ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ ಸ್ಥಾನಕ್ಕೆ ಕುತ್ತು ಸಾಧ್ಯತೆ, ಬದಲಾವಣೆಗೆ ಪಕ್ಷದಲ್ಲೇ ಒತ್ತಡ, ಅನ್ನಪೂರ್ಣಗೆ ಲಕ್ ?

10-08-26 02:38 pm       HK News Staffer   ಕರ್ನಾಟಕ

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಜಾಮೀನಿನಲ್ಲಿ ಹೊರಗಿರುವ ನಾಗೇಂದ್ರ ಈಗ ಸಚಿವ ಸ್ಥಾನಕ್ಕೆ ಏರಿರುವುದು ಮತ್ತು ನ್ಯಾಯಾಲಯದ ಆದೇಶ ಉಲ್ಲಂಘಿಸಿ ದೆಹಲಿ ಪ್ರಯಾಣ ಬೆಳೆಸಿದ್ದು ವಿವಾದಕ್ಕೆ ಕಾರಣವಾಗಿದೆ. ನ್ಯಾಯಾಂಗ ನಿಂದನೆ ಆರೋಪ ಸಾಬೀತಾದರೆ ಅವರ ಸಚಿವ ಸ್ಥಾನದ ಕುರ್ಚಿಗೆ ಕಂಟಕವಾಗಲಿದೆ ಎಂದೇ ಹೇಳಲಾಗುತ್ತಿದೆ. ಇದೇ ವೇಳೆ, ಕಳಂಕಿತ ವ್ಯಕ್ತಿಯನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ವಿಚಾರ ಮುಂದಿಟ್ಟು ಬಿಜೆಪಿ- ಜೆಡಿಎಸ್ ನಾಯಕರು ಅಧಿವೇಶನ ಸಂದರ್ಭದಲ್ಲಿ ಧರಣಿ ನಡೆಸಲು ಮುಂದಾಗಿದ್ದಾರೆ.

ಬೆಂಗಳೂರು, ಆ.10: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಜಾಮೀನಿನಲ್ಲಿ ಹೊರಗಿರುವ ನಾಗೇಂದ್ರ ಈಗ ಸಚಿವ ಸ್ಥಾನಕ್ಕೆ ಏರಿರುವುದು ಮತ್ತು ನ್ಯಾಯಾಲಯದ ಆದೇಶ ಉಲ್ಲಂಘಿಸಿ ದೆಹಲಿ ಪ್ರಯಾಣ ಬೆಳೆಸಿದ್ದು ವಿವಾದಕ್ಕೆ ಕಾರಣವಾಗಿದೆ. ನ್ಯಾಯಾಂಗ ನಿಂದನೆ ಆರೋಪ ಸಾಬೀತಾದರೆ ಅವರ ಸಚಿವ ಸ್ಥಾನದ ಕುರ್ಚಿಗೆ ಕಂಟಕವಾಗಲಿದೆ ಎಂದೇ ಹೇಳಲಾಗುತ್ತಿದೆ. ಇದೇ ವೇಳೆ, ಕಳಂಕಿತ ವ್ಯಕ್ತಿಯನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ವಿಚಾರ ಮುಂದಿಟ್ಟು ಬಿಜೆಪಿ- ಜೆಡಿಎಸ್ ನಾಯಕರು ಅಧಿವೇಶನ ಸಂದರ್ಭದಲ್ಲಿ ಧರಣಿ ನಡೆಸಲು ಮುಂದಾಗಿದ್ದಾರೆ. 

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ಜಾಮೀನು ನೀಡಿದ ಸಂದರ್ಭ ರಾಜ್ಯ ಬಿಟ್ಟು ಹೊರಗೆ ಹೋಗುವಂತಿಲ್ಲ. ಅಂತಹ ಅಗತ್ಯ ಬಿದ್ದರೆ ನ್ಯಾಯಾಲಯದಿಂದ ಲಿಖಿತ ಅನುಮತಿ ಅಗತ್ಯ ಎಂದು ಕೋರ್ಟ್ ಷರತ್ತು ವಿಧಿಸಿತ್ತು. ಆದರೆ, ಕೋರ್ಟ್ ಅನುಮತಿಯನ್ನು ಪಡೆಯದೆ ಸಚಿವ ನಾಗೇಂದ್ರ ಅವರು ಜು.17ರಂದು ದಿಲ್ಲಿಗೆ ಭೇಟಿ ನೀಡಿದ್ದರು ಎನ್ನುವ ಫೋಟೋ, ವಿಡಿಯೋ ಹರಿದಾಡುತ್ತಿದ್ದು, ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಅವರ ಸಚಿವ ಸ್ಥಾನಕ್ಕೆ ಕುತ್ತು ಬರಲಿದೆ ಎಂಬ ಮಾತು ಕೇಳಿಬಂದಿದೆ. ಹೀಗಾಗಿ ನಾಗೇಂದ್ರ ಅವರ ರಾಜೀನಾಮೆ ಪಡೆಯುವ ವರೆಗೆ ವಿರಮಿಸುವುದಿಲ್ಲ ಎಂದಿರುವ ಪ್ರತಿಪಕ್ಷ ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದ್ದು, ಅಧಿವೇಶನದಲ್ಲಿ ಕಾವೇರಿದ ಹೋರಾಟ ನಡೆಯುವ ಸಾಧ್ಯತೆ ದಟ್ಟವಾಗಿದೆ. 

