ರಕ್ಷಕರೇ ಭಕ್ಷಕರಾದರೆ ನ್ಯಾಯ ಎಲ್ಲಿ? ಮತ್ತೆ ಮತ್ತೆ ಪೊಲೀಸ್ ಇಲಾಖೆಗೆ ಮುಜುಗರ, ಸಂದೇಶ್ ಪ್ರಕರಣದ ಬೆನ್ನಲ್ಲೇ ಡಿಜಿ ರಾಮಚಂದ್ರ ರಾವ್ ಕೇಸ್ ಮುನ್ನೆಲೆಗೆ, ಸಸ್ಪೆಂಡ್‌ ಕೇವಲ ಕಣ್ಣೊರೊಸೆವ ತಂತ್ರನಾ?

18-03-26 11:00 pm       supritha Jain   ಕರ್ನಾಟಕ

ಕಾನೂನು ಕಾಪಾಡಬೇಕಾದವರೇ ಗಂಭೀರ ಆರೋಪಗಳಿಗೆ ತುತ್ತಾಗುತ್ತಿರುವುದು, ಅಶ್ಲೀಲವಾಗಿ ವರ್ತಿಸುವುದು, ಇಂತಹ ಘಟನೆಗಳು ಆಗಾಗ ಮರುಕಳಿಸುತ್ತಿರುವುದು ರಾಜ್ಯದ ಪೊಲೀಸ್ ಇಲಾಖೆಯ ಮೇಲಿನ ನಂಬಿಕೆ, ಗೌರವಕ್ಕೆ ಹೊಡೆತ ನೀಡುತ್ತಿದೆ. ಮೂಡುಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪಗಳು ಈಗ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು, ಇದರ ಬೆನ್ನಲ್ಲೇ ಎರಡು ತಿಂಗಳ ಹಿಂದಿನ ಡಿಜಿಪಿ ರಾಮಚಂದ್ರ ರಾವ್ ಪ್ರಕರಣವೂ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ.

ಬೆಂಗಳೂರು, ಮಾರ್ಚ್ 18: ಕಾನೂನು ಕಾಪಾಡಬೇಕಾದವರೇ ಗಂಭೀರ ಆರೋಪಗಳಿಗೆ ತುತ್ತಾಗುತ್ತಿರುವುದು, ಅಶ್ಲೀಲವಾಗಿ ವರ್ತಿಸುವುದು, ಇಂತಹ ಘಟನೆಗಳು ಆಗಾಗ ಮರುಕಳಿಸುತ್ತಿರುವುದು ರಾಜ್ಯದ ಪೊಲೀಸ್ ಇಲಾಖೆಯ ಮೇಲಿನ ನಂಬಿಕೆ, ಗೌರವಕ್ಕೆ ಹೊಡೆತ ನೀಡುತ್ತಿದೆ. ಮೂಡುಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪಗಳು ಈಗ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು, ಇದರ ಬೆನ್ನಲ್ಲೇ ಎರಡು ತಿಂಗಳ ಹಿಂದಿನ ಡಿಜಿಪಿ ರಾಮಚಂದ್ರ ರಾವ್ ಪ್ರಕರಣವೂ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ.

ಸಂದೇಶ್ ಪಿಜಿ ವಿರುದ್ಧ ಸಂತ್ರಸ್ತೆಯರ ಸರಣಿ ದೂರುಗಳು ಹೊರಬಿದ್ದ ನಂತರ, ಸದ್ಯಕ್ಕೆ ಅವರನ್ನೇನೋ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಆದರೆ, “ಸಸ್ಪೆನ್ಷನ್ ಅನ್ನೋದು ಕೇವಲ ಕಣ್ಣೋರೆಸುವ ಕ್ರಮವೋ?” ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಯಾಕಂದ್ರೆ, ಪೊಲೀಸ್ ಅಧಿಕಾರಿಗಳ ಮೇಲೆ ಇಂತಹ ಘಟನೆಗಳು ನಡೆದಾಗಲೆಲ್ಲ ಸಸ್ಪೆಂಡ್ ಮಾಡೋದು, ಆನಂತರ ತನಿಖೆಯ ನೆಪದಲ್ಲಿ ಕೇಸನ್ನು ಮುಚ್ಚಿ ಹಾಕೋದು ನಡೆದೇ ಇದೆ. 

