ರಾಜ್ಯ ಕೊರೋನಾ ನಿರ್ವಹಣೆ ; ರಾಜ್ಯದ 17 ಡಿಸಿಗಳ ಜೊತೆಗೆ ಪ್ರಧಾನಿ ಮೋದಿ ವಿಡಿಯೋ ಸಂವಾದ

18-05-21 03:44 pm       Headline Karnataka News Network   ದೇಶ - ವಿದೇಶ

ಸ್ಥಳೀಯ ಕಂಟೇನ್ಮೆಂಟ್ ಝೋನ್‌ಗಳ ನಿರ್ಮಾಣ ಹಾಗೂ ಕೊರೊನಾ ಸೋಂಕಿನ ಕುರಿತ ನಿಖರ ಮಾಹಿತಿಯನ್ನು ಜನರಿಗೆ ತಲುಪಿಸುವುದು ನಮ್ಮ ಆಯುಧಗಳಾಗಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Photo credits : Business-Standard

ನವದೆಹಲಿ, ಮೇ 18: ದೇಶದಲ್ಲಿ ಏರುಗತಿಯಲ್ಲಿ ಸಾಗುತ್ತಿರುವ ಕೊರೊನಾ ಸೋಂಕಿನ ವಿರುದ್ಧ ಹೋರಾಡುವಲ್ಲಿ ತ್ವರಿತಗತಿಯ ಕೊರೊನಾ ಪರೀಕ್ಷೆ, ಸ್ಥಳೀಯ ಕಂಟೇನ್ಮೆಂಟ್ ಝೋನ್‌ಗಳ ನಿರ್ಮಾಣ ಹಾಗೂ ಕೊರೊನಾ ಸೋಂಕಿನ ಕುರಿತ ನಿಖರ ಮಾಹಿತಿಯನ್ನು ಜನರಿಗೆ ತಲುಪಿಸುವುದು ನಮ್ಮ ಆಯುಧಗಳಾಗಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮಂಗಳವಾರ, ಕೋವಿಡ್ ನಿರ್ವಹಣೆ ಕುರಿತು ಮಾಹಿತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ 10 ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಕೊರೊನಾ ಸೋಂಕಿನ ನಿರ್ವಹಣೆ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ನಡೆಸಿದ ಅವರು ಈ ಸಲಹೆಗಳನ್ನು ನೀಡಿದ್ದಾರೆ. ಕರ್ನಾಟಕ, ಬಿಹಾರ, ಅಸ್ಸಾಂ, ಚಂಡೀಗಢ, ತಮಿಳುನಾಡು, ಉತ್ತರಾಖಂಡ, ಮಧ್ಯ ಪ್ರದೇಶ, ಗೋವಾ, ಹಿಮಾಚಲ ಪ್ರದೇಶ ಹಾಗೂ ದೆಹಲಿಯ ಅಧಿಕಾರಿಗಳು ಈ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು. 

"ಪ್ರತಿ ಜಿಲ್ಲೆಯಲ್ಲಿಯೂ ಸವಾಲು ಇದೆ"

ಪ್ರತಿ ಜಿಲ್ಲೆಯೂ ಕೊರೊನಾ ನಿರ್ವಹಣೆ ಸಂಬಂಧ ತನ್ನದೇ ಸವಾಲುಗಳನ್ನು ಹೊಂದಿದೆ. ಈ ಸವಾಲುಗಳನ್ನು ಎದುರಿಸಿ ಸೋಂಕನ್ನು ಸೋಲಿಸುವ ಗುರಿ ಹೊಂದಬೇಕಿದೆ. ಈ ಹೋರಾಟದಲ್ಲಿ ಪ್ರತಿ ಅಧಿಕಾರಿಯ ಪಾತ್ರವೂ ಮುಖ್ಯವಾಗಿದೆ. ಕೊರೊನಾ ವಿರುದ್ಧ ಹೋರಾಡಲು ಕೊರೊನಾ ಪರೀಕ್ಷೆ ತ್ವರಿತಗೊಳಿಸುವುದು, ಸ್ಥಳೀಯ ಕಂಟೇನ್ಮೆಂಟ್ ಝೋನ್ ನಿರ್ಮಾಣ ಹಾಗೂ ನಿಖರ ಮಾಹಿತಿ ನೀಡುವುದು ನಮ್ಮ ಆಯುಧವಾಗಿದೆ. ವೈದ್ಯಕೀಯ ಉತ್ಪನ್ನಗಳ ಅಕ್ರಮ ಮಾರಾಟ ತಡೆಯುವುದೂ ಸದ್ಯದ ಅವಶ್ಯಕತೆಯಾಗಿದೆ ಎಂದು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದರು.

"ಜನರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು"

ಕೊರೊನಾ ನಿರ್ವಹಣೆ ವಿಚಾರದಲ್ಲಿ ನಿಮ್ಮ ಅನುಭವಗಳನ್ನು ಹಂಚಿಕೊಳ್ಳುವುದೂ ಮುಖ್ಯ. ಯಶಸ್ಸಿನ ಮಾದರಿಗಳನ್ನು ಕಂಡುಕೊಳ್ಳುವುದು ಇದರಿಂದ ಸಾಧ್ಯವಾಗಲಿದೆ. ಸಮಾಜದ ಎಲ್ಲಾ ಸ್ಥರಗಳ ಕುರಿತು ಜಾಗ್ರತೆ ವಹಿಸುವುದು ಈಗ ಮುಖ್ಯವಾಗಿದೆ. ಹೀಗಾಗಿ ಕಾರ್ಯಗಳನ್ನೂ ಅದಕ್ಕೆ ತಕ್ಕಂತೆ ನಿರ್ವಹಿಸಬೇಕಿದೆ. ಜನರಿಗೆ ತೊಂದರೆಯಾಗದಂತೆ ಕೊರೊನಾ ನಿರ್ವಹಣೆಯನ್ನು ಸರ್ಕಾರ ಮಾಡಬೇಕಿದೆ ಎಂದಿದ್ದಾರೆ.

ಕ್ಷೇತ್ರ ಮಟ್ಟದ ಅಧಿಕಾರಿಗಳನ್ನು ಶ್ಲಾಘಿಸಿದ ಮೋದಿ

ಕ್ಷೇತ್ರ ಮಟ್ಟದ ಅಧಿಕಾರಿಗಳು ಈ ನಿಟ್ಟಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾರೆ. ಬಹುಮಂದಿ ಅತ್ಯುನ್ನತ ಕಾರ್ಯಗಳನ್ನು ನಿರ್ವಹಿಸಿ ಸೂಕ್ತ ಪರಿಹಾರಗಳನ್ನು ಸೂಚಿಸಿದ್ದಾರೆ ಎಂದು ಮೋದಿ ಶ್ಲಾಘಿಸಿದರು. ಕೊರೊನಾ ನಿರ್ವಹಣೆಗೆ ಈವರೆಗೂ ಹಲವು ಪರಿಣಾಮಕಾರಿ ಮಾರ್ಗಗಳನ್ನು ಕೈಗೊಂಡಿದ್ದೇವೆ. ಆರೋಗ್ಯ ಸೌಲಭ್ಯಗಳ ಅಭಿವೃದ್ಧಿಯನ್ನೂ ಮಾಡಿದ್ದೇವೆ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಡಿಸಿಗಳು ಭಾಗಿ

ಉತ್ತರ ಕನ್ನಡ, ಹಾಸನ, ಬಳ್ಳಾರಿ, ಮೈಸೂರು, ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೊಡಗು, ಶಿವಮೊಗ್ಗ, ಧಾರವಾಡ, ದಕ್ಷಿಣ ಕನ್ನಡ, ಕಲಬುರಗಿ, ರಾಯಚೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಬಿಬಿಎಂಪಿ ವಿಶೇಷ ಆಯುಕ್ತ ಗೌರವ್ ಗುಪ್ತಾ, ಹಿರಿಯ ಅಧಿಕಾರಿಗಳಾದ ರಮಣ ರೆಡ್ಡಿ, ಲಕ್ಷ್ಮೀನಾರಾಯಣ್, ಮಂಜುನಾಥ್ ಪ್ರಸಾದ್ ಸೇರಿದಂತೆ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಸ್ಪಿಗಳು, ಸಿಇಒಗಳು ಭಾಗಿಯಾಗಿದ್ದರು.

Prime Minister Narendra Modi on Tuesday held a meeting with field officials from states and districts about their experience in handling the Covid-19 pandemic. Madhya Pradesh chief minister Shivraj Singh Chouhan and Karnataka CM BS Yediyurappa also attended the virtual meeting where Union home minister Amit Shah was present.