Inspector Sandesh, Mangalore: ಮೂಡುಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ವಿರುದ್ಧ ಆರೋಪ ಪ್ರಕರಣ ; ಸುಮತಿ ನಾಯ್ಕ್ ಮಾನಗೆಟ್ಟವಳು, ಹಲವರ ಬಗ್ಗೆ ಕೇಸು ಕೊಟ್ಟು ಆರೋಪ ಮಾಡಿದ್ದಾಳೆ, ಅಕ್ಕನಿಂದಲೇ ತಿರುಗೇಟು

17-03-26 01:55 pm       HK News Staffer   ಕರಾವಳಿ

ಮೂಡುಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ವಿಚಾರದಲ್ಲಿ ಆರೋಪ ಮಾಡಿದ್ದ ಸುಮತಿ ನಾಯ್ಕ್ ವಿರುದ್ಧವೇ ಆರೋಪ ಕೇಳಿಬಂದಿದೆ. ಸುಮತಿ ನಾಯ್ಕ್ ನಮ್ಮ ಕುಟುಂಬದ ಮಾನ ಮರ್ಯಾದೆ ತೆಗಿದಿದ್ದಾಳೆ.‌

ಮಂಗಳೂರು, ಮಾರ್ಚ್ 17: ಮೂಡುಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ವಿಚಾರದಲ್ಲಿ ಆರೋಪ ಮಾಡಿದ್ದ ಸುಮತಿ ನಾಯ್ಕ್ ವಿರುದ್ಧವೇ ಆರೋಪ ಕೇಳಿಬಂದಿದೆ. ಸುಮತಿ ನಾಯ್ಕ್ ನಮ್ಮ ಕುಟುಂಬದ ಮಾನ ಮರ್ಯಾದೆ ತೆಗಿದಿದ್ದಾಳೆ.‌ ಆಕೆ ಮಾನಗೆಟ್ಟವಳಾಗಿದ್ದು, ಮಡಿವಾಳ ಠಾಣೆಯಲ್ಲಿ ಆಕೆಯ ವಿರುದ್ಧ ವೇಶ್ಯಾವಾಟಿಕೆ ಕೇಸ್ ಇದೆ.  ಹಲವಾರು ಅಧಿಕಾರಿಗಳ ವಿರುದ್ಧ ಇದೇ ರೀತಿ ಆರೋಪ ಮಾಡಿದ್ದಾಳೆ ಎಂದು ಆಕೆಯ ಅಕ್ಕ ಪ್ರಫುಲ್ಲ ನಾಯ್ಕ್ ಆರೋಪಿಸಿದ್ದಾರೆ. ‌

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನ ಕೌಟುಂಬಿಕ ಕಲಹದ ಬಗ್ಗೆ ಮೂಡುಬಿದ್ರೆ ಠಾಣೆಗೆ ದೂರು ನೀಡಿದ್ದಾಗ, ನನ್ನ ಗಂಡನ ಪರವಾಗಿ ಅವಳು ಠಾಣೆಗೆ ಬಂದಿದ್ದಳು. ಠಾಣೆಯಲ್ಲಿ ಬೊಬ್ಬೆ ಹಾಕಿ ಮಾತನಾಡಿದ್ದಕ್ಕೆ ಇನ್ಸ್ ಪೆಕ್ಟರ್ ಬೈದಿದ್ದು, ಈ ವೇಳೆ ಅವಳ ಮಗ ವಿಡಿಯೋ ಮಾಡಿದ್ದಕ್ಕೆ ಜೋರು ಮಾಡಿದ್ದರು. ಆನಂತರ, ಆಕೆಯ ಮಗ ನನಗೆ ಹೊಡೆಯಲು ಬರುವಾಗ ಇನ್ಸ್ ಪೆಕ್ಟರ್ ಸಂದೇಶ್ ಆತನಿಗೆ ಎರಡೇಟು ಬಿಗಿದು ಠಾಣೆಯೊಳಗೆ ಕೂರಿಸಿದ್ದರು. 

ಇದೇ ನೆಪದಲ್ಲಿ ಒಂದು ವರ್ಷದಿಂದ ಸುಮತಿ ನಾಯ್ಕ್ ಸಂದೇಶ್ ವಿರುದ್ಧ ಈ ರೀತಿ ಹಗೆತನ ಮಾಡುತ್ತಿದ್ದಾಳೆ.‌ ಸಂದೇಶ್ ಅವರನ್ನು ಇನ್ಸ್ ಪೆಕ್ಟರ್ ಹುದ್ದೆಯಿಂದ ತೆಗೆದು ಹಾಕಬೇಕು ಎಂದು ಈ ರೀತಿ ಮಾಡುತ್ತಿದ್ದಾಳೆ.‌ ಇದೇ ರೀತಿ ಹಲವಾರು ಮಂದಿಯ ವಿರುದ್ಧ ದೂರು ಕೊಟ್ಟು ಕಿರುಕುಳ ನೀಡಿದ್ದಾಳೆ. ಅವಳಿಂದಾಗಿ ಸಮಾಜದಲ್ಲಿ ನಾವು ತಲೆಯೆತ್ತಿ ನಿಲ್ಲದಂತಾಗಿದೆ ಎಂದು ಪ್ರಫುಲ್ಲ ನಾಯ್ಕ್ ಹೇಳಿದರು. 

