ಬೆಂಕಿಗೆ ಬಿದ್ದ ತುಪ್ಪ ; ಆರೋಪ ಸಾಬೀತಾದ್ರೆ 20 ವರ್ಷ ಜೈಲು !! 

05-09-20 12:17 pm       Bangalore Correspondent   ಕ್ರೈಂ

ಒಂದು ವೇಳೆ ಸ್ಯಾಂಡಲ್​ವುಡ್ ನಟಿ ರಾಗಿಣಿ ಮೇಲಿನ ಆರೋಪ ಸಾಬೀತಾದಲ್ಲಿ ನ್ಯಾಯಾಲಯವು ಆಕೆಗೆ 20 ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ. ವರೆಗೆ ದಂಡ ವಿಧಿಸಬಹುದು.

ಬೆಂಗಳೂರು, ಸೆಪ್ಟೆಂಬರ್ 5: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಜನಪ್ರಿಯ ಚಿತ್ರನಟಿ ರಾಗಿಣಿ ದ್ವಿವೇದಿ ದೊಡ್ಡ ಸಂಕಷ್ಟದಲ್ಲಿ ಬಿದ್ದಿದ್ದಾರೆ. ಪ್ರಕರಣದಲ್ಲಿ ಕಠಿಣ ಸೆಕ್ಷನ್ ಗಳನ್ನು ದಾಖಲಿಸಿರುವ ಸಿಸಿಬಿ ಪೊಲೀಸರಿಂದಾಗಿ ರಾಗಿಣಿ ಅದರಿಂದ ಹೊರಬರುವುದು ಕಷ್ಟ ಎಂದೇ ಹೇಳಲಾಗುತ್ತಿದೆ. 

ರಾಗಿಣಿ ವಿರುದ್ಧ 1985ರ ಎನ್​ಡಿಪಿಎಸ್ ಕಾಯ್ದೆಯ ಸೆಕ್ಷನ್ 21(ಬಿ), 21(ಸಿ) ಮತ್ತು 22(ಸಿ) ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಇವು ಮಾದಕ ವಸ್ತು ಮತ್ತು ಮಾನಸಿಕ ಪ್ರಭಾವ ಬೀರುವ ವಸ್ತುಗಳನ್ನ ಹೊಂದಿರುವುದು, ಅವುಗಳ ತಯಾರಿಕೆ, ಮಾರಾಟ, ಖರೀದಿ, ಸಾಗಣೆ ಮಾಡಿದ ಅಪರಾಧಗಳಾಗಿದ್ದು ಆರೋಪ ಸಾಬೀತಾದರೆ ಕಠಿಣ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಒಂದು ವೇಳೆ ಸ್ಯಾಂಡಲ್​ವುಡ್ ನಟಿ ರಾಗಿಣಿ ಮೇಲಿನ ಆರೋಪ ಸಾಬೀತಾದಲ್ಲಿ ನ್ಯಾಯಾಲಯವು ಆಕೆಗೆ 20 ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ. ವರೆಗೆ ದಂಡ ವಿಧಿಸಬಹುದು. ಹೀಗಾದರೆ ಚಿತ್ರನಟಿ ಒಬ್ಬರು ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಶಿಕ್ಷೆಗೆ ಗುರಿಯಾದ ಮೊದಲ ಭಾರತೀಯ ನಟಿ ಎಂಬ ಅಪಖ್ಯಾತಿಯೂ ಜೊತೆ ಸೇರಲಿದೆ. 

