ಎರಡೂವರೆ ಗಂಟೆ ಕಾದರೂ ಸಿಗದ ಆಂಬುಲೆನ್ಸ್ ; ಗೂಡ್ಸ್ ಟೆಂಪೋದಲ್ಲಿ ಮಂಚ ಇಟ್ಟು ರೋಗಿ ಸಾಗಿಸಿದರು..! ಹೈಟೆಕ್ ಸಿಟಿ ಉಡುಪಿಯಲ್ಲಿ ದುಸ್ಥಿತಿ !

09-12-25 11:55 am       Udupi Correspondent   ಕರಾವಳಿ

ಉದ್ಯಾವರದಲ್ಲಿ ಅಸ್ವಸ್ಥಗೊಂಡ ರೋಗಿಯೊಬ್ಬರಿಗೆ ರಾತ್ರಿ 7 ಗಂಟೆಯಿಂದ 9.30ರ ವರೆಗು ಯಾವುದೇ ಆಂಬ್ಯುಲೆನ್ಸ್ ಸಿಗದೆ ಬೇಸತ್ತ ಸಾಮಾಜಿಕ ಕಾರ್ಯಕರ್ತರೊಬ್ಬರು ತನ್ನ ಗೂಡ್ಸ್ ಟೆಂಪೋದಲ್ಲಿ ಮಂಚ ಇಟ್ಟು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.

ಉಡುಪಿ, ಡಿ.9 : ಉದ್ಯಾವರದಲ್ಲಿ ಅಸ್ವಸ್ಥಗೊಂಡ ರೋಗಿಯೊಬ್ಬರಿಗೆ ರಾತ್ರಿ 7 ಗಂಟೆಯಿಂದ 9.30ರ ವರೆಗು ಯಾವುದೇ ಆಂಬ್ಯುಲೆನ್ಸ್ ಸಿಗದೆ ಬೇಸತ್ತ ಸಾಮಾಜಿಕ ಕಾರ್ಯಕರ್ತರೊಬ್ಬರು ತನ್ನ ಗೂಡ್ಸ್ ಟೆಂಪೋದಲ್ಲಿ ಮಂಚ ಇಟ್ಟು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.

ರೋಗಿಯ ಸಂಬಂಧಪಟ್ಟವರು 108 ಆಂಬ್ಯು ಲೆನ್ಸ್‌ಗೆ ಕರೆ ಮಾಡಿದಾಗ ಆಂಬ್ಯುಲೆನ್ಸ್‌ ಲಭ್ಯವಿರಲಿಲ್ಲ. ಖಾಸಗಿ ಆಂಬ್ಯುಲೆನ್ಸ್‌ಗಳು ಕೂಡ ಲಭ್ಯವಿಲ್ಲದಿರುವುದರಿಂದ ರೋಗಿಯ ಕಡೆಯವರು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅವರನ್ನು ಸಂಪರ್ಕಿಸಿದ್ದರು. .

ವಿಶು ಶೆಟ್ಟಿ ಕೂಡ ಖಾಸಗಿ ಆಂಬ್ಯುಲೆನ್ಸ್ ಸಂಪರ್ಕಿಸಿದ್ದು, ಆಂಬ್ಯುಲೆನ್ಸ್‌ ಸಿಗದೇ ಇರುವುದರಿಂದ ರೋಗಿ ತೀರಾ ಚಿಂತಾಜನಕ ಸ್ಥಿತಿಗೆ ತಲುಪಿದ್ದರು. ಬೇರೆ ದಾರಿ ಕಾಣದೇ ತನ್ನ ಗೂಡ್ಸ್‌ ಟೆಂಪೋಗೆ ಮಂಚ ಇಟ್ಟು ಅದರಲ್ಲಿ ರೋಗಿಯನ್ನು ಮಲಗಿಸಿ ಜಿಲ್ಲಾಸ್ಪತ್ರೆಗೆ ತಲುಪಿಸಿದ್ದಾರೆ. 

ಕಳೆದೊಂದು ವರ್ಷದಿಂದ 108 ಆಂಬ್ಯುಲೆನ್ಸ್‌ ಸರಿಯಾಗಿ ಲಭ್ಯ ಇಲ್ಲದಿರುವುದರಿಂದ ನೂರಾರು ರೋಗಿಗಳು ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಳೆದ ಒಂದು ವರ್ಷದಿಂದ ಸರಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈ ಘಟನೆಯಲ್ಲಿ ಎರಡೂವರೆ ಗಂಟೆ ಆಂಬ್ಯುಲೆನ್ಸ್ ಸಿಗದೆ ರೋಗಿ ಚಿಂತಾಜನಕ ಪರಿಸ್ಥಿತಿ ತಲುಪಿದ್ದು, ವಿಧಿ ಇಲ್ಲದೇ ಗೂಡ್ಸ್‌ ಟೆಂಪೋದಲ್ಲಿ ರೋಗಿಯನ್ನು ಕರೆದುಕೊಂಡು ಹೋಗಬೇಕಾಯಿತು. ಇನ್ನಾದರೂ ಜಿಲ್ಲಾಡಳಿತ ಈ ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ವಿಶು ಶೆಟ್ಟಿ ಅಂಬಲಪಾಡಿ ಆಗ್ರಹಿಸಿದ್ದಾರೆ.

A shocking incident unfolded in Udyavara, Udupi, where a critically ill patient had to be transported to the hospital in a goods tempo fitted with a cot, after waiting two and a half hours for an ambulance that never arrived.