ಕೊರೊನಾ ದೇವಿ ಹೆಸರಲ್ಲಿ ಗುಡಿ ಕಟ್ಟಿ ಪೂಜಿಸಿದ ಗ್ರಾಮಸ್ಥರು ! ಒಡೆದು ಹಾಕಿದ ಗುಂಪು 

13-06-21 01:44 pm       Headline Karnataka News Network   ದೇಶ - ವಿದೇಶ

ಕೊರೊನಾ ಮಹಾಮಾರಿ ಇಡೀ ಜಗತ್ತಿಗೆ ಹೆಮ್ಮಾರಿಯಾಗಿ ಪರಿಣಮಿಸಿದ್ದರೆ, ಇಲ್ಲೊಂದು ಗ್ರಾಮದಲ್ಲಿ ಗ್ರಾಮಸ್ಥರೇ ಸೇರಿ ಕೊರೊನಾ ಮಾತೆಯ ಹೆಸರಲ್ಲಿ ಗುಡಿ ಕಟ್ಟಿ ಸುದ್ದಿಯಾಗಿದ್ದಾರೆ. 

ಪ್ರತಾಪಗಢ, ಜೂನ್ 13: ಕೊರೊನಾ ಮಹಾಮಾರಿ ಇಡೀ ಜಗತ್ತಿಗೆ ಹೆಮ್ಮಾರಿಯಾಗಿ ಪರಿಣಮಿಸಿದ್ದರೆ, ಇಲ್ಲೊಂದು ಗ್ರಾಮದಲ್ಲಿ ಗ್ರಾಮಸ್ಥರೇ ಸೇರಿ ಕೊರೊನಾ ಮಾತೆಯ ಹೆಸರಲ್ಲಿ ಗುಡಿ ಕಟ್ಟಿ ಸುದ್ದಿಯಾಗಿದ್ದಾರೆ. 

ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಜೂಹಿ ಶುಕಲ್ಪುರ್ ಗ್ರಾಮದಲ್ಲಿ ಗ್ರಾಮಸ್ಥರು ಸೇರಿ ಕೊರೊನಾ ಮಾತೆಗೆ ಗುಡಿ ಕಟ್ಟಿದ್ದಾರೆ. ಲೋಕೇಶ್ ಕುಮಾರ್ ಶ್ರೀವಾಸ್ತವ ಎಂಬಾತ ಗ್ರಾಮಸ್ಥರ ಸಹಕಾರದಲ್ಲಿ ಗುಡಿ ಕಟ್ಟಿದ್ದಾನೆ. ಕೊರೊನಾ ಮಾತೆಯ ಹೆಸರಲ್ಲಿ ವಿಗ್ರಹವನ್ನೂ ಸ್ಥಾಪನೆ ಮಾಡಿದ್ದ. ಗ್ರಾಮದ ನಿವಾಸಿ ರಾಧೇಶ್ಯಾಮ್ ವರ್ಮ ಎಂಬ ಅರ್ಚಕನನ್ನು ಕೊರೊನಾ ದೇವಿಯ ಪೂಜೆಗೆ ನೇಮಕ ಮಾಡಲಾಗಿತ್ತು. ಸ್ಥಳೀಯ ಜನರು ಕೊರೊನಾ ದೇವಿಯನ್ನು ಪೂಜಿಸಿ, ಜಗತ್ತಿಗೆ ಕವಿದ ಕತ್ತಲೆಯನ್ನು ನೀಗಿಸು ಎಂದು ಪ್ರಾರ್ಥಿಸಲು ತೊಡಗಿದ್ದರು. ‌

ಆದರೆ, ಗುಡಿ ಕಟ್ಟಿ ನಾಲ್ಕು ದಿನಗಳಾಗುವಷ್ಟರಲ್ಲಿ ಜಾಗದ ವಾರೀಸುದಾರರು ತಕರಾರು ತೆಗೆದಿದ್ದಾರೆ. ಆ ಜಾಗ ನಾಗೇಶ್ ಕುಮಾರ್ ಶ್ರೀವಾಸ್ತವ ಮತ್ತು ಜೈ ಪ್ರಕಾಶ್ ಶ್ರೀವಾಸ್ತವ ಎಂಬವರಿಗೆ ಸೇರಿದ್ದೆಂದು ಅವರು ಪೊಲೀಸ್ ದೂರು ನೀಡಿದ್ದಾರೆ.‌ ಇಷ್ಟಾಗುತ್ತಿದ್ದಂತೆ ಗುಡಿ ಕಟ್ಟಲು ಮುಂಚೂಣಿಯಲ್ಲಿ ನಿಂತಿದ್ದ ಲೋಕೇಶ್ ಕುಮಾರ್ ನಾಪತ್ತೆಯಾಗಿದ್ದಾನೆ. ಲೋಕೇಶ್ ಇದೇ ಊರಿನ ವ್ಯಕ್ತಿಯಾಗಿದ್ದರೂ, ದೆಹಲಿ ಸಮೀಪದ ನೋಯ್ಡಾದಲ್ಲಿ ನೆಲೆಸಿದ್ದ. 

ತಮ್ಮ ಜಾಗವನ್ನು ಕಬಳಿಸಲು ಗುಡಿ ಕಟ್ಟಲಾಗಿದೆ ಎಂದು ನಾಗೇಶ್ ಮತ್ತು ಸೋದರ ಪೊಲೀಸರಿಗೆ ದೂರು ನೀಡಿದ್ದರು. ವಿವಾದಿತ ಜಾಗದಲ್ಲಿ ಗುಡಿ ಕಟ್ಟಲಾಗಿತ್ತು. ಗುಡಿ ನಿರ್ಮಾಣದಲ್ಲಿ ಈ ಜಾಗಕ್ಕೆ ಸೇರಿದ ವ್ಯಕ್ತಿಗಳು ಕೂಡ ಶಾಮೀಲಾಗಿದ್ದಾರೆ. ಗುಡಿಯ ಅಕ್ರಮ ನಿರ್ಮಾಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಸಂಗೀಪುರ್ ಠಾಣೆ ಪೊಲೀಸರು ತಿಳಿಸಿದ್ದಾರೆ. 

ಆದರೆ, ಅತ್ತ ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಮತ್ತೊಂದು ಗುಂಪು ಕೊರೊನಾ ದೇವಿಯ ಗುಡಿಯನ್ನು ಒಡೆದು ಹಾಕಿದೆ.

People at Juhi Shukulpur village here built a "corona mata" temple, seeking divine grace to stay clear of the infection. However, the temple built on June 7 was demolished on Friday night.