ಸರಣಿ ಆರೋಪಗಳಿಂದ ಸರ್ಕಾರಕ್ಕೆ ಮುಜುಗರ: 

ಮೂಲಗಳ ಪ್ರಕಾರ, ಸಂದೇಶ್ ಪಿಜಿ ಮಹಿಳೆಯರಿಗೆ ಕಾನೂನು ರಕ್ಷಣೆ ನೀಡಬೇಕಾದ ಠಾಣೆಯ ಒಳಗಡೆಯೇ ಅಸಭ್ಯ ವರ್ತನೆ ತೋರಿದ ಆರೋಪ ಎದುರಿಸುತ್ತಿದ್ದಾರೆ. ಠಾಣೆಗೆ ದೂರು ಹೇಳಿ ಸಹಾಯಕ್ಕೆ ಬಂದ ಮಹಿಳೆಯರನ್ನೇ ಇವರು ತನ್ನ ವೈಯಕ್ತಿಕ ವಾಂಛೆಗಳನ್ನು ಈಡೇರಿಸಿಕೊಳ್ಳಲು ಯತ್ನಿಸಿರುವ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಒಂದೆರಡಲ್ಲ, ಹಲವಾರು ಮಹಿಳೆಯರು ಈಗ ದನಿ ಎತ್ತಿರುವುದು ಪ್ರಕರಣದ ಗಂಭೀರತೆಯನ್ನು ತೋರಿಸಿದೆ.‌ ಈ ಪ್ರಕರಣ ಇಡೀ ಇಲಾಖೆಯ ಮರ್ಯಾದೆಯನ್ನೇ ಹಾಳು ಮಾಡಿದೆ. ಇದಷ್ಟೇ ಅಲ್ಲ, ಸಹೋದ್ಯೋಗಿಗಳೊಂದಿಗೆ ದರ್ಪದ ವರ್ತನೆ ಮತ್ತು ದೂರು ನೀಡಲು ಬಂದವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಬೆದರಿಕೆಗಳನ್ನೂ ನೀಡುತ್ತಿದ್ದ ಎಂಬ ಆರೋಪಗಳೂ ಸಂತ್ರಸ್ತೆಯರಿಂದ ಹೊರಬಂದಿದೆ.

ಮಾಧ್ಯಮ ಒತ್ತಡದ ಬಳಿಕವೇ ಕ್ರಮ?

