BTV News Kannada, G M Kumar, Court: ಬಿಟಿವಿ ಮುಖ್ಯಸ್ಥನಿಗೆ ಸುಪ್ರೀಂ ಕೋರ್ಟಿನಲ್ಲು ಹಿನ್ನಡೆ ; ಆಗಸ್ಟ್ 13ರ ಒಳಗಡೆ ಪೊಲೀಸರಿಗೆ ಶರಣಾಗಲು ಆದೇಶ, ಪಾಲುದಾರನಿಗೇ ಮೋಸ ಮಾಡಿ ತಗ್ಲಾಕ್ಕೊಂಡಾತನ ಕತೆ  

08-08-24 09:40 pm       Bangalore Correspondent   ಕರ್ನಾಟಕ

ಜಂಟಿ ಸಹಭಾಗಿತ್ವದಲ್ಲಿ ಸ್ಥಾಪನೆಯಾಗಿದ್ದ ಬಿಟಿವಿ ಸುದ್ದಿ ವಾಹಿನಿಯನ್ನು ತನ್ನ ಕಪಿಮುಷ್ಠಿಯಲ್ಲಿರಿಸಿ ಕಬಳಿಸಲೆತ್ನಿಸಿದ್ದಲ್ಲದೆ, ಜಂಟಿ ಖಾತೆಯಲ್ಲಿದ್ದ ಸುಮಾರು ಹತ್ತು ಕೋಟಿ ರೂಪಾಯಿ ದುಡ್ಡನ್ನು ಕಬ್ಜಾ ಮಾಡಿಕೊಂಡ ಪ್ರಕರಣದಲ್ಲಿ ಬಿಟಿವಿ ಮುಖ್ಯಸ್ಥ ಜಿ.ಎಂ. ಕುಮಾರ್ ಮತ್ತೆ ತಲೆಮರೆಸಿಕೊಂಡಿದ್ದು, ಸುಪ್ರೀಂ ಕೋರ್ಟಿನಲ್ಲೂ ಹಿನ್ನಡೆ ಅನುಭವಿಸಿದ್ದಾರೆ.

ಬೆಂಗಳೂರು, ಆಗಸ್ಟ್ 8: ಜಂಟಿ ಸಹಭಾಗಿತ್ವದಲ್ಲಿ ಸ್ಥಾಪನೆಯಾಗಿದ್ದ ಬಿಟಿವಿ ಸುದ್ದಿ ವಾಹಿನಿಯನ್ನು ತನ್ನ ಕಪಿಮುಷ್ಠಿಯಲ್ಲಿರಿಸಿ ಕಬಳಿಸಲೆತ್ನಿಸಿದ್ದಲ್ಲದೆ, ಜಂಟಿ ಖಾತೆಯಲ್ಲಿದ್ದ ಸುಮಾರು ಹತ್ತು ಕೋಟಿ ರೂಪಾಯಿ ದುಡ್ಡನ್ನು ಕಬ್ಜಾ ಮಾಡಿಕೊಂಡ ಪ್ರಕರಣದಲ್ಲಿ ಬಿಟಿವಿ ಮುಖ್ಯಸ್ಥ ಜಿ.ಎಂ. ಕುಮಾರ್ ಮತ್ತೆ ತಲೆಮರೆಸಿಕೊಂಡಿದ್ದು, ಸುಪ್ರೀಂ ಕೋರ್ಟಿನಲ್ಲೂ ಹಿನ್ನಡೆ ಅನುಭವಿಸಿದ್ದಾರೆ. ತನ್ನ ಮೇಲಿನ ಪ್ರಕರಣಗಳ ಮೇಲೆ ತಂದಿದ್ದ ತಡೆಯಾಜ್ಞೆ ಸುಪ್ರೀಂ ಕೋರ್ಟಿನಲ್ಲಿ ತೆರವಾಗಿದ್ದು, ಬೆಂಗಳೂರು ಮ್ಯಾಜಿಸ್ಟ್ರೇಟ್ ಮುಂದೆ ಆಗಸ್ಟ್ 13ರ ಒಳಗೆ ಶರಣಾಗುವಂತೆ ಆದೇಶ ಮಾಡಿದೆ.

