ಬ್ರೇಕಿಂಗ್ ನ್ಯೂಸ್
26-06-23 07:56 pm Mangalore Correspondent ಕ್ರೈಂ
ಮಂಗಳೂರು, ಜೂನ್ 26: ಬೆಳ್ಳಂಬೆಳಗ್ಗೆ ಮನೆಯಂಗಳದ ಬಾವಿಯಿಂದ ನೀರು ಸೇದುತ್ತಿದ್ದ ವೃದ್ಧ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಇಬ್ಬರು ಪರಾರಿಯಾಗಿದ್ದರು. ಜೂನ್ 2ರಂದು ಸುರತ್ಕಲ್ ಠಾಣೆ ವ್ಯಾಪ್ತಿಯ ತಡಂಬೈಲಿನಲ್ಲಿ ನಡೆದ ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇಬ್ಬರು ಕುಖ್ಯಾತ ಸರಕಳ್ಳರನ್ನು ಸೆರೆಹಿಡಿದಿದ್ದಾರೆ. ಮೂಲತಃ ಸುರತ್ಕಲ್ ಕಾಟಿಪಳ್ಳ ನಿವಾಸಿ, ತೊಕ್ಕೊಟ್ಟಿನ ಚೆಂಬುಗುಡ್ಡೆ, ಬಂಟ್ವಾಳದ ಕಲ್ಲಡ್ಕದಲ್ಲಿ ವಾಸ ಮಾಡಿಕೊಂಡಿದ್ದ ಹಬೀಬ್ ಹಸನ್ ಅಲಿಯಾಸ್ ಚೆಂಬುಗುಡ್ಡೆ ಹಬೀಬ್(42) ಮತ್ತು ಉಳ್ಳಾಲದ ಕೋಡಿ ನಿವಾಸಿ ಮಹಮ್ಮದ್ ಫೈಜಲ್ (35) ಬಂಧಿತರು.
ಹಬೀಬ್ ಹಸನ್ ವಿರುದ್ಧ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಬರೋಬ್ಬರಿ 35 ಪ್ರಕರಣ ದಾಖಲಾಗಿದೆ. ಮಹಮ್ಮದ್ ಫೈಜಲ್ ವಿರುದ್ಧ ಉಳ್ಳಾಲ, ಪಾಂಡೇಶ್ವರ, ವಿಟ್ಲ, ಬೆಳ್ತಂಗಡಿ, ಸುರತ್ಕಲ್ ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 15 ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಸುರತ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತನಿಖೆಯಲ್ಲಿ ಒಂಬತ್ತು ಕಡೆಯ ಸರ ಕಳ್ಳತನ ಮತ್ತು ನಾಲ್ಕು ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದನ್ನು ಪತ್ತೆ ಮಾಡಲಾಗಿದೆ.
ಕಾರ್ಕಳ ನಗರ ಠಾಣೆಯ ಕುಕ್ಕಂದೂರಿನ ವೃದ್ಧ ಮಹಿಳೆಯಿಂದ ಸುಲಿಗೆ ಮಾಡಿದ್ದ 36 ಗ್ರಾಮ್ ತೂಕದ ಗುಂಡು, ಹವಳ ಇರುವ 1 ಲಕ್ಷ ರೂ. ಮೌಲ್ಯದ ಲಕ್ಷ್ಮೀ ತಾಳಿ, ಕುಕ್ಕಂದೂರಿನಲ್ಲೇ ಮತ್ತೊಂದು ಪ್ರಕರಣದಲ್ಲಿ ವೃದ್ಧ ಮಹಿಳೆಯ 34 ಗ್ರಾಮ್ ತೂಕದ ಚಿನ್ನದ ತಾಳಿ ಇರುವ 1 ಲಕ್ಷ ಮೌಲ್ಯದ ಮಾಂಗಲ್ಯಸರ, ಶಿರ್ವಾ ಠಾಣೆ ವ್ಯಾಪ್ತಿಯ ತುಂಡುಬಲ್ಲೆ ಎಂಬಲ್ಲಿಂದ ಸುಲಿಗೆ ಮಾಡಿದ್ದ 12 ಗ್ರಾಮ್ ತೂಕದ ಚಿನ್ನದ ಸರ, ಮಣಿಪಾಲ ಠಾಣೆ ವ್ಯಾಪ್ತಿಯ ಪರ್ಕಳ ಬಬ್ಬರ್ಯ ಸ್ಥಾನದ ಬಳಿ ಸುಲಿಗೆ ಮಾಡಿದ್ದ 3 ಲಕ್ಷ ಮೌಲ್ಯದ ಚಿನ್ನದ ಸರ, ಮೂಡುಬಿದ್ರೆ ಠಾಣೆ ವ್ಯಾಪ್ತಿಯ ಪಡುಮಾರ್ನಾಡಿನಲ್ಲಿ ಸುಲಿಗೆ ಮಾಡಿದ್ದ 16 ಗ್ರಾಮ್ ತೂಕದ ಚಿನ್ನದ ಕರಿಮಣಿಸರ, ಬಂಟ್ವಾಳದ ಜಕ್ರಿಬೆಟ್ಟಿನಲ್ಲಿ ಸುಲಿಗೆ ಮಾಡಿದ್ದ 28 ಗ್ರಾಮ್ ತೂಕದ ಕರಿಮಣಿ ಸರ, ಪಚ್ಚಿನಡ್ಕ ಎಂಬಲ್ಲಿ ಸುಲಿಗೆ ಮಾಡಿದ್ದ 19 ಗ್ರಾಮ್ ತೂಕದ ಕರಿಮಣಿಸರ, ಸುರತ್ಕಲ್ಲಿನ ತಡಂಬೈಲಿನಲ್ಲಿ ವೃದ್ಧ ಮಹಿಳೆಯ 28 ಗ್ರಾಮ್ ತೂಕದ ಕೊತ್ತಂಬರಿ ಸರ, ಕಾರ್ಕಳದ ಮುಂಡ್ಕೂರಿನಲ್ಲಿ ಸುಲಿಗೆ ಮಾಡಿದ್ದ 7 ಗ್ರಾಮ್ ತೂಕದ ಚಿನ್ನದ ಚೈನ್ ಪತ್ತೆಯಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಲ್ಲದೆ, ಮೂಡುಬಿದ್ರೆ ಠಾಣೆಯ ಕೀರ್ತಿನಗರದಿಂದ ಕಳವು ಮಾಡಿದ್ದ ಹೋಂಡಾ ಶೈನ್ ಬೈಕ್, ಕಾವೂರಿನ ಮಾಲೆಮಾರಿನಲ್ಲಿ ಕಳವು ಮಾಡಿದ್ದ ಹೋಂಡಾ ಡ್ರೀಮ್ ಯುಗ ಬೈಕ್, ಮಂಗಳೂರಿನ ಮಲ್ಲಿಕಟ್ಟೆಯಿಂದ ಕಳವು ಮಾಡಿದ್ದ ಬೂದು ಬಣ್ಣದ ಹೋಂಡಾ ಶೈನ್ ಬೈಕ್, ಮಣಿಪಾಲದ ಓಶ್ಯನ್ ವೀವ್ ಅಪಾರ್ಟ್ಮೆಂಟಿನಿಂದ ಕಳವಾಗಿದ್ದ ಎನ್ ಟಾರ್ಕ್ ಸ್ಕೂಟರ್ ವಶಕ್ಕೆ ಪಡೆಯಲಾಗಿದೆ.
ಸರಕಳ್ಳರನ್ನು ಪೊಲೀಸರು ಬೆನ್ನುಹತ್ತಿದ್ದೇ ರೋಚಕ
ಜೂನ್ 2ರಂದು ಬೆಳಗ್ಗೆ 5.45ರ ವೇಳೆಗೆ ಪುಷ್ಪಾವತಿ ಎಂಬ 75 ವರ್ಷದ ಮಹಿಳೆ ಬಾವಿಯಿಂದ ನೀರು ಸೇದುತ್ತಿದ್ದಾಗಲೇ ಸ್ಕೂಟರಿನಲ್ಲಿ ಇಬ್ಬರು ಅಲ್ಲಿಗೆ ಆಗಮಿಸಿದ್ದರು. ಒಬ್ಬಾತ ಮನೆಯಂಗಳಕ್ಕೆ ಬಂದಿದ್ದು, ಆತನಲ್ಲಿ ನೀನು ಯಾರಪ್ಪಾ ಇಷ್ಟೊತ್ತಿಗೆ.. ಎಂದು ಮಹಿಳೆ ಕೇಳಿದ್ದಾರೆ. ಅಷ್ಟರಲ್ಲಿ ಮನೆಯ ಹೊರಗೆ ಯಾರೂ ಇಲ್ಲವೆಂದು ಖಚಿತಪಡಿಸಿದ ಯುವಕ, ಮಹಿಳೆಯ ಕುತ್ತಿಗೆಯಿಂದ 28 ಗ್ರಾಮ್ ತೂಕದ ಕೊತ್ತಂಬರಿ ಸರವನ್ನು ಕಿತ್ತು ಪರಾರಿಯಾಗಿದ್ದ. ಪ್ರಕರಣದ ಬೆನ್ನು ಹತ್ತಿದ ಸುರತ್ಕಲ್ ಪೊಲೀಸರಿಗೆ ಅವರು ಬಳಸಿದ್ದ ಸ್ಕೂಟರ್ ಬಗ್ಗೆ ಸಂಶಯ ಬಂದಿತ್ತು. ಕಳವಾಗಿದ್ದ ಸ್ಕೂಟರ್ ಎನ್ನುವ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಶುರುಮಾಡಿದ್ದರು.
