ADGP Chandrashekhar, Seemanth Kumar Singh: ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ; ಎಡಿಜಿಪಿ ಚಂದ್ರಶೇಖರ್, ಸೀಮಂತ್ ಕುಮಾರ್ ಸಿಂಗ್ ಸೇರಿ 30 ಐಪಿಎಸ್ ಅಧಿಕಾರಿಗಳ ವಿರುದ್ಧ ದೂರುಗಳ ಪಟ್ಟಿ, ಸರ್ಕಾರದ ನಿರ್ಲಕ್ಷ್ಯ! 

30-08-26 07:31 pm       HK News Staffer   ಕರ್ನಾಟಕ

2023ರಲ್ಲಿ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರಾಜ್ಯದಲ್ಲಿ 30ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳ ವಿರುದ್ಧ ಗುರುತರ ಆರೋಪ ಕೇಳಿಬಂದಿದ್ದು, ಅಧಿಕಾರ ದುರುಪಯೋಗ, ನಿಯಮ ಉಲ್ಲಂಘನೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಕ್ರಮ ಸಂಪಾದನೆ ಇತ್ಯಾದಿ ಆರೋಪದ ಬಗ್ಗೆ ಸರ್ಕಾರಕ್ಕೆ ದೂರುಗಳು ಸಲ್ಲಿಕೆಯಾಗಿದ್ದು, ತನಿಖೆ ಬಾಕಿ ಇರುವುದನ್ನು ಸ್ವತಃ ಈಗಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಧಾನಸಭೆ ಅಧಿವೇಶನದಲ್ಲಿ ಒಪ್ಪಿಕೊಂಡಿದ್ದಾರೆ.

Photo credits : THE FILE

ಬೆಂಗಳೂರು, ಆ.30: 2023ರಲ್ಲಿ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರಾಜ್ಯದಲ್ಲಿ 30ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳ ವಿರುದ್ಧ ಗುರುತರ ಆರೋಪ ಕೇಳಿಬಂದಿದ್ದು, ಅಧಿಕಾರ ದುರುಪಯೋಗ, ನಿಯಮ ಉಲ್ಲಂಘನೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಕ್ರಮ ಸಂಪಾದನೆ ಇತ್ಯಾದಿ ಆರೋಪದ ಬಗ್ಗೆ ಸರ್ಕಾರಕ್ಕೆ ದೂರುಗಳು ಸಲ್ಲಿಕೆಯಾಗಿದ್ದು, ತನಿಖೆ ಬಾಕಿ ಇರುವುದನ್ನು ಸ್ವತಃ ಈಗಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಧಾನಸಭೆ ಅಧಿವೇಶನದಲ್ಲಿ ಒಪ್ಪಿಕೊಂಡಿದ್ದಾರೆ.

2023ರ ಮೇ 20ರಿಂದ ಈವರೆಗೆ ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳ ವಿರುದ್ಧ ಸಲ್ಲಿಕೆಯಾಗಿರುವ ದೂರು, ಪ್ರಕರಣಗಳ ಸದ್ಯದ ಸ್ಥಿತಿಗತಿ ಕುರಿತಾಗಿ ಶಾಸಕ ಎಚ್.ಟಿ ಮಂಜು ಮಾಹಿತಿ ಕೇಳಿದ್ದು, ಸಿಎಂ ಡಿಕೆ ಶಿವಕುಮಾರ್ ಸದನದಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಯಾರ ವಿರುದ್ಧ ಎಷ್ಟು ಪ್ರಕರಣ ಬಾಕಿ ಇದೆ, ಎಷ್ಟು ದೂರು ಸಲ್ಲಿಕೆಯಾಗಿದೆ, ಎಷ್ಟು ವಿಲೇವಾರಿಯಾಗಿದೆ ಇತ್ಯಾದಿ ಮಾಹಿತಿಗಳನ್ನು ಮಂಜು ತನ್ನ ಚುಕ್ಕಿ ರಹಿತ ಪ್ರಶ್ನೆಯಲ್ಲಿ ಕೇಳಿದ್ದರು. ಈ ಬಗ್ಗೆ ಸಿಎಂ ಡಿಕೆಶಿ ಹತ್ತಕ್ಕೂ ಹೆಚ್ಚು ಪುಟಗಳ ವರದಿಯನ್ನು ಸದನದಲ್ಲಿ ಬಿಡುಗಡೆ ಮಾಡಿದ್ದು ಹೆಡ್ ಲೈನ್ ಕರ್ನಾಟಕಕ್ಕೆ ಲಭ್ಯವಾಗಿದೆ.

