Speaker U.T. Khader: ಅಶಕ್ತರಿಗೆ ಶಕ್ತಿ ನೀಡುವುದೇ ಸಹಕಾರಿ ತತ್ವ ; ಮಂಗಳೂರಿನಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025 ಉದ್ಘಾಟಿಸಿ ಸ್ಪೀಕರ್ ಯು.ಟಿ ಖಾದರ್ 

16-11-25 08:43 pm       Mangalore Correspondent   ಕರಾವಳಿ

ಅಶಕ್ತರಿಗೆ ಶಕ್ತಿ ನೀಡಿ, ಅವರ ಧ್ವನಿಯಾಗುವುದು ಸಹಕಾರಿ ಕ್ಷೇತ್ರದ ಗುರಿಯಾಗಿದೆ. ಸಹಕಾರಿ ಕ್ಷೇತ್ರದಿಂದ ಮಾತ್ರ ಸ್ವಾವಲಂಬಿ, ಬಲಿಷ್ಠ ಬದುಕು ಸಾಧ್ಯವಿದೆ ಎಂದು ವಿಧಾನಸಭಾ ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದ್ದಾರೆ.

ಮಂಗಳೂರು, ನ.16: ಅಶಕ್ತರಿಗೆ ಶಕ್ತಿ ನೀಡಿ, ಅವರ ಧ್ವನಿಯಾಗುವುದು ಸಹಕಾರಿ ಕ್ಷೇತ್ರದ ಗುರಿಯಾಗಿದೆ. ಸಹಕಾರಿ ಕ್ಷೇತ್ರದಿಂದ ಮಾತ್ರ ಸ್ವಾವಲಂಬಿ, ಬಲಿಷ್ಠ ಬದುಕು ಸಾಧ್ಯವಿದೆ ಎಂದು ವಿಧಾನಸಭಾ ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದ್ದಾರೆ.

ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಭಾನುವಾರ ‘72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ’ ಪರಿಕಲ್ಪನೆಯಡಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಆತ್ಮ ಗ್ರಾಮೀಣ ಮಟ್ಟದಲ್ಲಿದೆ. ಹಿಂದಿನಿಂದಲೂ ಮತ ಬೇಧ ಇಲ್ಲದೆ ಎಲ್ಲರೂ ಕೈಜೋಡಿಸುವ ಮೂಲಕ ಸಹಕಾರಿ ಶಕ್ತಿಯನ್ನು ಇನ್ನಷ್ಟು ಬಲಗೊಳಿಸಿದ್ದಾರೆ. ಎಲ್ಲ ಸಹಕಾರಿಗಳೂ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಇದಕ್ಕೆ ಕರಾವಳಿ ಕೂಡ ಹೊರತಾಗಿಲ್ಲ ಎಂದರು.

ಹಿಂದೆ ಹೆಂಚು, ಬೀಡಿ ಉದ್ಯಮದಲ್ಲಿ ದುಡಿದು ಸಾಕಷ್ಟು ಮಹಿಳೆಯರು ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಕುಟುಂಬ ಪೋಷಿಸಿ ಸ್ವಾಭಿಮಾನಿ ಬದುಕು ಕಟ್ಟಿಕೊಂಡಿದ್ದಾರೆ. ರಾಜ್ಯ ಸರ್ಕಾರ ಕೂಡ ಮಹಿಳೆಯರ ಹೆಸರಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳನ್ನು ಸಾಧ್ಯವಾದಷ್ಟು ಮಟ್ಟಿಗೆ ರಾಜಕೀಯದಲ್ಲಿ ಮುಂದೆ ಬರುವಂತೆ ಮಹಿಳೆಯರು ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು.

