ಮಂಗಳೂರಲ್ಲಿ ಮಾಸ್ಕ್ ಹಾಕದೇ ಸೋಂಕು ಹೆಚ್ಚುತ್ತಿದೆ, ಗಡಿ ನಿರ್ಬಂಧಿಸಿ ಕಷ್ಟ ಕೊಡುತ್ತಿದ್ದಾರೆ ; ಕೇರಳ ವಿಧಾನಸಭೆಯಲ್ಲಿ ಮಂಜೇಶ್ವರ ಶಾಸಕ

05-08-21 10:32 pm       Headline Karnataka News Network   ದೇಶ - ವಿದೇಶ

ಕರ್ನಾಟಕ ಸರಕಾರ ಗಡಿಭಾಗದಲ್ಲಿ ಕೇರಳದ ಪ್ರಯಾಣಿಕರಿಗೆ ವಿಧಿಸಿರುವ ಕೋವಿಡ್ ನಿರ್ಬಂಧದ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಟೀಕಿಸಿದ್ದು, ಕರ್ನಾಟಕ ಸರಕಾರದ ಕ್ರಮ ಕೇಂದ್ರ ಸರಕಾರದ ಮಾರ್ಗಸೂಚಿಯ ಉಲ್ಲಂಘನೆ ಎಂದು ಹೇಳಿದ್ದಾರೆ.

ತಿರುವನಂತಪುರಂ, ಆಗಸ್ಟ್ 5: ಕರ್ನಾಟಕ ಸರಕಾರ ಗಡಿಭಾಗದಲ್ಲಿ ಕೇರಳದ ಪ್ರಯಾಣಿಕರಿಗೆ ವಿಧಿಸಿರುವ ಕೋವಿಡ್ ನಿರ್ಬಂಧದ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಟೀಕಿಸಿದ್ದು, ಕರ್ನಾಟಕ ಸರಕಾರದ ಕ್ರಮ ಕೇಂದ್ರ ಸರಕಾರದ ಮಾರ್ಗಸೂಚಿಯ ಉಲ್ಲಂಘನೆ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಯಲ್ಲಿ ರಾಜ್ಯಗಳ ನಡುವಿನ ಗಡಿಯನ್ನು ನಿರ್ಬಂಧಿಸಿ, ಜನರ ಓಡಾಟಕ್ಕೆ ತೊಂದರೆ ಮಾಡಬಾರದು ಎಂದಿದೆ. ಕೇಂದ್ರದ ಆದೇಶವನ್ನು ಕರ್ನಾಟಕ ಸರಕಾರ ಉಲ್ಲಂಘಿಸಿದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಕೇರಳ ವಿಧಾನಸಭೆಯಲ್ಲಿ ಮಂಜೇಶ್ವರ ಮುಸ್ಲಿಂ ಲೀಗ್ ಶಾಸಕ ಎಕೆಎಂ ಅಶ್ರಫ್ ಕೇಳಿದ ಪ್ರಶ್ನೆಗೆ, ಸಿಎಂ ಪಿಣರಾಯಿ ವಿಜಯನ್ ಮೇಲಿನಂತೆ ಉತ್ತರಿಸಿದ್ದಾರೆ. ಮಂಜೇಶ್ವರ ಕ್ಷೇತ್ರದಲ್ಲಿ 50 ಶೇಕಡಕ್ಕಿಂತ ಹೆಚ್ಚು ಜನರು ಮಂಗಳೂರನ್ನು ಆಶ್ರಯಿಸಿದ್ದಾರೆ. ಉದ್ಯೋಗ, ಆಸ್ಪತ್ರೆ ಇನ್ನಿತರ ಕಾರಣಕ್ಕೆ ದಿನವೂ ಮಂಗಳೂರಿಗೆ ತೆರಳಬೇಕಾಗುತ್ತದೆ. ಆದರೆ, ಕೋವಿಡ್ ಎರಡೂ ಲಸಿಕೆಯನ್ನು ಪಡೆದಿದ್ದರೂ, ಗಡಿಭಾಗದಲ್ಲಿ ಕರ್ನಾಟಕ ಸರಕಾರ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕೆಂದು ಕಡ್ಡಾಯ ಮಾಡಿದೆ. ಇದರಿಂದಾಗಿ ಕ್ಷೇತ್ರದ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿಯವರು ಗಮನ ಹರಿಸಿ, ಸಮಸ್ಯೆ ನಿವಾರಿಸಬೇಕೆಂದು ಶಾಸಕ ಎಕೆಎಂ ಅಶ್ರಫ್ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ.

