ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಎಸಿಬಿ ದಾಳಿ ; ಸಿಕ್ಕಿದ್ದು 82 ಲಕ್ಷ ರೂ.!

28-08-20 02:37 pm       Headline Karnataka News Network   ಕ್ರೈಂ

ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಮೂವರು ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆದಿದೆ. ದಾಳಿಯ ವೇಳೆ ಒಟ್ಟು 82 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು, ಆಗಸ್ಟ್ 28: ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 'ಜಮೀನು ಖರೀದಿ' ಯೋಜನೆ ಅವ್ಯವಹಾರ ಆರೋಪ ಸಂಬಂಧ ತನಿಖೆ ಮುಂದುವರಿಸಿರುವ ಎಸಿಬಿ, ಮೂವರನ್ನು ಬಂಧಿಸಿ ಒಟ್ಟು 82 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ.

ಇಲ್ಲಿನ ವಸಂತ ನಗರದಲ್ಲಿರುವ ನಿಗಮದ ಕಚೇರಿಗೆ ಗುರುವಾರ ಸಂಜೆ ವೇಳೆ ಹಣ ಬರುವ ಖಚಿತ ಮಾಹಿತಿ ಆಧರಿಸಿ ಈ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು, ಶುಕ್ರವಾರವೂ ಶೋಧ ಕಾರ್ಯ ಮುಂದುವರಿಸಿದ್ದರು.

ಈ ಪ್ರಕರಣ ಸಂಬಂಧ ಮಂಡಳಿಯ ಪ್ರಧಾನ ವ್ಯವಸ್ಥಾಪಕ ನಾಗೇಶ್, ವ್ಯವಸ್ಥಾಪಕ ಸುಬ್ಬಯ್ಯ, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಮಂಜುಳಾ ಎಂಬವರನ್ನು ಬಂಧಿಸಲಾಗಿದೆ ಎಂದು ಎಸಿಬಿ ತಿಳಿಸಿದೆ.

ಆರೋಪಿ ನಾಗೇಶ್ ನಿವಾಸದ ಮೇಲೆ ದಾಳಿ ನಡೆಸಿದಾಗ 32.5 ಲಕ್ಷ ರೂ.ಪತ್ತೆಯಾಗಿದೆ. ಅದೇ ರೀತಿಯಲ್ಲಿ, ಸುಬ್ಬಯ್ಯ ಮನೆಯಲ್ಲಿಯೂ 27.5 ಲಕ್ಷ ರೂ. ಪತ್ತೆಯಾಗಿದ್ದು, ಒಟ್ಟಾರೆ ಈ ಪ್ರಕರಣದಲ್ಲಿ 82 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಎಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಏನಿದು ಆರೋಪ ?

ಸರಕಾರದಡಿ  ಫಲವತ್ತಾದ, ಕೃಷಿಗೆ ಯೋಗ್ಯವಾಗಿರುವ ಭೂಮಿ ಖರೀದಿಸಿದ ಬಳಿಕ ಅದನ್ನು ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಪಂಗಡದ ಭೂರಹಿತ ಫಲಾನುಭವಿಗಳಿಗೆ ಮಂಜೂರು ಮಾಡುವ ಯೋಜನೆ ಇದಾಗಿದೆ.

ಆದರೆ ಕೆಲ ಅಧಿಕಾರಿಗಳು, ಕಳಪೆಯಾಗಿರುವ ಭೂಮಿ ಅನ್ನು ಮಧ್ಯವರ್ತಿಗಳ ಮೂಲಕ ಕೃಷಿಕರಿಂದ ಖರೀದಿಸುತ್ತಾರೆ. ನಿಗದಿಯಂತೆ ಹೆಚ್ಚಿನ ಮೊತ್ತವನ್ನು ಮಧ್ಯವರ್ತಿಗಳಿಗೆ ಮಂಜೂರು ಮಾಡಿಸುತ್ತಾರೆ. ಬಳಿಕ, ಮಧ್ಯವರ್ತಿಗಳು ಮತ್ತು ಅಧಿಕಾರಿಗಳು ಸೇರಿ ಹೆಚ್ಚುವರಿ ಹಣವನ್ನು ಹಂಚಿಕೆ ಮಾಡಿಕೊಳ್ಳುತ್ತಾರೆ ಎನ್ನುವ ಆರೋಪಗಳು ಕೇಳಿಬಂದಿವೆ.