ಸುರತ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪಣಂಬೂರು, ಬಜ್ಪೆ, ಮೂಡುಬಿದ್ರೆ, ಕಾವೂರು ಠಾಣೆಯ ಎಸ್ಐ, ಎಎಸ್ಐ ಮತ್ತು ಅಪರಾಧ ಪತ್ತೆಯಲ್ಲಿ ಪರಿಣತಿ ಹೊಂದಿದ್ದ ಸಿಬಂದಿಯನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ವಾಹನ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಸುರತ್ಕಲ್ ಹಬೀಬ್ ಹಸನ್ ಮತ್ತು ಫೈಜಲ್ ಇಬ್ಬರು ಕೂಡ ಕಳೆದ ಎಪ್ರಿಲ್ ಮತ್ತು ಮಾರ್ಚ್ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದವರು. ಫೈಜಲ್ ಕಾರವಾರ ಜೈಲಿನಿಂದ ಎಪ್ರಿಲ್ 1ರಂದು ಹೊರಬಂದಿದ್ದರೆ, ಹಬೀಬ್ ಮಂಗಳೂರು ಜೈಲಿನಿಂದ ಮಾರ್ಚ್ 9ರಂದು ಹೊರಬಂದಿದ್ದ. ಜೈಲಿನಿಂದ ಹೊರಬಂದು ಸರಕಳ್ಳತನ ಮತ್ತು ಅದಕ್ಕಾಗಿ ವಾಹನಗಳ ಕಳವು ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರು.
ಖಚಿತ ಮಾಹಿತಿ ಮೇರೆಗೆ ಇತ್ತೀಚೆಗೆ ಪೊಲೀಸರು ಸುರತ್ಕಲ್ ಠಾಣೆ ವ್ಯಾಪ್ತಿಯ ಚೇಳ್ಯಾರು- ಮಧ್ಯ ಮಾರ್ಗದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, ಸ್ಕೂಟರಿನಲ್ಲಿ ಬಂದಿದ್ದ ಇಬ್ಬರು ಪೊಲೀಸರನ್ನು ನೋಡಿ ವಾಹನವನ್ನೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದರು. ಆದರೆ ಹಬೀಬ್ ಹಸನ್ ಮತ್ತು ಫೈಜಲ್ ಸುಲಭದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಇವರು ಬಂಟ್ವಾಳದ ವೃದ್ಧ ಮಹಿಳೆಯ ಚಿನ್ನದ ಸರ ಮತ್ತು ತಡಂಬೈಲಿನಲ್ಲಿ ಸುಲಿಗೆ ಮಾಡಿದ್ದ ಚಿನ್ನದ ಸರವನ್ನು ಮಂಗಳೂರಿನಲ್ಲಿ ಜುವೆಲ್ಲರಿಗೆ ಮಾರಾಟಕ್ಕೆ ಯತ್ನಿಸಿದ್ದು ಮಾರಾಟ ಸಾಧ್ಯವಾಗಿರಲಿಲ್ಲ ಅನ್ನೋದು ಪೊಲೀಸರಿಗೆ ಮೊದಲೇ ತಿಳಿದುಬಂದಿತ್ತು. ಹಾಗಾಗಿ, ಅವರ ಪತ್ತೆಗಾಗಿ ಪೊಲೀಸರು ಬೆನ್ನು ಬಿದ್ದಿದ್ದರು. ಇದೀಗ ಒಟ್ಟು 9 ಕಡೆಯ ಸರಕಳ್ಳತನ (ಅಂದಾಜು ಮೌಲ್ಯ 12.48 ಲಕ್ಷ) ಮತ್ತು ನಾಲ್ಕು ದ್ವಿಚಕ್ರ ವಾಹನ (1.34 ಲಕ್ಷ) ವಶಕ್ಕೆ ಪಡೆದಿದ್ದು ಆರೋಪಿಗಳನ್ನು ಮತ್ತಷ್ಟು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳ ಅಪರಾಧ ಪತ್ತೆಗೆ ಪೆರೇಡ್ ನಡೆಸುವುದಕ್ಕಾಗಿ ಪೊಲೀಸರು ಅವರ ಆರೋಪಿಗಳ ಫೋಟೋ ಬಿಡುಗಡೆ ಮಾಡಿಲ್ಲ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಲೇ ಅಪರಾಧ ಎಸಗುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿದ ಪೊಲೀಸರ ತಂಡಕ್ಕೆ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಪ್ರಶಂಸಿಸಿದ್ದು, ಬಹುಮಾನ ನೀಡಿದ್ದಾರೆ.
City Police Commissioner Kuldeep Kumar R. Jain on Monday, June 26, said the Surathkal Police have cracked nine cases of chain snatching and four cases of two-wheeler theft while recovering stolen valuables worth nearly ₹14 lakh with the arrest of two persons. Jewelry worth ₹12.48 lakh and two-wheelers worth ₹1.34 lakh were recovered with the arrest
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 04:38 pm
Mangalore Correspondent
India’s Largest Job Fair ‘Alva’s Pragati 2025...
26-07-25 11:37 am
Congress, Mangalore: ಸಿದ್ದರಾಮಯ್ಯ ಆಡಳಿತದಲ್ಲೇ ದ...
26-07-25 10:44 am
Dharmasthala Case, SIT Meeting, Anucheth, Jit...
25-07-25 08:25 pm
DIG Anucheth Mangalore, SIT Dharmasthala: ಎಸ್...
25-07-25 06:05 pm
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am