ಮೊಹರಂ ಮೆರವಣಿಗೆಯಲ್ಲಿ 15,000 ಜನರ ಹತ್ಯೆಗೆ ಸ್ಕೆಚ್, ಕ್ಯಾಪ್ಸುಲ್‌ ಗಳಲ್ಲಿ ಇಲಿ ಪಾಷಾಣ ತುಂಬಿಸಿ ಹಂಚುತ್ತಿದ್ದ ಕಂತ್ರಿ ಮುಂಬೈ ಪೊಲೀಸರ ಬಲೆಗೆ, ತಪ್ಪಿದ ಭಾರಿ ಅನಾಹುತ !

29-06-26 03:35 pm       HK News Staffer   ದೇಶ - ವಿದೇಶ

ಧಾರ್ಮಿಕ ಸಂವೇದನೆಯಿಂದ ತುಂಬಿರುವ ಮೊಹರಂ ಮೆರವಣಿಗೆಯ ಸಂದರ್ಭದಲ್ಲೇ ಭಾರೀ ಆತಂಕ ಹುಟ್ಟಿಸುವ ಸಂಚು ಮುಂಬೈ ಪೊಲೀಸರು ಭೇದಿಸಿದ್ದು, ಸಾವಿರಾರು ಜನರನ್ನು ಗುರಿಯಾಗಿಸಿಕೊಂಡಿದ್ದ ಸಾಮೂಹಿಕ ವಿಷಪ್ರಾಶನ ಯತ್ನವನ್ನು ಸಮಯೋಚಿತ ಕಾರ್ಯಾಚರಣೆಯಿಂದ ತಪ್ಪಿಸಿದ್ದಾರೆ.

ಮುಂಬೈ, ಜೂನ್ 29: ಧಾರ್ಮಿಕ ಸಂವೇದನೆಯಿಂದ ತುಂಬಿರುವ ಮೊಹರಂ ಮೆರವಣಿಗೆಯ ಸಂದರ್ಭದಲ್ಲೇ ಭಾರೀ ಆತಂಕ ಹುಟ್ಟಿಸುವ ಸಂಚು ಮುಂಬೈ ಪೊಲೀಸರು ಭೇದಿಸಿದ್ದು, ಸಾವಿರಾರು ಜನರನ್ನು ಗುರಿಯಾಗಿಸಿಕೊಂಡಿದ್ದ ಸಾಮೂಹಿಕ ವಿಷಪ್ರಾಶನ ಯತ್ನವನ್ನು ಸಮಯೋಚಿತ ಕಾರ್ಯಾಚರಣೆಯಿಂದ ತಪ್ಪಿಸಿದ್ದಾರೆ.

ಪೊಲೀಸರ ಪ್ರಕಾರ, ಮೊಹರಂ ಮೆರವಣಿಗೆಯ ವೇಳೆ ಜನರಿಗೆ ವಿತರಿಸಲು ವಿಷಭರಿತ ಕ್ಯಾಪ್ಸೂಲ್‌ಗಳನ್ನು ಹಂಚಲು ಯತ್ನಿಸುತ್ತಿದ್ದ ಪುಣೆ ನಿವಾಸಿ ಫಯಾಜ್ ಪ್ರೇಮ್‌ಜಿ ಎಂಬಾತನನ್ನು ಬಂಧಿಸಲಾಗಿದೆ. ಈತನ ಬಳಿ ಸುಮಾರು 14,900 ವಿಷಭರಿತ ಕ್ಯಾಪ್ಸೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನಿಖೆಯ ವೇಳೆ ಆರೋಪಿಯು ಅತ್ಯಂತ ಯೋಜಿತ ರೀತಿಯಲ್ಲಿ ಈ ಸಂಚು ರೂಪಿಸಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. “ರ‍್ಯಾಟ್ ಪಾಯಿಸನ್” ಎಂದು ಕರೆಯಲಾಗುವ ಜಿಂಕ್ ಫಾಸ್ಫೈಡ್ ಎಂಬ ಅತ್ಯಂತ ವಿಷಕಾರಿ ಪದಾರ್ಥವನ್ನು ಬಳಸಿಕೊಂಡು ಕ್ಯಾಪ್ಸೂಲ್‌ಗಳನ್ನು ತಯಾರಿಸಲಾಗಿತ್ತು. ಪ್ರತಿ ಕ್ಯಾಪ್ಸೂಲ್‌ನಲ್ಲಿ ಸುಮಾರು 1 ಗ್ರಾಂ ವಿಷ ತುಂಬಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಮೊಹರಂ ಮೆರವಣಿಗೆಯಲ್ಲಿ ಭಾಗವಹಿಸುವ ಸಾವಿರಾರು ಜನರನ್ನು ಗುರಿಯಾಗಿಸಿಕೊಂಡು, ಈ ಕ್ಯಾಪ್ಸೂಲ್‌ಗಳನ್ನು ಆಹಾರ ಅಥವಾ ಔಷಧಿಯಂತೆ ವಿತರಿಸುವ ಯೋಜನೆ ರೂಪಿಸಲಾಗಿತ್ತು. ಯೋಜನೆ ಯಶಸ್ವಿಯಾಗಿದ್ದರೆ ದೊಡ್ಡ ಪ್ರಮಾಣದ ಜೀವಹಾನಿ ಸಂಭವಿಸುವ ಭೀತಿ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರಕರಣವು ಬೆಳಕಿಗೆ ಬಂದದ್ದು ಸಲ್ಮಾನ್ ಸಯ್ಯದ್ ಎಂಬ ವ್ಯಕ್ತಿ ಒಂದು ಅನುಮಾನಾಸ್ಪದ ಕ್ಯಾಪ್ಸೂಲ್ ಸೇವಿಸಿದ ನಂತರ ಅಸ್ವಸ್ಥರಾದ ಹಿನ್ನೆಲೆಯಲ್ಲಿ. ಸಲ್ಮಾನ್ ಸಯ್ಯದ್ ತೀವ್ರ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಆರಂಭವಾದ ತನಿಖೆ, ಬಳಿಕ ದೊಡ್ಡ ಪಿತೂರಿಯ ದಾರಿಯನ್ನು ತೆರೆಯಿತು.

