ದುಬೈನಿಂದ ಮಂಗಳೂರಿಗೆ ಬಂದಿದ್ದ ಫ್ಲೈಟ್ ಕೊಚ್ಚಿಗೆ ; ರಾತ್ರಿಯಿಂದ ಬೆಳಗ್ಗೆ ವರೆಗೂ ಪ್ರಯಾಣಿಕರ ಪರದಾಟ !

13-04-21 10:41 am       Headline Karnataka News Network   ದೇಶ - ವಿದೇಶ

ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನ ಹವಾಮಾನ ವೈಪರೀತ್ಯದಿಂದಾಗಿ ತಡರಾತ್ರಿಯಲ್ಲಿ ನೇರವಾಗಿ ಕೊಚ್ಚಿಗೆ ತೆರಳಿದ್ದು ಅಲ್ಲಿ ಇಳಿದುಕೊಂಡ ಪ್ರಯಾಣಿಕರು ಪರದಾಟ ಅನುಭವಿಸಿದ್ದಾರೆ. 

ಮಂಗಳೂರು, ಎ.13:  ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನ ಹವಾಮಾನ ವೈಪರೀತ್ಯದಿಂದಾಗಿ ತಡರಾತ್ರಿಯಲ್ಲಿ ನೇರವಾಗಿ ಕೊಚ್ಚಿಗೆ ತೆರಳಿದ್ದು ಅಲ್ಲಿ ಇಳಿದುಕೊಂಡ ಪ್ರಯಾಣಿಕರು ಪರದಾಟ ಅನುಭವಿಸಿದ್ದಾರೆ. 

ರಾತ್ರಿ 12.30 ಕ್ಕೆ ವಿಮಾನ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಮಂಗಳೂರಿನಲ್ಲಿ ಭಾರೀ ಸಿಡಿಲು ಮಳೆಯಾಗಿದ್ದರಿಂದ ವಿಮಾನವನ್ನು ಇಳಿಸಲಾಗದೆ ನೇರವಾಗಿ ಕೇರಳದ ಕೊಚ್ಚಿಗೆ ತೆರಳಿತ್ತು. ರಾತ್ರಿ ಒಂದು ಗಂಟೆ ಸುಮಾರಿಗೆ ಕೊಚ್ಚಿ ತಲುಪಿದ್ದ ವಿಮಾನದಲ್ಲಿ ಸುಮಾರು 118 ಮಂದಿ ಪ್ರಯಾಣಿಕರಿದ್ದರು. ಆನಂತರ ಅರ್ಧ ಗಂಟೆಯಲ್ಲಿ ಮತ್ತೆ ವಿಮಾನವನ್ನು ಮಂಗಳೂರಿಗೆ ಹಿಂತಿರುಗಿ ಓಡಿಸಲಾಗುತ್ತದೆ ಎಂದು ಹೇಳಿ ಪ್ರಯಾಣಿಕರನ್ನು ವಿಮಾನದಲ್ಲೇ ಕುಳ್ಳಿರಿಸಲಾಗಿತ್ತು. 