ಆಕೆಗೆ ಮದುವೆಯಾಗಿ ಗಂಡ ತೀರಿ ಹೋಗಿದ್ದಾನೆ, 17 ವರ್ಷದ ಮಗ ಇದ್ದಾನೆ. ಇದಲ್ಲದೆ, ನನ್ನ ಮಗನನ್ನೂ ಆಕೆಯ ಜೊತೆಗೆ ಇರಿಸಿಕೊಂಡಿದ್ದಾಳೆ. ಏನೂ ಕೆಲಸ ಇಲ್ಲದಿದ್ದರೂ ಬೆಂಗಳೂರಿನಲ್ಲಿದ್ದು ಸಾಕಷ್ಟು ಹಣ ಮಾಡಿದ್ದಾಳೆ. ಹಣದ ದರ್ಪದಲ್ಲಿ ನನ್ನ ಕುಟುಂಬವನ್ನೂ ಹಾಳು ಮಾಡಿದ್ದಾಳೆ. ನನ್ನ ಗಂಡನೂ ಮೂರು ತಿಂಗಳು ಆಕೆಯ ಜೊತೆಗಿದ್ದು ಅವಳ ಅನಾಚಾರ ತಿಳಿದು ಮತ್ತೆ ಬಂದಿದ್ದಾರೆ. ಸಂದೇಶ್ ಒಳ್ಳೆಯವರಾಗಿದ್ದು ನನ್ನ ಕುಟುಂಬದ ವಿಷಯದಲ್ಲಿ ಅವಳು ಬಂದಿದ್ದು ಯಾಕೆಂದು ಬೈದಿದ್ದು ತಪ್ಪಾ ಎಂದು ಪ್ರಶ್ನಿಸಿದರು. 

'ಮೂಡುಬಿದ್ರೆ ಸದ್ಯ ಗಲಾಟೆ ಇಲ್ಲದೆ ನೀಟಾಗಿರುವುದಕ್ಕೆ ಸಂದೇಶ್ ಕಾರಣ. ಅವರಿಂದಾಗಿ ಮೂಡುಬಿದ್ರೆಗೆ ಒಳ್ಳೆಯದಾಗಿದೆ, ಹಿಂದೆ ಗಾಂಜಾ, ಡ್ರಗ್ಸ್, ಗಲಾಟೆ ಇತ್ತು. ಸಂದೇಶ್ ಯಾವುದೇ ಅಸಭ್ಯ ರೀತಿ ವರ್ತಿಸಿದ್ದಕ್ಕೆ ಸಾಕ್ಷಿ ಇಲ್ಲ. ಯಾರೋ ಆರೋಪ ಹೇಳ್ತಾರೆ ಅಂತ ಒಬ್ಬ ಅಧಿಕಾರಿ ಬಗ್ಗೆ ನಿರ್ಣಯ ತಗೊಳ್ಳುವುದು ತಪ್ಪಾಗುತ್ತದೆ. ಆರೋಪಗಳಿದ್ದರೆ ತನಿಖೆಯಾಗಲಿ' ಎಂದು ಸುವರ್ಣ ಕರ್ನಾಟಕ ಸಮಿತಿಯ(ದಸಂಸ) ವರ್ತೂರು ಮಂಜುನಾಥ್ ಹೇಳಿದರು. ತಾನು ಮೂಲತಃ ಬೆಂಗಳೂರಿನವನಾಗಿದ್ದು ಮೂಡುಬಿದ್ರೆಯಿಂದ ಮದುವೆಯಾಗಿ ಮೂರು ವರ್ಷಗಳಿಂದ ಇಲ್ಲಿದ್ದೇನೆ, ಸಂದೇಶ್ ಬಗ್ಗೆ ತಿಳಿದುಕೊಂಡಿದ್ದೇನೆ. ಸಂಬಂಧಿಕರ ಜೊತೆಗೆ ಡ್ಯಾನ್ಸ್ ಮಾಡಿದರೆ ತಪ್ಪಾಗುತ್ತಾ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಸದಸ್ಯ ಹರೀಶ್ ಜೊತೆಗಿದ್ದರು.