Pratap Simha, Banu Mushtaq: ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿವಾದ ; ಹೈಕೋರ್ಟಿನಲ್ಲಿ ಪ್ರತಾಪ್ ಸಿಂಹ ವಾದಕ್ಕೆ ಹಿನ್ನಡೆ, ತಕರಾರು ಅರ್ಜಿ ವಜಾ, ನಿಮ್ಮ ಯಾವ ಹಕ್ಕು ಉಲ್ಲಂಘನೆ ಆಗಿದೆಯೆಂದು ಕೋರ್ಟ್ ಪ್ರಶ್ನೆ 

15-09-25 03:39 pm       HK News Desk   ಕರ್ನಾಟಕ

ಭಾರೀ ವಿವಾದ ಮತ್ತು ಕುತೂಹಲ ಮೂಡಿಸಿರುವ ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ರಾಜ್ಯ ಸರ್ಕಾರ ಆಹ್ವಾನ ನೀಡಿರುವುದನ್ನು ಪ್ರಶ್ನಿಸಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತಿತರರು ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.

ಬೆಂಗಳೂರು, ಸೆ.15: ಭಾರೀ ವಿವಾದ ಮತ್ತು ಕುತೂಹಲ ಮೂಡಿಸಿರುವ ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ರಾಜ್ಯ ಸರ್ಕಾರ ಆಹ್ವಾನ ನೀಡಿರುವುದನ್ನು ಪ್ರಶ್ನಿಸಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತಿತರರು ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಆಮೂಲಕ ಪ್ರತಾಪಸಿಂಹ ವಾದಕ್ಕೆ ಹಿನ್ನಡೆಯಾಗಿದ್ದು ದಸರಾ ಉದ್ಘಾಟನೆಗೆ ಹೈಕೋರ್ಟ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ. 

ಅರ್ಜಿದಾರರಿಗೆ ನಿಮ್ಮ ಯಾವ ಹಕ್ಕು ಉಲ್ಲಂಘನೆ ಆಗಿದೆಯೆಂದು ಹೈಕೋರ್ಟ್ ಪ್ರಶ್ನೆ ಮಾಡಿದೆ. ಹಕ್ಕು ಉಲ್ಲಂಘನೆ ಆಗಿರುವುದು ಕಂಡುಬರದೇ ಇರುವುದರಿಂದ ಪಿಐಎಲ್ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ನ್ಯಾ. ಸಿ.ಎಂ. ಜೋಶಿ ಅವರಿದ್ದ ಪೀಠ ಆದೇಶ ಹೊರಡಿಸಿದೆ. 

ದಸರಾ ಉದ್ಘಾಟನೆಯನ್ನು ಯಾವುದೇ ಕಾರಣಕ್ಕೂ ಬಾನು ಮುಷ್ತಾಕ್ ಕೈಯಿಂದ ಮಾಡಿಸಬಾರದು, ಇದರಿಂದ ಬಹುಸಂಖ್ಯಾತ ಜನರ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಪ್ರತಾಪ್ ಸಿಂಹ ಸೇರಿದಂತೆ ಮೂವರು ಸೇರಿ ಹೈಕೋರ್ಟಿಗೆ ಪಿಐಎಲ್ ಅರ್ಜಿ ಸಲ್ಲಿಸಿದ್ದರು. ಬಾನು ಮುಷ್ತಾಕ್ ಆಹ್ವಾನದಿಂದ ಯಾವುದೇ ಹಕ್ಕು ಉಲ್ಲಂಘನೆ ಆಗಿಲ್ಲ. ಸಂವಿಧಾನದ ಯಾವ ವಿಧಿಯನ್ನೂ ಉಲ್ಲಂಘಿಸಲ್ಲ. ದೇವಸ್ಥಾನಕ್ಕೆ ಹಿಂದೂಯೇತರರು ಬರಬಾರದು ಎಂಬ ನಿಯಮ ಇಲ್ಲ. ಮುಜರಾಯಿ ಇಲಾಖೆಯಿಂದಲೂ ಅಂತಹ ನಿಯಮ ಇಲ್ಲವೆಂದು ಇದಕ್ಕೆ ಸಂಬಂಧಿಸಿದ ಸುತ್ತೋಲೆಯನ್ನು ಕೋರ್ಟ್ ಮುಂದೆ ಇಡಲಾಗಿತ್ತು. 

