ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರಿಕೆ; 300 ಭಾರತೀಯರು ಸೇರಿ 500 ವಿದೇಶಿಗರು ನಾಪತ್ತೆ!

27-08-26 12:39 pm       HK News Staffer   ದೇಶ - ವಿದೇಶ

ನೇಪಾಳದ ರಸುವಾ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಿಂದ ಪರಿಸ್ಥಿತಿ ಮತ್ತಷ್ಟು ಆತಂಕಕಾರಿ ಆಗಿದೆ. ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 160ಕ್ಕೆ ಏರಿಕೆಯಾಗಿದ್ದು, ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿದ್ದ ಸುಮಾರು 300 ಭಾರತೀಯರು ಸೇರಿದಂತೆ 500 ವಿದೇಶಿ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ತಿಳಿಸಿದ್ದಾರೆ.

ಕಠ್ಮಂಡು, ಆ.27: ನೇಪಾಳದ ರಸುವಾ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಿಂದ ಪರಿಸ್ಥಿತಿ ಮತ್ತಷ್ಟು ಆತಂಕಕಾರಿ ಆಗಿದೆ. ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 160ಕ್ಕೆ ಏರಿಕೆಯಾಗಿದ್ದು, ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿದ್ದ ಸುಮಾರು 300 ಭಾರತೀಯರು ಸೇರಿದಂತೆ 500 ವಿದೇಶಿ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ತಿಳಿಸಿದ್ದಾರೆ.

ಕಠ್ಮಂಡುವಿನಲ್ಲಿ ನಡೆದ ‘ಎನ್‌ಡಿಟಿವಿ ವಿಶ್ವ ಅನ್ವಿಕ್ಷಾ ಶೃಂಗಸಭೆ’ಯಲ್ಲಿ ಮಾತನಾಡಿದ ಅವರು, ಕೆಲವೇ ಗಂಟೆಗಳ ಅವಧಿಯಲ್ಲಿ ಭಾರಿ ಪ್ರಮಾಣದ ನೀರು ನುಗ್ಗಿ ಸಾಲು ಸಾಲು ಪಟ್ಟಣಗಳು ಹಾಗೂ ಗ್ರಾಮಗಳನ್ನು ಆಪೋಶನ ತೆಗೆದುಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರವಾಹದಿಂದ ಸಾವಿರಾರು ಕುಟುಂಬಗಳು ಮನೆ-ಮಠ ಕಳೆದುಕೊಂಡಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದೆ. ನಿಖರ ನಷ್ಟದ ಪ್ರಮಾಣವನ್ನು ಅಂದಾಜಿಸುವ ಕಾರ್ಯ ಮುಂದುವರಿದಿದೆ.

300 ಭಾರತೀಯ ಯಾತ್ರಿಕರ ಸಂಪರ್ಕ ಕಡಿತ;

ಟಿಬೆಟ್ ಗಡಿ ಮಾರ್ಗದಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿದ್ದ ಸುಮಾರು 300 ಭಾರತೀಯ ಯಾತ್ರಿಕರ ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಅವರ ಇರುವಿಕೆ ಹಾಗೂ ಸುರಕ್ಷತೆಯ ಮಾಹಿತಿ ಪಡೆಯಲು ನೇಪಾಳ ಸರ್ಕಾರವು ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸ್ವದೇಶಿ ನಾಗರಿಕರ ಜೊತೆಗೆ ವಿದೇಶಿ ಪ್ರಜೆಗಳ ರಕ್ಷಣೆಯೂ ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರವಾಹದ ಪರಿಣಾಮ ರಸುವಾ ಹಾಗೂ ಟಿಬೆಟ್ ಗಡಿ ಪ್ರದೇಶದಲ್ಲಿ ಆಪ್ಟಿಕಲ್ ಫೈಬರ್ ಮತ್ತು ಮೊಬೈಲ್ ಟವರ್‌ಗಳು ಕೊಚ್ಚಿಹೋಗಿದ್ದು, ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಸಿಲುಕಿರುವ ಯಾತ್ರಿಕರನ್ನು ಸಂಪರ್ಕಿಸಲು ನೇಪಾಳ ಸೇನೆ ಉಪಗ್ರಹ ಫೋನ್‌ಗಳನ್ನು ಬಳಸುತ್ತಿದೆ.

