ಉಡುಪಿ; ಲವ್ ಮ್ಯಾಟರ್ ರಾಜಿ ವೇಳೆ ಮೀನುಗಾರ ಮುಖಂಡನಿಗೆ ಚಾಕು ಇರಿತ, ಐವರ ಬಂಧನ

04-03-26 10:54 am       HK News Staffer   ಕರಾವಳಿ

ಪ್ರೇಮ ಪ್ರಕರಣದ ರಾಜಿ ವೇಳೆ ಸ್ಥಳೀಯ ಮೀನುಗಾರರ ಮುಖಂಡನಿಗೆ ಚಾಕು ಇರಿತ ನಡೆದ ಘಟನೆ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ಮಂಜು ಕೊಳ ಯಾನೆ ಮಂಜುನಾಥ ಸಾಲಿಯಾನ್ ಪ್ರಾಣಾಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಡುಪಿ, ಮಾರ್ಚ್ 04: ಪ್ರೇಮ ಪ್ರಕರಣದ ರಾಜಿ ವೇಳೆ ಸ್ಥಳೀಯ ಮೀನುಗಾರರ ಮುಖಂಡನಿಗೆ ಚಾಕು ಇರಿತ ನಡೆದ ಘಟನೆ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ಮಂಜು ಕೊಳ ಯಾನೆ ಮಂಜುನಾಥ ಸಾಲಿಯಾನ್ ಪ್ರಾಣಾಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಲ್ಪೆ ಯುವಕ ಮತ್ತು ಪಡುಬಿದ್ರಿ–ಪಲಿಮಾರು ಭಾಗದ ಯುವತಿಯ ಪ್ರೇಮ ಸಂಬಂಧದ ಕುರಿತು ಮಾತುಕತೆಗೆ ಇಬ್ಬರು ಕಡೆಯವರೂ ಸೇರಿದ್ದರು. ಈ ವೇಳೆ ಉದ್ವಿಗ್ನತೆ ಉಂಟಾಗಿ, ಯುವತಿಯ ಕಡೆಯವರಿಂದ ಮಂಜು ಕೊಳ ಮೇಲೆ ಚಾಕು ಇರಿತ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಾಯಗೊಂಡ ಮಂಜು ಕೊಳ ಅವರನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಗಾಯಗಳಿಲ್ಲದೆ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಘಟನೆಯ ನಂತರ ಸ್ಥಳೀಯರು ಆರೋಪಿಗಳನ್ನು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಸಂಬಂಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಘಟನೆ ವೈಯಕ್ತಿಕ ಕಾರಣಗಳಿಂದ ನಡೆದಿದೆ. ಪ್ರಕರಣಕ್ಕೆ ಯಾವುದೇ ಕೋಮು ಹಿನ್ನೆಲೆ ಇಲ್ಲ. ಸಾರ್ವಜನಿಕರು ವದಂತಿಗಳನ್ನು ಹರಡಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಪ್ರಸ್ತುತ ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.