Bidar Contractor Suicide, Priyank Kharge: ಪ್ರಿಯಾಂಕ್ ಖರ್ಗೆ ಆಪ್ತನಿಂದ 1 ಕೋಟಿ ರೂ. ಹಣಕ್ಕಾಗಿ ಕಿರುಕುಳ ; ಬೇಸತ್ತು ರೈಲಿಗೆ ತಲೆ ಕೊಟ್ಟ 26 ವರ್ಷದ ಗುತ್ತಿಗೆದಾರ, ಬಿಜೆಪಿಗೆ ಸಿಕ್ತು ಹೊಸ ಅಸ್ತ್ರ, ನಾನೇ ಖುದ್ದಾಗಿ ತನಿಖೆ ಮಾಡಿಸ್ತೀನಿ ಎಂದ ಸಚಿವ ! 

26-12-24 08:03 pm       Bangalore Correspondent   ಕರ್ನಾಟಕ

2022ರಲ್ಲಿ ರಾಜ್ಯದಲ್ಲಿ ಸದ್ದು ಮಾಡಿದ್ದ ಹಾಗೂ ಅಂದು ಸಚಿವ ಕೆ.ಎಸ್. ಈಶ್ವರಪ್ಪನವರ ರಾಜೀನಾಮೆಗೆ ಕಾರಣವಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಹೋಲುವಂಥ ಮತ್ತೊಂದು ಪ್ರಕರಣವೀಗ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಕಲಬುರಗಿಯಲ್ಲಿ ಸಚಿನ್ (26) ಎಂಬ ಗುತ್ತಿಗೆದಾರನ ಶವವೊಂದು ರೈಲ್ವೆ ಹಳಿ ಮೇಲೆ ಸಿಕ್ಕಿದೆ.

ಬೆಂಗಳೂರು, ಡಿ 26: 2022ರಲ್ಲಿ ರಾಜ್ಯದಲ್ಲಿ ಸದ್ದು ಮಾಡಿದ್ದ ಹಾಗೂ ಅಂದು ಸಚಿವ ಕೆ.ಎಸ್. ಈಶ್ವರಪ್ಪನವರ ರಾಜೀನಾಮೆಗೆ ಕಾರಣವಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಹೋಲುವಂಥ ಮತ್ತೊಂದು ಪ್ರಕರಣವೀಗ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಕಲಬುರಗಿಯಲ್ಲಿ ಸಚಿನ್ (26) ಎಂಬ ಗುತ್ತಿಗೆದಾರನ ಶವವೊಂದು ರೈಲ್ವೆ ಹಳಿ ಮೇಲೆ ಸಿಕ್ಕಿದೆ.

ಇವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ ಎಂಬ ಗ್ರಾಮದವರಾಗಿದ್ದು, ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಶವದ ಜೊತೆಗೆ ಡೆತ್ ನೋಟ್ ಕೂಡ ಸಿಕ್ಕಿದ್ದು, ಅದರಲ್ಲಿ ಪ್ರಿಯಾಂಕ್ ಖರ್ಗೆಯವರ ಆಪ್ತರಾದ ರಾಜು ಕಪನೂರು ಅವರು ತಮಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದು ಅದನ್ನು ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆಯಲಾಗಿದೆ. 

ಆತ್ಮಹತ್ಯೆ ಪತ್ರದಲ್ಲೇನಿದೆ?

ರಾಜು ಅವರ ವಿರುದ್ಧ ಗುತ್ತಿಗೆದಾರ ಸಚಿನ್ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಸರ್ಕಾರದ ನಾನಾ ಕಾಮಗಾರಿಗಳನ್ನು ಕೊಡುವುದಾಗಿ ನಂಬಿಸಿ ತಮ್ಮಿಂದ 15 ಲಕ್ಷ ರೂ.ಗಳನ್ನು ಲಂಚದ ರೂಪದಲ್ಲಿ ರಾಜು ಪಡೆದಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಸಚಿನ್. ಅಲ್ಲದೆ, ಇತ್ತೀಚೆಗೆ 1 ಕೋಟಿ ರೂ. ನೀಡುವಂತೆ ತಮಗೆ ದುಂಬಾಲು ಬಿದ್ದಿದ್ದರು. ಹಣ ಕೊಡದಿದ್ದರೆ ತಮ್ಮನ್ನು ಕೊಲೆ ಮಾಡಿಸುವುದಾಗಿ ಹೆದರಿಸಿದ್ದರು ಎಂದು ಆತ್ಮಹತ್ಯೆ ಪತ್ರದಲ್ಲಿ ಸಚಿನ್ ಅವರು ಆರೋಪಿಸಿದ್ದಾರೆ. ರಾಜು ಕಪನೂರು ಜೊತೆಗೆ, ನಂದಕುಮಾರ್ ನಾಗಭುಜಂಗೆ, ಗೋರಖನಾಥ್ ಸೇರಿ 6 ಜನರ ವಿರುದ್ಧ ಸಚಿನ್ ಅವರು ಜೀವ ಬೆದರಿಕೆಯ ಆರೋಪ ಮಾಡಿದ್ದಾರೆ.