ವಿರೋಧ ವ್ಯಕ್ತಪಡಿಸಿ ವಿವಾದ ಸೃಷ್ಟಿಸಿರುವ ಅರ್ಜಿದಾರರಿಗೆ ದಂಡ ವಿಧಿಸಬೇಕು ಎಂದೂ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹೈಕೋರ್ಟಿನಲ್ಲಿ ವಾದ ಮಂಡಿಸಿದ್ದಾರೆ. ಆದರೆ ಅರ್ಜಿದಾರರ ವಿರುದ್ಧ ದಂಡ ಹಾಕಬೇಕೆಂಬ ಒತ್ತಾಯಕ್ಕೆ ಹೈಕೋರ್ಟ್ ನಿರಾಕರಿಸಿದ್ದು ಅಭಿಪ್ರಾಯ ಹೇಳುವುದು ಎಲ್ಲರ ಹಕ್ಕು, ಆದರೆ ನಿಮ್ಮ ಸಾಂವಿಧಾನಿಕ ಹಕ್ಕು ಏನು ಕಸಿಯಲಾಗಿದೆ? ಪೂಜಾರಿಯ ಪೂಜೆಯ ಹಕ್ಕನ್ನು ಕಸಿದರೆ, ವ್ಯಕ್ತಿಯ ಆಸ್ತಿ ಕಸಿದರೆ ಪ್ರಶ್ನೆ ಮಾಡಬಹುದು, ಆದರೆ ಇಲ್ಲಿ ನಿಮ್ಮ ಯಾವ ಹಕ್ಕು ಕಸಿದಿಲ್ಲ ಅಲ್ಲವೇ ಎಂದು ಹೈಕೋರ್ಟ್ ಪ್ರಶ್ನಿಸಿದೆ. 

ಪ್ರತಾಪ್ ಸಿಂಹ ಪರ ವಕೀಲರು ಬಾನು ಮುಷ್ತಾಕ್ ಅವರಿಗೆ ಮೂರ್ತಿ ಪೂಜೆ ಬಗ್ಗೆ ನಂಬಿಕೆ ಇಲ್ಲ, ಅರಿಶಿನ ಕುಂಕುಮದ ಬಗ್ಗೆ ನಂಬಿಕೆ ಇಲ್ಲ, ಸಂಪ್ರದಾಯ ವಿರೋಧಿಯಾಗಿದ್ದಾರೆ ಎಂಬ ಆರೋಪ ಮಾಡಿದಾಗ, ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸನಾತನ ಧರ್ಮ ಎಲ್ಲಾ ವಿಧದ ನಂಬಿಕೆಯನ್ನು ಒಳಗೊಂಡಿದೆ. ದೇವಾಲಯ ಯಾರಿಗೋ ಒಬ್ಬರಿಗೆ ಸೇರಿದ್ದಲ್ಲ, ಎಲ್ಲರೂ ಹೋಗಿ ಬರಬಹುದು ಎಂದು ಸಮರ್ಥನೆ ಮಾಡಿಕೊಂಡರು. ಹೀಗಾಗಿ ಈ ರೀತಿಯ ಅರ್ಜಿಗಳನ್ನು ವಜಾಗೊಳಿಸಲು ಕೇಳಿಕೊಂಡರು.

In a significant setback to former Mysuru MP Pratap Simha, the Karnataka High Court on Friday dismissed the PILs filed against the state government's decision to invite writer Banu Mushtaq to inaugurate the Mysuru Dasara celebrations. The court questioned the very basis of the petitions, asking the petitioners to clarify how any of their fundamental rights were being violated.