ಗ್ಯಾಸ್ ಬಿಲ್ ನಲ್ಲಿ 20 ರು. ಬಾಕಿ ಇದೆಯೆಂದು ಸೈಬರ್ ವಂಚಕರ ದಾಳ ; ಉಡುಪಿಯ ದಂಪತಿಯಿಂದ 9.78 ಲಕ್ಷ ಪೀಕಿಸಿದ ಖದೀಮರು

19-03-26 02:51 pm       HK News Staffer   ಕರಾವಳಿ

ಗಲ್ಫ್ ಯುದ್ದದಿಂದಾಗಿ ಉಂಟಾಗಿರುವ ಎಲ್ ಪಿಜಿ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು ಇದೀಗ ಗ್ಯಾಸ್ ಸಿಲಿಂಡರ್ ಕುರಿತಾಗಿ ಮೆಸೇಜ್ ಗಳನ್ನು ಕಳುಹಿಸಿ ಅಮಾಯಕರನ್ನು ಬಲೆಗೆ ಬೀಳಿಸಲು ಮುಂದಾಗಿದ್ದಾರೆ. ಉಡಪಿಯಲ್ಲಿ ಇತ್ತೀಚೆಗೆ ಇಂತಹ ಎರಡು ಪ್ರಕರಣಗಳು ಬೆಳಕಿಗೆ ಬಂದಿದೆ.

ಉಡುಪಿ, ಮಾರ್ಚ್ 19: ಗಲ್ಫ್ ಯುದ್ದದಿಂದಾಗಿ ಉಂಟಾಗಿರುವ ಎಲ್ ಪಿಜಿ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು ಇದೀಗ ಗ್ಯಾಸ್ ಸಿಲಿಂಡರ್ ಕುರಿತಾಗಿ ಮೆಸೇಜ್ ಗಳನ್ನು ಕಳುಹಿಸಿ ಅಮಾಯಕರನ್ನು ಬಲೆಗೆ ಬೀಳಿಸಲು ಮುಂದಾಗಿದ್ದಾರೆ. ಉಡಪಿಯಲ್ಲಿ ಇತ್ತೀಚೆಗೆ ಇಂತಹ ಎರಡು ಪ್ರಕರಣಗಳು ಬೆಳಕಿಗೆ ಬಂದಿದೆ. 

ಕೇವಲ 20 ರೂ. ಗ್ಯಾಸ್‌ ಬಿಲ್‌ ಬಾಕಿ ಇದೆ ಎಂದು ನಂಬಿಸಿ, ವೃದ್ಧ ದಂಪತಿಗಳ ಬ್ಯಾಂಕ್‌ ಖಾತೆಯಿಂದ ಸುಮಾರು ₹9.78 ಲಕ್ಷ ಹಣವನ್ನು ಲೂಟಿ ಮಾಡಿರುವ ಘಟನೆ ಉಡುಪಿ ನಗರದ ಶಿವಳ್ಳಿಯಲ್ಲಿ ನಡೆದಿದೆ. ಶಿವಳ್ಳಿ ನಿವಾಸಿ ರವಿದಾಸ್‌ ರಾಘವೇಂದ್ರ ನಾಯಕ್‌ ಅವರಿಗೆ ಮಾರ್ಚ್ 17ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಗ್ಯಾಸ್‌ ಬಿಲ್‌ ₹20 ಬಾಕಿ ಇದೆ ಎಂದು ತಿಳಿಸಿದ್ದಾನೆ. ಬಳಿಕ ವಾಟ್ಸಾಪ್‌ ಮೂಲಕ ‘Mahangar Gas Bill Update.apk’ ಎಂಬ ಲಿಂಕ್‌ ಕಳುಹಿಸಿ, ಅದನ್ನು ಡೌನ್‌ಲೋಡ್‌ ಮಾಡುವಂತೆ ಸೂಚಿಸಿದ್ದಾನೆ. ರವಿದಾಸ್‌ ಅವರು ಆ ಲಿಂಕ್‌ ಒತ್ತಿದ ತಕ್ಷಣ ಅವರ ಫೋನ್‌ ಹ್ಯಾಕ್‌ ಆಗಿದೆ. 

ಬಿಲ್‌ ಪಾವತಿಯಾಗಿಲ್ಲ ಎಂಬ ನೆಪವೊಡ್ಡಿ ಆರೋಪಿ ದಂಪತಿಗಳ ಬಂಧನ್‌ ಬ್ಯಾಂಕ್‌, ಯೆಸ್‌ ಬ್ಯಾಂಕ್‌ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕಿನ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ವಿವರಗಳನ್ನು ಪಡೆದಿದ್ದಾನೆ. ಕ್ಷಣಾರ್ಧದಲ್ಲಿ ಮೂರೂ ಬ್ಯಾಂಕ್‌ ಖಾತೆಗಳಿಂದ ಒಟ್ಟು ₹9,78,036.50/- ಹಣವನ್ನು ವರ್ಗಾಯಿಸಿ ವಂಚಿಸಿದ್ದಾನೆ. ಈ ಕುರಿತು ಉಡುಪಿ ಸೈಬರ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಐಟಿ ಆಕ್ಟ್‌ ಹಾಗೂ ಬಿಎನ್‌ಎಸ್‌ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಕುರಿತಂತೆ ಮಾಹಿತಿ ನೀಡಿರುವ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಸೈಬರ್ ವಂಚನೆಯ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ತಿಳಿಸಿದ್ದಾರೆ. ಗ್ಯಾಸ್ ಅಭಾವವನ್ನು ಬಂಡವಾಳ ಮಾಡಿಕೊಂಡು ಸೈಬರ್ ವಂಚಕರು ಗ್ಯಾಸ್ ಬುಕ್ಕಿಂಗ್ ಅಥವಾ ಗ್ಯಾಸ್ ಸಿಲಿಂಡರ್ ಕೆವೈಸಿ ಅಪ್‌ಡೇಟ್ ಹೆಸರಿನಲ್ಲಿ ಮೋಸ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಅಪರಿಚಿತರಿಂದ ಬರುವ ಲಿಂಕ್‌ಗಳು ಅಥವಾ ಎಪಿಕೆ ಫೈಲ್‌ಗಳನ್ನು ತೆರೆಯದೇ ಜಾಗರೂಕರಾಗಿರಬೇಕು ಎಂದು ತಿಳಿಸಿದ್ದಾರೆ. ಈ ರೀತಿಯ ವಂಚನೆಗೆ ಈಗಾಗಲೇ ಉಡುಪಿ ಜಿಲ್ಲೆಯ ಇಬ್ಬರು ವ್ಯಕ್ತಿಗಳು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವುದಾಗಿ ತಿಳಿದುಬಂದಿದೆ. ಸಾರ್ವಜನಿಕರು ಯಾವುದೇ ಅನುಮಾನಾಸ್ಪದ ಸಂದೇಶಗಳು, ಕರೆಗಳು ಅಥವಾ ಲಿಂಕ್‌ಗಳ ಬಗ್ಗೆ ಎಚ್ಚರಿಕೆ ವಹಿಸಿ, ಅಧಿಕೃತ ಮೂಲಗಳ ಮೂಲಕವೇ ಗ್ಯಾಸ್ ಬುಕ್ಕಿಂಗ್ ಹಾಗೂ ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಎಸ್ಪಿ ಮನವಿ ಮಾಡಿದ್ದಾರೆ.