ಇದರಲ್ಲಿ ಹಲವು ಹಿರಿಯ ಐಪಿಎಸ್ ಅಧಿಕಾರಿಗಳ ಕುರಿತ ದೂರುಗಳಲ್ಲಿ ತನಿಖೆ ಬಾಕಿ ಇರುವುದನ್ನು ತಿಳಿಸಲಾಗಿದೆ. ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಗರಿಷ್ಠ ಎಂಟು ದೂರುಗಳು ಸಲ್ಲಿಕೆಯಾಗಿದ್ದು ಡಿಜಿ-ಐಜಿಯಿಂದ ವರದಿ ಸಲ್ಲಿಕೆಯಾಗಿಲ್ಲ ಎಂದು ತಿಳಿಸಲಾಗಿದೆ. ಇನ್ನೂ ಕೆಲವು ದೂರುಗಳು ಒಳಾಡಳಿತ ಇಲಾಖೆಯಲ್ಲಿ ಪರಿಶೀಲನೆಯಲ್ಲಿದ್ದರೆ, ಕೆಲವು ದೂರುಗಳನ್ನು ಪರಿಶೀಲಿಸಿ ಮುಕ್ತಾಯಗೊಳಿಸಿರುವುದಾಗಿ ತಿಳಿಸಲಾಗಿದೆ.

ಎ.ಎನ್ ಪ್ರಕಾಶ್ ಗೌಡ ಅವರ ವಿರುದ್ಧ ಅಧಿಕಾರ ದುರುಪಯೋಗ, ಜೀವ ಬೆದರಿಕೆ ಕುರಿತು ದೂರು ಸಲ್ಲಿಕೆಯಾಗಿದ್ದು ಸಂಬಂಧಿತ ಇಲಾಖೆ ದೂರನ್ನು ತನಿಖೆಗೊಳಪಡಿಸಿ ಮುಕ್ತಾಯಗೊಳಿಸಿದೆ. ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಅಧಿಕಾರ ದುರುಪಯೋಗ, ಕಾನೂನು ಉಲ್ಲಂಘನೆ, ಮಾನಹಾನಿ ಮತ್ತು ಇತ್ಯಾದಿ ಆರೋಪಗಳಿಗೆ ಸಂಬಂಧಿಸಿದಂತೆ ಮೂರು ದೂರು ಸಲ್ಲಿಕೆಯಾಗಿದ್ದು, ಒಂದನ್ನು ವಿಲೇ ಮಾಡಿದ್ದಾಗಿ ತೋರಿಸಿದ್ದರೆ ಮೂರು ದೂರುಗಳಿಗೆ ಡಿಜಿಯಿಂದ ವರದಿ ನಿರೀಕ್ಷಿಸಲಾಗಿದೆ.

ಪರಿಶಿಷ್ಟ ಜಾತಿಯ ಪತ್ರಿಕಾ ಸಂಪಾದಕರಿಗೆ ಮುದ್ರಣ, ಯಂತ್ರೋಪಕರಣಗಳನ್ನು ಖರೀದಿಸಲು ಅನುದಾನ ಬಿಡುಗಡೆಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆಂದು ಆರೋಪಕ್ಕೆ ಗುರಿಯಾಗಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿಂದಿನ ಆಯುಕ್ತ ಪಿ.ಎಸ್ ಹರ್ಷ ವಿರುದ್ಧದ ದೂರನ್ನು ವಿಲೇವಾರಿ ಮಾಡಲಾಗಿದೆ. ಶಿವಮೊಗ್ಗ ಎಸ್ಪಿಯಾಗಿದ್ದ ಮಿಥುನ್ ಕುಮಾರ್ ವಿರುದ್ಧ ಕಾನೂನು ಬಾಹಿರವಾಗಿ ಮಸೀದಿ ಚಟುವಟಿಕೆ ನಡೆಸುತ್ತಿದ್ದ ಬಗ್ಗೆ ದೂರು ಸಲ್ಲಿಕೆಯಾಗಿದ್ದರೂ ಕ್ರಮ ಕೈಗೊಳ್ಳದಿರುವುದು ಮತ್ತು ಕರ್ತವ್ಯ ಲೋಪ ಎಸಗಿರುವ ಬಗ್ಗೆ ದೂರು ಸಲ್ಲಿಕೆಯಾಗಿದ್ದು, ಡಿಜಿ ಐಜಿಯವರು ವರದಿ ಸಲ್ಲಿಸಿಲ್ಲ.

