Mangaluru, Sudheer Reddy: ಶಾರದೋತ್ಸವ ಗೊಂದಲ ಇತ್ಯರ್ಥ ಆಗಿತ್ತು, ಪಿಎಸ್ಐ ಪರವಾಗಿ ಕ್ಷಮೆಯನ್ನೂ ಯಾಚಿಸಿದ್ದೆ, ಅವರಿಗೆ ದೇವರ ಮುಂದೆ ನಿಂದಿಸಿದ್ದು ತಪ್ಪೆನಿಸಲಿಲ್ಲ, ಈಗ ಮೊಗವೀರ ಸಮುದಾಯವನ್ನು ಎತ್ತಿಕಟ್ಟುತ್ತಿದ್ದಾರೆ ; ಕಮಿಷನರ್ ಸುಧೀರ್ ರೆಡ್ಡಿ

07-10-25 10:54 pm       Mangalore Correspondent   ಕರಾವಳಿ

ಉಳ್ಳಾಲದಲ್ಲಿ ಶಾರದೋತ್ಸವ ಅರ್ಧಕ್ಕೆ ನಿಲ್ಲಿಸಿ ಗಲಾಟೆ ಉಂಟಾಗಲು ಇಬ್ಬರು ಪಿಎಸ್ಐಗಳೇ ಕಾರಣ.

ಮಂಗಳೂರು, ಅ.7: ಉಳ್ಳಾಲದಲ್ಲಿ ಶಾರದೋತ್ಸವ ಅರ್ಧಕ್ಕೆ ನಿಲ್ಲಿಸಿ ಗಲಾಟೆ ಉಂಟಾಗಲು ಇಬ್ಬರು ಪಿಎಸ್ಐಗಳೇ ಕಾರಣ. ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಛೂಬಿಟ್ಟು ಹಿಂದುಗಳನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರಿನಲ್ಲಿ ಹಲವು ಕಡೆ ಶಾರದೋತ್ಸವ ಮೆರವಣಿಗೆ ನಡೆದಿದ್ದು, ಎಲ್ಲರೂ ಕಾರ್ಯಕ್ರಮಕ್ಕೆ ಮುಂಚೆ ಬಂದು ಸಮಯದ ಬಗ್ಗೆ ಮತ್ತು ಅನುಮತಿ ಕುರಿತಾಗಿ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದರು. ಅದೇ ರೀತಿ ಉಳ್ಳಾಲ ಶಾರದೋತ್ಸವ ಸಮಿತಿಯವರೂ ಬಂದು ಮಾತುಕತೆ ನಡೆಸಿದ್ದು, ರಾತ್ರಿ 1 ಗಂಟೆಗೆ ಕಾರ್ಯಕ್ರಮ ಮುಗಿಸುವುದಾಗಿ ಹೇಳಿದ್ದರು. ಆದರೆ ರಾತ್ರಿ 1 ಗಂಟೆಯಾದರೂ ಕಾರ್ಯಕ್ರಮ ಮುಗಿಸದ ಬಗ್ಗೆ ಪೊಲೀಸರು ಪ್ರಶ್ನೆ ಮಾಡಿದ್ದಲ್ಲದೆ, ಮೈಕ್ ಆಫ್ ಮಾಡುವಂತೆ ಸೂಚಿಸಿದ್ದರು.

ರಾತ್ರಿ 1 ಗಂಟೆ ವರೆಗೆ ಕೇಳಿಕೊಂಡಿದ್ದಕ್ಕಾಗಿ ಕಾನೂನು ಮೀರಿಯೂ ಅವಕಾಶ ನೀಡಲಾಗಿತ್ತು. ಆದರೆ ಉಳ್ಳಾಲ ಪಿಎಸ್ಐ ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅಲ್ಲಿದ್ದ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಮೂವರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಒಯ್ದಿದ್ದರು. ಆದರೆ ಉತ್ಸವ ನಡೆಸುತ್ತಿದ್ದವರು ಶಾರದಾ ಮೂರ್ತಿಯನ್ನು ರಸ್ತೆಯಲ್ಲೇ ಬಿಟ್ಟು ಪ್ರತಿಭಟನೆಗೆ ಇಳಿದಿದ್ದರು. ದೇವರ ಮೂರ್ತಿಯ ಮುಂದೆ ಅವಾಚ್ಯ ಶಬ್ದಗಳನ್ನು ಬಳಸಿದ್ದು ಅವರಿಗೆ ತಪ್ಪು ಎನಿಸಲಿಲ್ಲ. ಬದಲಿಗೆ ಅವರ ಪರವಾಗಿಯೇ ಠಾಣೆಗೆ ಬಂದು ಸಮರ್ಥನೆಗೆ ನಿಂತಿದ್ದರು.

