ ದೇಶಗಳಿಂದ ಇದಕ್ಕಾಗಿಯೇ ಊರಿಗೆ ಬರುವ ಯುವಕರಿದ್ದಾರೆ ಎಂದು ಮಿಥುನ್ ರೈ ಹೇಳಿದರು. 

26 ಲಕ್ಷ ರೂ. ಒಟ್ಟು ಬಹುಮಾನ 

2025ರ ಪಿಲಿನಲಿಕೆ-10 ಸ್ಪರ್ಧೆಯಲ್ಲಿ ಒಟ್ಟು 20 ಲಕ್ಷ ರೂ. ಬಹುಮಾನ ನಿಗದಿಪಡಿಸಲಾಗಿದೆ. ಪ್ರಥಮ ಬಹುಮಾನ 10 ಲಕ್ಷ ರೂ. ಮತ್ತು ಫಲಕ, ದ್ವಿತೀಯ 5 ಲಕ್ಷ ರೂ. ಮತ್ತು ಫಲಕ, ತೃತೀಯ 3 ಲಕ್ಷ ರೂ. ಬಹುಮಾನ ಮತ್ತು ಫಲಕ ನೀಡಲು ನಿರ್ಧರಿಸಲಾಗಿದೆ. ಪ್ರತಿ ತಂಡಕ್ಕೆ 50 ಸಾವಿರ ರೂ. ಗೌರವ ಧನ ನೀಡಲಾಗುವುದು. ಕಪ್ಪುಹುಲಿ, ಮರಿಹುಲಿ, ತಾಸೆ ತಂಡ, ಮುಡಿ ಬಿಸಾಡುವುದು, ಬಣ್ಣಗಾರಿಕೆ ಸೇರಿದಂತೆ 6 ವೈಯಕ್ತಿಕ ಪ್ರಶಸ್ತಿಗಳಿಗೆ 50 ಸಾವಿರ ಬಹುಮಾನ ಹಾಗೂ ಫಲಕ ಸಿಗಲಿದೆ.

ದಶಮ ಸಂಭ್ರಮ ವಿಶೇಷತೆಗಳು 

ಪಿಲಿನಲಿಕೆ ಪಂಥಕ್ಕೆ ಈ ಬಾರಿ ದಶಮ ಸಂಭ್ರಮ ಹಿನ್ನೆಲೆಯಲ್ಲಿ ಮೂಡುಬಿದಿರೆ ಸರಕಾರಿ ತಾಲೂಕಿನ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಗೆ ಶ್ರಮಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ, ಯಾರಾದ್ರೂ ಐಎಎಸ್‌, ಐಪಿಎಸ್ ಮಾಡೋದಿದ್ದರೆ ಸಹಾಯ ಮಾಡಲಾಗುವುದು ಎಂದು ಮಿಥುನ್ ರೈ ತಿಳಿಸಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ನಮ್ಮ ಟಿವಿಯ ಶಿವಚರಣ್ ಶೆಟ್ಟಿ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ವಿಕಾಸ್ ಶೆಟ್ಟಿ, ಅನಿಲ್ ಪೂಜಾರಿ ಮತ್ತಿತರರು ಇದ್ದರು.

The Pilinalike festival, led by Congress youth leader Mithun Rai, is set to celebrate its 10th anniversary with grandeur on October 1. The event will be held at the Karavali Utsav Grounds near Mangala Stadium, with arrangements made to seat over 25,000 spectators at once.