ಪ್ರಕರಣದಲ್ಲಿ ಪ್ರಮುಖವಾಗಿ ಗಮನ ಸೆಳೆದ ಅಂಶವೆಂದರೆ ಸಂದೇಶ್ ವಿರುದ್ಧ ಹಿಂದಿನಿಂದಲೂ ಹಲವಾರು ದೂರುಗಳಿದ್ದರೂ ಕಠಿಣ ಕ್ರಮ ಕೈಗೊಳ್ಳದಿರುವುದು. ಹಿಂದೆ‌ ಬಜ್ಪೆ ಠಾಣೆಯಲ್ಲಿದ್ದಾಗಲೂ ಪ್ರಕರಣ ಒಂದರಲ್ಲಿ ಸ್ವೇಚ್ಛೆಯಿಂದ ವರ್ತಿಸಿ ಮೇಲಧಿಕಾರಿಗಳಿಗೆ ದೂರು ಹೋಗಿ ಅಮಾನತು ಆಗಿದ್ದರು. ಅದಕ್ಕು ಹಿಂದೆ ಧರ್ಮಸ್ಥಳ ಠಾಣೆಯಲ್ಲಿದ್ದಾಗಲೂ ಯುವತಿಯೊಬ್ಬಳ ಕೇಸಿನಲ್ಲಿ ಆಕೆಯ ಬೆನ್ನು ಬಿದ್ದು ಮೇಲಧಿಕಾರಿಗಳಿಗೆ ದೂರು ಹೋಗಿತ್ತು.‌ ಆದರೆ ಇಲಾಖೆಯಲ್ಲಿ ಕೆಲವರ ಕೃಪಾಕಟಾಕ್ಷ ಇದ್ದುದರಿಂದ ಬಚಾವ್ ಆಗಿದ್ದರು. ಈಗ ಮಹಿಳೆಯೊಬ್ಬರು ಗೃಹ ಸಚಿವರಿಗೆ ದೂರು ಕೊಟ್ಟು ಮಾಧ್ಯಮಗಳಲ್ಲಿ ಧ್ವನಿ ಎತ್ತಿದ್ದರಿಂದ ವಿಷಯ ಗಂಭೀರವಾಗಲು ಕಾರಣವಾಗಿತ್ತು. ಇಲಾಖೆಯ ಮಾನ ಉಳಿಸಿಕೊಳ್ಳುವುದಕ್ಕಾಗಿ ಅಮಾನತು ಕ್ರಮವನ್ನೂ ಕೈಗೊಂಡಿದ್ದಾರೆ. 

ಡಿಜಿಪಿ ರಾಮಚಂದ್ರ ರಾವ್ ಪ್ರಕರಣ ಮತ್ತೆ ಚರ್ಚೆಗೆ

ಸಂದೇಶ್ ಮಂಚಕ್ಕೆ ಕರೆದ ಪ್ರಸಂಗ ಎರಡು ತಿಂಗಳ ಹಿಂದೆ ತನ್ನ ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್ ಮಹಿಳೆಯೊಬ್ಬರನ್ನು ಮುತ್ತಿಕ್ಕಿ ಅಸಭ್ಯವಾಗಿ ವರ್ತಿಸಿದ ಪ್ರಕರಣ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯ ವಿಡಿಯೋ ಹೊರಬಂದಿದ್ದರಿಂದ ಪೊಲೀಸ್ ಇಲಾಖೆಯ ಗೌರವ ಮಣ್ಣು ಪಾಲಾಗುವಂತಾಗಿತ್ತು. ಯಾಕಂದ್ರೆ, ಡಿಜಿಪಿಯಂತಹ ಉನ್ನತ ಶ್ರೇಣಿಯಲ್ಲಿದ್ದ ಅಧಿಕಾರಿ ತನ್ನ ಸಮವಸ್ತ್ರದಲ್ಲೇ ಅಸಭ್ಯವಾಗಿ ವರ್ತಿಸಿದ್ದರು. ಘಟನೆ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಎಡಿಜಿಪಿ ಹಿತೇಂದ್ರ ಮತ್ತು ಎಸ್‌ಪಿ ರಿಷ್ಯಂತ್ ನೇತೃತ್ವದಲ್ಲಿ ವಿಚಾರಣಾ ಸಮಿತಿ ರಚಿಸಲಾಗಿತ್ತು. ಆದರೆ, ಈ ಸಮಿತಿಯ ತನಿಖೆ ಯಾವ ದಿಕ್ಕಿನಲ್ಲಿ ಹೋಗಿದೆ ಎಂಬ ಮಾಹಿತಿಯೇ ಇಲ್ಲ‌. ಒಂದೆಡೆ, ತಮಗಿಂತ ಮೇಲಿನ ಸ್ತರದ ಅಧಿಕಾರಿಯನ್ನು ತನಿಖೆ ನಡೆಸಬೇಕಿರುವುದು, ಮತ್ತೊಂದೆಡೆ ಸರ್ಕಾರದ ಒಳಗಡೆಯ ಲಾಬಿಗಳು. ಹೀಗಾಗಿ ಈ ಕುರಿತು ಇದುವರೆಗೆ ತನಿಖಾ ತಂಡ ಸ್ಪಷ್ಟ ತೀರ್ಮಾನಕ್ಕೆ ಬರಲಾಗಿಲ್ಲ. 