ಇನ್ನು ಡ್ರಗ್ಸ್‌ ಪೆಡ್ಲರ್‌ಗಳಾದ ರಾಹುಲ್‌ ಮತ್ತು ರವಿಶಂಕರ್‌ ಜೊತೆಗೆ ಹೊಂದಿದ್ದ ನಂಟೇ ಇದೀಗ ನಟಿ ರಾಗಿಣಿಗೆ ದುಬಾರಿಯಾಗಿ ಪರಿಣಮಿಸಿದೆ. ಆರ್​ಟಿಒ ಅಧಿಕಾರಿ ಮತ್ತು ರಾಗಿಣಿ ಆಪ್ತನಾಗಿದ್ದ ರವಿಶಂಕರ್ ಬಂಧನದ ಬಳಿಕ ಸಿಸಿಬಿಗೆ ಚಿತ್ರನಟ ನಟಿಯರು ಡ್ರಗ್ ದಂಧೆಯಲ್ಲಿರುವ ಖಚಿತ ಸಾಕ್ಷ್ಯಗಳು ಲಭಿಸಿದ್ದವು. ರವಿಶಂಕರ್ ಜೊತೆ ಸೇರಿ ರಾಗಿಣಿ ಡ್ರಗ್ಸ್‌ ಜಾಲದಲ್ಲೂ ಭಾಗಿಯಾಗಿದ್ದು, ಜೊತೆಗೆ ಹಣಕಾಸಿವ ವ್ಯವಹಾರವನ್ನೂ ನಡೆಸಿದ್ದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಸಿಕ್ಕಿದೆ ಎನ್ನಲಾಗುತ್ತಿದ್ದು ರಾಗಿಣಿ ಪಾಲಿಗೆ ಕುಣಿಗೆ ಬಿಗಿಯಾಗುವ ಸಾಧ್ಯತೆ ಕಂಡುಬಂದಿದೆ. ರಾಗಿಣಿಯನ್ನು ಎರಡು ದಿನಗಳ ಹಿಂದೆಯೇ ವಿಚಾರಣೆ ನಡೆಸಬೇಕಿತ್ತು. ಅನಾರೋಗ್ಯದ ನಾಟಕ ಆಡಿದ್ದರಿಂದ ನಿನ್ನೆ ಮನೆಗೇ ತೆರಳಿ, ಆಕೆಯನ್ನು ವಿಚಾರಣೆಗೆ ಕರೆತಂದಿದ್ದರು. ನಂತರ ವಿಡಿಯೋ ಕಾನ್ಫೆರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಲ್ಲದೆ, 3 ದಿನ ಪೊಲೀಸ್ ಕಸ್ಟಡಿಗೆ ಪಡೆಯಲು ಸಿಸಿಬಿ ಯಶಸ್ವಿಯಾಗಿದೆ. 

ನಿನ್ನೆ ಸಂಜೆ ಬಂಧನ ಖಚಿತ ಪಡಿಸಿದ ಪೊಲೀಸರು, ರಾತ್ರಿ ಕಳೆಯಲು ರಾಗಿಣಿ ಅವರನ್ನ ಕಿದ್ವಾಯಿ ಆಸ್ಪತ್ರೆ ಸಮೀಪದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಸಾಮಾನ್ಯ ಆರೋಪಿಗಳ ರೀತಿಯಲ್ಲಿ ರಾಗಿಣಿಗೆ ಊಟ ಹಾಗೂ ಸೌಲಭ್ಯ ನೀಡಲಾಗಿತ್ತು. ಇಂದು ಸಿಸಿಬಿ ಕಚೇರಿಯಲ್ಲಿ ಡಿಸಿಪಿ ರವಿಕುಮಾರ್ ಮತ್ತು ಇನ್ಸ್​ಪೆಕ್ಟರ್ ಅಂಜುಮಾಲ ನೇತೃತ್ವದಲ್ಲಿ ರಾಗಿಣಿ ವಿಚಾರಣೆ ಮುಂದುವರಿಯಲಿದೆ. 

ಬೆಂಗಳೂರಿನಲ್ಲಿರುವ ಡ್ರಗ್ಸ್ ಜಾಲವನ್ನು ಅಮೂಲಾಗ್ರವಾಗಿ ಬಯಲಿಗೆಳೆಯಲು ಸಿಸಿಬಿಯಿಂದ ಆರು ತಂಡಗಳನ್ನು ನಿಯೋಜನೆ ಮಾಡಲಾಗಿದ್ದು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಹಲವು ಡ್ರಗ್ಸ್ ಪೆಡ್ಲರ್​ಗಳನ್ನ ಬಂಧಿಸಲಾಗಿದೆ. ರಾಗಿಣಿ ದ್ವಿವೇದಿ, ರಾಹುಲ್, ರವಿಶಂಕರ್ ಮತ್ತು ವೀರೇನ್ ಖನ್ನಾ ಅವರನ್ನ ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗತ್ತಿದೆ. ವೀರೇನ್ ಖನ್ನಾ ದೆಹಲಿಯವನಾಗಿದ್ದು ಫ್ಯಾಷನ್ ಲೋಕದಲ್ಲಿ ಹೆಸರು ಮಾಡಿದಾತ. ಬೆಂಗಳೂರಿನಲ್ಲಿ ಹೈಫೈ ಪಾರ್ಟಿಗಳ ಆಯೋಜಕನೂ ಆಗಿದ್ದ. ಅವರ ಸಂಪರ್ಕದಲ್ಲಿರುವವರನ್ನ ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ.

Join our WhatsApp group for latest news updates