ಆದರೆ ಎರಡು ಗಂಟೆ ಕಳೆದರೂ ವಿಮಾನ ಹೊರಡಲಿಲ್ಲ. ಬಳಿಕ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ ಏರ್ಪೋರ್ಟ್ ಟರ್ಮಿನಲ್ ಗೆ ಕರೆದೊಯ್ಯಲಾಯಿತು. ಅಲ್ಲಿ ಮಕ್ಕಳು, ಕುಟುಂಬಸ್ಥರು ಎಲ್ಲರನ್ನೂ ಒಂದೇ ಕಡೆ ಕೂಡಿಹಾಕಿದ್ದರು. ಕುಳಿತುಕೊಳ್ಳುವುದಕ್ಕೂ ವ್ಯವಸ್ಥೆ ಇರಲಿಲ್ಲ. ಅಲ್ಲದೆ, ನೀರು ಕೊಡುವ ವ್ಯವಸ್ಥೆಯನ್ನೂ ಮಾಡಲಿಲ್ಲ. ನಾವು ಇಲ್ಲಿಂದಲೇ ರಸ್ತೆ ದಾರಿಯಾಗಿ ಹೋಗುತ್ತೇವೆ ಎಂದು ಗೋಗರೆದರೂ ಅಲ್ಲಿನ ಅಧಿಕಾರಿಗಳು ಹೊರಗೆ ಬಿಡಲಿಲ್ಲ. ಬೆಳಗ್ಗೆ 9.30 ರ ವರೆಗೂ ನಾವು ಇಲ್ಲೇ ಇದ್ದೇವೆ. ಚಹಾ, ನೀರು, ಯಾವುದೂ ಇಲ್ಲದೆ ಮಕ್ಕಳು, ತಾಯಂದಿರು ಸಂಕಟ ಪಟ್ಟಿದ್ದಾರೆ ಎಂದು ಮಡಿಕೇರಿ ಮೂಲದ ಪ್ರಯಾಣಿಕ ಅಬು ತಾಹಿರ್ ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ. 

ರಾತ್ರಿ ಒಂದು ವಿಮಾನ ಇಳಿಸಿ ಹೋದ ಪೈಲಟ್ ಮತ್ತೆ ಬಂದಿರಲಿಲ್ಲ. ಈಗ ಬೆಳಗ್ಗೆ 9.30 ಕ್ಕೆ ಅದೇ ಪೈಲಟ್ ಬಂದಿದ್ದಾರೆ. ನಮ್ಮನ್ನು ಯಾಕೆ ಸತಾಯಿಸಿದ್ದಾರೆ ಏರ್ ಇಂಡಿಯಾ ಅಧಿಕಾರಿಗಳು. ನಾವು ಇಳಿದು ಹೋಗುತ್ತಿದ್ದರೂ, ಈಗ ಮಂಗಳೂರು ತಲುಪುತ್ತಿದ್ದೆವು. ತುಂಬ ಅರ್ಜೆಂಟಲ್ಲಿ ಬಂದವರಿದ್ದರು. ಬಜ್ಪೆ ಬಳಿಯ ಒಬ್ಬರು ತಂದೆ ತೀರಿಕೊಂಡಿದ್ದರೆಂದು ಅರ್ಜೆಂಟಾಗಿ ಬಂದಿದ್ದರು. ಇವರನ್ನೆಲ್ಲ ಏರ್ ಇಂಡಿಯಾ ಅಧಿಕಾರಿಗಳು ಸತಾಯಿಸಿದ್ದಾರೆ ಎಂದು ಹೇಳಿದರು ತಾಹಿರ್. 

ಇವರಿಗೆ ಕಣ್ಣೂರು ಅಥವಾ ಕೋಯಿಕ್ಕೋಡ್ ಏರ್ಪೋರ್ಟ್ ನಲ್ಲಿ ಇಳಿಸಬಹುದಿತ್ತು. ಕೊಚ್ಚಿಗೆ ಒಯ್ದು ಲ್ಯಾಂಡ್ ಮಾಡಿದ್ದಾರೆ.
ಈಗ ಹತ್ತು ಗಂಟೆ ವೇಳೆಗೆ ವಿಮಾನ ಮತ್ತೆ ಮಂಗಳೂರಿಗೆ ಹೊರಡಲಿದೆ ಎನ್ನುತ್ತಿದ್ದಾರೆ. ನಾವು ಮತ್ತೆ ವಿಮಾನದಲ್ಲಿ ಕುಳಿತಿದ್ದೇವೆ. ಇನ್ನೂ ಟೇಕ್ ಆಫ್ ಆಗಿಲ್ಲ ಎಂದು ಬೆಳಗ್ಗೆ 10 ಗಂಟೆ ಸುಮಾರಿಗೆ ತಾಹಿರ್ ಕರೆ ಮಾಡಿ ಅಲವತ್ತುಕೊಂಡರು.

Dubai flight air India that was supposed to land in Mangalore has ended up landing in Cochi International airport due to heavy rains, thunderstorms and lightening causing trouble for passengers whole night.