ನಿಷ್ಠಾವಂತ ಆರೆಸ್ಸೆಸ್ ಕಾರ್ಯಕರ್ತ, ಮಂಗಳೂರಿನ ಬಿಜೆಪಿ ಹಿರಿಯ ಮುಖಂಡ ಸತೀಶ್ ಪ್ರಭು ನಿಧನ

03-03-26 02:39 pm       HK News Staffer   ಕರಾವಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರರಾಗಿದ್ದ ಮತ್ತು ಸುದೀರ್ಘ ಕಾಲದಿಂದ ನ್ಯಾಯ ನಿಷ್ಠೆಯಿಂದ ರಾಜಕೀಯ ಜೀವನದಲ್ಲಿದ್ದ ನಗರದ ರಥಬೀದಿ ನಿವಾಸಿ ಸತೀಶ್ ಪ್ರಭು(59) ಇಂದು ಬೆಳಗ್ಗೆ ನಿಧನರಾಗಿದ್ದಾರೆ.‌

ಮಂಗಳೂರು, ಮಾರ್ಚ್ 3: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರರಾಗಿದ್ದ ಮತ್ತು ಸುದೀರ್ಘ ಕಾಲದಿಂದ ನ್ಯಾಯ ನಿಷ್ಠೆಯಿಂದ ರಾಜಕೀಯ ಜೀವನದಲ್ಲಿದ್ದ ನಗರದ ರಥಬೀದಿ ನಿವಾಸಿ ಸತೀಶ್ ಪ್ರಭು(59) ಇಂದು ಬೆಳಗ್ಗೆ ನಿಧನರಾಗಿದ್ದಾರೆ.‌

ರಥಬೀದಿಯ ತಮ್ಮ ಮನೆಯಲ್ಲಿದ್ದಾಗ ಕುಸಿದು ಬಿದ್ದ ಅವರನ್ನು ಕೂಡಲೇ ಯೆನಪೋಯ ಆಸ್ಪತ್ರೆಗೆ ಒಯ್ಯಲಾಗಿತ್ತು.‌ ವೈದ್ಯರು ಪರೀಕ್ಷಿಸಿ ಬ್ರೇನ್ ಹೇಮರೇಜ್ ಆಗಿರುವುದಾಗಿ ಹೇಳಿದ್ದು ಕೆಲ ಹೊತ್ತಿನಲ್ಲೇ ಸಾವನ್ನಪ್ಪಿದ್ದಾರೆ.‌ ಅವರು ಪತ್ನಿ ಮತ್ತು ಏಕೈಕ ಪುತ್ರನನ್ನು ಅಗಲಿದ್ದಾರೆ. ‌

ಸಂಘನಿಕೇತನದ ಕೇಶವ ಸಂವರ್ಧನ ಸಮಿತಿಯ ಉಪಾಧ್ಯಕ್ಷ, ರಥಬೀದಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿಯಾಗಿದ್ದ ಸತೀಶ್ ಪ್ರಭು ಅವರು ಬಾಲ್ಯದಿಂದಲೇ ಸಂಘದ ಸ್ವಯಂಸೇವಕರು‌. ಸಂಘನಿಕೇತನದ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಮುಂಚೂಣಿಯಲ್ಲಿದ್ದು ಸೇವಾ ಚಟುವಟಿಕೆ ನಡೆಸುತ್ತಿದ್ದರು. ಕುದ್ರೋಳಿಯಲ್ಲಿ ವಿವೇಕಾನಂದ ಪ್ರಿಂಟರ್ಸ್ ಎನ್ನುವ ಸಣ್ಣ ಮುದ್ರಣ ಸಂಸ್ಥೆಯನ್ನು ಹೊಂದಿದ್ದ ಸತೀಶ್ ಪ್ರಭು, ಅದರಲ್ಲೇ ಜೀವನ ತೃಪ್ತಿ ಕಂಡವರು. ಆರೆಸ್ಸೆಸ್, ಬಿಜೆಪಿಯಲ್ಲಿ ದೊಡ್ಡವರ ಸಂಪರ್ಕ ಇದ್ದರೂ, ಅದನ್ನು ಮುಂದಿಟ್ಟು ರಾಜಕೀಯ ಮಾಡಿದವರಲ್ಲ. ಕಳೆದ ಬಾರಿ ಬಿಜೆಪಿ ಒಳಗಡೆ ಅಸಮಧಾನಗೊಂಡು ಕೆಲವು ಸಮಯ ಪಕ್ಷವನ್ನು ತ್ಯಜಿಸಿ ಕಾಂಗ್ರೆಸ್ ಸೇರಿದ್ದರು. ಆದರೆ ಅಲ್ಲಿ ಒಗ್ಗಿಕೊಳ್ಳಲು ಸಾಧ್ಯವಾಗದೆ ಮತ್ತೆ ಮಾತೃಪಕ್ಷಕ್ಕೆ ಸೇರಿ ಸಕ್ರಿಯವಾಗಿದ್ದರು.