ಹತ್ತು ವರ್ಷಗಳಲ್ಲಿ ಹಗ್ಗಜಗ್ಗಾಟ 

2014ರ ಜುಲೈ ತಿಂಗಳಲ್ಲಿ ಈಗಲ್ ಸೈಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಲ್ಲಿ ಬಿಟಿವಿ ಕನ್ನಡ ಸುದ್ದಿ ವಾಹಿನಿ ಜಂಟಿ ಮಾಲೀಕತ್ವದಲ್ಲಿ ಆರಂಭಗೊಂಡಿತ್ತು. ಅಶ್ವಿನ್ ಮಹೀಂದ್ರ ಚೇರ್ಮನ್ ಡೈರೆಕ್ಟರ್ ಮತ್ತು ಜಿಎಂ ಕುಮಾರ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು. ಆದರೆ ಆರೇ ತಿಂಗಳಲ್ಲಿ ಇವರ ನಡುವೆ ಮನಸ್ತಾಪ ಬಂದು ಸಂಸ್ಥೆಯಿಂದ ದೂರವಾಗಿದ್ದರು. ಈ ನಡುವೆ, ಸಂಸ್ಥೆಯ ಬ್ಯಾಂಕ್ ಖಾತೆಯಿದ್ದ ಮಡಿವಾಳ ಶಾಖೆಯ ಕಾರ್ಪೊರೇಶನ್ ಬ್ಯಾಂಕಿನಲ್ಲಿ ಜಂಟಿ ಸಹಿಯುಳ್ಳ ಖಾತೆ ಬದಲಿಸಿ ಸಿಂಗಲ್ ಸಿಗ್ನೇಟರಿ ಮಾಡಿಕೊಳ್ಳುವುದಕ್ಕೆ ಜಿಎಂ ಕುಮಾರ್ ಫೋರ್ಜರಿ ದಾಖಲೆ ಪತ್ರ ನೀಡಿದ್ದರು ಎನ್ನಲಾಗಿದೆ. ಬ್ಯಾಂಕ್ ಸಿಬಂದಿ ಇದನ್ನು ತಪಾಸಣೆ ಮಾಡದೆ ಸ್ವೀಕರಿಸಿದ್ದಲ್ಲದೆ, ಖಾತೆಯಲ್ಲಿದ್ದ ಹತ್ತು ಕೋಟಿ ರೂ. ಮೊತ್ತವನ್ನು ಬೇರೆ ಬೇರೆ ಖಾತೆಗಳಿಗೆ ರವಾನಿಸಲು ಸಹಕರಿಸಿದ್ದಾರೆ. ಹೀಗೆಂದು ಬಿಟಿವಿ ಸಂಸ್ಥೆಯ ಪಾಲುದಾರ ಅಶ್ವಿನಿ ಮಹೇಂದ್ರ ಅವರು ಹೈಗ್ರೌಂಡ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ದೂರಿನ ಪ್ರಕಾರ, ಹತ್ತು ಕೋಟಿ ದುಡ್ಡು 453 ವರ್ಗಾವಣೆ ಮೂಲಕ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ರವಾನೆಯಾಗಿತ್ತು. ಇದಲ್ಲದೆ, ಬ್ಯಾಂಕ್ ಕಚೇರಿಗೂ ದಾಖಲೆ ಪೋರ್ಜರಿ ಆಗಿರುವ ಬಗ್ಗೆ ಅಶ್ವಿನಿ ಮಹೇಂದ್ರ ದೂರು ನೀಡಿದ್ದರು.

