ಏನೇನೋ ಆಗಿ ಬಿಂಬಿಸುತ್ತಿರುವುದು ನೋವು ಕೊಟ್ಟಿದೆ ; ಅನುಶ್ರೀ

02-10-20 11:20 am       Bangalore Correspondent   ಕರ್ನಾಟಕ

12 ವರ್ಷಗಳ ಹಿಂದಿನ ರಿಯಾಲಿಟಿ ಶೋ ನನಗೆ ಈ ಪರಿ ನೋವು ಕೊಡುತ್ತದೆ ಎಂದು ಯಾವತ್ತೂ ಅಂದ್ಕೊಂಡಿರಲಿಲ್ಲ. ಇದರಿಂದ ನನ್ನ ಮನೆಯ ಪರಿಸ್ಥಿತಿ ಸ್ವಲ್ಪ ಯೋಚಿಸಿ ಎಂದು ಅನುಶ್ರೀ ತನ್ನ ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು, ಅಕ್ಟೋಬರ್ 2 : "12 ವರ್ಷಗಳ ಹಿಂದಿನ ರಿಯಾಲಿಟಿ ಶೋ ನನಗೆ ಈ ಪರಿ ನೋವು ಕೊಡುತ್ತದೆ ಎಂದು ಯಾವತ್ತೂ ಅಂದ್ಕೊಂಡಿರಲಿಲ್ಲ. ಸಿಸಿಬಿಯವರು ನೋಟಿಸ್ ಕೊಟ್ಟಿದ್ದು ನನಗೇನು ನೋವು ಕೊಟ್ಟಿಲ್ಲ‌. ವಿಚಾರಣೆಗೆ ಕರೆದ ಮಾತ್ರಕ್ಕೆ ಅಪರಾಧಿಯಾಗಲ್ಲ.‌ ಆರೋಪಿಯೂ ಆಗಲ್ಲ. ಆದರೆ ಕೆಲವರು ನನ್ನನ್ನು ಏನೇನೋ ಆಗಿ ಬಿಂಬಿಸುತ್ತಿದ್ದಾರೆ. ಅಪರಾಧಿ ಥರ  ತೋರಿಸುತ್ತಿರುವುದು, ಅಭಿಪ್ರಾಯ ವ್ಯಕ್ತವಾಗುತ್ತಿರುವುದು ನನಗೆ ತುಂಬ ನೋವು ಕೊಟ್ಟಿದೆ... " 

ಮಾಧ್ಯಮ ವಲಯದಲ್ಲಿ ತನ್ನ ಬಗ್ಗೆ ಬರುತ್ತಿರುವ ಸುದ್ದಿಗಳಿಂದ ವಿಚಲಿತರಾಗಿರುವ ನಟಿ, ನಿರೂಪಕಿ ಅನುಶ್ರೀ ವಿಡಿಯೋ ಮಾಡಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ನನ್ನನ್ನು ಸೆನ್ಸೇಶನಲ್ ಆಗಿ ಬಿಂಬಿಸಲಾಗುತ್ತಿದೆ. ಇದರಿಂದ ನನ್ನ ಮನೆಯ ಪರಿಸ್ಥಿತಿ ಸ್ವಲ್ಪ ಯೋಚಿಸಿ. ಒಂದು ವಾರದಿಂದ ತುಂಬ ವಿಚಲಿತರಾಗಿದ್ದಾರೆ. ಕಿರಿಕಿರಿ ಅನುಭವಿಸಿದ್ದಾರೆ. ಆದರೆ ರಾಜ್ಯದ ಕೋಟ್ಯಂತರ ಕನ್ನಡಿಗರು ನನ್ನ ಜೊತೆ ನಿಂತಿದ್ದಾರೆ. ನನಗೆ ಕೆಲಸ ಕೊಟ್ಟಿರುವ ಝೀ ವಾಹಿನಿಯವರು ನನಗೆ ಬೆಂಬಲವಾಗಿ ನಿಂತಿದ್ದಾರೆ.  ಅವರಿಗೆ ನಾನು ಕೋಟಿ ನಮನಗಳ‌ನ್ನು ಹೇಳುತ್ತೇನೆ, ನಿಮ್ಮ ನಂಬಿಕೆಯೇ ನನ್ನ ಶಕ್ತಿ ಎಂದು ಅನುಶ್ರೀ ಹೇಳಿದ್ದಾರೆ.

Video: