ತಾಲಿಬಾನಿ ಐಡಿಯಾಲಜಿಯ ಕೇಂದ್ರ ಭಾರತದಲ್ಲಿದೆ, ಅಫ್ಘನ್ ಮುಸ್ಲಿಮರಿಗೆ ಆಶ್ರಯ ನೀಡಲೇಬೇಡಿ !

27-08-21 01:13 pm       Headline Karnataka News Network   ದೇಶ - ವಿದೇಶ

ತಾಲಿಬಾನಿ ಐಡಿಯಾಲಜಿ ಭಾರತಕ್ಕೆ ದೊಡ್ದ ಬೆದರಿಕೆಯಾಗಿದ್ದು ಅಫ್ಘಾನಿಸ್ತಾನದ ಯಾವುದೇ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ‌ನೀಡಬಾರದು ಎಂದು ಪ್ರವೀಣ್ ತೊಗಡಿಯಾ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ‌

ನವದೆಹಲಿ, ಆಗಸ್ಟ್ 27: ತಾಲಿಬಾನಿ ಐಡಿಯಾಲಜಿ ಭಾರತಕ್ಕೆ ದೊಡ್ದ ಬೆದರಿಕೆಯಾಗಿದ್ದು ಅಫ್ಘಾನಿಸ್ತಾನದ ಯಾವುದೇ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ‌ನೀಡಬಾರದು ಎಂದು ಅಂತರಾಷ್ಟ್ರೀಯ ಹಿಂದು ಪರಿಷದ್ ಮುಖ್ಯಸ್ಥ ಪ್ರವೀಣ್ ತೊಗಡಿಯಾ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ‌

ತಾಲಿಬಾನಿ ಸಿದ್ಧಾಂತದ ಕೇಂದ್ರ ಸ್ಥಾನ ಭಾರತದಲ್ಲಿದೆ. ಇದೇ ಐಡಿಯಾಲಜಿ ದೇಶದ ಭವಿಷ್ಯಕ್ಕೆ ಮಾರಕವಾಗಲಿದೆ. ದೇಶದಲ್ಲಿ ತಾಲಿಬಾನೀಕರಣ ಆಗುವುದನ್ನು ತಪ್ಪಿಸಲು ಭಾರತದ ಮೂರು ಮುಖ್ಯ ಇಸ್ಲಾಮಿಕ್ ಸಂಘಟನೆಗಳ ಮೇಲೆ ನಿಯಂತ್ರಣ ಹೇರಬೇಕಾಗಿದೆ ಎಂದು ಪ್ರವೀಣ್ ತೊಗಡಿಯಾ ಹೇಳಿದ್ದಾರೆ. 

ಹೀಗಾಗಿ ಅಫ್ಘಾನಿಸ್ತಾನದ ಯಾವುದೇ ಮುಸ್ಲಿಮರಿಗೆ ದೇಶದಲ್ಲಿ ಆಶ್ರಯ ನೀಡಬಾರದು. ಇದೇ ವೇಳೆ, ಅಲ್ಲಿರುವ ಹಿಂದು ಮತ್ತು ಸಿಖ್ ಸಮುದಾಯದ ನಿವಾಸಿಗಳಿಗೆ ಭಾರತ ಅಗತ್ಯವಾಗಿ ಆಶ್ರಯ ನೀಡಬೇಕಾಗಿದೆ ಎಂದು ತೊಗಡಿಯಾ ಹೇಳಿದರು. 

ತಾಲಿಬಾನ್ ಒಂದು ಸಿದ್ಧಾಂತ. ಈ ಮಾದರಿಯ ವಿಕೃತ ಸಿದ್ಧಾಂತದ ಕೇಂದ್ರ ಸ್ಥಾನ ಭಾರತದಲ್ಲೇ ಇದೆ. ಇದರ ನಿಯಂತ್ರಣಕ್ಕಾಗಿ ದೇಶದಲ್ಲಿ ದಾರುಲ್ ಉಲೂಮ್ ದೇವಬಂದಿ, ತಬ್ಲಿಘಿ ಜಮಾತ್ ಮತ್ತು ಜಮೀಯತ್ ಉಲೇಮಾ ಹಿಂದ್ ಮಾದರಿಯ ಸಂಘಟನೆಗಳ ಮೇಲೆ ನಿಷೇಧ ಹೇರಬೇಕು. ಈ ಮೂರು ಸಂಘಟನೆಗಳು ತಾಲಿಬಾನಿ ಐಡಿಯಾಲಜಿಯ ಪ್ರಮುಖ ಕೇಂದ್ರಗಳು. ಭಾರತ ಉಗ್ರವಾದದ ಬಹುದೊಡ್ಡ ಅಪಾಯವನ್ನು ಎದುರಿಸುತ್ತಿದ್ದು ದೇಶದ ಎಲ್ಲ ಶಕ್ತಿಗಳು ಸೇರಿ ಈ ಅಪಾಯವನ್ನು ಎದುರಿಸಬೇಕು. ದೇಶದ ಭವಿಷ್ಯದ ದೃಷ್ಟಿಯಿಂದ ಸರಕಾರ ಈ ಮೂರು ಸಂಘಟನೆಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸಿದರು. 

ಅಯೋಧ್ಯೆಯ ರಾಮ ಮಂದಿರದ ಕುರಿತ ಪ್ರಶ್ನೆಗೆ, ವಿಶ್ವ ಹಿಂದು ಪರಿಷತ್ ಅಧ್ಯಕ್ಷರಾಗಿದ್ದ ಅಶೋಕ್ ಸಿಂಘಲ್, ಶಿವಸೇನಾ ಮುಖ್ಯಸ್ಥರಾಗಿದ್ದ ಬಾಳ ಠಾಕ್ರೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಸ್ವಾತಂತ್ರ್ಯೋತ್ತರ ಭಾರತದ ಮೂವರು ಹೀರೋಗಳು ಎಂದು ಹೇಳಿದರು.

Afghan Muslims Should not Seek Refuge in India Says Pravin Togadia.