ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಕೆ.ಅಣ್ಣಾಮಲೈ ನೇಮಕ

08-07-21 10:15 pm       Mangaluru Correspondent   ದೇಶ - ವಿದೇಶ

ಕರ್ನಾಟಕದ ಮಾಜಿ ಐಎಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಚೆನ್ನೈ, ಜುಲೈ 8: ಕರ್ನಾಟಕದ ಮಾಜಿ ಐಎಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಎಲ್.ಮುರುಗನ್ ಅವರನ್ನು ಕೇಂದ್ರ ಸಚಿವರನ್ನಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಆ ಜಾಗಕ್ಕೆ ಅಣ್ಣಾಮಲೈ ಅವರನ್ನು ಆಯ್ಕೆ ಮಾಡಲಾಗಿದೆ.

ಬುಧವಾರ ಮುರುಗನ್ ಸಚಿವ ಸ್ಥಾನಕ್ಕೇರುವುದು ಖಚಿತವಾಗುತ್ತಲೇ ತಮಿಳುನಾಡಿನಲ್ಲಿ ಅಣ್ಣಾಮಲೈ ಹೆಸರು ಕೂಡ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಅಣ್ಣಾಮಲೈಗೂ ಸಚಿವ ಸ್ಥಾನ ಸಿಗಲಿ ಎಂದು ಕೆಲವರು ಹಾರೈಸಿದ್ದರೆ, ಇನ್ನು ಕೆಲವರು ಬಿಜೆಪಿ ಘಟಕದ ರಾಜ್ಯಾಧ್ಯಕ್ಷರಾಗಲಿ ಎಂದು ಹಾರೈಸಿದ್ದರು. ನಿರೀಕ್ಷೆಯಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿ ಅಣ್ಣಾಮಲೈ ಅವರನ್ನು ಆಯ್ಕೆ ಮಾಡಿ ಆದೇಶ ಮಾಡಿದ್ದಾರೆ.

ಅಣ್ಣಾಮಲೈ ಅಥವಾ ಕೆ.ಟಿ. ರಾಘವನ್ ರಾಜ್ಯ ಘಟಕದ ಅಧ್ಯಕ್ಷರಾಗುತ್ತಾರೆ ಎಂಬ ವದಂತಿ ಹರಡಿತ್ತು. ಅಭಿಮಾನಿಗಳ ಆಶಯದಂತೆ ಅಣ್ಣಾಮಲೈ ಅವರನ್ನೇ ಆಯ್ಕೆ ಮಾಡಲಾಗಿದೆ. 

ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಅಣ್ಣಾಮಲೈಗೆ ಅರವಕುರುಚಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿತ್ತು. ರಾಜ್ಯದ ಬಿಜೆಪಿ ಉಸ್ತುವಾರಿ ಸಿ. ಟಿ. ರವಿ ಸೇರಿದಂತೆ ಹಲವು ನಾಯಕರು ಅಣ್ಣಾಮಲೈ ಪರವಾಗಿ ಪ್ರಚಾರ ನಡೆಸಿದ್ದರು. ಅಣ್ಣಾಮಲೈ 68 ಸಾವಿರ ಮತಗಳನ್ನು ಪಡೆದು ಸೋಲು ಕಂಡಿದ್ದರು.

"ಅರವಕುರುಚಿ ಕ್ಷೇತ್ರದಲ್ಲಿ 68,000 ಮತಗಳನ್ನು ನೀಡಿದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಜೆಪಿ ಜೊತೆಗೆ ಎಂದಿಗೂ ಇರುತ್ತೇನೆ" ಎಂದು ಸೋಲಿನ ಬಳಿಕ ಟ್ವೀಟ್‌ನಲ್ಲಿ ಅಣ್ಣಾಮಲೈ ತಿಳಿಸಿದ್ದರು.

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ ಅವರು 2019ರ ಮೇ 28ರಂದು ಐಜಿ- ಡಿಜಿಪಿ ಹಿರಿಯ ಅಧಿಕಾರಿಗಳಿಗೆ ರಾಜೀನಾಮೆ ಪತ್ರ ಕಳಿಸಿ ಐಪಿಎಸ್ ಹುದ್ದೆ ತೊರೆದಿದ್ದರು. 2011ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರು ಕಾರ್ಕಳ, ಚಿಕ್ಕಮಗಳೂರು ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು.ann

The BJP on Thursday appointed K Annamalai as its Tamil Nadu state unit president in place of L Murugan, who took charge as the Minister of State for Fisheries, Animal Husbandry and Dairying.