ಕೈಗಾರಿಕೆಗಳ ಮಾಲಿನ್ಯ ತಡೆಯಲು ಅಧಿಕಾರಿಗಳು ವಿಫಲ ; ವಿಷದ ಮಡಿಲು ಫಲ್ಗುಣಿ ಒಡಲು, ಕುಳೂರು ಬಳಿ ಕಪ್ಪಾದ ನದಿ ನೀರು, ಸತ್ತು ಬಿದ್ದ ಮೀನುಗಳ ರಾಶಿ ! 

12-02-26 04:05 pm       Mangalore Correspondent   ಕರಾವಳಿ

ನಗರದ ಕುಳೂರು ಬಳಿಯ ಫಲ್ಗುಣಿ ನದಿಯಲ್ಲಿ ನೀರು ಸಂಪೂರ್ಣ ಕಪ್ಪಾಗಿದ್ದು, ತೀವ್ರ ದುರ್ವಾಸನೆ ಬೀರುತ್ತಿದೆ. ಜೋಕಟ್ಟೆ, ಅತ್ರೆಬೈಲ್ ಪರಿಸರದಲ್ಲಿ ನದಿ ಪಕ್ಕದ ತೋಡಿನಲ್ಲಿ ಮೀನುಗಳು ಸತ್ತು ಬಿದ್ದಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ನಿರಂತರವಾಗಿ ನದಿಗೆ ಹಾನಿಕಾರಕ ತ್ಯಾಜ್ಯ, ಮಾಲಿನ್ಯಗಳನ್ನು ಬಿಡುತ್ತಿರುವುದೇ ಈ ದುಸ್ಥಿತಿಗೆ ಕಾರಣ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. 

ಮಂಗಳೂರು, ಫೆ.12 : ನಗರದ ಕುಳೂರು ಬಳಿಯ ಫಲ್ಗುಣಿ ನದಿಯಲ್ಲಿ ನೀರು ಸಂಪೂರ್ಣ ಕಪ್ಪಾಗಿದ್ದು, ತೀವ್ರ ದುರ್ವಾಸನೆ ಬೀರುತ್ತಿದೆ. ಜೋಕಟ್ಟೆ, ಅತ್ರೆಬೈಲ್ ಪರಿಸರದಲ್ಲಿ ನದಿ ಪಕ್ಕದ ತೋಡಿನಲ್ಲಿ ಮೀನುಗಳು ಸತ್ತು ಬಿದ್ದಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ನಿರಂತರವಾಗಿ ನದಿಗೆ ಹಾನಿಕಾರಕ ತ್ಯಾಜ್ಯ, ಮಾಲಿನ್ಯಗಳನ್ನು ಬಿಡುತ್ತಿರುವುದೇ ಈ ದುಸ್ಥಿತಿಗೆ ಕಾರಣ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. 

ಬೈಕಂಪಾಡಿ ಕೈಗಾರಿಕಾ ಪ್ರದೇಶದ ವಿಲ್ಮಾ, ರುಚಿ ಸೋಯಾದಂತಹ ಉದ್ಯಮಗಳು ಮತ್ತು ಎಂಆರ್ ಪಿಎಲ್ ಘಟಕದಿಂದ ಹೊರ ಬಿಡುತ್ತಿರುವ ವಿಷಕಾರಿ ತ್ಯಾಜ್ಯ ಮರವೂರು ಡ್ಯಾಮ್ ಕಡೆಯಿಂದ ನದಿಗೆ ಸೇರುತ್ತಿರುವುದರಿಂದ ನದಿ ನೀರು ಕಪ್ಪಾಗಿರುವ ಸಾಧ್ಯತೆ ಇದೆ. ಹಿಂದೆ ನದಿ ನೀರು ನೇರವಾಗಿ ಸಮುದ್ರಕ್ಕೆ ಹೋಗುತ್ತಿದ್ದ ಕಾರಣ ಮಾಲಿನ್ಯ ಬಿಡುತ್ತಿದ್ದರೂ ಗಮನಕ್ಕೆ ಬರುತ್ತಿರಲಿಲ್ಲ. ಈಗ ಸುಲ್ತಾನ್ ಬತ್ತೇರಿ ಬಳಿ ಸೇತುವೆ ನಿರ್ಮಾಣಕ್ಕೆ ನದಿ ಪಾತ್ರಕ್ಕೆ ಮಣ್ಣು ಹಾಕಿರುವುದರಿಂದ ಮಾಲಿನ್ಯ ಮತ್ತು ನದಿ ನೀರು ಶೇಖರಗೊಂಡು ಒಂದು ವಾರದಿಂದ ಮೀನುಗಳು ಸತ್ತು ಬೀಳುತ್ತಿವೆ. 

