Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲಕ್ಷ ಜನ ಸೇರಿಸುವಾಗ ಪೊಲೀಸರು ಎಲ್ಲಿದ್ದರು? ಬೆಂಗಳೂರಿನ ಕಾಲ್ತುಳಿತಕ್ಕೆ ಪೊಲೀಸರನ್ನು ಹೊಣೆ ಮಾಡಿದ್ದವರು ಇಲ್ಲಿ ಕನಿಷ್ಠ ಎಫ್ಐಆರ್ ಮಾಡಿಲ್ಲ ಯಾಕೆ ?

21-10-25 07:32 pm       Mangalore Correspondent   ಕರಾವಳಿ

ಕೇವಲ ಕ್ರೀಡಾ ಚಟುವಟಿಕೆಗೆ ಸೀಮಿತವಾಗಿರುವ ತಾಲೂಕು ಕ್ರೀಡಾಂಗಣದಲ್ಲಿ ಟ್ರಸ್ಟ್ ಕಾರ್ಯಕ್ರಮಕ್ಕೆ ಕೊಟ್ಟಿದ್ದು ಯಾರು? ಜಿಲ್ಲಾಡಳಿತ ಕೊಟ್ಟಿದೆಯೋ ಅಥವಾ ಯುವಜನ ಕ್ರೀಡಾ ಇಲಾಖೆ ಕೊಟ್ಟಿದೆಯೋ? ಆರೆಸ್ಸೆಸ್ ಕಾರ್ಯಕ್ರಮಕ್ಕೆ ನಿರ್ಬಂಧ ಹೇರುವ ಸರ್ಕಾರ ಸಾರ್ವಜನಿಕ ಕ್ರೀಡಾಂಗಣದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದು ಯಾರು ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಟಂದೂರು ಪ್ರಶ್ನೆ ಮಾಡಿದ್ದಾರೆ.

ಪುತ್ತೂರು, ಅ.21 : ಕೇವಲ ಕ್ರೀಡಾ ಚಟುವಟಿಕೆಗೆ ಸೀಮಿತವಾಗಿರುವ ತಾಲೂಕು ಕ್ರೀಡಾಂಗಣದಲ್ಲಿ ಟ್ರಸ್ಟ್ ಕಾರ್ಯಕ್ರಮಕ್ಕೆ ಕೊಟ್ಟಿದ್ದು ಯಾರು? ಜಿಲ್ಲಾಡಳಿತ ಕೊಟ್ಟಿದೆಯೋ ಅಥವಾ ಯುವಜನ ಕ್ರೀಡಾ ಇಲಾಖೆ ಕೊಟ್ಟಿದೆಯೋ? ಆರೆಸ್ಸೆಸ್ ಕಾರ್ಯಕ್ರಮಕ್ಕೆ ನಿರ್ಬಂಧ ಹೇರುವ ಸರ್ಕಾರ ಸಾರ್ವಜನಿಕ ಕ್ರೀಡಾಂಗಣದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದು ಯಾರು ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಟಂದೂರು ಪ್ರಶ್ನೆ ಮಾಡಿದ್ದಾರೆ.

ಪುತ್ತೂರಿನಲ್ಲಿ ಶಾಸಕ ಅಶೋಕ್ ರೈ ಅವರ ಅಶೋಕ ಜನಮನ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿರುವುದನ್ನು ಖಂಡಿಸಿರುವ ಮಟಂದೂರು, ಬೆಂಗಳೂರಿನ ಐಪಿಎಲ್ ಸಂಭ್ರಮಾಚರಣೆಯ ವೇಳೆ ನಡೆದ ದುರ್ಘಟನೆ ಬಳಿಕ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತು. ಒಂದು ಕಾರ್ಯಕ್ರಮ ನಡೆಯುವಾಗ ಯಾವ ಜಾಗದಲ್ಲಿ ಎಷ್ಟು ಜನ ಸೇರುತ್ತಾರೆ ಎನ್ನುವ ಲೆಕ್ಕಾಚಾರ ಪೊಲೀಸರಿಗೆ ಇರಬೇಕು. ಅದೇ ರೀತಿ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದ ಖಾಸಗಿ ಕಾರ್ಯಕ್ರಮಕ್ಕೆ ಒಟ್ಟು 10 ಸಾವಿರ ಚೇರ್ ಹಾಕಿದ್ದರು. 10 ಸಾವಿರ ಚೇರ್ ಹಾಕಿ ಒಂದು ಲಕ್ಷ ಜನರನ್ನು ಸೇರಿಸುವಾಗ ಪೋಲೀಸ್ ಇಲಾಖೆ ಏನು ಮಾಡುತ್ತಿತ್ತು? ಇದಕ್ಕೆ ಅನುಮತಿ ಕೊಟ್ಟಿದ್ದು ಹೇಗೆ ಎಂದು ಪ್ರಶ್ನಿಸಿದರು. 

