Vijaypur, Baby dies pit: ಚರಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು ; ಮಹಾನಗರ ಪಾಲಿಕೆಯ ನಿರ್ಲಕ್ಷಕ್ಕೆ ಬಲಿಯಾದ ಮಗು, ಅಧಿಕಾರಿಗಳಿಗೆ ಕ್ಯಾಕರಿಸಿ ಉಗಿದ ಜನರು 

17-10-24 05:29 pm       HK News Desk   ಕರ್ನಾಟಕ

ಚರಂಡಿಯಲ್ಲಿ ಬಿದ್ದು ಎರಡು ವರ್ಷದ ಮಗು ಸಾವನ್ನಪ್ಪಿದ್ದ ದಾರುಣ ಘಟನೆ ನಗರದ ಬಡಿಕಮಾನ್ ರಸ್ತೆಯ ಬಳಿ ನಡೆದಿದೆ.

ವಿಜಯಪುರ, ಅ 18: ಚರಂಡಿಯಲ್ಲಿ ಬಿದ್ದು ಎರಡು ವರ್ಷದ ಮಗು ಸಾವನ್ನಪ್ಪಿದ್ದ ದಾರುಣ ಘಟನೆ ನಗರದ ಬಡಿಕಮಾನ್ ರಸ್ತೆಯ ಬಳಿ ನಡೆದಿದೆ.

ಮೃತ ಮಗುವನ್ನು 2 ವರ್ಷದ ಯಾಸೀನ್ ಸದ್ದಾಂ ಮುಲ್ಲಾ ಎಂದು ಗುರುತಿಸಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಭಾರೀ ಮಳೆ ಹಿನ್ನೆಲೆ ಚರಂಡಿ ಮೇಲಿನ ಕಲ್ಲು ತೆಗೆಯಲಾಗಿತ್ತು. ಬಳಿಕ ಮಹಾನಗರ ಪಾಲಿಕೆಯವರು ಚರಂಡಿಯ ಮೇಲ್ಭಾಗವನ್ನು ಮುಚ್ಚಿರಲಿಲ್ಲ. ಇದರಿಂದಾಗಿ ಮಂಗಳವಾರ ಅ.15 ಸಂಜೆ ಮಗು ಚರಂಡಿಗೆ ಬಿದ್ದು ಸಾವನ್ನಪ್ಪಿದೆ. ಅವಘಡಕ್ಕೆ ಮಹಾನಗರ ಪಾಲಿಕೆಯ ನಿರ್ಲಕ್ಷ್ಯವೇ ಕಾರಣ ಎಂದು ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.

ಮಹಾನಗರ ಪಾಲಿಕೆಯ ವಿರುದ್ಧ ಸ್ಥಳೀಯರು, ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಒಳಚರಂಡಿ ಕಾಮಗಾರಿ ಆರಂಭವಾಗಿ ಆರು ತಿಂಗಳು ಕಳೆದಿದೆ. ಗುತ್ತಿಗೆದಾರರು ಕಾಮಗಾರಿಯ ಬಗ್ಗೆ ಕಾಳಜಿ ವಹಿಸಿಲ್ಲ. ಕೊಳಚೆ ನೀರಿನ ಚರಂಡಿಗೆ ಸ್ಲ್ಯಾಬ್ ಹಾಕದ ಕಾರಣ, ಶಿಶು ಜೀವ ಕಳೆದುಕೊಂಡಂತಾಗಿದೆ,‌ ನಗರ ಶಾಸಕರು ಸೌಜನ್ಯಕ್ಕೂ ಈ ಭಾಗಕ್ಕೆ ಭೇಟಿ ನೀಡಿಲ್ಲ ಎಂದು ದೂರಿದರು.

ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಪ್ರತಿಭಟನಾ ಸ್ಥಳಕ್ಕೆ ಧಾವಿಸಿದರು. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ವಿಫಲವಾಗಿರುವ ಪಾಲಿಕೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವೈಯಕ್ತಿಕವಾಗಿ ₹2ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು. 

ಉಪ‌ ಮೇಯರ್ ದಿನೇಶ ಹಳ್ಳಿ ಮಾತನಾಡಿ, ‘ನೊಂದ ಕುಟುಂಬಕ್ಕೆ ಮಹಾನಗರ ಪಾಲಿಕೆಯಿಂದಲೂ ₹2ಲಕ್ಷ  ಪರಿಹಾರ ಧನ ನೀಡಲಾಗುವುದು’ ಎಂದರು.

ಸ್ಥಳೀಯ ಮುಖಂಡ ರಫೀಕ್ ಅಹ್ಮದ್ ಖಾಣೆ ಮಾತನಾಡಿ, ‘ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿ ಆರು ತಿಂಗಳಾಗುತ್ತಾ ಬಂದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ‌ ಬಗ್ಗೆ ವಾರ್ಡ್ ಪ್ರತಿನಿಧಿಸುವ ಸದಸ್ಯೆ ಕೂಡ ಅನೇಕ ಬಾರಿ ಪತ್ರ ಮುಖೇನ, ಮೌಖಿಕವಾಗಿಯೂ ವಿನಂತಿ ಮಾಡಿಕೊಂಡರೂ ಪ್ರಯೋಜನಾಗಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ಮುಗಿಲು‌ ಮುಟ್ಟಿದ ಆಕ್ರಂದನ ; 

ಬದುಕನ್ನು ನೋಡಲು ಆಗಷ್ಟೇ ಆರಂಭಿಸಿದ ಎರಡು ವರ್ಷದ ಕಂದಮ್ಮನನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು‌ ಮುಟ್ಟಿತ್ತು. ಸತತ ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಕಸ ತುಂಬಿದ ಚರಂಡಿಯಲ್ಲಿ ಬಾಲಕನ ಮೃತದೇಹ ಹೊರತಗೆಯುತ್ತಿದ್ದಂತೆ ಹೆತ್ತ ಕರುಳಿನ ಆಕ್ರಂದನ ನೋಡಿ ನೆರೆ ಹೊರೆಯವರ ಕಣ್ಣೀರಾದರು.

Two year old baby falls into pit, dies at vijyapur. Family alleges total negligence of city corporation.