ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ ಸೇರ್ಪಡೆಗೆ ಸಜ್ಜು, ಸಂಸದ ಸೌಮಿತ್ರ ಖಾನ್ ಸ್ಫೋಟಕ ಹೇಳಿಕೆ

27-05-26 09:17 pm       HK News Desk   ದೇಶ - ವಿದೇಶ

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಶಾಸಕರಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷ ವಿಭಜನೆಯಾಗುವ ಸ್ಥಿತಿ ಎದುರಾಗಿದೆ.

ಕೊಲ್ಕತ್ತಾ, ಮೇ 27: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಶಾಸಕರಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷ ವಿಭಜನೆಯಾಗುವ ಸ್ಥಿತಿ ಎದುರಾಗಿದೆ.

ಟಿಎಂಸಿಯ ಸುಮಾರು 20 ಸಂಸದರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ನಮ್ಮ ಪಕ್ಷದ ಹೈಕಮಾಂಡ್ ಒಪ್ಪಿಗೆ ನೀಡಿದರೆ ಅವರು ಕೇಸರಿ ಪಕ್ಷ ಸೇರಲು ಸಿದ್ಧರಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಸೌಮಿತ್ರ ಖಾನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

"ಬಿಜೆಪಿ ಕೇಂದ್ರ ನಾಯರು ಒಮ್ಮೆ ಹೇಳಿದರೆ, ಟಿಎಂಸಿ ಇನ್ನು ಮುಂದೆ ಪಕ್ಷವಾಗಿ ಉಳಿಯುವುದಿಲ್ಲ. ಎಲ್ಲರೂ ಬರಲು ಸಿದ್ಧರಿದ್ದಾರೆ. ಸುಮಾರು 50 ಟಿಎಂಸಿ ಶಾಸಕರು ಅವರ ಪಕ್ಷದ ನಾಯಕರ ಬಗ್ಗೆ ಅತೃಪ್ತರಾಗಿದ್ದಾರೆ ಮತ್ತು 20 ಸಂಸದರು ಬಿಜೆಪಿ ಸೇರಲು ಸಿದ್ಧರಿದ್ದಾರೆ" ಎಂದು ಖಾನ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. 

ಬರಾಸತ್ ಕ್ಷೇತ್ರದ ಟಿಎಂಸಿ ಸಂಸದೆಯಾದ ಕಾಕೋಲಿ ಘೋಷ್ ದಸ್ತಿದಾರ್ ಮತ್ತು ಇನ್ನೂ ಸುಮಾರು ಆರು ಟಿಎಂಸಿ ಶಾಸಕರು ರಾಜ್ಯದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೊಂದಿಗಿನ ಆಡಳಿತಾತ್ಮಕ ಸಭೆಯಲ್ಲಿ ಪಾಲ್ಗೊಂಡಿರುವುದು ಚರ್ಚೆಗೆ ಕಾರಣವಾಗಿತ್ತು. ಇದರ ನಂತರ ಪಕ್ಷದೊಳಗೆ ಅಸಮಾಧಾನ ಹೊಗೆಯಾಡಿತ್ತು. ಕಾಕೋಲಿ ಅವರನ್ನು ಟಿಎಂಸಿ ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ಸ್ಥಾನದಿಂದ ತೆಗೆದುಹಾಕಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಅವರಿಗೆ ವೈ-ಕೆಟಗರಿ ಭದ್ರತೆ ನೀಡಿದೆ. ಇದು ರಾಜಕೀಯ ವಲಯದಲ್ಲಿ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ.

ಪ್ರಸ್ತುತ, ಪಶ್ಚಿಮ ಬಂಗಾಳದಿಂದ ಟಿಎಂಸಿ 29 ಲೋಕಸಭಾ ಸಂಸದರನ್ನು ಹೊಂದಿದ್ದರೆ, ಬಿಜೆಪಿ 12 ಮತ್ತು ಕಾಂಗ್ರೆಸ್ ಒಬ್ಬರನ್ನು ಹೊಂದಿದೆ. ಇದೇ ವೇಳೆ, ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಬಿಜೆಪಿ ನಾಯಕರು "ಪಾಪಿ" ಎಂದು ಟೀಕಿಸಿದ್ದು, ಈ "ಪಾಪಿಗಳು ಜೈಲಿಗೆ ಹೋಗಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.