home - BTV Kannada

ಇದರ ನಡುವಲ್ಲೇ 2018ರಲ್ಲಿ ಈಗಲ್ ಸೈಟ್ ಟೆಲಿ ಮೀಡಿಯಾ ಪ್ರೈ.ಲಿ. ಅನ್ನುವ ಹೆಸರಲ್ಲಿ ಇನ್ನೊಂದು ಡುಪ್ಲಿಕೇಟ್ ಸಂಸ್ಥೆಯನ್ನು ಜಿಎಂ ಕುಮಾರ್ ಆರಂಭಿಸಿದ್ದು, ಬಿಟಿವಿ ಸುದ್ದಿ ವಾಹಿನಿಯಲ್ಲಿದ್ದ ಎಲ್ಲ ಉಪಕರಣಗಳನ್ನು ಆ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಇಬ್ಬರ ನಡುವೆ ಮಾತುಕತೆ ನಡೆದಿದ್ದು ಅಶ್ವಿನಿ ಮಹೇಂದ್ರ ಅವರೊಂದಿಗೆ 18 ಕೋಟಿಗೆ ಅಗ್ರಿಮೆಂಟ್ ಆಗಿತ್ತು. ಇದಕ್ಕಾಗಿ ಜಿಎಂ ಕುಮಾರ್ ತನ್ನ ಹೆಸರಲ್ಲಿ ಪೋಸ್ಟ್ ಡೇಟೆಡ್ ಚೆಕ್ ನೀಡಿದ್ದರು. ಆದರೆ ಸದ್ರಿ ಚೆಕ್ ಬೌನ್ಸ್ ಆಗಿದ್ದು ಇದರ ಬಗ್ಗೆ 2020ರಲ್ಲಿ ಹೈಗ್ರೌಂಡ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು. ಆನಂತರ, ಅದೇ ಹೈಗ್ರೌಂಡ್ ಠಾಣೆಯಲ್ಲಿ ಅಶ್ವಿನಿ ಮಹೇಂದ್ರ ವಿರುದ್ಧವೂ ಕೌಂಟರ್ ಕಂಪ್ಲೇಂಟ್ ದಾಖಲಾಗಿತ್ತು. ಈ ಎಲ್ಲ ಪ್ರಕರಣಗಳನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದು ಪೊಲೀಸರು ಸರಿಯಾಗಿ ತನಿಖೆ ನಡೆಸದೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಹಾಕಿದ್ದರು.

Court Halls Expansion: Karnataka High Court Asks State To Submit At least  Three Proposals To Chief Minister

ಇದರ ನಡುವೆಯೇ ಅಶ್ವಿನಿ ಮಹೇಂದ್ರ ಹೈಕೋರ್ಟಿಗೆ ರಿಟ್ ಹಾಕಿದ್ದು, ಸಿಸಿಬಿ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ದೂರಿದ್ದಾರೆ. ಅಲ್ಲದೆ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಕೇಳಿಕೊಂಡಿದ್ದರು. ಈ ಮಧ್ಯೆ ಸಿಸಿಬಿ ಪೊಲೀಸರು ಎಫ್ಎಸ್ಎಲ್ ವರದಿ ಬಂದಿದ್ದು ಹೆಚ್ಚುವರಿ ಚಾರ್ಜ್ ಶೀಟ್ ಹಾಕುವುದಾಗಿ ಹೇಳಿ ಕಾಲಾವಕಾಶ ಕೇಳಿದ್ದಾರೆ. ಈ ಮಧ್ಯೆ 2018ರಲ್ಲಿ ಈಗಲ್ ಸೈಟ್ ಮೀಡಿಯಾ ಹೆಸರಲ್ಲಿ ಜಿಎಂ ಕುಮಾರ್ ಮತ್ತೊಂದು ಬ್ಯಾಂಕ್ ಖಾತೆಯನ್ನು ಐಸಿಐಸಿಐ ಬ್ಯಾಂಕಿನ ವಿಜಯನಗರ ಶಾಖೆಯಲ್ಲಿ ತೆರೆದಿದ್ದಾರೆ. ಇಬ್ಬರು ಡೈರೆಕ್ಟರ್ ಇರುವ ಸಂಸ್ಥೆಯಾಗಿದ್ದರೂ, ಬ್ಯಾಂಕ್ ಸಿಬಂದಿಯ ಶಾಮೀಲಾತಿಯಿಂದಾಗಿ ಕುಮಾರ್ ಹೆಸರಿನಲ್ಲೇ ಖಾತೆ ಓಪನ್ ಆಗಿತ್ತು. ಅಲ್ಲದೆ, ಆ ಖಾತೆಗೆ ಬೇರೊಬ್ಬ ವ್ಯಕ್ತಿಯಿಂದ 5 ಕೋಟಿ ದುಡ್ಡು ಪಡೆದಿದ್ದು ಅದೇ ದಿನ ನಾಲ್ಕು ಕೋಟಿ ರೂ. ಇನ್ನೊಬ್ಬ ವ್ಯಕ್ತಿಯ ಖಾತೆಗೆ ವರ್ಗಾವಣೆ ಆಗುತ್ತದೆ. ಮತ್ತೊಂದು ಕೋಟಿಯನ್ನು ಕುಮಾರ್ ತನ್ನ ಎಕ್ಸಿಸ್ ಬ್ಯಾಂಕಿನ ಎಸ್ ಬಿ ಖಾತೆಗೆ ವರ್ಗಾಯಿಸಿಕೊಂಡಿದ್ದರು.