ಗಂಭೀರ ಆರೋಪ ಹೊತ್ತಿರುವ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದೇ ಸರ್ಕಾರಕ್ಕೆ ಈಗ ಇಕ್ಕಟ್ಟಿನ ಸ್ಥಿತಿ ತಂದೊಡ್ಡಿದೆ. ಆಡಳಿತ ಪಕ್ಷದ ಒಳಗಡೆಯೂ ಇದರ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು ಅವರ ಬದಲಿಗೆ ಬಳ್ಳಾರಿ ಜಿಲ್ಲೆಯ ಕೋಟಾದಿಂದ ಬೇರೆ ಶಾಸಕರಿಗೆ ಅವಕಾಶ ನೀಡಬೇಕೆಂಬ ಆಗ್ರಹ ಬಲವಾಗಿದೆ. ಇದೇ ವೇಳೆ, ಸಂಡೂರು ಎಸ್ಟಿ ಮೀಸಲು ಕ್ಷೇತ್ರದಿಂದ ಗೆದ್ದಿರುವ, ಬಳ್ಳಾರಿ ಸಂಸದ ಇ.ತುಕಾರಾಂ ಅವರ ಪತ್ನಿ ಅನ್ನಪೂರ್ಣ ತುಕಾರಾಂ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ. ನಾಗೇಂದ್ರ ಅವರನ್ನು ಬದಲಾವಣೆ ಮಾಡಿದರೆ ಮೊದಲ ಬಾರಿಯ ಶಾಸಕಿ ಅನ್ನಪೂರ್ಣ ಸಚಿವ ಸ್ಥಾನಕ್ಕೇರಿ ಲಕ್ ಹೊಡೆಯುತ್ತಾರೋ ಎನ್ನುವ ಮಾತು ಹರಿದಾಡುತ್ತಿದೆ.‌

ಕಳೆದ ಬಾರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ನಾಗೇಂದ್ರ ಅವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಇಡಿ ಅಧಿಕಾರಿಗಳು ಬಂಧಿಸಿದ್ದರು. ಬಳಿಕ 2024ರ ಅ.14ಕ್ಕೆ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಈ ವೇಳೆ, ರಾಜ್ಯ ಬಿಟ್ಟು ಹೊರಗೆ ಹೋಗಬಾರದು ಎಂದು ಷರತ್ತು ಹಾಕಲಾಗಿತ್ತು. ಇತ್ತೀಚೆಗೆ, ಪಕ್ಷದ ಕೆಲಸದ ನಿಮಿತ್ತ ಜು.27ರಿಂದ ಆ.10ರ ವರೆಗೆ ದೆಹಲಿಗೆ ತೆರಳಲು ಅನುಮತಿ ನೀಡುವಂತೆ ನಾಗೇಂದ್ರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅದಕ್ಕೆ ಅನುಮತಿ ನೀಡದಂತೆ ಇ.ಡಿ. ಬಲವಾದ ಆಕ್ಷೇಪಣೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಕಳೆದ ಮಂಗಳವಾರ ಆರೋಪಿಯ ಅರ್ಜಿಯನ್ನು ವಜಾಗೊಳಿಸಿತ್ತು. ಆದರೂ, ಈ ಆದೇಶ ಉಲ್ಲಂಘಿಸಿ ದಿಲ್ಲಿಗೆ ಭೇಟಿ ನೀಡಿದ್ದರೆನ್ನಲಾದ ಫೋಟೋ, ವಿಡಿಯೋ ಹರಿದಾಡುತ್ತಿದ್ದು, ಸಂಕಷ್ಟ ಎದುರಾಗಿದೆ.