ದೇವರನ್ನು ಕರೆದೊಯ್ಯುವ ಬದಲು ಪೊಲೀಸರ ಬಗ್ಗೆ ನಿಂದಿಸಿದವರನ್ನು ಬಿಡುಗಡೆ ಮಾಡುವುದಕ್ಕೆ ಅಲ್ಲಿದ್ದವರು ಒತ್ತು ಕೊಟ್ಟಿದ್ದರು. ಆನಂತರ, ಡಿಸಿಪಿ ಮಿಥುನ್ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ, ಇಬ್ಬರು ಆರೋಪಿಗಳ ಪಾತ್ರ ಕಡಿಮೆ ಎಂದನಿಸಿದ್ದಕ್ಕೆ ಅವರನ್ನು ಬಿಟ್ಟು ಕಳಿಸಿದ್ದರು. ಬಳಿಕ ಶಾರದೋತ್ಸವ ಕೂಡ ಶಾಂತಿಯುತವಾಗಿಯೇ ನಡೆದಿತ್ತು. ಘಟನೆ ಬಗ್ಗೆ ಚರ್ಚಿಸಲು ಶಾರದೋತ್ಸವ ಸಮಿತಿಯವರು ತನ್ನಲ್ಲಿಗೆ ಬಂದಿದ್ದರು. ಈ ವೇಳೆ, ಪಿಎಸ್ಐ ಒಬ್ಬರು ತಾಸೆಯ ಕೋಲನ್ನು ಎಸೆದಿದ್ದು ತಪ್ಪೆಂದು ತಾನೂ ಒಪ್ಪಿಕೊಂಡಿದ್ದು ಅದಕ್ಕಾಗಿ ಪಿಎಸ್ಐ ಪರವಾಗಿ ಕ್ಷಮೆಯನ್ನೂ ಕೇಳಿದ್ದೆ. ಪಿಎಸ್ಐ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಗ್ಗೆ ಅವರೂ ಕ್ಷಮೆ ಯಾಚನೆ ಮಾಡಿದ್ದರು. ಪೊಲೀಸರ ಬಗ್ಗೆ ನಿಂದಿಸಿ ಪ್ರಚೋದನಕಾರಿ ವರ್ತಿಸದೇ ಇರುತ್ತಿದ್ದರೆ ಇಂತಹ ಘಟನೆಗಳು ಆಗುತ್ತಿರಲಿಲ್ಲ ಎಂದೂ ಅವರಿಗೆ ತಿಳಿಸಿದ್ದೆ.

ಶಾರದೋತ್ಸವ ಮೆರವಣಿಗೆ ಅರ್ಧಕ್ಕೆ ನಿಂತಿದ್ದ ಬಗ್ಗೆ ತನಗೂ ವಿಷಾದವಿದೆ. ಅದನ್ನು ಪೊಲೀಸರು ನಿಲ್ಲಿಸಿದ್ದೂ ಅಲ್ಲ. ಪೊಲೀಸರ ಬಗ್ಗೆ ನಿಂದಿಸಿದ ವ್ಯಕ್ತಿಯನ್ನಷ್ಟೆ ಪಿಎಸ್ಐ ಬಂಧನ ಮಾಡಿದ್ದರು. ಪೊಲೀಸರು ಶಾರದೋತ್ಸವ ಮೆರವಣಿಗೆ ನಿಲ್ಲಿಸಬೇಕೆಂದು ತೆರಳಿರಲಿಲ್ಲ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕಾಗಿ ಅದರಲ್ಲೂ ಕೊಲೆಯತ್ನ ಪ್ರಕರಣದ ಹಳೆ ಆರೋಪಿಯೂ ಆಗಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು. ಅದರ ಬಗ್ಗೆ ಕೇಸನ್ನೂ ಬುಕ್ ಮಾಡಲಾಗಿದೆ. ಇದಲ್ಲದೆ, ಒಟ್ಟು ಪ್ರಕರಣವನ್ನು ಶಾರದೋತ್ಸವ ಕಮಿಟಿ ಮತ್ತು ಮೊಗವೀರ ಸಮುದಾಯದವರು ಕುಳಿತು ಇತ್ಯರ್ಥ ಮಾಡಿದ್ದಾರೆ.