ಇದೇ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದಿಂದ ಅಶ್ವಿನ್ ಮಹೇಂದ್ರ ಅವರಿಗೆ ನೋಟೀಸ್ ಬಂದಿತ್ತು. ತನ್ನ ಬ್ಯಾಂಕ್ ಖಾತೆಗಳ ಬಗ್ಗೆ ಚೆಕ್ ಮಾಡಿದಾಗ, ಐಸಿಐಸಿಐ ಶಾಖೆಯಲ್ಲಿ ತನಗರಿವಿಲ್ಲದೆ ಅಕೌಂಟ್ ಆರಂಭಿಸಿದ್ದು ಪತ್ತೆಯಾಗಿತ್ತು. ಆನಂತರ, ಬ್ಯಾಂಕಿನವರು ಸರಿಯಾದ ಮಾಹಿತಿ ನೀಡಿಲ್ಲವೆಂದು ವಿಜಯನಗರ ಠಾಣೆಯಲ್ಲಿ ಅವರ ವಿರುದ್ಧವೂ ಮತ್ತೊಂದು ಕೇಸು ದಾಖಲಿಸಿದ್ದರು. ಬೆನ್ನು ಬೆನ್ನಿಗೆ ಕೇಸು ದಾಖಲಾಗಿದ್ದರೂ, ಜಿಎಂ ಕುಮಾರ್ ಪೊಲೀಸರ ತನಿಖೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದು, ಒಂದು ವರ್ಷದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆಂದು ಸಿಸಿಬಿಯವರು ಚಾರ್ಜ್ ಶೀಟ್ ಹಾಕಿ ಸುಮ್ಮನಾಗಿದ್ದರು.

ತಗ್ಲಾಕ್ಕೊಂಡ ಕೋರ್ಟ್ ಕೇಸು

ಇದೇ ವೇಳೆ, ಬೆಂಗಳೂರಿನ ನಾಲ್ಕನೇ ಎಸಿಎಂ ಮ್ಯಾಜಿಸ್ಟ್ರೇಟ್ ಕೋರ್ಟ್ ಜಿಎಂ ಕುಮಾರ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಪೊಲೀಸರಿಗೆ ಸೂಚಿಸಿದ್ದಲ್ಲದೆ, ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಇತ್ತ ಮೂರು ಬಾರಿ ವಾರೆಂಟ್ ಆಗಿದ್ದರೆ ಜಿಎಂ ಕುಮಾರ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಸೆಷನ್ಸ್ ಕೋರ್ಟಿನಲ್ಲಿ ರಿಜೆಕ್ಟ್ ಆಗಿದ್ದರಿಂದ ಹೈಕೋರ್ಟಿನಲ್ಲಿ ಅಪೀಲು ಹಾಕಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಮೊದಲೇ ಹಲವು ಕೇಸು ಇದ್ದುದರಿಂದ ಜಾಮೀನು ನೀಡಲು ನಿರಾಕರಿಸಿದ್ದಲ್ಲದೆ, ಕಸ್ಟಡಿ ಪಡೆದು ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸುವಂತೆ ಪೊಲೀಸರಿಗೆ ಆದೇಶಿಸಿತ್ತು. ಇದರಿಂದ ಪೊಲೀಸರಿಗೆ ಕುಮಾರ್ ಅರೆಸ್ಟ್ ಮಾಡಲೇಬೇಕಾಗಿ ಬಂದಿದ್ದು, 2023ರ ನವೆಂಬರ್ ನಲ್ಲಿ ಬಂಧಿಸಿದ್ದರು. ಕೋರ್ಟಿಗೆ ಹಾಜರುಪಡಿಸಿದಾಗ, 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದರೂ, ಜೈಲಿಗೆ ಹೋಗದೆ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚೆಕ್ ಮಾಡಿದಾಗ ನಾರ್ಮಲ್ ಇದ್ದುದರಿಂದ ಮತ್ತೆ ಜೈಲಿಗೆ ಹಾಕಿದ್ದರು. ಅಲ್ಲಿ ರಕ್ತ ವಾಂತಿ ಬರುತ್ತೆಯೆಂದು ಹೇಳಿ ಆನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲಿದ್ದಾಗಲೇ ಆರೋಗ್ಯದ ನೆಪ ಹೇಳಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ. 2023ರ ಡಿಸೆಂಬರ್ ತಿಂಗಳಲ್ಲಿ ಸೆಷನ್ಸ್ ಕೋರ್ಟ್ ಷರತ್ತಿನ ಜಾಮೀನು ನೀಡಿತ್ತು.