ಬೆಂಗಳೂರು ಸಿಸಿಬಿಯಲ್ಲಿದ್ದ ಸಂದೀಪ್ ಪಾಟೀಲ್ ವಿರುದ್ಧ ಅಧಿಕಾರ ದುರುಪಯೋಗ ಮತ್ತು ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾದ ಆರೋಪಗಳ ಬಗ್ಗೆ ದೂರುಗಳಿದ್ದು, ಡಿಜಿ ಮತ್ತು ಐಜಿಯವರಿಂದ ವರದಿ ನಿರೀಕ್ಷಿಸಲಾಗಿದೆ ಎಂದು ತೋರಿಸಲಾಗಿದೆ. ಹಾಸನ ಎಸ್ಪಿಯಾಗಿದ್ದ ಮೊಹಮ್ಮದ್ ಸಜಿತಾ ವಿರುದ್ಧ ಸರ್ಕಾರಿ ವಾಹನ ದುರ್ಬಳಕೆ, ಅಧಿಕಾರ ದುರುಪಯೋಗ ಮಾಡಿರುವ ಕುರಿತು ದೂರುಗಳಿವೆ. ಬಳ್ಳಾರಿ ಎಸ್ಪಿಯಾಗಿದ್ದ ವರ್ತಿಕಾ ಕಟಿಯಾರ್ ವಿರುದ್ಧ ಬಳ್ಳಾರಿ ಜಿಲ್ಲೆಯ ಸಂಸದರ ಮತ್ತು ಸಂಡೂರು ತಾಲೂಕಿನ ಶಾಸಕರ ವಿರುದ್ಧ ಅನಾವಶ್ಯಕವಾಗಿ ಆಧಾರ ರಹಿತ ಆರೋಪಗಳನ್ನು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲು ಕುಮ್ಮಕ್ಕು ನೀಡಿರುವ ಆರೋಪದ ಬಗ್ಗೆ ದೂರು ತನಿಖೆಗೆ ಬಾಕಿ ಇದೆ. ಶ್ರೀಮತಿ ರೂಪಾ ವಿರುದ್ಧ ಅಡಿಟ್ ಮಾಡಲು ಸೂಕ್ತ ದಾಖಲೆಗಳನ್ನು ಸಕಾಲದಲ್ಲಿ ಒದಗಿಸದೇ ಕಂಪೆನೀಸ್ ಏಕ್ಟ್ -2013 ಅನ್ನು ಉಲ್ಲಂಘಿಸಿರುವುದಾಗಿ ದೂರುಗಳಿದ್ದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಲ್ಲಿ ಪರಿಶೀಲನೆಯಲ್ಲಿದೆ.

ಚಂದ್ರಶೇಖರ್ ವಿರುದ್ಧ ದೂರಿನ ಸರಮಾಲೆ 

ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಖಾಸಗಿ ಕಂಪನಿಯ ಫ್ಲಾಟ್ ಗಳನ್ನು ಮತ್ತೊಬ್ಬರ ಹೆಸರಿನಲ್ಲಿ ಬೇರೆಯವರಿಗೆ ಮಾರಲು ಸಹಕರಿಸಿ ವಂಚನೆ ಎಸಗಿರುತ್ತಾರೆ ಮತ್ತು ವ್ಯಕ್ತಿಯೊಬ್ಬರ ವಿರುದ್ಧ ಸುಳ್ಳು ಎಫ್ಐಆರ್ ದಾಖಲಿಸಿ ಅಧಿಕಾರ ದುರುಪಯೋಗ ಮಾಡಿರುವ ಬಗ್ಗೆ ದೂರುಗಳಿದ್ದು ತನಿಖೆ ಬಾಕಿ ಇದೆ. ಇವರದೇ ವಿರುದ್ಧ ಇನ್ನೊಂದು ದೂರಿನಲ್ಲಿ ಸರ್ಕಾರದ ಪೂರ್ವಾನುಮತಿ ಪಡೆಯದೇ ಕುಟುಂಬ ಸದಸ್ಯರ ಹೆಸರಿನಲ್ಲಿ ಒಟ್ಟು 10 ಕಂಪನಿಗಳಿಗೆ ನಿರ್ದೇಶಕರನ್ನಾಗಿ ಮಾಡಿ ಹಾಗೂ ಹಲವು ಕಂಪನಿಗಳಿಗೆ ಅನಧಿಕೃತವಾಗಿ ಎಲ್ಎಲ್ ಪಿ ಮಾಡಿ ಆರ್ಥಿಕ ತೆರಿಗೆ ವಂಚನೆ ಮಾಡುವ ದುರುದ್ದೇಶದಿಂದ ಸದರಿ ಕಂಪನಿಗಳ ಮೇಲೆ ಅಧಿಕ ಮೊತ್ತದ ಬಂಡವಾಳ ಹೂಡಿಕೆ ಮಾಡಿರುವ ಬಗ್ಗೆ ದೂರುಗಳಿದ್ದು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ತಿಳಿಸಲಾಗಿದೆ.

