Cyber Fraud Awareness, Mangalore: ಸೈಬರ್ ವಂಚನೆ ಬಗ್ಗೆ ಜನಜಾಗೃತಿ ; ಧಾರ್ಮಿಕ ಕೇಂದ್ರಗಳ ಮೊರೆ ಹೋದ ಮಂಗಳೂರು ಪೊಲೀಸರು, ಚರ್ಚ್, ಮಸೀದಿ, ದೇವಸ್ಥಾನಗಳಲ್ಲಿ ಮಾಹಿತಿ ಶಿಬಿರ

12-03-26 08:33 am       HK News Staffer   ಕರಾವಳಿ

ಪ್ರತಿದಿನ ಮೋಸಹೋದ ಸುದ್ದಿಗಳು ಬಂದರೂ, ಮೊಬೈಲ್ ಬಳಕೆ, ಓಟಿಪಿ, ಬ್ಯಾಂಕ್ ಖಾತೆಗಳ ಬಗ್ಗೆ ಜಾಗ್ರತೆ ಇರಬೇಕೆಂದು ಪೊಲೀಸರು ಹೇಳುತ್ತ ಬಂದರೂ ಸೈಬರ್ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಮಂಗಳೂರಿನಲ್ಲಿ ವಿದ್ಯಾವಂತರೇ ಈ ಜಾಲಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇದರಿಂದಾಗಿ ಪೊಲೀಸರು ಜನ ಜಾಗೃತಿಗಾಗಿ ಧಾರ್ಮಿಕ ಕೇಂದ್ರಗಳ ಮೊರೆ ಹೋಗಿದ್ದಾರೆ.

ಮಂಗಳೂರು, ಮಾರ್ಚ್ 11: ಪ್ರತಿದಿನ ಮೋಸಹೋದ ಸುದ್ದಿಗಳು ಬಂದರೂ, ಮೊಬೈಲ್ ಬಳಕೆ, ಓಟಿಪಿ, ಬ್ಯಾಂಕ್ ಖಾತೆಗಳ ಬಗ್ಗೆ ಜಾಗ್ರತೆ ಇರಬೇಕೆಂದು ಪೊಲೀಸರು ಹೇಳುತ್ತ ಬಂದರೂ ಸೈಬರ್ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಮಂಗಳೂರಿನಲ್ಲಿ ವಿದ್ಯಾವಂತರೇ ಈ ಜಾಲಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇದರಿಂದಾಗಿ ಪೊಲೀಸರು ಜನ ಜಾಗೃತಿಗಾಗಿ ಧಾರ್ಮಿಕ ಕೇಂದ್ರಗಳ ಮೊರೆ ಹೋಗಿದ್ದಾರೆ.

ದೇವಸ್ಥಾನ, ಮಸೀದಿ, ಚರ್ಚ್, ಮಂದಿರ, ಯುವಕ ಮಂಡಲಗಳು ಹೀಗೆ ಸಮಾಜದಲ್ಲಿ ಜನರು ಸೇರುವ ಜಾಗಗಳಿಗೆ ತೆರಳಿ ಪೊಲೀಸ್ ಅಧಿಕಾರಿಗಳು ಸೈಬರ್ ಅಪರಾಧಗಳ ಬಗ್ಗೆ ಸ್ಥಳೀಯ ಭಾಷೆಗಳಲ್ಲೇ ಜಾಗೃತಿ ಮೂಡಿಸುತ್ತಿದ್ದಾರೆ. ಮೊಬೈಲ್ ಬಳಕೆಯ ತಪ್ಪಿನಿಂದ ಜನರು ಹೇಗೆ ಈ ಜಾಲದಲ್ಲಿ ಬಂಧಿಯಾಗುತ್ತಾರೆ, ಮೋಸದ ಬಲೆಗೆ ಸಿಲುಕುತ್ತಾರೆ ಎಂಬ ಬಗ್ಗೆ ಜನರಿಗೆ ತಿಳಿಹೇಳತೊಡಗಿದ್ದಾರೆ. ಉಳ್ಳಾಲ ಭಾಗದ ಎಲ್ಲ ಮಸೀದಿಗಳಲ್ಲಿಯೂ ಪ್ರತಿ ಶುಕ್ರವಾರ ಇಂತಹ ಜಾಗೃತಿ ಕಾರ್ಯಕ್ರಮಗಳು ಆಗ್ತಿವೆ. ಮಂಗಳೂರಿನಲ್ಲಿ ಪ್ರತಿ ಚರ್ಚ್ ಆವರಣದಲ್ಲಿಯೂ ಭಾನುವಾರದ ಪ್ರಾರ್ಥನೆ ಸಂದರ್ಭದಲ್ಲಿ ಪೊಲೀಸರು ಬಂದು ಜಾಗೃತಿ ಮೂಡಿಸುತ್ತಿದ್ದಾರೆ.

