ಉಪ ಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಸಂಬಂಧ ಇಲ್ಲ ; ಗಲ್ಫ್ ಯುದ್ಧದಿಂದಾಗಿ ಕೋವಿಡ್ ರೀತಿಯ ಸ್ಥಿತಿಯಾಗಿದೆ, ಸಮಸ್ಯೆ ಇಲ್ಲ ಅಂತ ಸುಳ್ಳು ಹೇಳಬಾರದು!

10-04-26 06:05 pm       Mangalore Correspondent   ಕರಾವಳಿ

ಉಪ ಚುನಾವಣೆ ಫಲಿತಾಂಶಕ್ಕೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ. ಈ ವಿಚಾರಗಳ ಬಗ್ಗೆ ಸಿಎಂ, ಡಿಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಇಂತಹ ವಿಚಾರಗಳ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ. ನಾವು ಚರ್ಚೆ ಮಾಡುವ ಅಗತ್ಯ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳೂರು, ಎಪ್ರಿಲ್ 10: ಉಪ ಚುನಾವಣೆ ಫಲಿತಾಂಶಕ್ಕೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ. ಈ ವಿಚಾರಗಳ ಬಗ್ಗೆ ಸಿಎಂ, ಡಿಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಇಂತಹ ವಿಚಾರಗಳ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ. ನಾವು ಚರ್ಚೆ ಮಾಡುವ ಅಗತ್ಯ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಎರಡು ಕ್ಷೇತ್ರದಲ್ಲೂ ಗೆಲುವಿನ ಬಲವಾದ ನಿರೀಕ್ಷೆಗಳು ಇವೆ. ಒಳ್ಳೆ ಫಲಿತಾಂಶ ಬರುವ ಬಗ್ಗೆ ನೂರಕ್ಕೆ ನೂರು ವಿಶ್ವಾಸವಿದೆ. ನಾವು ಎಲ್ಲ ವರ್ಗ, ಎಲ್ಲ ಧರ್ಮದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡ್ತೇವೆ. ನಮ್ಮಲ್ಲಿ ಯಾರನ್ನೂ ದೂರ ಮಾಡುವ ಪ್ರಶ್ನೆ ಬರಲ್ಲ. ಒಂದು ಕೋಮು ಇನ್ನೊಂದು ಕೋಮು ಅಂತ ಸೀಮಿತ ‌ಮಾಡುವುದಕ್ಕಿಲ್ಲ. ಚುನಾವಣೆ ಸಂದರ್ಭ ಟಿಕೇಟ್ ಸಿಕ್ಕಿಲ್ಲ ಅಂತ ಕೆಲ‌ ಆಕಾಂಕ್ಷಿಗಳಿಗೆ ನೋವು ಇರಬಹುದು. ಅದರಿಂದ ದೊಡ್ಡ ಸಮಸ್ಯೆ ಆಗಲ್ಲ. ನಮ್ಮವರೆಲ್ಲಾ ಹೋಗಿ ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ.‌ 

ಬಿಜೆಪಿಯಲ್ಲಿ ಲಿಂಗಾಯತರಿಗೆ ಕೊಟ್ಟಿಲ್ಲ. ಹಾಗಂತ ಲಿಂಗಾಯತರು ಯಾರು ಓಟು ಹಾಕಿಲ್ಲ ಅಂತಾ ಹೇಳೋಕೆ ಆಗುತ್ತಾ? ದಾವಣಗೆರೆಯಲ್ಲಿ ಹೆಚ್ಚಿನ ಅಂತರದಲ್ಲಿ ನಮ್ಮ ಅಭ್ಯರ್ಥಿ ಗೆಲ್ತಾರೆ ಎಂದು ಗುಂಡೂರಾವ್ ಹೇಳಿದರು. 

