ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿನ ಸುದ್ದಿ ಕೇಳಿ ತಾಯಿಯೂ ಹೃದಯಾಘಾತದಿಂದ ನಿಧನ, ಒಂದೇ ರಾತ್ರಿ ತಾಯಿ-ಮಗನ ಅಂತ್ಯಸಂಸ್ಕಾರ

23-07-26 08:05 pm       HK News Desk   ಕರ್ನಾಟಕ

ಅನಾರೋಗ್ಯದಿಂದ ಬಳಲುತ್ತಿದ್ದ ಮಗನ ಸಾವಿನ ಸುದ್ದಿ ಕೇಳಿ, ತಾಯಿ ಕೂಡ ಮೃತಪಟ್ಟ ಹೃದಯವಿದ್ರಾವಕ ಘಟನೆ ಧಾರವಾಡದ ತೇಜಸ್ವಿನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಧಾರವಾಡ: ಅನಾರೋಗ್ಯದಿಂದ ಬಳಲುತ್ತಿದ್ದ ಮಗನ ಸಾವಿನ ಸುದ್ದಿ ಕೇಳಿ, ತಾಯಿ ಕೂಡ ಮೃತಪಟ್ಟ ಹೃದಯವಿದ್ರಾವಕ ಘಟನೆ ಧಾರವಾಡದ ತೇಜಸ್ವಿನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೆಹಬೂಬಸಾಬ್ ನದಾಫ್ (47) ಬುಧವಾರ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಸಾವಿನ ಸುದ್ದಿ ಕೇಳಿ ಆಘಾತದಿಂದ ತಾಯಿ ಮುಗುಟಬಿ (68) ನದಾಫ್ ಕೂಡ ನಿಧನವಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೆಹಬೂಬಸಾಬ್ ನಿನ್ನೆ ಬೆಳಗ್ಗೆ ಧಾರವಾಡದ ರಾಜೀವ್ ಗಾಂಧಿ ನಗರದ ಬಳಿಯ ರೈಲು ಹಳಿಗೆ ಬಿದ್ದಿದ್ದರು. ಸಂಜೆ ಏಳು ಗಂಟೆಗೆ ಈತನ ಅಂತ್ಯಕ್ರಿಯೆ ಮಾಡಲು ಸ್ಥಳೀಯರು, ಕುಟುಂಬಸ್ಥರು ತಯಾರಿ ಮಾಡಿಕೊಂಡಿದ್ದರು. ಮನೆಯಿಂದ ಮಗನ ಅಂತ್ಯಕ್ರಿಯೆ ಮಾಡಲು ಶವ ತೆಗೆದುಕೊಂಡು ಹೋಗುತ್ತಿದ್ದಂತೆ ತಾಯಿ ಮುಗುಟಬಿ ಕೂಡ ಆತಂಕದಿಂದ ಅಸುನೀಗಿದ್ದಾರೆ. ಮಗನ ಅಂತ್ಯಕ್ರಿಯೆ ಮುಗಿಸಿ ಬಂದು ತಡರಾತ್ರಿ ತಾಯಿಯ ಅಂತ್ಯಕ್ರಿಯೆಯನ್ನು ಕೂಡ ಮಾಡಲಾಯಿತು ಎಂದು ಬಡಾವಣೆ ಜನರು ವಿಧಿಯಾಟಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಮೆಹಬೂಬಸಾಬ್ ಬಳಲುತ್ತಿದ್ದರು. ಇದನ್ನು ತಡೆಯಲಾರದೇ ನಿನ್ನೆ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ರೈಲ್ವೆ ಪೊಲೀಸರು ಸಂಜೆ ಮೃತನ ಶವ ಮರಣೋತ್ತರ ಪರೀಕ್ಷೆ ಮುಗಿಸಿ ಕುಟುಂಬದವರಿಗೆ ಹಸ್ತಾಂತರಿಸಿದ್ದರು. ಮನೆಯಿಂದ ಮಗನ ಅಂತ್ಯಕ್ರಿಯೆ ಮಾಡಲು ಮೃತದೇಹ ತೆಗೆದುಕೊಂಡು ಹೋಗುತ್ತಿದ್ದಾಗ ತಾಯಿ ಮುಗುಟಬಿ ಕೂಡ ಸಾವನ್ನಪ್ಪಿದ್ದಾಗಿ ಸ್ಥಳೀಯರು ನೋವು ತೋಡಿಕೊಂಡಿದ್ದಾರೆ.

ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.