ಕುಟುಂಬಸ್ಥರ ಗೋಳು ಸಚಿನ್ ಅವರ ಮೃತದೇಹ ನೋಡುತ್ತಿದ್ದಂತೆ ಕುಟುಂಬಸ್ಥರು ಗೋಳಿಟ್ಟಿದ್ದಾರೆ. ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ. ಅತ್ತ ಪೊಲೀಸರು ಶವವನ್ನು ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಈ ಪ್ರಕರಣದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಗುತ್ತಿಗೆದಾರ ಸಚಿನ್ ಅವರ ಆತ್ಮಹತ್ಯೆ ಪ್ರಕರಣದ ವಿಚಾರ ಮಾಧ್ಯಮಗಳ ಮೂಲಕ ನನಗೆ ತಿಳಿದುಬಂದಿದೆ. ನನ್ನ ಆಪ್ತನೇ ಆಗಿರಲಿ ಅಥವಾ ಕಾಂಗ್ರೆಸ್ ಪಕ್ಷದವನೇ ಆಗಿರಲಿ. ತಪ್ಪು ಯಾರೇ ಮಾಡಿದ್ದರೂ ಅದು ತಪ್ಪೇ. ನಾನೇ ಖುದ್ದಾಗಿ ಇಲಾಖಾ ತನಿಖೆ ಮಾಡಿಸುತ್ತೇನೆ. ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಆಶಿಸುತ್ತೇನೆ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದ್ದಾರೆ.

ಯಾರು ಈ ರಾಜು ಕಪನೂರ್?

ರಾಜು ಕಪನೂರ್ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ. ಕಲಬುರಗಿ ಮಹಾನಗರ ಪಾಲಿಕೆ ಸದಸ್ಯನೂ ಆಗಿದ್ದ ರಾಜು ಕಪನೂರ್, ಈ ಹಿಂದೆ ಅಕ್ರಮ ಪಿಸ್ತೂಲ್ ಹೊಂದಿರೋ ಆರೋಪದಲ್ಲಿ ಅರೆಸ್ಟ್ ಆಗಿದ್ದ.

ರಾಜು ಕಪನೂರನನ್ನು ಯಡ್ರಾಮಿ ಪೊಲೀಸರು ಕಂಟ್ರಿಮೇಡ್​ ಪಿಸ್ತೂಲ್​ ಖರೀದಿ ಆರೋಪದ ಮೇಲೆ ಬಂಧನ ಮಾಡಿದ್ದರು. ಯಡ್ರಾಮಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಗುರಲಿಂಗಪ್ಪ ಎಂಬಾತನಿಂದ ರಾಜು ಕಪನೂರ ಸೆಪ್ಟೆಂಬರ್​ನಲ್ಲಿ ಎರಡು ಕಂಟ್ರಿಮೇಡ್​ ಪಿಸ್ತೂಲ್​ ಮತ್ತು 30 ಗುಂಡು ಖರೀದಿ ಮಾಡಿದ್ದ ಎನ್ನಲಾಗಿದೆ. ಈ ಕುರಿತು ಗುರುಲಿಂಗಪ್ಪ ಪೊಲೀಸರ ಮುಂದೆ ನೀಡಿದ್ದ ವಿಡಿಯೋ ಹೇಳಿಕೆಯಲ್ಲಿ ಕಪನೂರ್​ ಹೆಸರು ಉಲ್ಲೇಖಿಸಿದ್ದ. ಇದರಿಂದ ಪೊಲೀಸರು ಕಪನೂರ್​ಗೆ ಎರಡು ಬಾರಿ ನೋಟಿಸ್​ ನೀಡಿದ್ದರು. ಆದರೆ ನೋಟಿಸ್​ ಕ್ಯಾರೇ ಎನ್ನದ ರಾಜು ಕಪನೂರ್​ನನ್ನು ಪೊಲೀಸರು ಬಂಧಿಸಿದ್ದರು.

A 26-year-old contractor ended his life in Bidar district leaving behind a seven-page note on Thursday in which he has made allegations against some Congress leaders and a former councillor of the Kalaburagi City Corporation.