ವಿದೇಶಿ ಉದ್ಯೋಗ ; ಗಲ್ಫ್‌, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಕರಾವಳಿ ಯುವಕರ ಸಂಕಷ್ಟ, ನಕಲಿ ಏಜೆನ್ಸಿಗಳ ಕಡಿವಾಣಕ್ಕೆ ವಿದೇಶಾಂಗ ಸಚಿವರಿಗೆ ಸಂಸದ ಚೌಟ ಒತ್ತಾಯ 

13-02-26 09:52 pm       Mangalore Correspondent   ಕರಾವಳಿ

ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ಯುವಕರು ನಕಲಿ ಉದ್ಯೋಗ ನೇಮಕ ಏಜೆನ್ಸಿಗಳ ಮೂಲಕ ಗಲ್ಫ್‌ ಹಾಗೂ ದಕ್ಷಿಣ ಏಷ್ಯಾ ದೇಶಗಳಿಗೆ ತೆರಳಿ ಅಲ್ಲಿ ಮೋಸ ಹೋಗಿ ಸಂಕಷ್ಟಕ್ಕೆ ಸಿಲುಕಿರುವುದು....

ನವದೆಹಲಿ, ಫೆ.13 : ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ಯುವಕರು ನಕಲಿ ಉದ್ಯೋಗ ನೇಮಕ ಏಜೆನ್ಸಿಗಳ ಮೂಲಕ ಗಲ್ಫ್‌ ಹಾಗೂ ದಕ್ಷಿಣ ಏಷ್ಯಾ ದೇಶಗಳಿಗೆ ತೆರಳಿ ಅಲ್ಲಿ ಮೋಸ ಹೋಗಿ ಸಂಕಷ್ಟಕ್ಕೆ ಸಿಲುಕಿರುವುದು ಮತ್ತು ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳುವ ಭಾರತೀಯ ನಾಗರಿಕರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು, ಜೊತೆಗೆ ವಂಚನೆ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿ ದಕ್ಷಿಣ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ನವದೆಹಲಿಯಲ್ಲಿ ಸಚಿವರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿರುವ ಕ್ಯಾ. ಚೌಟ, ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ಯುವ ಜನರು ಉದ್ಯೋಗ ಪಡೆಯುವ ಕನಸಿನೊಂದಿಗೆ ಗಲ್ಫ್‌ ಹಾಗೂ ದಕ್ಷಿಣ ಏಷ್ಯಾ ದೇಶಗಳಿಗೆ ತೆರಳುತ್ತಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಕಲಿ ಏಜೆನ್ಸಿಗಳ ಮೂಲಕ ವಿದೇಶಕ್ಕೆ ತೆರಳಿ, ಅಲ್ಲಿ ಸೈಬರ್ ವಂಚಕರ ಬಲೆಗೆ ಸಿಲುಕುತ್ತಿರುವುದು, ನಿರೀಕ್ಷಿತ ಕೆಲಸ ಸಿಗದೆ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ, ವಂಚನಾ ಜಾಲಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮಗಳನ್ನು ಸಚಿವಾಲಯದ ಮೂಲಕ ಜರುಗಿಸಬೇಕು. ನಕಲಿ ಏಜೆನ್ಸಿಗಳ ಬಗ್ಗೆ ಜನರಲ್ಲಿ ಪ್ರಯಾಣ ಪೂರ್ವ ಸಮಾಲೋಚನೆ ('ಪ್ರಿ-ಡಿಪಾರ್ಚರ್ ಕೌನ್ಸೆಲಿಂಗ್), ನಕಲಿ ಏಜೆನ್ಸಿಗಳ ಬಗ್ಗೆ ಜಾಗೃತಿ ಅಭಿಯಾನಗಳು ಹಾಗೂ ನೇಮಕಾತಿ ಸಂಸ್ಥೆಗಳ ಮಾನದಂಡ ಬಲಪಡಿಸುವ ಬಗ್ಗೆ ಸಚಿವಾಲಯ ಗಮನಹರಿಸಬೇಕು. ಅಪಾಯ ಹೆಚ್ಚಿರುವ ದೇಶಗಳಲ್ಲಿ ಮೇಲ್ವಿಚಾರಣಾ ವ್ಯವಸ್ಥೆ ಬಲಪಡಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಮಂಗಳೂರು ಸೇರಿದಂತೆ ಕರ್ನಾಟಕದ ಹಲವು ಯುವಕರು ಕಾಂಬೋಡಿಯಾ ದೇಶಕ್ಕೆ ತೆರಳಿ ಅಲ್ಲಿ ಸೈಬರ್‌ ವಂಚಕರ ಜಾಲದಲ್ಲಿ ಸಿಲುಕಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಕೊನೆಗೆ ವಿದೇಶಾಂಗ ಸಚಿವಾಲಯದ ಮಧ್ಯಸ್ಥಿಕೆ ಹಾಗೂ ನಿರಂತರ ಪ್ರಯತ್ನದಿಂದಾಗಿ ಮಂಗಳೂರಿನ ಐವರು ಯುವಕರನ್ನು ಕಾಂಬೋಡಿಯಾದ ಸಂಕಷ್ಟದಿಂದ ರಕ್ಷಿಸಿ ತಾಯ್ನಾಡಿಗೆ ಮರಳಿ ಕರೆತರಲು ಸಾಧ್ಯವಾಗಿದೆ. ಈ ಬಗ್ಗೆ ಸಂತ್ರಸ್ತರು ಹಾಗೂ ಅವರ ಕುಟುಂಬಸ್ಥರು ಅನುಭವಿಸಿದ ಯಾತನೆಗಳನ್ನು ಕ್ಯಾ. ಚೌಟ ಅವರು ಸಚಿವರ ಗಮನಕ್ಕೆ ತಂದಿದ್ದಾರೆ. 

