ಅಂಡರ್ ವರ್ಲ್ಡ್ ಡಾನ್ ಛೋಟಾ ರಾಜನ್ ಕೊರೊನಾಗೆ ಬಲಿ ವದಂತಿ !

07-05-21 04:24 pm       Headline Karnataka News Network   ದೇಶ - ವಿದೇಶ

ಭೂಗತ ಪಾತಕಿ ಛೋಟಾ ರಾಜನ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಸಾವು ಕಂಡಿದ್ದಾನೆ ಎಂಬ ಸುದ್ದಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

Photo credits : NDTV

ದೆಹಲಿ, ಮೇ 7: ಒಂದು ಕಾಲದಲ್ಲಿ ಅಂಡರ್ ವರ್ಲ್ಡ್ ಡಾನ್ ಆಗಿದ್ದ ಮಾಜಿ ಭೂಗತ ಪಾತಕಿ ಛೋಟಾ ರಾಜನ್ (61) ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಸಾವು ಕಂಡಿದ್ದಾನೆ ಎಂಬ ಸುದ್ದಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ರಾಜನ್ ಸಾವನ್ನು ಜೈಲಿನ ಅಧಿಕಾರಿಗಳಾಗಲೀ, ಏಮ್ಸ್ ಆಸ್ಪತ್ರೆಯ ವೈದ್ಯರಾಗಲೀ ದೃಢಪಡಿಸಿಲ್ಲ.

ಕಳೆದ ಒಂದು ವಾರದಿಂದ ಗಂಭೀರ ಸ್ಥಿತಿಯಲ್ಲಿರುವ ರಾಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿಗಳು ರಾಷ್ಟ್ರೀಯ ಸುದ್ದಿ ವಾಹಿನಿಗಳು ಮತ್ತು ಟೈಂಸ್ ಆಫ್ ಇಂಡಿಯಾ ಸೇರಿದಂತೆ ದೇಶದ ಪ್ರಮುಖ ಮಾಧ್ಯಮಗಳಲ್ಲಿ ಬಂದಿದ್ದವು. ಆದರೆ, ರಾಜನ್ ಸಾವನ್ನು ತಿಹಾರ್ ಜೈಲಿನ ಡಿಜಿಪಿ ನಿರಾಕರಿಸಿದ್ದಾರೆ. ಏಮ್ಸ್ ಆಸ್ಪತ್ರೆಯಿಂದ ಆ ರೀತಿಯ ಮಾಹಿತಿ ಇನ್ನೂ ಬಂದಿಲ್ಲ ಎಂದಿದ್ದಾರೆ ಡಿಜಿಪಿ.

ಕಳೆದ 2015ರಲ್ಲಿ ಇಂಡೋನೇಶ್ಯಾದಲ್ಲಿ ಬಂಧನಕ್ಕೀಡಾಗಿದ್ದ ರಾಜೇಂದ್ರ ಸದಾಶಿವ ನಿಕಾಲ್ ಜೇ ಅಲಿಯಾಸ್ ಛೋಟಾ ರಾಜನ್ ನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ರಾಜನ್ ನನ್ನು ಪ್ರಕರಣ ಒಂದಕ್ಕೆ ಸಂಬಂಧಿಸಿ ಎ.26ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸೆಷನ್ಸ್ ಕೋರ್ಟಿಗೆ ಹಾಜರು ಪಡಿಸಲಿಕ್ಕಿತ್ತು. ಅದಕ್ಕಾಗಿ ಜೈಲಿನ ಅಧಿಕಾರಿಗಳು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಆತನಿಗೆ ಪಾಸಿಟಿವ್ ಕಂಡುಬಂದಿತ್ತು. ಬಳಿಕ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ರಾಜನ್ ವಿರುದ್ಧ ಮಹಾರಾಷ್ಟ್ರ, ಕರ್ನಾಟಕ, ದೆಹಲಿ ಸೇರಿ ವಿವಿಧೆಡೆ 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಹೆಚ್ಚಿನ ಪ್ರಕರಣಗಳು ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದ್ದವು. 2011ರಲ್ಲಿ ಕೊಲೆಯಾಗಿದ್ದ ಮುಂಬೈನ ಪತ್ರಕರ್ತ ಜ್ಯೋತಿರ್ಮಯಿ ಡೇ ಪ್ರಕರಣದಲ್ಲಿ 2018ರಲ್ಲಿ ರಾಜನ್ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಕಳೆದ ವಾರವಷ್ಟೇ ಮುಂಬೈನ ಸ್ಪೆಷಲ್ ಸಿಬಿಐ ಕೋರ್ಟ್ ಪ್ರಕರಣ ಒಂದರಲ್ಲಿ ರಾಜನ್ ವಿರುದ್ಧ ಖುಲಾಸೆ ತೀರ್ಪು ನೀಡಿತ್ತು. 1993ರ ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಹನೀಫ್ ಕಾಡಾವಾಲ ಎಂಬಾತನ ಕೊಲೆ ಪ್ರಕರಣದಲ್ಲಿ ರಾಜನ್ ಮೇಲಿದ್ದ ಆರೋಪವನ್ನು ಕೋರ್ಟ್ ಖುಲಾಸೆ ಮಾಡಿತ್ತು.