ಸಹಕಾರಿ ಕ್ಷೇತ್ರದಲ್ಲೂ ಮಹಿಳಾ ಮೀಸಲಾತಿ ಬರಲಿ 

ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲೂ ಮಹಿಳೆಯರಿಗೆ ಶೇ.50ರ ಮೀಸಲಾತಿ ಸಿಗುವಂತಾಗಬೇಕು. ಆಗ ಮಾತ್ರ ಸಹಕಾರಿ ಕ್ಷೇತ್ರದ ಇನ್ನಷ್ಟು ಬೆಳೆವಣಿಗೆಗೆ ಸಾಧ್ಯವಿದೆ ಎಂದರು. ಬೇರೆ ಬೇರೆ ರಾಜ್ಯಗಳಲ್ಲೂ ಪಕ್ಷಗಳು ಮಹಿಳಾ ಅಭ್ಯುದಯದ ಯೋಜನೆಗಳನ್ನು ಮುಂದಿಟ್ಟು ಅಧಿಕಾರಕ್ಕೆ ಬರುತ್ತಿವೆ. ಅಷ್ಟರ ಮಟ್ಟಿಗೆ ಮಹಿಳೆಯರು ಪ್ರಭಾವಶಾಲಿಗಳಾಗಿದ್ದಾರೆ ಎಂದರು. 

ಬೆಂಗಳೂರಿನ ನಬಾರ್ಡ್‌ ಮುಖ್ಯ ಮಹಾಪ್ರಬಂಧಕ ಡಾ.ಸುರೇಂದ್ರ ಬಾಬು ಮಾತನಾಡಿ, ಸಂಯುಕ್ತ ರಾಷ್ಟ್ರ ಸಂಸ್ಥೆ ಪ್ರಸುತ್ತ ವರ್ಷವನ್ನು ಅಂತಾರಾಷ್ಟ್ರೀಯ ಸಹಕಾರ ವರ್ಷವಾಗಿ ಆಚರಿಸಲು ಕಾರ್ಯಕ್ರಮ ರೂಪಿಸಿದೆ. ಸಹಕಾರ ಕ್ಷೇತ್ರದ ಮೂಲಕ ಗ್ರಾಮೀಣ ಭಾಗದ ಜನರನ್ನು ಸದೃಢಗೊಳಿಸುವುದು ನಮ್ಮ ಮುಖ್ಯ ಉದ್ದೇಶ ಎಂದರು. ನಮ್ಮ ದೇಶದಲ್ಲಿ 34 ರಾಜ್ಯ ಮಟ್ಟದ ಸಹಕಾರಿ ಬ್ಯಾಂಕ್‌ಗಳಿವೆ. ದೇಶದಲ್ಲಿ 351 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿವೆ. ಇವುಗಳ ಪೈಕಿ ಇಲ್ಲಿನ ಎಸ್‌ಸಿಡಿಸಿಸಿ ಬ್ಯಾಂಕ್‌ ಅಗ್ರಸ್ಥಾನದಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. 

ಸಹಕಾರಿ ಕ್ಷೇತ್ರವನ್ನು ಕಂಪ್ಯೂಟರಿಕರಣಗೊಳಿಸುವ ಯೋಜನೆಗೆ ನಬಾರ್ಡ್‌ ಮುಂದಾಗಿದೆ. ದೇಶದಲ್ಲಿ 8 ಲಕ್ಷ ಸಹಕಾರಿ ಸಮಿತಿಗಳಿದ್ದು, ಈ ಪೈಕಿ 1 ಲಕ್ಷ ಸಹಕಾರಿ ಸಮಿತಿಗಳು ಕೃಷಿ ಸಾಲ ನೀಡುತ್ತಿವೆ. ಈ ಎಲ್ಲ ಸಮಿತಿಗಳನ್ನು ಕಂಪ್ಯೂಟರ್‌ ಮೂಲಕ ಜೋಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಉತ್ತಮ ಸ್ವಸಹಾಯ ಸಂಘಗಳಿಗೆ ಪುರಸ್ಕಾರ ನೆರವೇರಿಸಿ ಮಾತನಾಡಿದ ಶಾಸಕ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ.ದೇವೇಗೌಡ, ಕರಾವಳಿಯಲ್ಲಿ ಪ್ರತಿ ಮನೆ ಮನೆಗಳಲ್ಲಿ ಸಹಕಾರ ತತ್ವ ಸಾಕಾರಗೊಂಡಿದೆ. ಸಹಕಾರ ಸಂಘಗಳು ಬೆಳೆ ಸಾಲ ಮಾತ್ರವಲ್ಲ ಬೀದಿ ವ್ಯಾಪಾರ, ಶಿಕ್ಷಣ ಸೇರಿದಂತೆ ವಿವಿಧ ರಂಗಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ ಎಂದರು.