ಗಲ್ಫ್ ಯುದ್ಧದಿಂದಾಗಿ ಔಷಧಿ ಪೂರೈಕೆಗೆ ತೊಂದರೆ ಆಗಿರುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಧ್ಯ ಪ್ರಾಚ್ಯದಿಂದ ಬರ್ತಿದ್ದ ಕೆಲ ಔಷಧಿಗಳ ಪೂರೈಕೆ ಆಗ್ತಿಲ್ಲ. ಔಷಧ ಪೂರೈಕೆಗೆ ಸಮಯ ಕೇಳ್ತಿದ್ದಾರೆ. ಈ ಹಿಂದೆ ಕೊಟ್ಟಿರುವ ಆರ್ಡರ್ ಗಳ‌ ಡೆಲಿವರಿ ಮಾಡೋಕೆ ಆಗ್ತಿಲ್ಲ. 30 ದಿನ‌‌ ಸಮಯ ಕೊಡಿ ಅಂತಾ ಕೇಳ್ತಿದ್ದಾರೆ. ಮೆಡಿಸಿನ್ ತಯಾರಿಕೆ ಮಾಡೋರಿಗೂ ಕಚ್ಚಾವಸ್ತುಗಳು ಬರ್ತಿಲ್ಲ, ಶಾರ್ಟೇಜ್ ಇದೆ ಅಂತೆ.‌ ಈ ಬಗ್ಗೆ ಕಂಪನಿಯವರು ನಮಗೆ ಪತ್ರ ಬರೆದಿದ್ದಾರೆ. ಕೆಲ ಮೆಡಿಸಿನ್ ಗಳ ಬೆಲೆಯೂ ಏರಿಕೆಯಾಗಿದೆ.‌

ಗ್ಯಾಸ್ ಕೊರತೆಯ ಕಾರಣ ಮೆಡಿಸಿನ್ ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ. ಇದು ಆಗದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. ಸ್ಥಳೀಯ ತಯಾರಕರಿಗೆ ಗ್ಯಾಸ್, ಇಂಧನ ಸಮಸ್ಯೆಯಾದ್ರೆ ಕಷ್ಟ ಆಗಬಹುದು. ಸದ್ಯ ಆತಂಕ ಪಡುವ ಅಗತ್ಯವಿಲ್ಲ.‌ ಕದನ ವಿರಾಮ ಆದ್ರೆ ನಮಗೆ ಸಮಸ್ಯೆ ಇಲ್ಲ. ಆಯಿಲ್, ಪೆಟ್ರೋಲಿಯಂ ಸೆಕ್ಟರ್ ನ ಎಲ್ಲಾ ಕಂಪನಿಗಳಿಗೆ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರ ಬೇರೆ ಬೇರೆ ದೇಶದಿಂದ ಖರೀದಿ ಮಾಡುವ ವ್ಯವಸ್ಥೆ ಮಾಡಬೇಕು. 

ಬಹಳ‌ ದೊಡ್ಡ ಜವಾಬ್ದಾರಿ ಕೇಂದ್ರದ ಮೇಲೆ ಇದೆ.‌ ರಾಜ್ಯದಲ್ಲಿ ಗ್ಯಾಸ್ ಸಮಸ್ಯೆ ಇದೆ ಅಂತಾ ಸ್ಪಷ್ಟವಾಗಿ ಹೇಳಬೇಕು, ಸುಮ್ಮನೆ ಸಮಸ್ಯೆ ಇಲ್ಲ‌ ಅಂತ ಹೇಳಬಾರದು.‌ ಅನೇಕ‌ ಕಡೆ ತಯಾರಿಕೆ 50% ಕ್ಕೆ ಇಳಿಸಿದ್ದಾರೆ.‌ ಕೋವಿಡ್ ಸಂದರ್ಭದ ಪರಿಸ್ಥಿತಿಯಂತಾಗಿದೆ.‌ ಎಲ್ಲಾ ಚೆನ್ನಾಗಿದೆ ಅಂತ ಹೇಳಿ ಜನರನ್ನು ದಾರಿ ತಪ್ಪಿಸಬಾರದು.‌ ನಾವು ಕೇಂದ್ರ ಸರ್ಕಾರವೇ ಹೊಣೆ ಅಂತಾ ಹೇಳೊದಕ್ಕೆ ಆಗಲ್ಲ. ಪರ್ಯಾಯ ಕ್ರಮ, ನಿಜಾಂಶವನ್ನು ಜನರ ಮುಂದಿಡಬೇಕು.‌ ಎಲ್ಲಾ ಕಡೆ ಕಮರ್ಷಿಯಲ್ ಗ್ಯಾಸ್ ಗೆ ತೊಂದರೆ ಇದೆ. ಸಮಸ್ಯೆ ಇದ್ದಾಗ ಇಲ್ಲ ಅಂತಾ ಹೇಳಿದ್ರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.‌