ಎಡಿಜಿಪಿ ಚಂದ್ರಶೇಖರ್ ಕಳೆದ 9 ವರ್ಷಗಳಿಂದ ಸ್ಥಿರಾಸ್ತಿ ರಿಟರ್ನ್ ನಲ್ಲಿ ಸರ್ಕಾರಕ್ಕೆ ತಪ್ಪು ಮಾಹಿತಿ ಸಲ್ಲಿಸಿರುವ ಬಗ್ಗೆ ದೂರು ಸಲ್ಲಿಕೆಯಾಗಿದ್ದು, ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುವುದಾಗಿ ತಿಳಿಸಲಾಗಿದೆ. ಇದಲ್ಲದೆ, ಇವರು ತನ್ನ ಅಧಿಕಾರ ದುರುಪಯೋಗಪಡಿಸಿ ಪತ್ನಿಯ ಹೆಸರಿನಲ್ಲಿ ಖಾಸಗಿ ಸಂಸ್ಥೆ ರಚಿಸಿ ಕಿಯೋನಿಕ್ಸ್ ಸಂಸ್ಥೆಯಿಂದ ಕಾಮಗಾರಿ ವಹಿಸಿಕೊಂಡಿದ್ದಾರೆಂಬ ಆರೋಪದಲ್ಲಿ ದೂರು ಸಲ್ಲಿಕೆಯಾಗಿದೆ. ಪತ್ನಿ ಮತ್ತು ಕುಟುಂಬ ಸದಸ್ಯರ ಹೆಸರಿನಲ್ಲಿ ಏಳು ಸಂಸ್ಥೆಗಳನ್ನು ನೋಂದಣಿ ಮಾಡಿಸಿ ಸದರಿ ಕಂಪನಿಗಳಲ್ಲಿ ಕುಟುಂಬ ಸದಸ್ಯರನ್ನೇ ನಿರ್ದೇಶಕರನ್ನಾಗಿಸಿ ಹಣಕಾಸಿನ ಮೂಲಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಸಲ್ಲಿಸದೇ, ಸ್ಥಿರಾಸ್ತಿ ರಿಟರ್ನ್ ಸಲ್ಲಿಸದೇ ವಂಚಿಸಿರುವ ಬಗ್ಗೆ ದೂರುಗಳಿದ್ದು ಪರಿಶೀಲನೆಯಲ್ಲಿದೆ ಎಂದಷ್ಟೇ ತೋರಿಸಲಾಗಿದೆ. ಅಲ್ಲದೆ, ಚಂದ್ರಶೇಖರ್ ತನ್ನ ಪತ್ನಿಯ ಹೆಸರಿನಲ್ಲಿರುವ ಖಾಸಗಿ ಕಂಪನಿಗೆ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾಮಗಾರಿ ವಹಿಸಿಕೊಂಡು ಕರ್ತವ್ಯ ಲೋಪ ಎಸಗಿದ್ದಾರೆಂದು ದೂರು ಸಲ್ಲಿಕೆಯಾಗಿದೆ. 

ಐಪಿಎಸ್ ಅಧಿಕಾರಿ ಸಿದ್ದಾರ್ಥ ಗೋಯಲ್ ಅವರು 8-3-2026ರಂದು ಏರ್ಪಡಿಸಿದ್ದ ಹೋಳಿ ಹಬ್ಬದ ಸಂಭ್ರಮದ ನೆಪದಲ್ಲಿ ಅಶ್ಲೀಲ, ಅಸಭ್ಯ ಗೀತೆಗಳಿಗೆ ನೃತ್ಯ ಮಾಡಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಿರುವ ಬಗ್ಗೆ ಮತ್ತು ಸರ್ಕಾರಿ ನೌಕರರಿಗೆ ತರವಲ್ಲದ ರೀತಿ ವರ್ತಿಸಿದ್ದಾರೆಂದು ದೂರು ಸಲ್ಲಿಕೆಯಾಗಿದ್ದು, ಡಿಜಿ ಐಜಿಯವರಿಂದ ವರದಿ ನಿರೀಕ್ಷಿಸಲಾಗಿದೆ. ರಾಜ್ಯದ ಡಿಜಿಪಿ ಡಾ.ಎಂ.ಎ.ಸಲೀಂ ವಿರುದ್ಧ ಕರ್ತವ್ಯ ಲೋಪ ಎಸಗಿದ್ದಾರೆಂದು ದೂರು ಸಲ್ಲಿಕೆಯಾಗಿದೆ.