ಮೂಲಗಳ ಪ್ರಕಾರ,‌ ಪ್ರಕರಣದ ವಿಚಾರಣೆಯಲ್ಲಿ ಹಲವು ಅಂಶಗಳು ಬಹಿರಂಗವಾಗಿದ್ದು, ವರದಿ ದೋಷಾರೋಪ ಸೂಚಿಸುವಂತಿದೆ ಎನ್ನಲಾಗುತ್ತಿದೆ. ಆದಾಗ್ಯೂ, ನಿವೃತ್ತಿಯ ವರೆಗೆ ಕಾಯುವ ಮೂಲಕ ಪ್ರಕರಣವನ್ನು ಗೌಣವಾಗಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಗಳಿವೆ. ಇನ್ನೆರಡು ತಿಂಗಳಲ್ಲಿ ರಾಮಚಂದ್ರ ರಾವ್‌ ನಿವೃತ್ತಿ ಆಗಲಿದ್ದು ಆ ಬಳಿಕ ಕೇಸ್‌ ಇದ್ದರೇನು, ಹೋದರೇನು ಎನ್ನುವಂತಾಗುತ್ತದೆ. ಯಾಕಂದ್ರೆ, ಅಲ್ಲಿ ಮಹಿಳೆ ದೂರುದಾರಳಲ್ಲ. ಬರೀ ಸಾಕ್ಷಿ ಅಷ್ಟೇ. ವಿಡಿಯೋ ಸರ್ಕಾರಕ್ಕೆ ಮುಜುಗರ ತಂದಿದ್ದಕ್ಕಷ್ಟೇ ತನಿಖೆಗೆ ವಹಿಸಲಾಗಿತ್ತು.  

ಜನರ ನಂಬಿಕೆಗೆ ಹೊಡೆತ

ಆದರೆ, ಇಂಥಹ ಲೋಪಗಳು ಇಲಾಖೆಯ ಒಳಗಡೆ ಮತ್ತೆ ಮತ್ತೆ ನಡೆಯುತ್ತಿರುವುದು ತೀವ್ರ ಚರ್ಚೆಗೀಡಾಗಿದೆ. “ನ್ಯಾಯ ಕೇಳಿಕೊಂಡು ಹೋಗುವ ಸ್ಥಳವೇ ಸುರಕ್ಷಿತ ಅಲ್ಲದಿದ್ದರೆ, ಸಾಮಾನ್ಯ ಜನರಿಗೆ ನ್ಯಾಯ ಎಲ್ಲಿ ಸಿಕ್ಕೀತು?” ಎಂಬ ಗಂಭೀರ ಪ್ರಶ್ನೆ ಎದ್ದಿದೆ.

ವಿಶೇಷವಾಗಿ ಮಹಿಳೆಯರ ಭದ್ರತೆ ಮತ್ತು ನ್ಯಾಯದ ವಿಚಾರದಲ್ಲಿ ಪೊಲೀಸ್ ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿಯುವ ಆತಂಕ ವ್ಯಕ್ತವಾಗುತ್ತಿದೆ. ಹೀಗಾಗಿ ಸಂದೇಶ್ ಪಿಜಿ ಪ್ರಕರಣದಲ್ಲಿ ಮಹಿಳೆಯರು ಹಲವಾರು ಆರೋಪ ಮಾಡಿರುವುದರಿಂದ ಕೇವಲ ಅಮಾನತು ಕ್ರಮ ಸಾಲದು. ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಾನೂನುಬದ್ಧ ಶಿಕ್ಷೆ ವಿಧಿಸಬೇಕು ಎಂಬ ಒತ್ತಾಯ ಹೆಚ್ಚಾಗಿದೆ.