ಕೈಟ್ ಫೆಸ್ಟಿಗೆ ನೆರವು, ಬೋಟ್ ಹೌಸಿಗೆ ಪೊಲೀಸರ ಕಾಟ ; ಸಂವಾದದಲ್ಲಿ ಸಚಿವ ಯೋಗಿಗೆ ಸಲಹೆ, ದೂರು

20-03-21 06:10 pm       Mangalore Correspondent   ಕರಾವಳಿ

ಆಕರ್ಷಕವಾಗಿ ಮತ್ತು ಪ್ರವಾಸಿಗರನ್ನು ಸೆಳೆಯುವ ರೀತಿ ಕಾರ್ಯಕ್ರಮ ಮಾಡುವಂತೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್ ಹೇಳಿದ್ದಾರೆ.

ಮಂಗಳೂರು, ಮಾ.20:ಕೈಟ್ ಫೆಸ್ಟಿವಲ್, ರಿವರ್ ಫೆಸ್ಟಿವಲ್ ಪ್ರತಿವರ್ಷ ಮಾಡುವುದಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಸಹಕಾರ ನೀಡಲಾಗುವುದು. ಇನ್ನೂ ಆಕರ್ಷಕವಾಗಿ ಮತ್ತು ಪ್ರವಾಸಿಗರನ್ನು ಸೆಳೆಯುವ ರೀತಿ ಕಾರ್ಯಕ್ರಮ ಮಾಡುವಂತೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಚಿವರು ತಜ್ಞರ ಜೊತೆ ಸಂವಾದ ನಡೆಸಿದರು. ಪ್ರಮುಖವಾಗಿ ಕರಾವಳಿಯಲ್ಲಿ ಸಾಕಷ್ಟು ಸಂಪನ್ಮೂಲ, ಅವಕಾಶಗಳಿದ್ದರೂ, ಪ್ರವಾಸೋದ್ಯಮ ಇಲಾಖೆ ಮತ್ತು ಅಧಿಕಾರಿಗಳ ಅಸಡ್ಡೆಯಿಂದಾಗಿ ಪ್ರವಾಸಿಗರನ್ನು ಆಕರ್ಷಿಸುವ ಚಟುವಟಿಕೆ ಆಗಿಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪರಿಸರ ಕಾರ್ಯಕರ್ತ ದಿನೇಶ್ ಹೊಳ್ಳ ಮಾತನಾಡಿ, ನಾವು ಪ್ರತಿವರ್ಷ ಕೈಟ್ ಫೆಸ್ಟಿವಲ್ ಮಾಡುತ್ತಿದ್ದೇವೆ. ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದೇವೆ. ಪ್ರವಾಸೋದ್ಯಮ ಇಲಾಖೆಯಿಂದ ಉತ್ತೇಜನ, ಸಹಕಾರ ಸಿಕ್ಕಿದರೆ, ಇನ್ನಷ್ಟು ಉತ್ತಮವಾಗಿ ಮಾಡಬಹುದು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಯೋಗೀಶ್ವರ್, ಗಾಳಿಪಟದ ಬಣ್ಣಗಳು ಎಷ್ಟು ಆಕರ್ಷಕವೋ ಅದೇ ರೀತಿ ಆ ಬಣ್ಣಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಬೇಕು. ಗುಜರಾತಿನಲ್ಲಿ ನಡೆಯೋದಕ್ಕಿಂತಲೂ ಹೆಚ್ಚು ಆಕರ್ಷಕವಾಗಿ ಹೆಚ್ಚು ಮಂದಿ ವಿದೇಶಿಗರನ್ನು ಆಕರ್ಷಿಸುವ ರೀತಿ ಫೆಸ್ಟ್ ಮಾಡಬೇಕು. ಅದಕ್ಕೇನು ಇಲಾಖೆಯಿಂದ ಆಗಬೇಕೋ ಅದನ್ನು ನಾವು ಮಾಡುತ್ತೇವೆ ಎಂದರು.

ಅಧಿಕಾರಿಗಳ ಅನುಮತಿಯೇ ಕಷ್ಟ

ಕೇರಳದ ಬೋಟ್ ಹೌಸ್ ರೀತಿ ಮಂಗಳೂರಿನಲ್ಲೂ ಮಾಡಬೇಕೆಂಬ ಅಭಿಪ್ರಾಯವೂ ಕೇಳಿಬಂತು. ಅಬ್ಬಕ್ಕ ಕ್ವೀನ್ ಕ್ರೂಸ್ ಮಾಲಕರಾದ ಸ್ವೀಕೃತ್, ಬೋಟ್ ಹೌಸ್ ಗೆ ಪೂರಕವಾಗಿ ಮಾತನಾಡಿದರು. ನಾವು ಬೋಟ್ ಹೌಸನ್ನು ಇನ್ನಷ್ಟು ಆಕರ್ಷಕವಾಗಿ ಅಭಿವೃದ್ಧಿ ಪಡಿಸಲು ರೆಡಿ ಇದ್ದೇವೆ. ಆದರೆ, ಸರಕಾರದ 11 ಇಲಾಖೆಗಳಿಂದ ಪ್ರತ್ಯೇಕವಾಗಿ ಅನುಮೋದನೆ ಪಡೆಯುವುದೇ ದೊಡ್ಡ ಕಷ್ಟವಾಗಿದೆ. ವನ್ ವಿಂಡೋ ರೀತಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅನುಮತಿ ನೀಡುವ ಕೆಲಸ ನಡೆದಲ್ಲಿ ಸೂಕ್ತ ಎಂದರು.