ನದಿಗೆ ಕೈಗಾರಿಕಾ ವ್ಯಾಜ್ಯವನ್ನು ನೇರವಾಗಿ ಬಿಡುತ್ತಿದ್ದರೂ, ಅಧಿಕಾರಿಗಳು ತಪಾಸಣೆ ನಡೆಸಿ ಮಾಲಿನ್ಯಕಾರಕ ಅಂಶವಿಲ್ಲ ಎಂದು ಹೇಳಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಿರಂತರ ಮಾಲಿನ್ಯಕ್ಕೆ ಎದ್ದು ಕಾಣುತ್ತಿದ್ದರೂ ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ನದಿ ಮಾಲಿನ್ಯ ಅನೇಕ ವರ್ಷಗಳಿಂದ ನಡೆಯುತ್ತಿದೆ. ಇದರಿಂದ ಅತ್ರೆಬೈಲ್ ಪರಿಸರ ನದಿಯ ಕೊಳ್ಳಗಳು ಪೂರ್ಣ ಕಪ್ಪಾಗಿದ್ದು ಮೀನು ಸಂತತಿ ನಶಿಸಿವೆ. ಉಪ ವೃತ್ತಿಯಾಗಿ ಮೀನು ಹಿಡಿದು ಜೀವನ ನಡೆಸುವವರಿಗೆ ಕಷ್ಟವಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಮೀನುಗಾರರು ಅಳಲು ಹೇಳಿಕೊಂಡಿದ್ದಾರೆ. ಬೆಂಗ್ರೆಯಲ್ಲಿ ಮಣ್ಣು ಹಾಕಿದ್ದರಿಂದ ನದಿಯಲ್ಲಿ ನೀರು ಶೇಖರಣೆ ಆಗಿದ್ದು ಸಹಜ‌ ಹರಿವಿಗೆ ತೊಡಕಾಗಿದೆ. ಇದರಿಂದಾಗಿ ನದಿಯ ಮೇಲ್ಭಾಗದ ಪ್ರದೇಶಗಳಾದ ಕುಳೂರು, ಬಂಗ್ರ ಕುಳೂರು, ಪಡುಕೋಡಿ, ತೋಕೂರು, ಮರವೂರು ಮುಂತಾದೆಡೆ ನದಿ ನೀರು ಕಪ್ಪಾಗಿದ್ದು ಜಲಚರಗಳು ಸಾಯತೊಡಗಿವೆ. 

ನಂದಿನಿ ನದಿ ಮಾಲಿನ್ಯ; ಚಾರ್ಜ್ ಶೀಟ್ ಹಂತಕ್ಕೆ 

ನದಿ ಮಾಲಿನ್ಯದಿಂದ ಜನಜೀವನಕ್ಕೆ ಧಕ್ಕೆಯಾಗಿರುವುದು ಶಿಕ್ಷಾರ್ಹ ಅಪರಾಧವಾಗಿದ್ದು ಪಾವಂಜೆ ಖಂಡಿಗೆ ಬಳಿ ನಂದಿನಿ ನದಿಯ ಮಾಲಿನ್ಯ ತಡೆಗೆ ಲೋಕಾಯುಕ್ತರ ಸೂಚನೆಯಂತೆ ಸುರತ್ಕಲ್ ಠಾಣೆ ಪೊಲೀಸರು ಎಫ್‌ಐಆ‌ರ್ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆದು ನಿರ್ಲಕ್ಷ್ಯ ವಹಿಸಿದ ಮಹಾನಗರ ಪಾಲಿಕೆ, ತ್ಯಾಜ್ಯ ಹೊರಬಿಡುತ್ತಿರುವ ಶ್ರೀನಿವಾಸ ಮೆಡಿಕಲ್ ಕಾಲೇಜು ಸೇರಿ ಹಲವು ಸಂಸ್ಥೆಗಳ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಫಲ್ಗುಣಿ ನದಿ ಮಾಲಿನ್ಯ ತಡೆಗೂ ಲೋಕಾಯುಕ್ತರಿಗೆ ದೂರು ನೀಡಲು ಸಿದ್ದತೆ ನಡೆಸುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯರು.

Severe pollution has turned the Phalguni River near Kuloor completely black, with foul smell and heaps of dead fish alarming locals. Residents allege that untreated industrial waste from Baikampady units and MRPL is being discharged into the river, worsened by blocked water flow due to bridge construction. Despite repeated complaints, officials are accused of negligence as pollution continues to threaten aquatic life and the livelihoods of fishermen.