ಬುರುಡೆ ಗ್ಯಾಂಗ್ ಹೆಸರಿನಲ್ಲಿ ಹಾಸ್ಯ ; ಕಲಾವಿದರಿಗೆ ನಿಂದಿಸಿದ್ದಕ್ಕೆ ತಿಮರೋಡಿ ವಿರುದ್ಧ ಮತ್ತೆರಡು ಎಫ್ಐಆರ್, ಪೆದಂಬು ನಮಗೂ ಗೊತ್ತಿದೆ, ಅದಕ್ಕಿಂತ ಕೆಟ್ಟ ಪದಗಳು ನಮ್ಮಲ್ಲೂ ಇವೆ !

17-04-26 03:02 pm       HK News Staffer   ಕರಾವಳಿ

ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆ ಮತ್ತು ಮಹಿಳಾ ಠಾಣೆಯಲ್ಲಿ ಮತ್ತೆರಡು ಎಫ್ಐಆರ್ ದಾಖಲಾಗಿದೆ. ರಂಗಭೂಮಿ ಕಲಾವಿದ ಸುಂದರ ರೈ ಮಂದಾರ ಮತ್ತು ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ್ ಕೋಡಪದವು ಅವರ ತಾಯಿ ಹೆಸರಿನಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

ಮಂಗಳೂರು, ಎಪ್ರಿಲ್ 17: ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆ ಮತ್ತು ಮಹಿಳಾ ಠಾಣೆಯಲ್ಲಿ ಮತ್ತೆರಡು ಎಫ್ಐಆರ್ ದಾಖಲಾಗಿದೆ. ರಂಗಭೂಮಿ ಕಲಾವಿದ ಸುಂದರ ರೈ ಮಂದಾರ ಮತ್ತು ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ್ ಕೋಡಪದವು ಅವರ ತಾಯಿ ಹೆಸರಿನಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

ಆರು ತಿಂಗಳ ಹಿಂದೆ ಮಂಗಳೂರಿನ ಸ್ಥಳೀಯ ಕೇಬಲ್ ವಾಹಿನಿಯಲ್ಲಿ ಪ್ರಸಾರಗೊಂಡ ಯಕ್ಷಗಾನ- ಹಾಸ್ಯ ಮಿಶ್ರಿತ ಬುರುಡೆ ಗ್ಯಾಂಗ್ ಹೆಸರಿನ ಕಾರ್ಯಕ್ರಮದಲ್ಲಿ ಕಲಾವಿದರು ವಿಡಂಬನಾತ್ಮಕವಾಗಿ ಚಿತ್ರಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿ ಹೆಸರೆತ್ತದೆ ವಿಡಂಬನೆ ಮಾಡಿದ್ದನ್ನು ಮಹೇಶ್ ಶೆಟ್ಟಿ ತಿಮರೋಡಿ, ಕಲಾವಿದ ಪ್ರಜ್ವಲ್ ಗುರುವಾಯನಕೆರೆ ಅವರಿಗೆ ಫೋನ್ ಮಾಡಿ ಪ್ರಶ್ನಿಸಿದ್ದಲ್ಲದೆ, ಸುಂದರ ರೈ ಮತ್ತು ದಿನೇಶ್ ಕೋಡಪದವು ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು.

ಫೋನ್ ಕರೆಯನ್ನು ಪ್ರಜ್ವಲ್ ರೆಕಾರ್ಡ್ ಮಾಡಿಕೊಂಡಿದ್ದು ಸುಂದರ ರೈ ಮತ್ತು ದಿನೇಶ್ ಅವರಿಗೆ ಕೊಟ್ಟಿದ್ದರು. ತಾಯಿ ಮತ್ತು ಮನೆಯ ಹೆಣ್ಮಕ್ಕಳಿಗೆ ಅವಾಚ್ಯ ಪದಗಳಿಂದ ನಿಂದಿಸಿರುವುದನ್ನು ಮುಂದಿಟ್ಟು ಕಲಾವಿದರಿಬ್ಬರು ಪೊಲೀಸ್ ದೂರು ಕೊಟ್ಟಿದ್ದಾರೆ. ಈಗಾಗಲೇ ಮಹೇಶ್ ಶೆಟ್ಟಿ ವಿರುದ್ಧ ಗಡೀಪಾರು ಆದೇಶವಿದ್ದು ಹೈಕೋರ್ಟಿನಲ್ಲಿ ಪರ- ವಿರೋಧ ಹೋರಾಟ ನಡೆಯುತ್ತಿದೆ. ಇದರ ನಡುವಲ್ಲೇ ಕಲಾವಿದರ ಕಡೆಯಿಂದಲೂ ದೂರು ನೀಡಲ್ಪಟ್ಟಿರುವುದು ತಿಮರೋಡಿಗೆ ಹಿನ್ನಡೆಯಾಗಲಿದೆ.