ಹಫ್ತಾಕ್ಕಾಗಿ ಪೊಲೀಸರ ಕಾಟ

ಇದೇ ವೇಳೆ, ಅಬ್ಬಕ್ಕ ಕ್ವೀನ್ ಕ್ರೂಸ್ ಪಾಲುದಾರ ಲಕ್ಷ್ಮಣ ಕುಂದರ್ ಮಾತನಾಡಿ, ನಾವು ಕೇರಳದ ರೀತಿ ಎಂಟತ್ತು ಬೋಟ್, ಸ್ಪೀಡ್ ಬೋಟ್ ಅಳವಡಿಸಲು ರೆಡಿ ಇದ್ದೇವೆ. ಆದರೆ, ಅಧಿಕಾರಿ ವರ್ಗದಿಂದ ಅನುಮತಿ ಪಡೆಯುವುದೇ ಕಷ್ಟವಾಗಿದೆ. ಬೋಟ್ ಹೌಸ್ ಗೆ ಪೂರಕವಾಗಿ ಕಲಿ ಪರ್ಕ ಅನ್ನುವ ಪರಿಕಲ್ಪನೆ ಮಾಡಿದ್ದೇವೆ. ಆದರೆ, ಅಲ್ಲಿ ಪೊಲೀಸರು ಹಫ್ತಾಕ್ಕಾಗಿ ಕಾಟ ಕೊಡುತ್ತಿದ್ದಾರೆ. ಮಾಧ್ಯಮದ ವ್ಯಕ್ತಿಯೆಂದು ಗೊತ್ತಿದ್ದರೂ ಮಾಮೂಲಿ ಪಡೆಯಲು ಬರುತ್ತಾರೆ. ಇದರ ಬಗ್ಗೆ ಗಮನಹರಿಸಿ ಜನಸ್ನೇಹಿ ಪೊಲೀಸರನ್ನು ನಿಯೋಜನೆ ಮಾಡುವಂತಾಗಬೇಕು ಎಂದರು.

ಪಿಲಿಕುಳ ನಿಸರ್ಗಧಾಮ ಆಕರ್ಷಕವಾಗಿದ್ದರೂ, ಮಾರ್ಕೆಟಿಂಗ್ ಆಗುತ್ತಿಲ್ಲ. ಪ್ರವಾಸೋದ್ಯಮ ಇಲಾಖೆಯಿಂದ ಮತ್ತು ಕರ್ನಾಟಕ ವಾರ್ತಾ ಇಲಾಖೆ ಮೂಲಕ ಪಿಲಿಕುಳದ ಬಗ್ಗೆ ಪ್ರಚಾರ ಸಿಗಬೇಕು. ಇಲ್ಲಿನ ಆಕರ್ಷಣೆ, ವಿಶಿಷ್ಟವಾಗಿರುವ ಅಕ್ವೇರಿಯಂ ಬಗ್ಗೆ ಪ್ರಚಾರ ಸಿಗಬೇಕು ಎಂದು ಅಭಿಪ್ರಾಯ ಕೇಳಿಬಂತು. ಕೊನೆಗೆ ಪ್ರವಾಸೋದ್ಯಮ ಆಕರ್ಷಣೆಗೆ ಏನೆಲ್ಲ ತಕ್ಷಣದ ಯೋಜನೆಯಿದೆ ಎಂಬ ಬಗ್ಗೆ ಚಿಂತನೆ ನಡೆಸಿ ಐದಾರು ಪ್ರಾಜೆಕ್ಟ್ ರೆಡಿ ಮಾಡುವಂತೆ ಯತೀಶ್ ಬೈಕಂಪಾಡಿಗೆ ಸಚಿವರು ಸೂಚಿಸಿದರು.

ನಿರ್ಮಲಾ ಟ್ರಾವೆಲ್ಸ್ ನ ವಾಟಿಕಾ ಪೈ, ಕೆನರಾ ಚೇಂಬರ್ಸ್ ಅಧ್ಯಕ್ಷ ಐಸಾಕ್, ಇನ್ ಫೋಸಿಸ್ ಸಂಸ್ಥೆಯ ನರೇಂದ್ರನ್ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರು ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಅಹವಾಲು ಹೇಳಿಕೊಂಡರು. ಪಣಂಬೂರು ಬೀಚ್ ಪ್ರಾಧಿಕಾರದ ಸಿಇಓ ಯತೀಶ್ ಬೈಕಂಪಾಡಿ ಸಂವಾದ ನಿರ್ವಹಿಸಿದರು. 

Read: ಹೆಲಿಟೂರಿಸಂ ಉತ್ತೇಜಿಸಲು ರಾಜ್ಯದ ಆರು ಕಡೆ ಹೆಲಿಪೋರ್ಟ್ ; ಯೋಗೀಶ್ವರ್

Mangalore Government to uplift kite festival and river festival to improve tourism said Minister of Tourism, Minister of Ecology & Environment Department C. P. Yogeshwar.