ಇತ್ತ ಅಶ್ವಿನಿ ಮಹೀಂದ್ರ, ಹೈಕೋರ್ಟಿನಲ್ಲಿ ಕುಮಾರ್ ಮೇಲಿನ ಜಾಮೀನು ರದ್ದುಪಡಿಸಲು ಕೋರಿ ಅರ್ಜಿ ಹಾಕಿದ್ದರು. ಅಲ್ಲದೆ, ಹಣಕಾಸು ವರ್ಗಾವಣೆ ಬಗ್ಗೆ ಆತನ ಮೇಲೆ ಇಡಿ ತನಿಖೆ ನಡೆಸಬೇಕು. ಆರೋಪಿಯನ್ನು ಕಸ್ಟಡಿ ಪಡೆದು ತನಿಖೆ ನಡೆಸಬೇಕು ಎಂದು ಕೋರಿದ್ದರು. ಅಷ್ಟರಲ್ಲಿ ಕುಮಾರ್ ನಾಪತ್ತೆಯಾಗಿದ್ದಲ್ಲದೆ, ಪ್ರಕರಣವನ್ನು ಚಾಲೆಂಜ್ ಮಾಡಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಹಾಕಿದ್ದ. ಮೂರು ತಿಂಗಳ ಹಿಂದೆ ಮಧ್ಯಂತರ ತಡೆಯಾಜ್ಞೆ ನೀಡಿದ್ದ ಸುಪ್ರೀಂ ಕೋರ್ಟ್ ಮೊನ್ನೆ ಜುಲೈ 30ರಂದು ಜಿಎಂ ಕುಮಾರ್ ಅರ್ಜಿಯನ್ನು ವಜಾಗೊಳಿಸಿದ್ದು ಆಗಸ್ಟ್ 13ರ ಒಳಗೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು ಎಂದು ಆದೇಶ ಮಾಡಿದೆ. ಈ ನಡುವೆ, ಆರ್ಥಿಕ ಅಪರಾಧ ಆಗಿರುವುದರಿಂದ ತನಿಖೆಯನ್ನು ಇಡಿಯವರೇ ನಡೆಸಬೇಕೆಂದು ಪೊಲೀಸರು ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಉಡುಪಿ ನ್ಯಾಯಾಲಯವೊಂದು ಕಿಶನ್ ಹೆಗ್ಡೆ ಕೊಳ್ಕೆಬೈಲು ಪ್ರಕರಣದಲ್ಲಿ ಜಿಎಂ ಕುಮಾರ್ ವಿರುದ್ಧ ಎರಡು ವರ್ಷಗಳ ಶಿಕ್ಷೆ ಘೋಷಣೆ ಮಾಡಿತ್ತು. ಅದನ್ನು ಕುಮಾರ್ ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದು, ಪೆಂಡಿಂಗ್ ನಲ್ಲಿದೆ. ಒಟ್ಟಿನಲ್ಲಿ ಬಿಟಿವಿ ಹೆಸರಿನಲ್ಲಿ ತನ್ನ ಪಾಲುದಾರನಿಗೇ ಗುನ್ನಾ ಇಟ್ಟಿದ್ದ ಜಿಎಂ ಕುಮಾರ್ ಇದೀಗ ದೇಶದ ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿಯೂ ಹಿನ್ನಡೆ ಅನುಭವಿಸಿದ್ದು ತನಿಖೆ ಸರಿಯಾಗಿ ನಡೆದರೆ ಪರ್ಮನೆಂಟ್ ಜೈಲು ಸೇರುವುದು ಪಕ್ಕಾ ಆಗಿದೆ.

Court orders BTV Kannada news Owner G M kumar to surrender before court by August 13. Court orders BTV Kannada news Owner G M kumar to surrender before court by August 13.