ಮುಂಬೈ ಡಿಸಿಪಿ ಜಯಂತ್ ಮೀನಾ ನೀಡಿರುವ ಮಾಹಿತಿಯಂತೆ, ಅನುಮಾನಾಸ್ಪದ ವ್ಯಕ್ತಿ ಮೊಹರಂ ಮೆರವಣಿಗೆಯ ಬಳಿ ಕ್ಯಾಪ್ಸೂಲ್‌ಗಳನ್ನು ವಿತರಿಸುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾದ ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಸ್ಥಳದಿಂದಲೇ ದೊಡ್ಡ ಪ್ರಮಾಣದ ವಿಷಭರಿತ ಕ್ಯಾಪ್ಸೂಲ್‌ಗಳನ್ನು ಜಪ್ತಿ ಮಾಡಲಾಗಿದೆ.

ತನಿಖೆಯಲ್ಲಿ ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೊರಬಂದಿದ್ದು, ಫಯಾಜ್ ಒಟ್ಟು 50 ಕೆಜಿ ಜಿಂಕ್ ಫಾಸ್ಫೈಡ್ ಆರ್ಡರ್ ಮಾಡಿ, ತನ್ನ ಮನೆಯಲ್ಲೇ ಕ್ಯಾಪ್ಸೂಲ್‌ಗಳನ್ನು ತಯಾರಿಸಿದ್ದಾನೆ ಎಂಬುದು ಗೊತ್ತಾಗಿದೆ. ಒಟ್ಟು 30,000 ಕ್ಯಾಪ್ಸೂಲ್ ತಯಾರಿಸುವ ಯೋಜನೆ ಹೊಂದಿದ್ದ ಈತ, ಮೊದಲ ಹಂತದಲ್ಲಿ 14,900 ಕ್ಯಾಪ್ಸೂಲ್‌ಗಳನ್ನು ವಿತರಿಸಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಫಯಾಜ್ ಪುಣೆಯ ವಿಮಾನ್ ನಗರ ನಿವಾಸಿಯಾಗಿದ್ದು, ಬಿಬಿಎ ಪದವೀಧರನಾಗಿದ್ದಾನೆ. ಬಣ್ಣ ವ್ಯಾಪಾರ ನಡೆಸುತ್ತಿದ್ದ ಈತ, ಇತ್ತೀಚೆಗೆ ಮುಂಬೈನ ಡೋಂಗ್ರಿಯಲ್ಲಿ ಬಾಡಿಗೆ ಮನೆ ಪಡೆದು ಸಂಚು ರೂಪಿಸಿದ್ದಾನೆ ಎಂಬ ಮಾಹಿತಿ ದೊರೆತಿದೆ. ಇನ್ನು 2025ರಲ್ಲಿ ಈತ ಇರಾನ್ ಮತ್ತು ಇರಾಕ್‌ಗೆ ಪ್ರಯಾಣಿಸಿದ್ದ ವಿಷಯವೂ ತನಿಖೆಯಲ್ಲಿದೆ.