ಭಾರತದಿಂದ 10 ಟನ್ ಪರಿಹಾರ ಸಾಮಗ್ರಿ;

ವಿಪತ್ತು ಸಂಭವಿಸಿದ ಬೆನ್ನಲ್ಲೇ ಭಾರತ ಸರ್ಕಾರ ತ್ವರಿತವಾಗಿ ಸ್ಪಂದಿಸಿದ್ದು, 10 ಟನ್ ತುರ್ತು ಪರಿಹಾರ ಸಾಮಗ್ರಿಗಳು ಹಾಗೂ ವೈದ್ಯಕೀಯ ನೆರವನ್ನು ನೇಪಾಳಕ್ಕೆ ರವಾನಿಸಿದೆ. ಇದಕ್ಕಾಗಿ ನೇಪಾಳದ ವಿದೇಶಾಂಗ ಸಚಿವರು ಭಾರತ ಸರ್ಕಾರಕ್ಕೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.

ನೈಸರ್ಗಿಕ ವಿಕೋಪದಿಂದ ಸಾವಿರಾರು ಜನರ ಬದುಕು ಅಸ್ತವ್ಯಸ್ತವಾಗಿರುವುದರ ಜೊತೆಗೆ ನೇಪಾಳದ ಪ್ರಮುಖ ಆದಾಯ ಮೂಲವಾಗಿರುವ ಪ್ರವಾಸೋದ್ಯಮಕ್ಕೂ ಹೊಡೆತ ಬೀಳುವ ಆತಂಕ ಎದುರಾಗಿದೆ. ದೇಶದ ಜಿಡಿಪಿಗೆ ಪ್ರವಾಸೋದ್ಯಮವು ಸುಮಾರು 6ರಿಂದ 7ರಷ್ಟು ಕೊಡುಗೆ ನೀಡುತ್ತದೆ. ಪ್ರವಾಸೋದ್ಯಮ ಕುಸಿದರೆ ವಿದೇಶಿ ವಿನಿಮಯ ಮೀಸಲಿನ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೆ ಪ್ರವಾಹವು ಮುಖ್ಯವಾಗಿ ಗಡಿ ಕಣಿವೆ ಪ್ರದೇಶಗಳಿಗೆ ಸೀಮಿತವಾಗಿದ್ದು, ಪೋಖ್ರಾ, ಮೌಂಟ್ ಎವರೆಸ್ಟ್ ವಲಯ ಹಾಗೂ ಕಠ್ಮಂಡು ಕಣಿವೆ ಸುರಕ್ಷಿತವಾಗಿವೆ ಎಂದು ಸಚಿವ ಖನಾಲ್ ಸ್ಪಷ್ಟಪಡಿಸಿದ್ದಾರೆ. ಪ್ರವಾಸಿಗರು ನೇಪಾಳ ಪ್ರವಾಸವನ್ನು ರದ್ದುಗೊಳಿಸದೆ ದೇಶದ ಪುನರ್‌ನಿರ್ಮಾಣಕ್ಕೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಪ್ರವಾಹಪೀಡಿತ ಪ್ರದೇಶಗಳಿಗೆ ಅನಗತ್ಯವಾಗಿ ತೆರಳಬೇಡಿ. ಪ್ರವಾಸದಲ್ಲಿರುವವರು ಸ್ಥಳೀಯ ಆಡಳಿತ, ರಾಯಭಾರ ಕಚೇರಿ ಹಾಗೂ ಅಧಿಕೃತ ವಿಪತ್ತು ನಿರ್ವಹಣಾ ಸೂಚನೆಗಳನ್ನು ಪಾಲಿಸಬೇಕು. ನಾಪತ್ತೆಯಾದವರ ಕುರಿತು ಪರಿಶೀಲಿಸದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದೆ, ಅಧಿಕೃತ ಮೂಲಗಳಿಂದ ಮಾತ್ರ ಮಾಹಿತಿ ಪಡೆಯುವುದು ಅತ್ಯಂತ ಮುಖ್ಯ.