ನಮ್ಮ ಹೃದಯಗಳನ್ನು ಅಯೋಧ್ಯೆ ಮಾಡಿಕೊಳ್ಳೋಣ - ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

05-08-20 08:14 am       Headline Karnataka News Network   ದೇಶ - ವಿದೇಶ

ಎಲ್ಲರೂ ರಾಮರೇ, ಎಲ್ಲರಲ್ಲೂ ರಾಮನೇ ಇದ್ದಾನೆ. ರಾಮ ಮಂದಿರನವನ್ನು ಇಲ್ಲಿಯೇ ಕಟ್ಟೋಣ. ನಮ್ಮ ಹೃದಯಗಳನ್ನು ಅಯೋಧ್ಯೆ ಮಾಡಿಕೊಳ್ಳೋಣ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

ಅಯೋಧ್ಯೆ (ಜು.5): ‘ಎಲ್ಲರೂ ರಾಮರೇ, ಎಲ್ಲರಲ್ಲೂ ರಾಮನೇ ಇದ್ದಾನೆ. ರಾಮ ಮಂದಿರನವನ್ನು ಇಲ್ಲಿಯೇ ಕಟ್ಟೋಣ. ನಮ್ಮ ಹೃದಯಗಳನ್ನು ಅಯೋಧ್ಯೆ ಮಾಡಿಕೊಳ್ಳೋಣ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ ಬಳಿಕ ಮಾತನಾಡಿದ ಅವರು, ‘ಧರ್ಮ ಎಲ್ಲರನ್ನೂ ಮೇಲ್ಮೆಗೆ ತರುತ್ತದೆ. ವಿಶ್ವಕ್ಕೇ ಭಾರತವು ಸುಖ ಶಾಂತಿ ತರಬಲ್ಲದು. ನಾವು ಅಯೋಧ್ಯೆಯಲ್ಲಿ ಮಂದಿರ ಕಟ್ಟಿ ಸುಮ್ಮನಾಗಬಾರದು. ಅದಕ್ಕೂ ಮೊದಲು ಮನಮಮಂದಿರ ಕಟ್ಟಬೇಕು’ ಎಂದು ಹೇಳಿದರು.

ಅತಿಆಸೆ, ವಿಪರೀತ ಸಿಟ್ಟು, ಜಿಪುಣತನದಂಥ ಸಮಾಜಕಂಟಕ ಸ್ವಭಾಗಳನ್ನು ದೂರವಿಡಲು ರಾಮನ ಆದರ್ಶಗಳಿಂದ ಸ್ಪೂರ್ತಿ ಪಡೆಯೋಣ ಎಂದು ಕರೆ ನೀಡಿದರು.

‘ಇದು ನನಗೆ ಅತ್ಯಂತ ಆನಂದದ ದಿನ. ಈ ಹಿಂದೆ ನಮ್ಮ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸರು ‘ಈ ಕೆಲಸವನ್ನು ವರ್ಷಗಟ್ಟಲೆ ಮಾಡಬೇಕು’ ಎಂದು ಹೇಳಿದ್ದರು. ಅದೇ ರೀತಿ ನಾವು ನಡೆದುಕೊಂಡೆವು. ಸಾವಿರಾರು ಮಂದಿ ಈ ಕಾರ್ಯಕ್ಕಾಗಿ ಬಲಿದಾನ ಮಾಡಿದ್ದರು. ಅವರೆಲ್ಲರನ್ನೂ ನಾನು ನೆನಪಿಸಿಕೊಳ್ಳುತ್ತೇನೆ ಎಂದು ಭಾಗವತ್ ಹೇಳಿದರು.

ಅಡ್ವಾಣಿ ಅವರು ಈ ಕಾರ್ಯಕ್ರಮವನ್ನು ತಮ್ಮ ನಿವಾಸದಲ್ಲಿ ನೋಡುತ್ತಿರಬಹುದು. ಸಾಕಷ್ಟು ನಾಯಕರಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಿಲ್ಲ. ಪರಿಸ್ಥಿತಿಯೇ ಹಾಗಿದೆ. ಕೊರೊನಾ ಕಾಲದಿಂದ ವಿಶ್ವ ಅಂತರ್ಮುಖಿಯಾಗಿದೆ. ಏನಾದರೂ ದಾರಿಯಿದೆಯೇ ಎಂದು ಎದುರು ನೋಡುತ್ತಿದೆ. ನಮಗೆ ವಿಶ್ವಾಸವಿದೆ. ರಾಮನ ಹಾದಿಯಲ್ಲಿ ಪರಿಹಾರವಿದೆ ಎಂದು ಅವರು ಹೇಳಿದರು.