ಸಂಸದರ ಮನವಿಗೆ ಸಕಾರಾತ್ಮಕ ಸ್ಪಂದಿಸಿದ ಸಚಿವ ಡಾ.ಎಸ್. ಜೈಶಂಕರ್, ವಿದೇಶದಲ್ಲಿರುವ ಭಾರತೀಯರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಸಮಾವೇಶಕ್ಕೆ ಪ್ರಸ್ತಾವನೆ:

ಇದೇ ಸಂದರ್ಭದಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ ಮಂಗಳೂರಿನಲ್ಲಿ ತಂತ್ರಜ್ಞಾನ, ಪ್ರವಾಸೋದ್ಯಮ ಮತ್ತು ವ್ಯಾಪಾರ ಕ್ಷೇತ್ರಗಳನ್ನು ಒಳಗೊಂಡ ಅಂತರಾಷ್ಟ್ರೀಯ ಸಮಾವೇಶವನ್ನು ಆಯೋಜಿಸುವ ಕುರಿತು ಕ್ಯಾ. ಚೌಟ ಅವರು ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದರು. ನಮ್ಮ ಕರಾವಳಿ ಪ್ರದೇಶದ ಜಾಗತಿಕ ಸಂಪರ್ಕವನ್ನು ಬಲಪಡಿಸುವುದು, ಹೂಡಿಕೆ ಹಾಗೂ ಉದ್ಯಮಗಳನ್ನು ಉತ್ತೇಜಿಸುವ ಕುರಿತು ಸಚಿವರೊಂದಿಗೆ ಚರ್ಚಿಸಿದರು. ಅಲ್ಲದೆ, ವಿದೇಶಗಳಲ್ಲಿರುವ ನಮ್ಮ ಕರಾವಳಿಯ ಪ್ರತಿಭೆಗಳನ್ನು ಮರಳಿ ತಾಯ್ನಾಡಿಗೆ ಕರೆತರುವ ಬ್ಯಾಕ್ ಟು ಊರು ಅಭಿಯಾನಕ್ಕೆ ಸಚಿವರ ಬೆಂಬಲವನ್ನು ಇದೇ ವೇಳೆ ಕೋರಿದ್ದಾರೆ.

Dakshina Kannada MP Capt. Brijesh Chowta has urged External Affairs Minister Dr. S. Jaishankar to take strict action against fraudulent recruitment agencies that are exploiting youth from Mangaluru and coastal Karnataka seeking employment abroad.