ಪೋಲೀಸ್ ಇಲಾಖೆ ಇಲ್ಲಿ ನಿಯಮಬಾಹಿರವಾಗಿ ಕಾರ್ಯಕ್ರಮ ನಡೆಸಲು ಅನುಮತಿ ಕೊಟ್ಟಿದೆ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಘಟನೆ ನಡೆದ ಸಂದರ್ಭದಲ್ಲಿ ಜನರು ಉಸಿರುಗಟ್ಟಿ ಅಸ್ವಸ್ಥಕ್ಕೀಡಾದರೂ ಪೊಲೀಸರು ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಅವರನ್ನು ತುರ್ತು ಚಿಕಿತ್ಸೆಗೆ ಒಳಪಡಿಸಲು ಸ್ಥಳದಲ್ಲಿ ವೈದ್ಯರನ್ನು ಇರಿಸಿಕೊಂಡಿಲ್ಲ ಏಕೆ..? 13 ಜನ ಅಸ್ವಸ್ಥಗೊಂಡಿದ್ದಾರೆ. ಅದರಲ್ಲಿ ಇಬ್ಬರು ಇನ್ನೂ ಒಳರೋಗಿಯಾಗಿದ್ದಾರೆ. ಸರಕಾರಿ ವೈದ್ಯರು ಇಷ್ಟು ಜನಕ್ಕೆ ಚಿಕಿತ್ಸೆ ಕೊಡುವಾಗ ಅದನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರಾ? ಗಮನಕ್ಕೆ ತಂದಿದ್ದರೆ ಇದಕ್ಕೆ ಕಾರಣವಾದವರ ಮೇಲೆ ಕೇಸು ದಾಖಲಿಸಬೇಕಿತ್ತಲ್ವಾ ಎಂದು ಕೇಳಿದರು. 

ಈ ಘಟನೆ ಬಗ್ಗೆ ಪೊಲೀಸ್ ಇಲಾಖೆ ಎಫ್ಐಆರ್ ಮಾಡಿದೆಯೋ, ಮಾಡಿದ್ದರೆ ಯಾರ ಮೇಲೆ ಮಾಡಿದೆ ಎಂದು ತಿಳಿಸಬೇಕು. ಬೆಂಗಳೂರಿನ ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದರು. ಇಲ್ಲೇನು ಮಾಡಿದ್ದೀರಿ? ಇಲ್ಲಿ ಜೀವಹಾನಿ ಸಂಭವಿಸಿಲ್ಲ, ಆದರೆ ಆಸ್ಪತ್ರೆ ಸೇರುವ ಕೆಲಸ ನಡೆದಿದೆ. ಈ ಘಟನೆಗೆ ಸರಕಾರದ ನಿಲುವೇನು ಎಂದು ಸ್ಪಷ್ಟಪಡಿಸಬೇಕು. ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಈ ರೀತಿಯ ಬೇಜಾವಾಬ್ದಾರಿ ಕೆಲಸ ಮಾಡಿದ ಇಲಾಖೆ ಮತ್ತು ಆಯೋಜಕರ ವಿರುದ್ಧ ಕ್ರಮ ಆಗಬೇಕಲ್ಲವೇ ಎಂದರು.‌

ಕಾರ್ಯಕ್ರಮದ ನೆಪದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಐಸ್ ಕ್ರೀಂ ಸ್ಟಾಲ್ ಗಳನ್ನು ಹಾಕಲಾಗಿತ್ತು. ಇದಕ್ಕೆ ಅನುಮತಿ ಕೊಟ್ಟವರು ಯಾರು? ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ದೇವಸ್ಥಾನಗಳು ಈ ಕಾರ್ಯಕ್ರಮಕ್ಕೆ ಶುಭ ಕೋರಿ ಬ್ಯಾನರ್ ಗಳನ್ನು ಅಳವಡಿಸಿದ್ದು, ಭಕ್ತರ ಹಣವನ್ನು ಈ ರೀತಿ ದುರುಪಯೋಗ ಪಡಿಸಲು ಅನುಮತಿ ಕೊಟ್ಟವರು ಯಾರು ಅನ್ನೋದರ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಸಂಜೀವ ಮಟಂದೂರು ಒತ್ತಾಯಿಸಿದರು.

Former Puttur MLA Sanjeeva Matandoor has slammed the district administration and police for alleged negligence during the massive “Ashoka Janamana” event held at Kombettu sports ground. He questioned how permission was granted for a private event at a public stadium meant for sports activities and why police failed to control the crowd when over one lakh people gathered despite arrangements for only 10,000 seats.