ಸೈಬರ್ ಕ್ರೈಮ್ ಎಂದರೇನು, ಯಾವ ರೀತಿ ನಡೆಯುತ್ತದೆ, ಈ ವಂಚನೆಯ ಬಲೆಗೆ ಬೀಳದಿರಲು ಏನು ಮಾಡಬೇಕೆಂದು ತುಳು, ಕೊಂಕಣಿ, ಬ್ಯಾರಿ ಭಾಷೆಗಳಲ್ಲಿ ಪೊಲೀಸರು ಮಾಹಿತಿ ನೀಡುತ್ತಿದ್ದಾರೆ. ಭಜನಾ ಮಂದಿರಗಳು, ಯುವಕ ಮಂಡಲಗಳಲ್ಲಿ, ಮನೆ ಮನೆ ಭೇಟಿಯ ಸಂದರ್ಭದಲ್ಲೂ ಪೊಲೀಸರು ಸೈಬರ್ ಕ್ರೈಮ್ ಬಗ್ಗೆ ಹೇಳತೊಡಗಿದ್ದಾರೆ. ಮಂಗಳೂರು, ದಕ್ಷಿಣ ಕನ್ನಡಲ್ಲಿ ಅತಿ ಹೆಚ್ಚು ವಿದ್ಯಾವಂತರಿದ್ದರೂ, ಹಿರಿಯ ನಾಗರಿಕರನ್ನೇ ಗುರಿಯಾಗಿಸಿ ಸೈಬರ್ ವಂಚಕರು ತಮ್ಮ ಬಲೆಗೆ ಬೀಳಿಸುತ್ತಿದ್ದಾರೆ. ಮೊಬೈಲ್ ಕರೆಗಳ ಬಗ್ಗೆ ಜಾಗೃತಿ, ಡಿಜಿಟಲ್ ಅರೆಸ್ಟ್ ಎಂದು ಹೇಳಿ ಯಾಮಾರಿಸಿ ಹಣ ಕೀಳುವ ಪ್ರವೃತ್ತಿ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದಾರೆ.

ವಂಚಕರ ಜಾಲ ನಾನಾ ಪರಿ:

ಬ್ಯಾಂಕ್ ಸಿಬಂದಿ, ಟೆಲಿಕಾಂ ಪ್ರತಿನಿಧಿಗಳು ಅಥವಾ ತಾಂತ್ರಿಕ ಸಹಾಯವಾಣಿ ಸಿಬಂದಿ ಎಂದು ಹೇಳಿ ಕರೆ ಮಾಡುವ ವಂಚಕರು ಸಿಮ್ ಅಪ್ಡೇಟ್, 5ಜಿ ಅಕ್ಟಿವೇಶನ್, ಆಫರ್ ವೆರಿಫಿಕೇಶನ್ ಇತ್ಯಾದಿ ಹೆಸರಲ್ಲಿ ಬಲೆಗೆ ಬೀಳಿಸಿ ಯುಎಸ್ಎಸ್ ಕೋಡ್ ಗಳನ್ನು ಡಯಲ್ ಮಾಡಲು ಹೇಳಿ ವಂಚಿಸುತ್ತಿದ್ದಾರೆ. ಈ ಕೋಡ್ ನಂಬರ್ ಗಳಿಗೆ ಕರೆ ಮಾಡಿದ ಕೂಡಲೇ ಫೋನ್ ಹ್ಯಾಕ್ ಆಗಿ ವಂಚಕರ ಜಾಲಕ್ಕೆ ಬೀಳುತ್ತಿದ್ದು, ಮೊಬೈಲ್ ಮೂಲಕ ಬ್ಯಾಂಕ್ ಖಾತೆಯ ಮಾಹಿತಿ ಪಡೆದು ಹಣವನ್ನು ಪೀಕಿಸುತ್ತಾರೆ.

ಚರ್ಚ್, ಮಸೀದಿ, ದೇವಸ್ಥಾನಗಳಿಗೆ ಆಯಾ ಭಾಗದ ಪೊಲೀಸರನ್ನೇ ಕಳುಹಿಸುತ್ತಿದ್ದು, ಆಯಾ ಭಾಷೆಯಲ್ಲೇ ಜನರಿಗೆ ತಿಳಿಹೇಳುತ್ತಿರುವುದು ವಿಶೇಷ. ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಸೂಚನೆಯಂತೆ ಸೈಬರ್ ಅಪರಾಧಗಳ ಬಗ್ಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಶೇಷ ರೀತಿಯ ಅಭಿಯಾನಗಳಾಗುತ್ತಿದ್ದು, ಜನಜಾಗೃತಿ ನಡೆಸುತ್ತಿದ್ದಾರೆ. ಆಮೂಲಕ ಸೈಬರ್ ವಂಚಕರಿಗೆ ನೇರವಾಗಿ ಗುನ್ನಾ ಇಡಲು ಪೊಲೀಸರು ಮುಂದಾಗಿದ್ದಾರೆ.