ಶಾಸಕರಾದ ವೇದವ್ಯಾಸ್‌ ಕಾಮತ್‌, ಯಶ್‌ಪಾಲ್‌ ಸುವರ್ಣ, ಐವನ್‌ ಡಿಸೋಜ, ಕಿಶೋರ್ ಕುಮಾರ್‌ ಪುತ್ತೂರು, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್‌ ಹೆಗ್ಡೆ, ರಾಜ್ಯ ಸಹಕಾರ ಸಂಘಗಳ ನಿಬಂಧಕ ಟಿ.ಎಚ್‌.ಎಂ.ಕುಮಾರ್, ಜಂಟಿ ನಿಬಂಧಕ ಪ್ರಸಾದ್‌ ರೆಡ್ಡಿ, ಉಪ ನಿಬಂಧಕ ರಮೇಶ್‌, ಉಡುಪಿ ಜಿಲ್ಲಾ ಉಪ ನಿಬಂಧಕ ಲಾವಣ್ಯ ಕೆ.ಆರ್‌., ಬ್ಯಾಂಕಿನ ನಿರ್ದೇಶಕ ಹಾಗೂ ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೊಟ್ಟು ಮತ್ತಿತರರು ಇದ್ದರು. ಸಮಾರಂಭಕ್ಕೆ ಮುನ್ನ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಕರಾವಳಿ ಉತ್ಸವ ಮೈದಾನ ವರೆಗೆ ಆಕರ್ಷಕ ಸಹಕಾರ ಮೆರಣಿಗೆ ಏರ್ಪಟ್ಟಿತು.

ನಂದಿನಿ ಉತ್ಪನ್ನ ಬಿಡುಗಡೆ, ಸಾಧಕರಿಗೆ ಸನ್ಮಾನ

ಈ ಸಂದರ್ಭ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ತಯಾರಿಸಿದ ನಂದಿನಿ ಸೀಡ್ಸ್‌ ಡಿಲೈಟ್‌ ಮತ್ತು ಗುವಾ ಚಿಲ್ಲಿ ಲಸ್ಸಿ ಉತ್ಪನ್ನವನ್ನು ಮಾರುಕಟ್ಟೆಗೆ
ಬಿಡುಗಡೆಗೊಳಿಸಲಾಯಿತು. ಸುಮಾರು 1.60 ಕೋಟಿ ರೂ.ಗಳ ಶಿಕ್ಷಣ ನಿಧಿಯನ್ನು ಹಸ್ತಾಂತರಿಸಲಾಯಿತು. ಈ ಬಾರಿ ಬಜಪೆ, ಕೋಟ ಹಾಗೂ ಬಡಗಬೆಟ್ಟು ಸಹಕಾರಿ
ಬ್ಯಾಂಕ್‌ಗಳಿಗೆ ಸಹಕಾರಿ ಮಾಣಿಕ್ಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ರಾಜ್ಯ ಸರ್ಕಾರದಿಂದ ಸಹಕಾರ ರತ್ನ ಪುರಸ್ಕೃತ 10 ಮಂದಿಯನ್ನು ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಎಸ್ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಮಾತನಾಡಿ, ಮುಂದಿನ ಬಾರಿಯಾದರೂ ಮಂಗಳೂರು ಮತ್ತು ಉಡುಪಿಯವರು ಸಚಿವರಾಗಿ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಶಕ್ತಿ ತುಂಬಬೇಕು ಎಂದರು.

Empowering the weak and being their voice is the true objective of the cooperative movement. Only through cooperatives can people achieve self-reliance and a stronger life, said Legislative Assembly Speaker U.T. Khader.