ವಿದೇಶದಲ್ಲಿ ತಲೆಮರೆಸಿಕೊಂಡು ಮುಂಬೈ ಸೇರಿ ಪ್ರಮುಖ ನಗರಗಳಲ್ಲಿ ಹಫ್ತಾ ವಸೂಲಿ, ಹಫ್ತಾ ನೀಡದೇ ಇರುತ್ತಿದ್ದ ಉದ್ಯಮಿಗಳನ್ನು ತನ್ನ ಸಹಚರರ ಮೂಲಕ ಹತ್ಯೆ ಮಾಡುತ್ತಿದ್ದ ಛೋಟಾ ರಾಜನ್ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ. ರಾಜನ್ ವಿರುದ್ಧ ಭಾರತ ಸರಕಾರದಿಂದ ರೆಡ್ ಇಂಟರ್ ಪೋಲ್ ನೋಟೀಸ್ ಜಾರಿ ಮಾಡಲಾಗಿತ್ತು. ಇದೇ ವೇಳೆ, 2015ರಲ್ಲಿ ಇಂಡೋನೇಶ್ಯಾದ ಬಾಲಿ ದ್ವೀಪದಲ್ಲಿ ಅಲ್ಲಿನ ಪೊಲೀಸರು ನಕಲಿ ಪಾಸ್ಪೋರ್ಟಿಗೆ ಸಂಬಂಧಿಸಿ ರಾಜನನ್ನು ಬಂಧಿಸಿದ್ದರು. ಬಳಿಕ ಭಾರತಕ್ಕೆ ಗಡೀಪಾರು ಆಗಿದ್ದ ರಾಜನ್ ವಿರುದ್ಧ ಹಲವಾರು ಪ್ರಕರಣಗಳು ಇದ್ದುದರಿಂದ ಎಲ್ಲವನ್ನೂ ಸಿಬಿಐ ತಂಡ ತನಿಖೆಗೆ ಕೈಗೆತ್ತಿಕೊಂಡಿತ್ತು. ದೆಹಲಿಯ ತಿಹಾರ್ ಜೈಲಿನಲ್ಲಿ ಭಾರೀ ಭದ್ರತೆಯ ನಡುವೆ, ರಾಜನ್ ಅನ್ನು ಇರಿಸಿ ವಿಚಾರಣೆ ಮಾಡಲಾಗುತ್ತಿತ್ತು.

2019ರಲ್ಲಿ ಮುಂಬೈ ಮೂಲದ ಹೊಟೇಲ್ ಉದ್ಯಮಿ ಬಿ.ಆರ್. ಶೆಟ್ಟಿಯನ್ನು ಕೊಲೆಗೈದ ಪ್ರಕರಣದಲ್ಲಿ ರಾಜನ್ ಮೇಲೆ ಕೋರ್ಟ್ ಎಂಟು ವರ್ಷಗಳ ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಿತ್ತು. 2012ರಲ್ಲಿ ಬಿ.ಆರ್. ಶೆಟ್ಟಿಯನ್ನು ಛೋಟಾ ರಾಜನ್ ಅಣತಿಯಂತೆ, ಆತನ ಶಾರ್ಪ್ ಶೂಟರ್ ಆಗಿದ್ದ ಕಾಲಿಯಾ ಎಂಬಾತ ಗುಂಡು ಹಾರಿಸಿ ಕೊಲೆಗೈದಿದ್ದ ಎಂದು ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದರು. 

Read: ಭೂಗತ ಪಾತಕಿ ಛೋಟಾರಾಜನ್ ಗೆ ಕೋವಿಡ್ ಪಾಸಿಟಿವ್ ; ತಿಹಾರ್ ಜೈಲಿನಿಂದ ಆಸ್ಪತ್ರೆಗೆ ದಾಖಲು

Underworld don and gangster Chhota Rajan died due to coronavirus disease (Covid-19) at All India Institute of Medical Services (AIIMS) New Delhi on Friday.  But the hospital has refuses saying the gangster is alive and is under treatment