ಮಂಗ್ಲೂರಲ್ಲಿ ಮಾಸ್ಕ್ ಹಾಕದೇ ಸೋಂಕು ಹೆಚ್ಚಳ

ಅಲ್ಲದೆ, ಮಂಗಳೂರಿನಲ್ಲಿ ಕೋವಿಡ್ ಸೋಂಕು ಹೆಚ್ಚುವುದಕ್ಕೆ ಅಲ್ಲಿನ ಜನರೇ ಕಾರಣ. ಅಲ್ಲಿ ಮಾಸ್ಕ್ ಹಾಕದೇ ಜನರು ತಿರುಗಾಡುತ್ತಾರೆ. ಇದನ್ನು ನಾನು ಮಂಗಳೂರಿಗೆ ತೆರಳಿದ್ದ ವೇಳೆ ಸ್ವತಃ ಕಂಡಿದ್ದೇನೆ. ಹಾಗಿದ್ದರೂ, ಕರ್ನಾಟಕ ಸರಕಾರ ಕೇರಳದಿಂದ ಸೋಂಕು ಹರಡುತ್ತದೆ ಎಂದು ಹೇಳಿ ಗಡಿಯಲ್ಲಿ ನಿರ್ಬಂಧ ವಿಧಿಸಿದೆ. ಇದು ಗಡಿಭಾಗದ ಜನರಿಗೆ ಮಾಡಿದ ಅನ್ಯಾಯ. ಕಳೆದ ಬಾರಿ ಲಾಕ್ಡೌನ್ ಇದ್ದಾಗ ಗಡಿಯನ್ನು ನಿರ್ಬಂಧಿಸಿದ ಕಾರಣ ಗಡಿಭಾಗದ 22 ಮಂದಿ ದುರಂತ ಸಾವು ಕಂಡಿದ್ದರು. ಈ ರೀತಿಯ ದುರಂತಕ್ಕೆ ಯಾರು ಹೊಣೆ ಎಂದು ಶಾಸಕ ಅಶ್ರಫ್ ಪ್ರಶ್ನೆ ಮಾಡಿದ್ದಾರೆ.

ಶಾಸಕರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕರ್ನಾಟಕ ಗಡಿಭಾಗದಲ್ಲಿ ಆಗಿರುವ ಬೆಳವಣಿಗೆ ಮತ್ತು ಅಲ್ಲಿನ ಜನರ ಸಂಕಷ್ಟದ ಸ್ಥಿತಿಯ ಬಗ್ಗೆ ಅರಿವಿದೆ. ಈ ಬಗ್ಗೆ ಸ್ಥಳದಲ್ಲೇ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸಮಸ್ಯೆ ಬಗ್ಗೆ ಕರ್ನಾಟಕದ ಪೊಲೀಸ್ ಮುಖ್ಯಸ್ಥರ ಜೊತೆಗೆ ಕೇರಳದ ಡಿಜಿಪಿಯವರು ಮಾತುಕತೆ ನಡೆಸಿದ್ದು, ಸಕಾರಾತ್ಮಕ ಸ್ಪಂದನೆ ಲಭಿಸಿದೆ. ಸದ್ಯದಲ್ಲೇ ಸಮಸ್ಯೆ ನಿವಾರಣೆಯಾಗುವ ವಿಶ್ವಾಸವಿದೆ. ಅಲ್ಲದೆ, ರಾಜ್ಯಗಳ ನಡುವಿನ ಗಡಿಯನ್ನು ನಿರ್ಬಂಧಿಸುವ ಮೂಲಕ ಕರ್ನಾಟಕ ಸರಕಾರ ಕೇಂದ್ರ ಸರಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿದೆ ಎಂದು ಹೇಳಿದರು. 

Manjeshwar AKM Ashraf of the IUML, he said steps have been taken to ensure that the curbs are not causing any difficulty to the people of the state who are travelling to the neighbouring state for various purposes. State police chief Anil Kant had already contacted his counterpart in Karnataka, who ensured that necessary action would be taken in this regard.