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಸುಂದರ ರೈ ಮಂದಾರ ಮತ್ತು ಇತರ ಕಲಾವಿದರು, ನಾವೇನೂ ಧರ್ಮಸ್ಥಳ ಘಟನೆಯನ್ನು ಅಥವಾ ಮಹೇಶ್ ಶೆಟ್ಟಿ ತಿಮರೋಡಿಯನ್ನು ಉಲ್ಲೇಖಿಸಿಲ್ಲ. ಅಲ್ಲಿನ ಘಟನೆಗೂ ನಮ್ಮ ಹಾಸ್ಯ ಕಾರ್ಯಕ್ರಮಕ್ಕೂ ಸಂಬಂಧವೇ ಇಲ್ಲ. ಸುಳ್ಳಿನ ಮೂಲಕ ಪ್ರಭಾವಿ ವ್ಯಕ್ತಿಯನ್ನು ತೇಜೋವಧೆ ಮಾಡುವುದು ಮತ್ತು ಕೊನೆಯಲ್ಲಿ ಸಮಾಜಕ್ಕೆ ಮೆಸೇಜ್ ಕೊಡುವ ಕತೆಯಿದೆ. ನಮ್ಮ ಭಾಗವತ ಧೀರಜ್ ರೈ ಮತ್ತು ದಿನೇಶ್ ಕೋಡಪದವು ಕತೆ ಹೆಣೆದಿದ್ದು ಕೇಬಲ್ ವಾಹಿನಿಯ ಮುಖ್ಯಸ್ಥರು ಬುರುಡೆ ಗ್ಯಾಂಗ್ ಎಂದು ಹೆಸರು ಸೂಚಿಸಿದ್ದರು. ಅದು ಪ್ರಸಾರಗೊಂಡು ಯೂಟ್ಯೂಬ್ ನಲ್ಲಿದ್ದು ಇಷ್ಟು ದಿನಗಳ ಬಳಿಕ ಮಹೇಶ್ ಶೆಟ್ಟಿ ಮೊನ್ನೆ ಕರೆ ಮಾಡಿ ನಮಗೆ ನಿಂದಿಸಿದ್ದಾರೆ.

ನಾವು ಕಲಾವಿದರು ಸಮಾಜದ ಆಸ್ತಿಯಾಗಿದ್ದು, ಸ್ವಾಭಾವಿಕ ಬೈಗುಳ ಏನಿದ್ದರೂ ಸ್ವೀಕರಿಸುತ್ತೇವೆ, ಆದರೆ ತಂದೆ, ತಾಯಿ, ಮನೆಯ ಹೆಣ್ಮಕ್ಕಳಿಗೆ ಅವಾಚ್ಯ ನಿಂದಿಸಿದ್ದಾರೆ. ಇದನ್ನು ಕೇಳಿಯೂ ಹಾಗೇ ಕುಳಿತುಕೊಂಡರೆ ನಮಗೆ ಮರ್ಯಾದೆ ಇಲ್ಲ. ನ್ಯಾಯ ಕೇಳಿ ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಇದರಲ್ಲಿ ಯಾರದ್ದೇ ಒತ್ತಡ ಇಲ್ಲ ಎಂದು ಸುಂದರ ರೈ ಹೇಳಿದರು.

ದಿನೇಶ್ ಕೋಡಪದವು ಮಾತನಾಡಿ, ಆ ಜನ ಪೆದಂಬು ಎಂದು ಹೇಳುತ್ತದೆ, ನಮಗೂ ಅದಕ್ಕಿಂತ ಕೆಟ್ಟ ಪದಗಳ ಪೆದಂಬು ಗೊತ್ತಿದೆ. ನನಗೆ ಫೋನ್ ಮಾಡುತ್ತಿದ್ದರೆ ಅದೇ ರೀತಿಯಲ್ಲಿ ಪ್ರತಿಕ್ರಿಯೆ ಕೊಡುತ್ತಿದ್ದೆ. ನಾವು ಅದೇ ರೀತಿಯಲ್ಲಿ ಬೈದರೆ ಅರ್ಥ ಮಾಡಿಕೊಳ್ಳಲು ಎರಡು ದಿನ ಬೇಕಾದೀತು. ಇವರ ಬಗ್ಗೆ ಗೌರವ ಇತ್ತು, ಈಗ ಅದೂ ಹೋಯ್ತು. ನಾವು ದುಡಿದು ತಿನ್ನುವವರು. ನಾಲಗೆಯೇ ನಮ್ಮ ಆಸ್ತಿ. ಹಾಸ್ಯ ಮಾಡಿದ್ದಕ್ಕೆ ಜನ ಗುರುತಿಸಿದ್ದಾರೆ. ಹಾಗಂತ, ಅವಾಚ್ಯ ನಿಂದನೆಯನ್ನು ಕೇಳಿಕೊಂಡು ಕುಳಿತುಕೊಳ್ಳುವ ಮನಸ್ಥಿತಿ ಇಲ್ಲ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಕಲಾವಿದ ಪ್ರಜ್ವಲ್ ಗುರುವಾಯನಕೆರೆ, ಭಾಗವತ ಧೀರಜ್ ರೈ ಸಂಪಾಜೆ ಇದ್ದರು.