2013ರಲ್ಲಿ ಶಿಲಾನ್ಯಾಸಗೊಂಡಿದ್ದ ಅಬ್ಬಕ್ಕ ಭವನ ನಿರ್ಮಾಣಕ್ಕೆ ಮರುಜೀವ ; ತೊಕ್ಕೊಟ್ಟಿನಲ್ಲೇ ಬಳಿ ತಲೆಯೆತ್ತಲಿದೆ ಮೂರು ಮಹಡಿಯ ಸುಸಜ್ಜಿತ ಭವನ, ಶೀಘ್ರದಲ್ಲೇ ಸಚಿವರಿಂದ ಮತ್ತೊಮ್ಮೆ ಶಂಕುಸ್ಥಾಪನೆ ! 

19-02-26 09:50 pm       mangalore   ಕರಾವಳಿ

 ಹನ್ನೆರಡು ವರುಷಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈ ಅವರು ತೊಕ್ಕೊಟ್ಟಿನ ಕೇಂದ್ರ ಬಸ್ ನಿಲ್ದಾಣ ಬಳಿಯ ಜಾಗದಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರೂ ತಾಂತ್ರಿಕ ಸಮಸ್ಯೆಗಳಿಂದ‌ ಕಟ್ಟಡ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಇದೀಗ ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಭವನ ನಿರ್ಮಾಣದ ದಶಕಗಳ ಯೋಜನೆಗೆ ಮರುಜೀವ ಸಿಕ್ಕಿದ್ದು ಗುರುವಾರ ಸ್ಪೀಕರ್ ಖಾದರ್ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ ಗಡಿ ಗುರುತು ಪ್ರಕ್ರಿಯೆ ನಡೆಯಿತು.

ಉಳ್ಳಾಲ, ಫೆ.19 ಹನ್ನೆರಡು ವರುಷಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈ ಅವರು ತೊಕ್ಕೊಟ್ಟಿನ ಕೇಂದ್ರ ಬಸ್ ನಿಲ್ದಾಣ ಬಳಿಯ ಜಾಗದಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರೂ ತಾಂತ್ರಿಕ ಸಮಸ್ಯೆಗಳಿಂದ‌ ಕಟ್ಟಡ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಇದೀಗ ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಭವನ ನಿರ್ಮಾಣದ ದಶಕಗಳ ಯೋಜನೆಗೆ ಮರುಜೀವ ಸಿಕ್ಕಿದ್ದು ಗುರುವಾರ ಸ್ಪೀಕರ್ ಖಾದರ್ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ ಗಡಿ ಗುರುತು ಪ್ರಕ್ರಿಯೆ ನಡೆಯಿತು.

ಈ ವೇಳೆ ಮಾತನಾಡಿದ ಸ್ಪೀಕರ್ ಖಾದರ್, 2018 ರಲ್ಲಿ ನಾನು ಸಚಿವನಾಗಿದ್ದಾಗ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕನ್ನಡ & ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀಯವರು ಉಳ್ಳಾಲ ತಾಲೂಕಿನ ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಎಂಟು ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದ್ದರು. ಆದರೆ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಅಂದು ಬಿಡುಗಡೆಯಾದ ಅನುದಾನವು ಹಾಗೆಯೇ ಬಾಕಿ ಉಳಿದಿತ್ತು. ಇದೀಗ ಕನ್ನಡ & ಸಂಸ್ಕೃತಿ ಇಲಾಖೆ, ಕರ್ನಾಟಕ ಗೃಹ ಮಂಡಳಿ, ಜಿಲ್ಲಾಧಿಕಾರಿಗಳ ನಡುವೆ ಮಾತುಕತೆ ನಡೆದ ಬಳಿಕ ಸಮಸ್ಯೆ ಬಗೆಹರಿದಿದ್ದು, ಇಂದು ಅಬ್ಬಕ್ಕ ಭವನ ನಿರ್ಮಾಣಕ್ಕೆ ಗಡಿ ಗುರುತು ಮಾಡಿ ಸ್ಥಳ ಪರಿಶೀಲನೆ ನಡೆಸಲಾಗಿದೆ.ಬಶೀಘ್ರವೇ ಕಾಮಗಾರಿ ಆರಂಭಿಸಲಿದ್ದು, ಕೆಲವೇ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು ಅಬ್ಬಕ್ಕ ಭವನ ಮತ್ತು ಕೊಣಾಜೆ ಮಂಗಳೂರು ವಿವಿ ಬಳಿಯ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಬ್ಯಾರಿ ಭವನಕ್ಕೂ ಅಧಿಕೃತವಾಗಿ ಶಂಕು ಸ್ಥಾಪನೆ ನೆರವೇರಿಸಲಿರುವರೆಂದರು.

