ಕಣ್ಣೂರು ; ಬ್ಯಾಂಕ್ ಕಚೇರಿಯಲ್ಲೇ ಸಾವಿಗೆ ಶರಣಾದ ಬ್ಯಾಂಕ್ ಮ್ಯಾನೇಜರ್ ಮಹಿಳೆ !

10-04-21 01:39 pm       Headline Karnataka News Network   ದೇಶ - ವಿದೇಶ

ಬ್ಯಾಂಕ್ ಮ್ಯಾನೇಜರ್ ಆಗಿರುವ ಮಹಿಳೆಯೊಬ್ಬರು ಕಚೇರಿಯಲ್ಲೇ ನೇಣಿಗೆ ಶರಣಾದ ಘಟನೆ ಕಣ್ಣೂರು ಜಿಲ್ಲೆಯ ಕೂತುಪರಂಬದಲ್ಲಿ ನಡೆದಿದೆ. 

ಕಾಸರಗೋಡು, ಏ.10 :  ಬ್ಯಾಂಕ್ ಮ್ಯಾನೇಜರ್ ಆಗಿರುವ ಮಹಿಳೆಯೊಬ್ಬರು ತಮ್ಮ ಕಚೇರಿಯಲ್ಲೇ ನೇಣಿಗೆ ಶರಣಾದ ಘಟನೆ ಕಣ್ಣೂರು ಜಿಲ್ಲೆಯ ಕೂತುಪರಂಬದಲ್ಲಿ ನಡೆದಿದೆ. 

ಕೆನರಾ ಬ್ಯಾಂಕ್ ಕೂತುಪರಂಬ ಶಾಖೆಯ ಕಚೇರಿಯಲ್ಲಿ ಘಟನೆ ನಡೆದಿದೆ. ಮೃತ ಬ್ಯಾಂಕ್ ಮ್ಯಾನೇಜರ್ ಅನ್ನು ತ್ರಿಶ್ಶೂರ್ ಮೂಲದ ಕೆ.ಎಸ್ ಸ್ವಪ್ನಾ (40) ಎಂದು ಗುರುತಿಸಲಾಗಿದೆ. ಬ್ಯಾಂಕ್ ನೌಕರರು ಎಂದಿನಂತೆ ಶುಕ್ರವಾರ ಬೆಳಗ್ಗೆ 8.45 ರ ವೇಳೆಗೆ ಬ್ಯಾಂಕ್‌ಗೆ ಆಗಮಿಸಿದಾಗ ಸ್ವಪ್ನಾ ಸೀಲಿಂಗ್‌ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಜೀವ ಉಳಿಸಲಾಗಲಿಲ್ಲ. 

ಬ್ಯಾಂಕ್ ವ್ಯವಸ್ಥಾಪಕಿ ಆತ್ಮಹತ್ಯೆಗೆ ಶರಣಾದ ಪ್ರಕರಣದ ಕುರಿತು ಕೂತುಪರಂಬ ಎಸಿಪಿ ಕೆ.ಜಿ. ಸುರೇಶ್ ಕುಮಾರ್ ಮತ್ತು ಎಸ್‌ಐ ಕೆ.ಟಿ. ಸಂದೀಪ್ ನೇತೃತ್ವದ ಪೊಲೀಸ್ ತಂಡ ಬ್ಯಾಂಕ್ ಪರಿಶೀಲನೆ ನಡೆಸಿದ್ದು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದೆ.

ಸಿಸಿಟಿವಿ ದೃಶ್ಯಾವಳಿಯಂತೆ ಸ್ವಪ್ನಾ ಬೆಳಗ್ಗೆ 8.10 ರ ವೇಳೆಗೆ ಕಚೇರಿ ತಲುಪಿ 8.17 ರ ವೇಳೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರಿಗೆ ಸ್ಪಪ್ನಾ ಅವರ ಡೈರಿ ಪತ್ತೆಯಾಗಿದ್ದು, ಅದರಲ್ಲಿ ಕೆಲಸವನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗಿಲ್ಲ ಎಂದು ಬರೆದಿದೆ. ಇದು ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಎಸ್‌ಐ ಕೆ ಟಿ ಸಂದೀಪ್ ಅನುಮಾನ ವ್ಯಕ್ತಪಡಿಸಿದ್ದಾರೆ.

ತ್ರಿಶೂರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸ್ವಪ್ನಾ ಭಡ್ತಿ ಪಡೆದಿದ್ದು ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ಕೂತ್ತುಪರಂಬಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇವರ ಪತಿ ಸಾಬು ಎರಡು ವರ್ಷಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಸ್ವಪ್ನಾ ಅವರ ಮಕ್ಕಳಾದ ನಿರಂಜನ್ ಮತ್ತು ನಿವೇದಿಕಾ ಇಬ್ಬರೂ ಕೇಂದ್ರಿಯ ವಿದ್ಯಾಲಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.