ಎಂ.ಚಂದ್ರಶೇಖರ್ ವಿರುದ್ಧ ಇನ್ನೊಂದು ದೂರಿನಲ್ಲಿ ಭ್ರಷ್ಟಾಚಾರ, ದುರ್ನಡತೆ, ಸಲಿಗೆಯಿಂದ ಭಾಗಿಯಾಗಿರುವುದು, ನಿಯಮಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿರುವುದು ಮತ್ತು ಸರ್ಕಾರದ ಅನುಮೋದನೆ ಪಡೆಯದೇ ಸುದ್ಧಿಗೋಷ್ಟಿ ನಡೆಸಿರುವುದು, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಅವಾಚ್ಯ ಪದಗಳಿಂದ ನಿಂದಿಸಿ ಭಾರತೀಯ ಸೇವಾ ನಿಮಯಗಳನ್ನ ಉಲ್ಲಂಘಿಸಿರುವ ಬಗ್ಗೆ ದೂರರ್ಜಿ ಒಳಾಡಳಿತ ಇಲಾಖೆಯಲ್ಲಿ ಪರಿಶೀಲನೆಯಲ್ಲಿದೆ. ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಆಪಾದಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಯಾವುದೇ ಶಿಸ್ತು ಕ್ರಮ ಜರುಗಿಸದೇ ಕರ್ತವ್ಯ ಲೋಪ ಎಸಗಿದ್ದಾರೆಂದು ದೂರರ್ಜಿ ಸಲ್ಲಿಕೆಯಾಗಿದ್ದು, ಡಿಜಿ ಮತ್ತು ಐಜಿಪಿ ಅವರಿಂದ ವರದಿ ಸಲ್ಲಿಕೆಯಾಗಿಲ್ಲ.

ಬಿ.ದಯಾನಂದ್ ಮತ್ತು ಸಜೀತ್ ವಿಜೆ ಅವರ ವಿರುದ್ಧ ಭ್ರಷ್ಟಾಚಾರ ಆರೋಪ, ಅಲೋಕ್ ಮೋಹನ್, ಕೆ.ರಾಮರಾಜನ್ ವಿರುದ್ಧ ಅಧಿಕಾರ ದುರುಪಯೋಗ ಆರೋಪ, ಅಧಿಕೃತ ಕಚೇರಿ ಸಮಯದಲ್ಲಿ ನಿರಂತರ ಗೈರು ಹಾಜರಾಗುತ್ತಿದ್ದಾರೆಂದು ಸೀಮಂತ್ ಕುಮಾರ್ ಸಿಂಗ್ ವಿರುದ್ಧದ ದೂರಿಗೆ ಸಂಬಂಧಿಸಿ ಡಿಜಿ-ಐಜಿಯವರು ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ. ಅರ್ಜಿದಾರರು ಮನವಿ ನೀಡಿ ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ಹುಬ್ಬಳ್ಳಿ ಕಮಿಷನರ್ ಆಗಿದ್ದ ಎನ್.ಶಶಿಕುಮಾರ್ ವಿರುದ್ಧ ದೂರು ಸಲ್ಲಿಕೆಯಾಗಿದೆ. ಹೆಚ್ಚಿನ ದೂರುಗಳಲ್ಲಿ ಡಿಜಿಯವರು ವರದಿ ಸಲ್ಲಿಸಿಲ್ಲ ಎಂದು ತಿಳಿಸಿದ್ದರೆ, ಕೆಲವು ದೂರುಗಳ ಬಗ್ಗೆ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದು ತಿಳಿಸಲಾಗಿದೆ.

More than 30 IPS officers have faced complaints since the Siddaramaiah-led government came to power in 2023, with allegations ranging from abuse of power and rule violations to corruption, nepotism and disproportionate assets. Chief Minister D.K. Shivakumar has acknowledged in the Assembly that several complaints remain pending for inquiry.