ಆದರೆ ಈಗ ಕೆಲವರು ಸೇರಿಕೊಂಡು ಮೊಗವೀರರನ್ನು ಮುಂದಿಟ್ಟು ತಮ್ಮ ಲಾಭಕ್ಕಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಗೇನಾದರೂ ಮೊಗವೀರ ಸಮುದಾಯದ ಬಗ್ಗೆ ಕಾಳಜಿ ಇದ್ದರೆ, ಅವರಿಗಾಗಿ ಶಿಕ್ಷಣ, ಉದ್ಯೋಗ, ಸಾಮಾಜಿಕ ಅಭಿವೃದ್ಧಿಯ ಕೆಲಸಗಳನ್ನು ಮಾಡಿಕೊಡಲಿ ಎಂದು ಕಮಿಷನರ್ ಸುಧೀರ್ ರೆಡ್ಡಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಜಾಲತಾಣ ನಿಂದನೆ- ಎಫ್ಐಆರ್ ದಾಖಲು

ಇದಲ್ಲದೆ, ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಮೊಹಮ್ಮದ್ ಆಶಿಫ್ ಎಂಬಾತ ಹಿಂದುಗಳನ್ನು ನಿಂದಿಸಿ ಕಮೆಂಟ್ ಹಾಕಿದ್ದರೂ ಅದರ ಬಗ್ಗೆ ಕೇಸು ದಾಖಲಿಸಿಲ್ಲ ಎಂದು ಆರೋಪಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಕಮಿಷನರ್, ಇದರ ಬಗ್ಗೆ ಈಗಾಗಲೇ ಉರ್ವಾ ಸಿಇಎನ್ ಠಾಣೆಯಲ್ಲಿ ಸುಮೊಟೋ ಎಫ್ಐಆರ್ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ಎಫ್ಐಆರ್ ಪ್ರತಿಯನ್ನೂ ಹಂಚಿಕೊಂಡಿದ್ದಾರೆ. ಸದ್ರಿ ಪ್ರಕರಣದಲ್ಲಿ ಶೈಲೇಶ್ ಕಾಶಿಪಟ್ಣ ಎಂಬಾತ ಕಾಂಗ್ರೆಸಿಗೆ ಓಟ್ ಹಾಕಿದ ಹಿಂದುಗಳಿಗೆ ಇನ್ನಾದರೂ ಅರ್ಥವಾಗಲಿ ಎಂದು ಕಮೆಂಟ್ ಹಾಕಿದ್ದಕ್ಕೂ ಕೇಸು ದಾಖಲಾಗಿದೆ. ಮೊಹಮ್ಮದ್ ಆಶಿಫ್ ಎಂಬಾತ ತನ್ನ ಗುರುತನ್ನು ಮರೆಮಾಚಿ, ಇದು ಮುಸ್ಲಿಮರ ಸರ್ಕಾರ ಎಂದು ಬರೆದು ಹಿಂದುಗಳ ಬಗ್ಗೆ ಅವಾಚ್ಯ ಪದಗಳಿಂದ ನಿಂದಿಸಿದ ಬಗ್ಗೆಯೂ ಪ್ರಕರಣ ದಾಖಲಾಗಿದೆ.

Ullal News, Mangalore, BJP, Police: ಉಳ್ಳಾಲ ಶಾರದೋತ್ಸವ ಗಲಾಟೆಗೆ ಇಬ್ಬರು ಪಿಎಸ್ಐಗಳೇ ಕಾರಣ, ಕಾಂಗ್ರೆಸ್ ಸರ್ಕಾರ ಪೊಲೀಸರನ್ನ ಛೂಬಿಟ್ಟು ಹಿಂದೂಗಳನ್ನ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ; ಬಿಜೆಪಿ ನಾಯಕರ ಆರೋಪ 

Mangaluru Police Commissioner Sudheer Reddy has addressed recent BJP claims that the Congress government used police to target Hindus during the Ullal Sharadotsava. The commissioner clarified that the festival disturbance was caused by two PSIs asking questions about the event schedule, not by any government directive to halt celebrations or intimidate the community.