ಅಬ್ಬಕ್ಕ ಭವನ ನಿರ್ಮಾಣದಿಂದ ಭವಿಷ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆಯಾಗಬಾರದೆಂಬ ಮುಂಜಾಗೃತೆಯಿಂದ ಸ್ಥಳೀಯರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಅಬ್ಬಕ್ಕ ಭವನವನ್ನು ಸುಂದರವಾಗಿ ನಿರ್ಮಿಸುವ ದೃಷ್ಟಿಯಲ್ಲಿ ಪ್ರದೇಶವನ್ನ ಪರಿಶೀಲನೆ ನಡೆಸಲಾಗಿದೆ. ಉಳ್ಳಾಲವು ಪ್ರತ್ಯೇಕ ತಾಲೂಕಾಗಿ ಮಾರ್ಪಟ್ಟಾಗಲೂ ನಾವು ಮಂಗಳೂರಿನ ಟೌನ್ ಹಾಲನ್ನೇ ನೆಚ್ಚಿಕೊಂಡಿದ್ದೆವು. ನಮ್ಮ ತಾಲೂಕಲ್ಲಿ ಟೌನ್ ಹಾಲ್ ಇಲ್ಲದಕ್ಕಾಗಿ ಅಬ್ಬಕ್ಕ ಭವನವನ್ನು ಕೇಳಿದ್ದೆವು. ಇದೀಗ ನಿರ್ಮಾಣಗೊಳ್ಳಲಿರುವ ಅಬ್ಬಕ್ಕ ಭವನವು ಉಳ್ಳಾಲ ತಾಲೂಕಿನ ಮಿನಿ ಟೌನ್ ಹಾಲ್ ಆಗಿ ರಾರಾಜಿಸಲಿದೆ. 

41 ಸೆಂಟ್ಸ್ ಜಾಗದಲ್ಲಿ 22,223 ಚದರ ಅಡಿಯ ಮೂರು ಮಹಡಿಯುಳ್ಳ ಭವನ ನಿರ್ಮಾಣಗೊಳ್ಳಲಿದ್ದು, ಅದರಲ್ಲಿ 410 ಆಸನಗಳುಳ್ಳ ಸುಸಜ್ಜಿತ ಸಭಾಂಗಣ, ಗ್ರೀನ್ ರೂಮ್, ಮೀಟಿಂಗ್ ಹಾಲ್, ಅಬ್ಬಕ್ಕಳ ಚರಿತ್ರೆ ಕುರಿತಾದ ಮ್ಯೂಸಿಯಮ್, ಕೆಳ ಅಂತಸ್ತಲ್ಲಿ ಸುಸಜ್ಜಿತ ಕಾರ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ತೊಕ್ಕೊಟ್ಟಿನ ಉದ್ದೇಶಿತ ಅಬ್ಬಕ್ಕ ಭವನದ ಪಕ್ಕದಲ್ಲೇ ಬ್ಯಾರಿ ಭವನ ನಿರ್ಮಾಣಕ್ಕೂ ಭೂಮಿ ಮಂಜೂರಾಗಿತ್ತು. ಆದರೆ ಅಬ್ಬಕ್ಕ ಭವನದ ಪಕ್ಕದಲ್ಲೇ ಬ್ಯಾರಿ ಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಈ ವಿಚಾರದಲ್ಲಿ ವಿವಾದವೇ ಬೇಡವೆಂದು‌ ಮಂಗಳೂರು ವಿಶ್ವವಿದ್ಯಾಲಯದ ಬಳಿಯ ವಿಶಾಲ ಜಾಗದಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ಯೋಜನೆ ನಿರ್ಮಿಸಲಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಿದ್ದಾರೆಂದು ಖಾದರ್ ತಿಳಿಸಿದರು.

ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಸಮಿತಿಯು ಕಳೆದ ಕೆಲ ವರುಷಗಳಿಂದ ಸೀಮಿತ ಚೌಕಟ್ಟಿನಲ್ಲಿ ಅಬ್ಬಕ್ಕ ಉತ್ಸವವನ್ನು ನಡೆಸುತ್ತ ಬಂದಿದೆ. ಮುಂದಿನ ಎಪ್ರಿಲ್ ತಿಂಗಳಿನಲ್ಲಿ ಸರಕಾರದ ಮಟ್ಟದಲ್ಲಿ ಉಳ್ಳಾಲದ ಎಲ್ಲಾ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ,ರಾಜಕೀಯ ರಹಿತವಾಗಿ,ಯಾವುದೇ ಸ್ವಪೇಕ್ಷೆ ಇಲ್ಲದೆ ಅಬ್ಬಕ್ಕ ಉತ್ಸವವನ್ನು ನಡೆಸಲಿದ್ದು, ಇದನ್ನ ಉಳ್ಳಾಲ ಉತ್ಸವವಾಗಿ ಪರಿವರ್ತಿಸಲಿದ್ದೇವೆ. ಸರಕಾರದ ಮಟ್ಟದಲ್ಲಿ ನಡೆಯುವ ಈ "ಅಬ್ಬಕ್ಕ ಉತ್ಸವ" ದ ಮೇಲುಸ್ತುವಾರಿಯನ್ನು ಮಹಿಳಾ ಸಮಿತಿಯೇ ವಹಿಸಬೇಕೆಂಬ ಅಭಿಪ್ರಾಯವೂ ಕೇಳಿ ಬಂದಿದೆಯೆಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ, ಕರ್ನಾಟಕ ಗೃಹ ಮಂಡಳಿಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಸಹನಾ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುರೇಶ್ ಭಟ್ನಗರ, ಮಾಜಿ ತಾ.ಪಂ ಸದಸ್ಯೆ ಸುರೇಖ ಚಂದ್ರಹಾಸ್ ,ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ ಮೊದಲಾದವರು ಉಪಸ್ಥಿತರಿದ್ದರು.